ಮಹಿಳಾ ಸಂಗಾತಿ
ಮೇಘ ರಾಮದಾಸ್ ಜಿ
“ಮಹಿಳಾ ಆರೋಗ್ಯಾಭಿವೃದ್ಧಿಗಿವೆ
ಹಲವು ಯೋಜನೆಗಳು”

ಮಹಿಳಾ ಆರೋಗ್ಯಾಭಿವೃದ್ಧಿಗಿವೆ ಹಲವು ಯೋಜನೆಗಳು
ಮಹಿಳೆ ತನ್ನ ಜೀವಿತಾವಧಿಯಲ್ಲಿ ಹಲವು ದೈಹಿಕ ಬದಲಾವಣೆಗಳನ್ನು ಅನುಭವಿಸುತ್ತಾಳೆ. ಆಕೆ ಋತುಮತಿ ಆಗುವುದರಿಂದ ಮೊದಲುಗೊಂಡು, ಪತ್ನಿಯಾಗಿ, ತಾಯಿಯಾಗಿ ಹಲವು ಮಜಲುಗಳನ್ನು ದಾಟುತ್ತಾಳೆ. ಅದರಲ್ಲಿಯೂ ತಾಯಿಯಾದ ನಂತರ ಆಕೆಯ ದೈಹಿಕ ಸ್ಥಿತಿ ಅಷ್ಟೇ ಅಲ್ಲದೆ ಮಾನಸಿಕ ಸ್ಥಿತಿಯಲ್ಲಿಯೂ ಹಲವು ಬದಲಾವಣೆಗಳನ್ನು ಕಾಣುತ್ತಾಳೆ. ತಾಯಿಯಾಗುವ ಹಾಗೂ ತಾಯಿಯಾದ ನಂತರದ ಎರಡೂ ಸಂದರ್ಭಗಳೂ ಹೆಣ್ಣಿನ ಜೀವನದ ದೊಡ್ಡ ಘಟ್ಟಗಳಾಗಿವೆ. ಈ ಸಮಯದಲ್ಲಿ ಆರೋಗ್ಯದ ಕಾಳಜಿ ಬಹಳ ಮುಖ್ಯವಾಗಿರುತ್ತದೆ. ಕೌಟುಂಬಿಕ ಬೆಂಬಲ ಮಾತ್ರವಲ್ಲದೇ, ವೈದ್ಯಕೀಯ ಸಲಹೆಯೂ ಅತ್ಯವಶ್ಯಕ. ಆರ್ಥಿಕವಾಗಿ ಸಬಲವಾಗಿರುವ ಕುಟುಂಬಗಳಿಗೆ ವೈದ್ಯಕೀಯ ಸೇವೆ ಸುಲಭವಾಗಿ ಸಿಗಬಹುದಾಗಿದೆ. ಆದರೆ ಮಧ್ಯಮ ವರ್ಗದ ಹಾಗೂ ಬದ ಕುಟುಂಬಗಳಿಗೆ ಈ ಹಾದಿ ಅಷ್ಟೇನೂ ಸುಲಭವಲ್ಲ. ಆದ್ದರಿಂದ ಮಹಿಳೆಯರ ಅದರಲ್ಲೂ ವಿಶೇಷವಾಗಿ ಗರ್ಭಿಣಿ, ಬಾಣಂತಿ ಹಾಗೂ ಶಿಶುವಿನ ಆರೋಗ್ಯ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಮಾತೃ ಪೂರ್ಣ ಯೋಜನೆ
ಎಲ್ಲಾ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರವನ್ನು ಒದಗಿಸಿ, ರಕ್ತ ಹೀನತೆಯನ್ನು ತಡೆಗಟ್ಟುವುದು, ಆರೋಗ್ಯ ವೃದ್ಧಿಸುವುದು ಮತ್ತು ಅಪೌಷ್ಟಿಕತೆಯನ್ನು ತೊಲಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದರ ಅಡಿಯಲ್ಲಿ ಅಂಗನವಾಡಿಗಳಲ್ಲಿ ಗರ್ಭಿಣಿಯರಿಗೆ ಮಧ್ಯಾನ್ಹದ ಪೌಷ್ಟಿಕಾಯುಕ್ತ ಬಿಸಿಯೂಟ ಮತ್ತು ಬಾಣಂತಿಯರಿಗೆ ಮಾಸಿಕ ಪೌಷ್ಟಿಕ ಆಹಾರದ ರೇಷನ್ ವಿತರಿಸಲಾಗುತ್ತದೆ.
