ರಾಜು ನಾಯ್ಕ ಅವರ ಕವಿತೆ-ಒಂದೆ ಮತದ ಬೇರು ಬೆಳೆಯಲಿ

ಬಾಗಬೇಕು ಬಾಳಿನಲ್ಲಿ
ಸಾಗಬೇಕು ಪ್ರೀತಿಯಿಂದ
ಬೀಗಬೇಕು ಸಾಮ್ಯದಿಂದ
ಸ್ಪೂರ್ತಿ ಬೆಳಕಲಿ
ಕೀರ್ತಿ ಬೆಳಗಲಿ
ಕಾಗೆ ಗೂಬೆ ಕಥೆಯ ಬಿಟ್ಟು
ವೇಗದಿಂದ ಗುರಿಯ ಕಡೆಗೆ
ಬೇಗೆ ಕಳೆದು ನಗುವ ಹಾಗೆ
ಒಲುಮೆ ಅರಳಲಿ
ಹಿರಿಮೆ ‌ಹರಡಲಿ

ಚೆಂದದಿಂದ ಒಂದುಗೂಡಿ
ಕುಂದದಂತೆ ಮಂದಹಾಸ
ಮಂದಿ ನಲಿದು ಬೆಳೆವ ಹಾಗೆ
ನಾದ ತುಂಬಲಿ
ಮೋದ ಬೀರಲಿ
ನಂದದಿರಲಿ ನಗುವ ದೀಪ
ಕಂದದಿರಲಿ ಬಾಳ ರೂಪ
ಒಂದು ಗೂಡಿ ಧರ್ಮ ಕರ್ಮ
ಗಂಧ ಬೀಡಲಿ
ಬಂಧ ಮೂಡಲಿ

ಊರು ಕೇರಿ ಮುತ್ತಿದಂತ
ನೂರು ಭಾಷೆ ಜಾತಿ ನೀತಿ
ತೇರನೇರಿ ಭಾವ ಸುಮದ
ತೋಟ ಬೆಳೆಯಲಿ
ನೋಟ ನಲಿಯಲಿ
ಯಾರು ದೂರ ಜೀವದೊಳಗೆ
ಭಾರವಲ್ಲ ಭಾವದೊಳಗೆ
ಸೂರಿನೊಳಗೆ ಒಂದೆ ಮತದ
ಬೇರು ಬೆಳೆಯಲಿ
ನೀರು ದೊರೆಯಲಿ

ಕ್ರಾಂತಿಯಿಂದ ಬದಲು ಎಂಬ
ಭ್ರಾಂತಿ ತುಂಬಿ ಮುಗ್ದ ಮನದ
ಶಾಂತಿ ಕದಡಿ ಮರೆಯುತಿಹರು
ನೀತಿ ಎಲ್ಲಿದೆ
ಪ್ರೀತಿ ನಿಲ್ಲದೆ
ಜಾತರೆಲ್ಲ ತಿಳಿದು ಕೂಡಿ
ಪ್ರೀತಿಯಿಂದ ಬಾಳ್ವೆ ಮಾಡಿ
ರೀತಿಯಂತೆ ನಡೆದರಲ್ಲಿ
ಶಾಂತಿ ಬಾಳಲಿ
ಕ್ರಾಂತಿ ನೂಕಲಿ


Leave a Reply

Back To Top