ಡಾ ರೇಣುಕಾತಾಯಿ. ಸಂತಬಾ ರೇಮಾಸಂ ಅವರ ಕವಿತೆ-ಮಿಲನ

ನಾನು ಬಾನು ನೀನು ಭುವಿ
ಸಂಧಿಸುವೆವು ನಾವ್ ಅನುದಿನ
ಕಲಹ ಮುನಿಸು ಬಂದರೇನು
ಮಿಲನೋತ್ಸವ ನಿಲ್ಲದು ಪ್ರತಿದಿನ

ನಿನ್ನ ಒಲವು ತಂದಿತು ಬಲವು
ಹೊಂಬಿಸಿಲ ಮುತ್ತಲಿ ಉದಯವು
ಕೇಸರಿ ರಂಗದಲಿ ಅಸ್ತಮಾನವು
ಬೆಳಗು ಸಂಜೆಗೆ ರಂಗ ಸಂಗಮವು

ನಿವೇದಿಸುವೆ ಪ್ರೀತಿ ಕಾಮನಬಿಲ್ಲಲಿ
ಹನಿ ಹನಿ ಮೋಡಗಳ ಚಿಂಗಾರಿಯಲಿ
ಮುತ್ತನೀಡುವೆ ಬಾಹುಬಂಧನದಲಿ
ಧರಿಸಿಬಿಡು ಹೊನ್ನಸಿರಿ ಮೊಳಕೆಯಲಿ

ನೀ ಹೆಣ್ಣು ನಾ ಗಂಡು ಈ ಗೂಡಲ್ಲಿ
ಪ್ರೀತಿಭಾವ ಸೂರ್ಯ ರಶ್ಮಿಯಂತೆ
ಅನುರಾಗ ಹಸಿರಲಿ ಲಜ್ಜೆ ಮಿಂಚಂತೆ
ಇರ್ವರ ಮಿಲನವು ಸಫಲವಾಯ್ತಿಲ್ಲಿ


Leave a Reply

Back To Top