ಮನುಷ್ಯನ ಬದುಕು ನೀರ ಮೇಲಿನ ಗುಳ್ಳೆಯಂತೆ…ಉಸಿರು ನಿಂತ ಮೇಲೆ ಏನಿದೆ? ಮಣ್ಣಲಿ‌ ಮಣ್ಣಾದವರು ಅಸಹಾಯಕರೆ? ಬದುಕಿಗೆ ಪೂರ್ಣ ವಿರಾಮ ಇಟ್ಟವರೇ? ಗಿಡಮರಬಳ್ಳಿಗಳ ಅಪ್ಪಿಕೊಂಡು ಜೀವಜಂತುಗಳ ಸೆಣಸಾಟದಲ್ಲಿ ಉಸಿರಿನುದ್ದಕ್ಕೂ ಸಂಘರ್ಷಕ್ಕೆ ತೂರಿಕೊಂಡು ಕೊನೆಗೆ ಕೈಚೆಲ್ಲಿ ಮೌನವಾಗುವ ಎಲ್ಲ ಘಳಿಗೆಯಲ್ಲಿ ವಿಷಾದದ ನಗೆಯ ಬೀರಿ ಇಲ್ಲವಾಗುವ ಸಮಯ ಯಾರಿಗೆ ತಾನೆ ಇಷ್ಟ!.
ಬದುಕಿದ್ದರೆ ಭೀಷ್ಮ ತಾತನಂತೆ,ಸಾವಿರಾರು ವರ್ಷಗಳು ಎಂಬಾಸೆ ಇರದ ಸಾವುಂಟೆ!.ನಮ್ಮ ಪೂರ್ವಜರ ಜೀವಿತಾವಧಿಗೆ ಲೆಕ್ಕವಿಲ್ಲ…ಆದರೆ ಇಂದಿನ ಯುಗದಲ್ಲಿಯ ಜೀವಿತಾವಧಿ ಉಹಿಸಲು ಆಗುತ್ತಿಲ್ಲ!. ಕಣ್ಣರಳುವ ಮುನ್ನವೇ ಕಣ್ಮುಚ್ಚುವ ಸಮಯ ಕಣ್ಮುಂದೆ ಇದೆ. ಗಡಿಯಾರದ ಮುಳ್ಳಿನ ನಿರಂತರ ಚಲನೆಗೆ ಜೀವನದ ಚಕ್ರ ತಾಳೆಯಾಗುವುದರಿಂದ ಯಾರು ಯಾರನ್ನು ಅಥವಾ ನಡೆಯುವುದನ್ನು ನಿರ್ಬಂಧಿಸಲು ಆಗದ ಸನ್ನಿವೇಶದಲ್ಲಿ ನಾವಿದ್ದೆವೆ ಎಂದರೆ ವಿಶೇಷವಿಲ್ಲ.

