
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯ ವಚನ

ಆಕಾರವಿಲ್ಲದ ನಿರಾಕಾರ ಲಿಂಗವ ಕೈಯಲ್ಲೇ ಹಿಡಿದು
ಕಟ್ಟಿದೆವೆಂಬರು ಅಜ್ಞಾನಿ ಜೀವಿಗಳು
ಹರಿ ಬ್ರಹ್ಮರು ವೇದ ಪುರಾಣ ಆಗಮಂಗಳು
ಅರಸಿ ಕಾಣದ ಲಿಂಗ
ಭಕ್ತಿಗೆ ಫಲವಲ್ಲದೆ ಲಿಂಗವಿಲ್ಲ ಕರ್ಮಕ್ಕೆ ನರಕವಲ್ಲದೆ ಲಿಂಗವಿಲ್ಲ ಜ್ಞಾನಕ್ಕೆ ಹರಿಭ್ರಮಣವಲ್ಲದೆ ಲಿಂಗವಿಲ್ಲ
ವೈರಾಗ್ಯಕ್ಕೆ ಮುಕ್ತಿಯಿಲ್ಲದೆ ಲಿಂಗವಿಲ್ಲ
ಇದು ಕಾರಣ ತನ್ನ ತಾನರಿದು ತಾನಾದಡೆ
ಮಲ್ಲಿಕಾರ್ಜುನ ತಾನೇ ಬೇರಿಲ್ಲ
12 ನೆಯ ಶತಮಾನದ ಬಸವಣ್ಣನವರು ವೈದಿಕಶಾಹಿ ವ್ಯವಸ್ಥೆಯನ್ನು ವಿರೋಧಿಸಿ, ಕೆಲ ವರ್ಗದ ಸಮುದಾಯಗಳಿಗೆ ಸಮಾನ ಸಮಾನತ್ವವನ್ನು ಬೆಳೆಸುವುದಕ್ಕಾಗಿ, ಅವರಿಗೂ ಕೂಡ ದೇವರು ಇರುವನು ಎಂದು, ಅವರು ಇವರು ಎನ್ನದೇ, ಸರ್ವರಿಗೂ ಇಷ್ಟ ಲಿಂಗವನ್ನು ಕರದಲ್ಲಿ ಕುರುವುವನ್ನಾಗಿ ನೀಡಿದರು.
ಆಕಾರವಿಲ್ಲದ ನಿರಾಕಾರ ಲಿಂಗವ ಕೈಯಲ್ಲೇ ಹಿಡಿದು
ಈ ಇಷ್ಟ ಲಿಂಗ .ಜ್ಞಾನದ ಅರಿವಿನ ಸಂಕೇತ .ಒಂದು ವೈಚಾರಿಕ ಹಿನ್ನೆಲೆಯನ್ನು ಇಟ್ಟುಕೊಂಡು ಅತ್ಯಂತ ಕೆಳ ಸಮುದಾಯದವರಿಗೂ, ಲಿಂಗವನ್ನು ನೀಡಿದರು . ಅದನ್ನು ಅವರು ಆಯತ, ಸ್ವಾಯತ ಹಾಗೂ ಸನ್ನಿಹಿತ ಮಾಡಿಕೊಂಡರು.
12ನೇ ಶತಮಾನದ ಪೂರ್ವದಲ್ಲಿ ವೈದಿಕ ಶಾಹಿಯವರು ಈ ಕೆಳ ಸಮುದಾಯದವರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದರು. ದೇವಾಲಯದ ಪ್ರವೇಶ ನಿರಾಕರಿಸಲಾಗಿತ್ತು .ಇದನ್ನು ಕಂಡು ಬಸವಣ್ಣನವರು ಮಮ್ಮಲ ಮರುಗಿ ಅವರು ಕೂಡಾ ನಮ್ಮಂತೆ ಮನುಷ್ಯರು. ಮಾನವೀಯ ಗುಣವನ್ನು ಹೊಂದಿದಂತವರು ಎಂದು ತಿಳಿಸಿ ,ಸಮಾನತ್ವದ ಹಿನ್ನೆಲೆಯಲ್ಲಿ ಈ ಲಿಂಗವನ್ನು ಪ್ರತಿಷ್ಠಾಪಿಸಿದರು.