ಆಶಾ ಕಾರ್ಯಕರ್ತೆಯರ ಸೌಲಭ್ಯ
ತಾಯಿ ಮತ್ತು ಶಿಶು ಮರಣವನ್ನು ಕಡಿಮೆ ಮಾಡುವುದು, ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದು, ಆರೋಗ್ಯ ಸೇವೆಗಳನ್ನು ಸಮುದಾಯಕ್ಕೆ ತಲುಪಿಸುವುದು ಈ ಯೋಜನೆಯ ಮುಖ್ಯ ಧ್ಯೇಯ. ಈ ಯೋಜನೆಯ ಅಡಿಯಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಂಡು ಆರೋಗ್ಯ ಸೇವಾ ಯೋಜನೆಗಳು ಹಾಗೂ ಸಮುದಾಯದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವಂತೆ ನಿಯೋಜಿಸಲಾಗಿದೆ.
ನಗು ಮಗು ಆಂಬ್ಯುಲನ್ಸ್
ನಗು ಮಗು ವಾಹನವು ಗರ್ಭಿಣಿ ಸ್ತ್ರೀ ಹೆರಿಗೆಯಾದ ನಂತರ ತಾಯಿ ಮತ್ತು ಮಗುವಿಗೆ ನಂಜು ಆಗುವುದನ್ನು ತಡೆಗಟ್ಟುವ ಉದ್ದೇಶದಿಂದ ಆಸ್ಪತ್ರೆಯಿಂದ ಅವರ ಮನೆಗೆ ಹಿಂದಿರುಗಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ ಬಾಣಂತಿಯರಿಗೆ ಮತ್ತು ನವಜಾತ ಶಿಶುಗಳಿಗೆ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸಂಪೂರ್ಣ ಉಚಿತ ಸೇವೆಯನ್ನು ನೀಡಲಾಗುತ್ತದೆ.
ಜನನಿ ಶಿಶು ಸುರಕ್ಷಾ ಕಾರ್ಯಕ್ರಮ
ಕಡುಬಡ ವರ್ಗಕ್ಕೆ ಸೇರಿದ ಗರ್ಭಿಣಿಯರು ಸರ್ಕಾರಿ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಲ್ಲಿ ಹೆರಿಗೆ ಸೌಲಭ್ಯ ಪಡೆದುಕೊಳ್ಳಲು ಪ್ರೋತ್ಸಾಹಿಸುವುದು, ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯವನ್ನು ಕಾಪಾಡುವುದು, ರಾಜ್ಯದಲ್ಲಿ ತಾಯಂದಿರ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವುದು, ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವುದು ಈ ಕಾರ್ಯಕ್ರಮದ ಮೂಲ ಆಶಯ. ಈ ಕಾರ್ಯಕ್ರಮದ ಅಡಿಯಲ್ಲಿ ಈ ಕೆಳಗಿನ ಸೌಲಭ್ಯಗಳು ದೊರೆಯುತ್ತವೆ.
1. ಸಾಮಾನ್ಯ ಹೆರಿಗೆ ಅಥವಾ ಸಿಸೇರಿಯನ್ ಹೆರಿಗೆ ಸಂಪೂರ್ಣ ಉಚಿತ
2. ಔಷಧ ಅಥವಾ ವೈದ್ಯಕೀಯ ಬಳಕೆಯ ವಸ್ತುಗಳು ಉಚಿತ
3. ನವಜಾತ ಶಿಶುಗಳಿಗೆ ಏನೇ ತೊಂದರೆಯಾದರೂ ಸೇವೆಗಳು ಔಷಧಿಗಳು ಸಂಪೂರ್ಣ ಉಚಿತ
4. ಗರ್ಭಿಣಿ ಮತ್ತು ನವಜಾತ ಶಿಶುಗಳಿಗೆ ಪ್ರಯೋಗಾಲಯದ ಪರೀಕ್ಷೆಗಳು ಉಚಿತ
5. ಗರ್ಭಿಣಿಗೆ ಉಚಿತವಾಗಿ ಪೌಷ್ಟಿಕ ಊಟ ತಿಂಡಿ ವ್ಯವಸ್ಥೆ.