ವಿಶಾಲವಾದ ಈ ಜಗತ್ತಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ತಮ್ಮ ಜೀವನ ಯಾವುದಕ್ಕೆ ಮೀಸಲಿದೆ? ಎಂಬ ಪ್ರಶ್ನೆ ಕೇಳಿಕೊಳ್ಳುವ ಮನಸ್ಥಿತಿಯಿಂದ ಹೊರಗಿದೆ.ಯಾಕೆಂದರೆ ಯಾವುದನ್ನು ಈ ಪ್ರಪಂಚ ಬಯಸುತ್ತದೆಯೋ ಅದನ್ನು ನಿಭಾಯಿಸಲು ಆಗದ ಸ್ಥಿತಿಗೆ ಬಂದು ತಲುಪಿದೆ.ಹಳ್ಳಿಗಳು ನಗರದ ಛಾಯೆಯಲ್ಲಿ ಅರಳುತ್ತಿವೆ.ಹಸಿರಾದ ಕಾಡು ಹಂತಹಂತವಾಗಿ ಕರಗುತ್ತಿದೆ.ರೈತನ ಉಸಿರಾದ ಹೊಲಗದ್ದೆಗಳು ಅರ್ಪಾಟ್ಮೆಂಟ್ ಗಳಾಗಿ ವಿಕಾಸಹೊಂದುತ್ತಿದೆ. ಅವಿಭಕ್ತ ಕುಟುಂಬಗಳು ಬಹುತೇಕ ಕಣ್ಮರೆಯಾಗುತ್ತಿವೆ.ವಯಕ್ತಿಕ ಚಿಂತನೆಗೆ ವಯಸ್ಸಾದವರು ಅಂದರೆ ಉಳ್ಳವರು “ವೃದ್ಧಾಶ್ರಮ” ಪಾಲಾಗುತ್ತಿದ್ದಾರೆ.ಯಾರಿಗೂ ದಿಕ್ಕು ದೆಸೆಯಿಲ್ಲದವರನ್ನು ಪ್ರಜ್ಞಾವಂತ ಕೆಲ ಯುವಕರು ತಮ್ಮ ಸ್ವಂತ ಖರ್ಚಿನಲ್ಲಿ ಬೀದಿಪಾಲಾದ ವೃದ್ದರನ್ನು ಸಾಕಿ‌ ಸಲಹುತ್ತಿದೆ.ಇಂತಹ ಸ್ಥಿತಿ ನಿರ್ಮಾಣವಾಗಿದ್ದು ಎಲ್ಲಿಂದ? ಎಂಬ ಪ್ರಶ್ನೆಗೆ ನಮ್ಮೊಳಗೆ ಉತ್ತರ ಹುಡುಕಬೇಕಿದೆ!.