ಅನೇಕ ದೇವಾಲಯಗಳನ್ನು ವಿರೋಧಿಸಿ ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ. ದೇಹವೇ ದೇವಾಲಯ ಶಿರವೇ ಹೊನ್ನ ಕಳಸ, ಎನ್ನ ಕಾಲೇ ಕಂಬ ಎಂದು ತಿಳಿಸಿಕೊಟ್ಟರು, ಪ್ರತಿಯೊಬ್ಬರೂ ದೇವರನ್ನು ಹುಡುಕಿಕೊಂಡು ಹೋಗುವುದಲ್ಲ. ನಮ್ಮ ನಮ್ಮ ಕರದಲ್ಲಿರುವ ಈ ಲಿಂಗವೆ ದೇವರು ಅದರಲ್ಲೇ ಪರಮಾತ್ಮನನ್ನು ಕಾಣುವ ತತ್ವವನ್ನು, ಅರುವಿನ ಕುರುವನ್ನು ಜಾಗೃತಗೊಳಿಸಿ, ನಮ್ಮ ಮನಸ್ಸನ್ನು ಏಕಾಗ್ರ ಚಿತ್ತವಾಗಿಸಿ, ದೇವರನ್ನು ಒಲಿಸಿಕೊಳ್ಳುವ ತಾವೇ ದೇವರಾಗುವ, ಒಂದು ಅದಮ್ಯ ಚೈತನ್ಯವನ್ನು ನಮ್ಮ ಕರಸ್ಥಲಕ್ಕೆ ತಂದು ಕೊಟ್ಟವರು ಬಸವಣ್ಣನವರು.
ಅದನ್ನೇ ಅಕ್ಕನವರು,
ಆಕಾರವಿಲ್ಲದ ನಿರಾಕಾರ
ಸ್ವರೂಪ ಯಾವುದೇ ಜಾತಿ, ಲಿಂಗ,ವರ್ಗ, ವರ್ಣವನ್ನು ಪರಿಗಣಿಸದೆ ಬಸವಣ್ಣನವರು
ಜ್ಞಾನದ ಸಂಕೇತವಾದ ಈ ಲಿಂಗವನ್ನು ಶೋಧಿಸಿ ಪ್ರತಿಯೊಬ್ಬರ ಕೈಯಲ್ಲೂ
ಲಿಂಗವನ್ನು ಪ್ರತಿಷ್ಠಾಪಿಸಿದರು.
ನಿರಾಕಾರ ಎಂದರೆ
ಯಾವುದೇ ನಿರ್ದಿಷ್ಟವಾದ ರೂಪ ಇಲ್ಲದಿರುವುದು ಪರಿಪೂರ್ಣ ಜ್ಞಾನದ ಮೂಲಕ ತಿಳಿಯಬಹುದಾದದ್ದು. ಸ್ಥೂಲವಲ್ಲದ, ಸೂಕ್ಷ್ಮವಲ್ಲದ, ಶ್ರೇಷ್ಠವಲ್ಲದ ಯೋಗಿಗಳು ತಮ್ಮೊಳಗೆ ಧ್ಯಾನಿಸಬೇಕಾದದ್ದು.
ಲೋಕದ ಸೃಷ್ಟಿಕರ್ತ ,ಕಲೆಗಾರ.
ಈ ಭೂಮಿ, ನೀರು, ಬೆಂಕಿ, ಗಾಳಿ ಅಥವಾ ಆಕಾಶವು ಅಲ್ಲ ಮುಕ್ತಿಗಾಗಿ ನಿಮ್ಮನ್ನು ಪ್ರಜ್ಞೆಯಿಂದ ಕೂಡಿದೆ .ನೀವು ದೇಹದಿಂದ ಭಿನ್ನರಾಗಿ ನಿಮ್ಮನ್ನು ನೋಡುತ್ತಾ ಪ್ರಜ್ಞೆಯಲ್ಲಿ ವಿಶ್ರಾಂತಿ ಪಡೆದರೆ ಈಗಲೂ ನೀವು ಸಂತೋಷ ಶಾಂತಿಯುತ ಮತ್ತು ಬಂಧುಗಳಿಂದ ಮುಕ್ತರಾಗುತ್ತಿರಿ. ನೀವು ಮೇಲ್ಜಾತಿಯವರೂ ಅಲ್ಲ, ಕೆಳ ಜಾತಿಯವರೂ ಅಲ್ಲ .ನೀವು ಅನಾಸಕ್ತಿ ನಿರಾಕಾರ ಎಲ್ಲದಕ್ಕೂ ಸಾಕ್ಷಿಯಾಗಿದ್ದೀರಿ ಹೀಗಾಗಿ ನೀವು ಸಂತೋಷವಾಗಿರಿ ಎನ್ನುವ ಸಂಕೇತವೇ ಈ ಲಿಂಗ.
