ಗಂಗಾಧರ ಬಿ ಎಲ್ ನಿಟ್ಟೂರ್ ಅವರ ಕವಿತೆ-ʼಬ್ಯಾಸರಾಗದೆ ಇದ್ದೀತೇನಾ ಗೆಳತಿʼ

ಯಾಕಿಂತ ನೀರವ ಮೌನ – ಯಾಕಿಷ್ಟು ನೀರಸ ಭಾವ
ಯಾಕ್ಹೀಗೆ ಹೇಳೆಂದು ನೀ ಹಂಗ ಪೀಡಿಸಿದರೆ
ನಾ ಏನಂತಾ ಉತ್ತರಿಸಲಿ ಗೆಳತಿ
ಸುಂದರ ಬದುಕಿನ ಕನಸಿಗೆ ಕೊಡಲಿ ಪೆಟ್ಟು ಬಿದ್ದರೆ ಬ್ಯಾಸರಾಗದೆ ಇದ್ದೀತ ಹೇಳಾ ಗೆಳತಿ

ಅಲ್ಲಿ ಬರೀ ಗದ್ದಲ ನಡಿತೈತಿ
ಜನರ ಬವಣೆ ಆ ಮಂದಿಗ್ಹ್ಯಾಂಗ ತಿಳಿತೈತಿ,
ಬದುಕಿಗಿಲ್ಲಿ ಬೆಂಕಿ ಬಿದ್ದೈತಿ,
ಜನ ಮಾನಸಕೆ ಬರೀ ಚಿಂತಿ ಕಾಡಕತ್ತೈತಿ,
ಕಂಡೂ ಕಂಡು ಮನ ಸುಮ್ನರಾ
ಹ್ಯಾಂಗ ಇದ್ದೀತು ಹೇಳಾ ಗೆಳತಿ

ಅಲ್ಲಿ ಅತಿವೃಷ್ಠಿ – ಇಲ್ಲಿ ಅನಾವೃಷ್ಠಿ
ಗಾಡಿಗಳೋ ಹೊಂಟಾವ ಮಂದಿ ಮ್ಯಾಲಾನ
ಸುಕಾ ಸುಮ್ನೆ ಮಾರಣಹೋಮ
ರಕ್ಷಣೆಯಾದ್ರೂ ಈ ಜಗದಾಗ ಎಲ್ಲೈತಾ ಗೆಳತಿ

ಬೆಳಗಾದ್ರೆ ಸಾಕು ಬರೀ ಇವಾ ಸುದ್ದಿ
ಕೊಲೆ – ಸುಲಿಗಿ, ಅಗ್ನಿಗಾಹುತಿ – ಜಲಕ್ಕಾಹುತಿ
ಚಿಕ್ಕ ಮಕ್ಕಳ ಆತ್ಮಹತ್ಯೆ ಕಣ್ಣಾರೆ ಕಂಡ ಮ್ಯಾಲೂ ನಿದ್ದೆರಾ ಹ್ಯಾಂಗ ಬಂದೀತು ಗೆಳತಿ

ದುಡಿವವರಿಗಿಲ್ಲ ಹೊಟ್ಟೆ ತುಂಬ ಊಟ
ಮ್ಯಾಲ ಭ್ರಷ್ಟಾಚಾರದಾಟ ಶೋಷಣೆ ಕಾಟ
ದೇವರಾದ್ರೂ ಕಲಿಸ ಬೇಕಲ್ವ ಪಾಠ
ಒಡಲಿಗೆ ಕಿಚ್ಚು ಹಚ್ಚುತ್ತಾ ಇಲ್ವಾ ಹೇಳಾ ಗೆಳತಿ

ನೂರುಪಾಯ ಇದ್ರೂ ಪರಿಹಾರ ಸಿಗ ಒಲ್ದು
ಕೊರಗು ಮಾತ್ರ ತಪ್ಪಾಕೊಲ್ದು
ನಿರಾಶವಾದಿಗಳ ಕೂಗಲ್ಲ ಆಶಾವಾದಿಗಳ ಅಸಹಾಯಕ ಸ್ಥಿತಿ ಇದು ತಿಳಿಯಾ ಗೆಳತಿ


One thought on “ಗಂಗಾಧರ ಬಿ ಎಲ್ ನಿಟ್ಟೂರ್ ಅವರ ಕವಿತೆ-ʼಬ್ಯಾಸರಾಗದೆ ಇದ್ದೀತೇನಾ ಗೆಳತಿʼ

Leave a Reply

Back To Top