“MOTHER’S DAY ”  ತುಂಬಾನೆ ಖುಷಿಯಿಂದ ಆಚರಿಸಿದೆವು.ಫೇಸ್ ಬುಕ್, ಇನ್ಸ್ಟಾಗ್ರಾಮ,ವಾಟ್ಸಪ್….ಹೀಗೆ ಹತ್ತಾರು ಕಡೆ ಅಮ್ಮನ ಕುರಿತು ಪೋಟೋ, ಲೇಖನ,ಕವಿತೆಯ ಪೋಸ್ಟ್ ಹಂಚಿಕೊಂಡು ಎಷ್ಟು ಲೈಕ್ ಬಂತು ಅಂತ ಗಮನಿಸುವುದರಲ್ಲೇ ಆದಿನವನ್ನು ಕಳೆದ ಮೇಲೆ ಮುಗಿತು.ಅವತ್ತಿಗೆ ಮದರ್ಸ್ ಡೇ ಮುಕ್ತಾಯ.ನಾವು ಇಷ್ಟು ಕುಬ್ಜರಾಗಿದ್ದು ಹೇಗೆ? ಜಗತ್ತಿನ ಪರಿಚಯ ಮಾಡಿಕೊಟ್ಟವಳೇ ಅಮ್ಮ,ಅಪ್ಪ.‌..!. ಆದರೆ,ಇವತ್ತು ಎಷ್ಟೋ ಜನರಿಗೆ ಅಪ್ಪ ಅಮ್ಮನೇ ಇಲ್ಲ!. ಇದ್ದಾಗ ಅವರ ಮಹತ್ವ ಅರಿವಾಗಲಿಲ್ಲ,ಅವರಿಲ್ಲದಾಗ ಅವರ ಬಯಸಿ ಅತ್ತರ ಮರಳಿ ಸಿಗುವರೇ? ಕಣ್ಮುಂದೆ ಇದ್ದ ಅಪ್ಪ ಅಮ್ಮರನ್ನು ಗೌರವಿಸುವ ಮತ್ತು ಇಷ್ಟು ವರ್ಷ ನಮ್ಮ ಜೀವನ ಉದ್ದಾರ ಮಾಡಲು ತ್ಯಾಗ ಮಾಡಿದ ಅವರ ಜೀವನಕ್ಕೆ ಬೆಲೆ ಬೇಡವಾ? ರಟ್ಟೆಗಳಲ್ಲಿ ಶಕ್ತಿ ಇಲ್ಲ.ಕಂಗಳಿಗೆ ಗುರುತಿಸುವ ಕಾಂತಿಯಿಲ್ಲ.ನಡೆದಾಡುವ ಕಾಲುಗಳಿಗೆ ತಾಕತ್ತಿಲ್ಲ…ವಯಸ್ಸಾದ ಮೇಲೆ ಎಲ್ಲ ಅಷ್ಟಕಷ್ಟೇ…ರೆಕ್ಕೆಪುಕ್ಕ ಬಲಿತ ನಾವು ನಮಗೇನು ಮಾಡಿದ್ದಿರಿ? ನಾನು ಮಾಡಿದ್ದೆನೆ!. ನೀವು ನಿಷ್ಪ್ರಯೋಜಕರು,ಎಂದು ಅವರ ತ್ಯಾಗವನ್ನು ಹೀಯಾಳಿಸಿದರೆ? ವಯಸ್ಸಾದವರನ್ನು ಕಸದಂತೆ ಎಲ್ಲೋ ಬಿಟ್ಟು ಬರುವ ನೀಚ ಮಕ್ಕಳು ಹೆಣ್ಣಾಗಲಿ,ಗಂಡಾಗಲಿ ಭೂಮಿ ಮೇಲೆ ಇದ್ದು ಸತ್ತಂತೆ!. ಆಚರಣೆಗಳು ಕೇವಲ ಶೋಕಿಗಾಗಿ ಆಗದೇ,ನೈಜವಾಗಿ ಹೆತ್ತವರ ಒಡಲನ್ನು ತಂಪಾಗಿಸುವ ಕಾರ್ಯ ನಿರ್ವಹಿಸಿದರೆ ಮಾತ್ರ ಸಾರ್ಥಕ!.ನಮ್ಮೊಳಗಿನ ದ್ವಂದ್ವಗಳ ಹೊಯ್ದಾಟಗಳಿಗೆ ಉತ್ತರವನ್ನು ನಾವೇ ಕಂಡುಕೊಳ್ಳಬೇಕಿದೆ.