ಇನ್ನೊಂದು ಅರ್ಥದಲ್ಲಿ ರೂಪಗಳನ್ನು ಮೀರಿದವರು. ಒಳ್ಳೆಯ ಕುಟುಂಬದ ಮಗ, ರೂಪದಿಂದ ಶುದ್ಧ, ಧರ್ಮದಿಂದ ಶುದ್ಧತೆ, ಜ್ಞಾನದಿಂದ ಶುದ್ಧತೆ
ಒಟ್ಟಿನಲ್ಲಿ ಆಕಾರವಿಲ್ಲದ ಶಿವನ ಸ್ವರೂಪ ಚೈತನ್ಯದಾಯಕವಾದ ಈ ಲಿಂಗವನ್ನು,ಕಟ್ಟಿದೆವೆಂಬರು ಅಜ್ಞಾನಿ ಜೀವಿಗಳು
______
ಇವತ್ತು ಅನೇಕ ಜನರು ಲಿಂಗವನ್ನು ಕೈಯಲ್ಲಿ ಹಿಡಿದುಕೊಳ್ಳುವಲ್ಲಿ ಎಡುವುತ್ತಿದ್ದಾರೆ. ಅವರ ಭಕ್ತಿ ತೋರಿಕೆಯ ಭಕ್ತಿಯಾಗಿದೆ. ಗುರು, ಲಿಂಗ, ಜಂಗಮಕ್ಕೆ ಮಹತ್ವವಿಲ್ಲದೆ ಡಂಭಾಚಾರಿಗಳಾಗುತ್ತಿದ್ದಾರೆ.
ಭಕ್ತಿ ಭಾವವಿಲ್ಲದೇ, ಡಾಂಭಿಕ ತನದಿಂದ ಮೆರೆಯುವ, ಕೊರಳಲ್ಲಿ ಲಿಂಗವನ್ನು ಕಟ್ಟಿದ್ದೇವೆ ಎಂದು, ತೋರಿಕೆಗಾಗಿ ಮಾತ್ರ.
ಆಡಂಬರ ಅನಾಚಾರಿಗಳಿಗೆ ದೇವರು ಒಲಿಯುವುದಿಲ್ಲ .ಅವರು ಅಜ್ಞಾನಿಗಳು ತಮ್ಮ ನಡೆ -ನುಡಿ, ಆಚಾರ -ವಿಚಾರ,ಜ್ಞಾನ – ಕ್ರಿಯೆಗಳನ್ನು ಮರೆತು ನಡೆಯುವ ಅಜ್ಞಾನಿಗಳು ಎಂದು ಹೇಳುವರು ಅಕ್ಕ.
ಹರಿ ಬ್ರಹ್ಮರು ವೇದ ಪುರಾಣ ಆಗಮಂಗಳು ಅರಸಿ ಕಾಣದ ಲಿಂಗ
ಇಂತಹ ಆಡಂಬರ ಅನಾಚಾರಿಗಳು ಹಿಂದಿನ ಹರಿ , ಬ್ರಹ್ಮರ ವೇದ ಶಾಸ್ತ್ರಗಳನ್ನು ಅರಸುವಲ್ಲಿ ಪ್ರಯೋಜನವಿಲ್ಲ. ಎಂದು ಅಕ್ಕಮಹಾದೇವಿಯವರು ಹೇಳಿದ್ದು ಈ ಒಂದು ವಚನದಲ್ಲಿ ಕಂಡು ಬಂದಿದೆ .
ಭಕ್ತಿಗೆ ಫಲವಲ್ಲದೆ ಲಿಂಗವಿಲ್ಲ ಕರ್ಮಕ್ಕೆ ನರಕವಲ್ಲದೆ ಲಿಂಗವಿಲ್ಲ
ಭಕ್ತಿ ಇದ್ದಾಗಲೇ ಲಿಂಗ ವೆಂಬ ಫಲ ದೊರೆಯುವುದು. ಯಾರಲ್ಲಿ ಭಕ್ತಿ ಇಲ್ಲವೋ ಅವರಿಗೆ ಲಿಂಗ ಒಲಿಯಲಾರದು .
ನನ್ನ ಚೆನ್ನಮಲ್ಲಿಕಾರ್ಜುನಾ
ಡಂಬಾಚಾರಿಗಳಿಗೆ ಒಲಿಯಲಾರ ಎನ್ನುವರು ಅಕ್ಕ.