ಮಡಿಲು ಯೋಜನೆ
ಕಡುಬಡ ವರ್ಗದ ಗರ್ಭಿಣಿಯರು ಸರ್ಕಾರಿ ಆರೋಗ್ಯ ಸೇವೆ ಪಡೆಯಲು ಪ್ರೋತ್ಸಾಹಿಸುವುದು, ತಾಯಿ ಮತ್ತು ಶಿಶುವಿನ ಆರೋಗ್ಯವನ್ನು ಕಾಪಾಡುವುದು, ತಾಯಿ ಮತ್ತು ಶಿಶುಮರಿನ ತಗ್ಗಿಸುವುದು, ಮಗುವಿನ ಜನನ ನೋಂದಣಿ ಕಡ್ಡಾಯವಾಗಿ ಮಾಡಿಸುವುದು ಈ ಯೋಜನೆಯ ಗುರಿಯಾಗಿದೆ. ಬಾಣಂತನಕ್ಕೆ ಬೇಕಾದ 19 ವಸ್ತುಗಳಿರುವ ಮಡಿಲು ಕಿಟ್ಟನ್ನು ಹೆರಿಗೆ ನಂತರ ತಾಯಿಗೆ ನೀಡಲಾಗುವುದು.
ಜನನಿ ಸುರಕ್ಷಾ ಯೋಜನೆ
ಜನನಿ ಸುರಕ್ಷಾ ಯೋಜನೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಗರ್ಭಿಣಿ ಮಹಿಳೆಯರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಮಹಿಳೆಯರಿಗೆ ಮನೆಯಲ್ಲಿ ಹೆರಿಗೆ ಆದಲ್ಲಿ 500/- ಸಂಸ್ಥೆಗಳಲ್ಲಿ ಹೆರಿಗೆ ಆದಲ್ಲಿ ನಗರ ಪ್ರದೇಶವಾದರೆ 600/- ಮತ್ತು ಗ್ರಾಮಾಂತರ ಪ್ರದೇಶವಾದರೆ 700/- ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸಿಜರಿಯನ್ ಶಸ್ತ್ರ ಚಿಕಿತ್ಸೆ ಆದಲ್ಲಿ 1500/- ಸಹಾಯಧನ ನೀಡಲಾಗುವುದು.
(ಈ ಮೇಲಿನ ಎಲ್ಲ ಯೋಜನೆಗಳ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ)
ಈ ಎಲ್ಲಾ ಯೋಜನೆಗಳ ಸಂಪೂರ್ಣ ಅನುಷ್ಠಾನದಿಂದ ರಾಜ್ಯದಲ್ಲಿ ತಾಯಿ ಹಾಗೂ ಶಿಶುಮರಣವನ್ನು ತಗ್ಗಿಸುವುದು ಸುಲಭವಾಗುತ್ತಿದೆ. ಆದ್ದರಿಂದ ಈ ಮಾಹಿತಿಯನ್ನು ಎಲ್ಲಾ ಹೆಣ್ಣು ಮಕ್ಕಳಿಗೂ ತಿಳಿಸುವ ಮೂಲಕ ಅವರ ಆರೋಗ್ಯದಲ್ಲಿ ಹಾಗೂ ಶಿಶುಗಳ ಆರೋಗ್ಯದಲ್ಲಿಯೂ ಉತ್ತಮ ಅಭಿವೃದ್ಧಿ ತರಲು ಸಾಧ್ಯವಾಗುತ್ತದೆ.
ಮೇಘ ರಾಮದಾಸ್ ಜಿ
ಯುವಜನ ಕಾರ್ಯಕರ್ತರು
ಹೊಂಬಾಳೆ ಟ್ರಸ್ಟ್, ಗುಳಿಗೇನಹಳ್ಳಿ, ಸಿರಾ, ತುಮಕೂರು.