ಮೊನ್ನೆ ಬೆಂಗಳೂರಿನ ಒಂದು ಗಾರ್ಡನ್ ದಲ್ಲಿ ವಾಕಿಂಗ್ ಮಾಡುತ್ತಿದ್ದಾಗ, ಗಾರ್ಡನ್ ಬೇಲಿಯಾಚೆ ಒಂದು ಬಿಳಿ ಕಾರು ಸಡನ್ ಆಗಿ ನಿಂತಿತು.. ನಾನು ವಾಕ್ ಮಾಡುತ್ತ ನೋಡತ್ತ ಮುಂದೆ ಸಾಗುತ್ತಿದ್ದೆ.ಅದರಿಂದ ಒಬ್ಬ ಯುವಕ ಬಹುಶಃ ಕೆಲಸ ಮುಗಿಸಿ ಬಂದಿದ್ದ ಅನ್ನಿಸುತ್ತೆ.ನಾಲ್ಕು ಹೆಜ್ಜೆ ಮಾತ್ರ ಸಾಗಿದ್ದ.ತಟ್ಟನೆ ನೆಲಕ್ಕೆ ಕುಸಿದು ಬಿದ್ದ.ಬೆಂಗಳೂರು ಹೇಗಿದೆಯೆಂದರೆ ಎಲ್ಲರಿಗೂ ಅರ್ಜಂಟ್ ಬದುಕು.ನಿಲ್ಲಲಾರದಷ್ಟು ಅವಸರ..ಅಲ್ಲಿಯೇ ಇದ್ದ ಹಣ್ಣಿನ ಅಂಗಡಿಯವ ಧಾವಿಸಿದ್ದ, ಅಯ್ಯೋ ಏನಾಯಿತೋ ಎಂಬ ಆತಂಕದಿಂದ ಓಡಿದೆ.ನನ್ನ ಜೊತೆ ವಾಕ್ ಮಾಡುವ ಒಬ್ಬರು ಮಾತ್ರ ಬಂದರು…ಉಳಿದವರು ಅವನ ಸಂಕಟ ನೋಡುತ್ತಿದ್ದರು.ಬಿದ್ದವ ಯಾರು? ಏನಾಯಿತು? ಎಂಬ ಚಿಂತೆ..ಹೇಳಲು ಆತಗೆ ಆಗುತ್ತಿಲ್ಲ.ವಿಪರ್ಯಾಸವೆಂದರೆ ಕನ್ನಡ ಬರಲ್ಲ..ಹಿಂದಿ ಇಂಗ್ಲಿಷ್. ಆ ಯುವಕ ತುಂಬಾ ಸುಸ್ತಾಗಿದ್ದ,ಬೆವರುತ್ತಿದ್ದ,ಉಸಿರಾಟದ ತೊಂದರೆ ಅನುಭವಿಸುತ್ತಿದ್ದ..ಹೇಗೋ ಅವನ ಪೋನ್ನಿಂದ ಹೆಂಡತಿಗೆ ವಿಷಯ ತಿಳಿಸಿ,ಆತನ ಸ್ನೇಹಿತರಿಗೂ ಪೋನ್ ಮಾಡಿ ಬರಲು ಹೇಳಿದ್ದರು…ಆತನ ಕಂಡಿಷನ್ ಹದಗೆಡುತ್ತಿತ್ತು…ಅಲ್ಲಿದ್ದವರು ಆತನ ಕಡೆಯವರು ಬರಲಿ,ನಾವು ರಿಸ್ಕ್ ತಗೊಳ್ಳೊದು ಬೇಡ…ಎಂದು ದೂರ ನಿಂತರು..ನನಗೋ ಸಂಕಟ..ಕಾರಣ ಕೈ ತಣ್ಣಗಾಗಿತ್ತು‌.ಜೀವ ಕಣ್ಮುಂದೆ ಹೋಗೋಕೆ ಬಿಡಬಾರದು‌ ಅಂತ ಧೈರ್ಯ ಮಾಡಿ..ಆತನ ಕಾರಿದೆ..ಕಾರು ಓಡಿಸುವವರು ಬೇಕು..ಅಲ್ಲಿದ್ದವರನ್ನು ಕೇಳಿದೆ..ಅವರು ನನಗೆ ಬರುತ್ತೆ ನೀವು ಅವರ ಸಂಬಂಧಿಕರಾ ಅಂತ ಕೇಳಿದರು..ನಾನು ಹೌದು ಎಂದೆ.ಮಾನವೀಯತೆಯ ಮುಂದೆ ಯಾವ ಸಂಬಂಧ ಬೇಕು…ಅಲ್ಲಿದ್ದವರ ಸಹಾಯದಿಂದ ಆ ಯುವಕನನ್ನು ಕಾರಲ್ಲಿ ಕುಳ್ಳಿರಿಸಿ ಅಲ್ಲೆ ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತು…… ಸ್ವಲ್ಪ ಹೊತ್ತು ತಡವಾಗಿದ್ದರು  ಒಂದು ಜೀವ ಹೇಳ ಹೆಸರಿಲ್ಲದೆ ಹೋಗುತ್ತಿತ್ತು… ಎಲ್ಲರಲ್ಲೂ ಮಾನವೀಯತೆ ಇದ್ದೆ ಇರುತ್ತದೆ.ಆದರೆ ಅದು ನಮ್ಮ ಸ್ಟೇಟಸ್ಗೆ ಮಾತ್ರ ಸೀಮಿತವಾಗಬಾರದು..ಸಮಯ ಹೇಗೆ,ಎಲ್ಲಿ,ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆಯೋ ಗೊತ್ತಿಲ್ಲ..ಅವಕಾಶ ಸಿಕ್ಕಾಗ ಒಳಿತು ಮಾಡು.ಜೀವ,ಜೀವನ ನಮ್ಮ ಕೈಯಲ್ಲಿ. ಅದನ್ನು ಹೇಗೆ ಬಳಸುತ್ತೆವೆಯೋ ನಮಗೆ ಬಿಟ್ಟಿದ್ದು.