ನನ್ನ ಚೆನ್ನಮಲ್ಲಿಕಾರ್ಜುನನು ಒಲಿಯಬೇಕಾದರೆ,ನಿರ್ಮಲ ಭಕ್ತಿ ಭಾವ ಹೊಂದಿದವರಿಗೆ ಮಾತ್ರ ಒಲಿಯುವನು.
ನಿರ್ಮಲ ಭಕ್ತಿ ಇಲ್ಲದೇ ಲಿಂಗ ವನ್ನು ಪೂಜಿಸುವವರಿಗೆ ನರಕವೇ ಪ್ರಾಪ್ತಿ. ಎನ್ನುವರು ಅಕ್ಕ.
ತನ್ನ ತಾನರಿದು ತಾನಾದಡೆ ಮಲ್ಲಿಕಾರ್ಜುನ ತಾನೇ ಬೇರಿಲ್ಲ
ಲಿಂಗವೆಂಬುದು ಶರಣರ ಹೃದಯದಲ್ಲಿ ಬೆಳಗುವ ಜ್ಯೋತಿಯಂತೆ .ಅಂಗವೆಂದರೆ ಶರಣ ಲಿಂಗವೆಂದರೆ ಶಿವ .ಶರಣನಿಗೆ ಯಾವಾಗಲೂ ಲಿಂಗವೇ ಪ್ರಾಣವಾಗಿದೆ . ಇನ್ನು ಲಿಂಗಕ್ಕೆ ಶರಣನು ಯಾವಾಗಲೂ ಅಂಗನಾಗಿರುತ್ತಾನೆ .ಈ ಶರಣ ಹಾಗೂ ಲಿಂಗ ಒಂದು ರೀತಿಯಲ್ಲಿ ಬೀಜ ಮತ್ತು ವೃಕ್ಷ ಇದ್ದಂತೆ ಶರಣನಿಗೆ .ಪ್ರಾಣ ಚೈತನ್ಯವಾಗಿದೆ ಈ ಲಿಂಗ .
ಪ್ರಾಣ ಚೈತನ್ಯವಾದ ಈ ಲಿಂಗವನ್ನು ಅಕ್ಕಳು ಪೂಜಿಸುತ್ತಾ ಅದರಲ್ಲೇ ಭಕ್ತಿ ಭಾವದಿಂದ ಒಂದಾಗಿ ಮೈ ಮರೆಯುವ ಬಗೆ ,
ಒಳಗಿನ ಆಂತರಿಕ ಭಾವದಲ್ಲಿ ಚೆನ್ನಮಲ್ಲಿಕಾರ್ಜುನನ್ನು ಕಾಣುವ ಅಕ್ಕಳ ಲಿಂಗಾಂಗ ಸಾಮರಸ್ಯ, ಭಾವ ತಲ್ಲೀನತೆ, ಪರಿಶುದ್ಧವಾದ ನಿರ್ಮಲ ಭಕ್ತಿ ಅದು ಅಕ್ಕಮಹಾದೇವಿಯರಲ್ಲಿ ಕಾಣುವ ಚೆನ್ನಮಲ್ಲಿಕಾರ್ಜುನನಲ್ಲಿಯೇ ಒಂದಾಗಿ ನಿಲ್ಲುವ ಬಗೆ ಬೇರಾರಲ್ಲೂ ಕಾಣಲಾರೆವು .
ಒಟ್ಟಿನಲ್ಲಿ ಮಾನವ ಜನ್ಮದ ಹಿರಿಮೆಯನ್ನು ಅರಿಯದೇ ಇಂದ್ರಿಯಗಳ ಸುಖದಲ್ಲಿ ಕಾಲಹರಣ ಮಾಡಿದರೆ ನಮ್ಮ ಬದುಕು ವ್ಯರ್ಥವಾಗದಂತಾಗುತ್ತದೆ . ಶರಣರ ಮಹಿಮೆಯನ್ನು ಅರಿಯದೇ ಬದುಕುವವರ ಕೈಯಲ್ಲಿ ಲಿಂಗವಿದ್ದರೆ ಅವರಿಗೆ ಶರಣರ ಹಾಗೂ ಲಿಂಗದ ಪೂಜೆಯ ಫಲವು ದೊರೆಯಲಾರದು .ಹಾಗೂ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ.
ಡಾ ಸಾವಿತ್ರಿ ಕಮಲಾಪೂರ

ಅಕ್ಕಮಹಾದೇವಿಯರ ವಚನ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