ಸೈನಿಕರ ಬಗ್ಗೆ ತುಂಬಾ ಗೌರವ ನಮಗೆ…ನಾವು ಇವತ್ತು ನೆಮ್ಮದಿಯಿಂದ ಇದ್ದೆವೆ ಅಂದರೆ ಅದು ಸೈನಿಕರ ರಕ್ಷಾಕವಚದಿಂದ.ಸೈನಿಕ ಕುಟುಂಬಗಳು ಸುಖ ಸಂತೋಷದಿಂದ ಇರಬೇಕು. ನಮ್ಮ ನಮ್ಮ ಊರಿನಲ್ಲಿರುವ ಸೈನಿಕರನ್ನು ತುಂಬು ಗೌರವದಿಂದ ನೋಡಿಕೊಳ್ಳುವುದು ಮತ್ತು ಅವರಿಗೆ ಬೆಂಬಲಿಸುವ ಕೆಲಸ ನಮ್ಮದಾಗಬೇಕು.ದೇಶ,ದೇಶಾಭಿಮಾನ ಕೇವಲ ಹೇಳಿಕೆಯ ಮಾತಾಗದೇ ಹೃದಯ ಬಡಿತವಾಗಬೇಕು..ರೈತನಿಗೆ ಅನ್ಯಾಯವಾದರೆ ಜಗತ್ತು ಮುಂದೊಂದುದಿನ ತಿನ್ನಲು ಅನ್ನ ಇಲ್ಲದೆ ನರಳಿ ಸಾಯಬೇಕಾಗುತ್ತದೆ.ಮುಂದಿನ ಪೀಳಿಗೆಗೆ ನಾವು ಪ್ರಕೃತಿಯ ಪೋಟೋ ಕೊಡುಗೆಯಾಗಿ ನೀಡಿದರೆ ಆಶ್ಚರ್ಯವಿಲ್ಲ…

ಒಟ್ಟಾರೆಯಾಗಿ ಹೇಳುವುದಾದರೆ ಜಗತ್ತಿನ ಎಲ್ಲ ವಸ್ತುಗಳಿಗೆ ಮುಕ್ತಾಯ ದಿನಾಂಕ ನಿಗದಿಯಾಗಿದೆ..ಅದು ನಿಧಾನವಾಗಿ ಚಲಿಸುವ ಚಕ್ರದ ಅಂದರೆ ಸಮಯಕ್ಕೆ ವರ್ಗಾಯಿಸಲಾಗಿದೆ.ಮೆಟ್ರೊ ತರ…ಯಾರ ನಿಲ್ದಾಣ ಎಲ್ಲಿದಿಯೋ ಅಲ್ಲಿಗೆ ಅವರನ್ನು ಇಳಿಸಿ ಮುಂದೆ ಸಾಗುತ್ತದೆ. ಕಡಲು ತನ್ನಷ್ಟಕ್ಕೇ ತಾನೆ ಸಿಡಿದೆದ್ದರೆ ನಾವು ಉಳಿಯಬಹುದೇ ಎಂಬುದನ್ನು ಉಹಿಸಿದರೆ ಮೈ ಜುಮ್ ಎನ್ನುತ್ತದೆ. ಇರುವಷ್ಟು ಗಳಿಗೆ ಮೋಸ,ವಂಚನೆ,ದ್ರೋಹ ಮಾಡದೇ ನೈಸರ್ಗಿಕವಾಗಿ ಪ್ರಕೃತಿಯ ಮಡಿಲು ಇನ್ನಷ್ಟು ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಜವಾಬ್ದಾರಿ ನಮ್ಮಮೇಲಿದೆ.ಹಾಗಂತ ಕಟ್ಟಡದ ಮೇಲೆ”swimming pool” ಮಾಡುವುದಲ್ಲ!. ಐಷಾರಾಮಿ ಜೀವನಕ್ಕೆ ಇಡೀ ಬದುಕನ್ನೆ ಬಲಿಕೊಡಬೇಕಾಗಬಹುದು!…ಉಳ್ಖವರು ಏನುಬೇಕಾದರೂ ಮಾಡಬಹುದು.ಇಲ್ಲದವರು ಇದ್ದುದರಲ್ಲೆ ಖುಷಿ ಪಡುವುದು.ಪ್ರಯತ್ನ ಯಾವಾಗಲೂ ಸಕಾರಾತ್ಮಕವಾಗಿರಬೇಕು..ಇನ್ನೊಬ್ಬರನ್ನು ಪೀಡಿಸಿ,ಕಸಿಕೊಂಡದ್ದು ಆಗಿರಬಾರದು.ನಿಯತ್ತು,ಪ್ರಾಮಾಣಿಕತೆ, ಬದ್ದತೆ ನಮ್ಮ ಜೊತೆಗಿದ್ದರೆ ಸಾಕು!.ಮೊದಲು ಮಾನವನಾಗು ಎಂಬುದರ ಬಗ್ಗೆ ಗೊತ್ತಿದ್ದರೆ ಇಡೀ ಜಗತ್ತು ಗೆದ್ದ ಹಾಗೆ!. ಅಂದಷ್ಟು ಸುಲಭವಲ್ಲ.ಕಾಲಚಕ್ರ ನಿಲ್ಲದು!.


4 thoughts on “

  1. ಸಮಯಕ್ಕೆ ಸರಿಯಾಗಿ ಸಹಾಯ ಮಾಡಿ ಒಂದು ಜೀವ ಉಳಿಸಿದಕ್ಕಾಗಿ ಧನ್ಯವಾದಗಳು ಗೆಳತಿ
    ನಿನ್ನ ಲೇಖನ ಚೆನ್ನಾಗಿ ಮೂಡಿ ಬಂದಿದೆ.

  2. ಅತೀ ಸುಂದರ ಅಪರೂಪದ ಲೇಖನ. ಇದ್ದಾಗ ಮಹತ್ವ ಅರಿತು ಸಾಗುವ ಮನಸ್ಸು ನಮ್ಮದಾಗಬೇಕು. ಅಭಿನಂದನೆಗಳು.

  3. ಮನುಷ್ಯ ಜನ್ಮಕ್ಕೆ ಹೇಗೆ ಬಂದಿದ್ದೇವೆ? ಎನ್ನುವುದನ್ನು ನೆನಪಿಟ್ಟುಕೊಂಡು,ಮಾನವೀಯತೆ ಬೆಳೆಸಿಕೊಂಡು,ಒಳ್ಳೆತನದಲ್ಲಿ ಬದುಕಿ,ಇದ್ದಾಗ ನಮ್ಮ ಕೈಯಲ್ಲಾದ ಸಹಾಯ ಮಾಡಿದಾಗ ಈ ಬದುಕಿಗೊಂದು ಅರ್ಥ ಎನ್ನುವ ಈ ಲೇಖನ ಅರ್ಥಪೂರ್ಣ ವಾಗಿದೆ.ಧನ್ಯವಾದಗಳು ಮೆಡಮ್

Leave a Reply

Back To Top