ಗೀತಾ. N. ಮಲ್ಲನಗೌಡರ್ ಅವರ”ಸುಜ್ಞಾನದ ರೆಕ್ಕೆ ಹಚ್ಚಿ ಗಗನಕ್ಕೆ ಹಾರುವ ಹಕ್ಕಿ “ಪುಸ್ತಕ ಪರಿಚಯ ಈರಪ್ಪ ಬಿಜಲಿ. ಕೊಪ್ಪಳ.

“ಸುಜ್ಞಾನದ ರೆಕ್ಕೆ ಹಚ್ಚಿ ಗಗನಕ್ಕೆ ಹಾರುವ ಹಕ್ಕಿ “
ಕವಿ/ ಲೇಖಕರು : ಗೀತಾ. N. ಮಲ್ಲನಗೌಡರ್
ಸಾ// ಸೋಂಪುರ. ತಾ// ಕುಕನೂರ. ಜಿ // ಕೊಪ್ಪಳ.
Mob No: 9380030211.
ಪ್ರಕಾಶನ : ಕಪ್ಪತ್ತಗಿರಿ. ಪ್ರಕಾಶನ.
ಪೋ : ಕಳಸಾಪುರ. ತಾ / ಜಿ : ಗದಗ.
ಬೆಲೆ :120. ರೂ. ಗಳು.

 ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನ..| ತೆಂಗಿನ ಕಾಯಿ ತಿಳಿನೀರ, ತಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರದ ಮಾರಿ ತೊಳೆದೇನ..||

 ಎಂಬ ಹಾಡು ಯಾರಿಗೆ ತಾನೇ ನೆನಪಿಲ್ಲ, ಹೇಳಿ, ಇದನ್ನ ಎಂದಾದರೂ ಮರೆಯಲು ಸಾಧ್ಯವೇ…?  ಈ  ಜನಪದ, ಬಾಲ ಸಾಹಿತ್ಯ ಎಂದ್ರನೇ ಹಂಗೆ… ಬಾಲ ಸಾಹಿತ್ಯದ ಶಕ್ತಿ ಅಂಥದು. ಈ ಬಾಲ ಸಾಹಿತ್ಯ ಎನ್ನುವುದು ಬಹು ವಿಶಾಲವಾದ ಸಾಗರ , ಹೇರಳವಾದ ವ್ಯಾಪ್ತಿಯನ್ನು ಹೊಂದಿದೆ. ಚಿಕ್ಕಪುಟ್ಟ ಮಕ್ಕಳ ಬುದ್ಧಿಮಟ್ಟಕ್ಕೆ ಇಳಿದು ಕವಿಗಳು , ಸಾಹಿತಿಗಳು ಮಕ್ಕಳ ಸದಾಭಿರುಚಿಗೆ ತಕ್ಕಂತೆ ಪ್ರಮುಖವಾಗಿ ಆದಿಪ್ರಾಸ ,  ಮಧ್ಯಪ್ರಾಸ , ಅಂತ್ಯಪ್ರಾಸ ಪದಗಳ ಬಳಕೆ ಮಾಡಿ ಮಕ್ಕಳ ಪದ್ಯ ರಚಿಸಬೇಕಾಗುತ್ತದೆ.  ಆ ನಿಟ್ಟಿನಲ್ಲಿ ಶ್ರೀಮತಿ ಗೀತಾ ಎನ್ ಮಲ್ಲನಗೌಡರ್ ಸಹೋದರಿಯರು ಮಾಡಿದ ಪ್ರಯತ್ನ ತುಂಬಾ ಮೆಚ್ಚುವಂತಹದು , ಈ ಪ್ರಯತ್ನದ ಫಲವೇ ಇಂದು ಕವನ  ಮಕ್ಕಳ ಸಂಕಲನವಾದ ” ಹಾರುವ ಹಕ್ಕಿ “ಎಂಬ ಶಿಶು ಗೀತೆಗಳ ಸಂಕಲನವಾಗಿ ಹೊರಹೊಮ್ಮಿದೆ , ಇಂತಹ ಒಂದು ಕೃತಿಯನ್ನು ಕವಯತ್ರಿಯವರು ಕನ್ನಡ ಸಾರಸತ್ವ ಲೋಕಕ್ಕೆ ಕನ್ನಡ ಅಭಿಮಾನಿಗಳಿಗೆ ಕನ್ನಡ ಓದುಗರಿಗೆ ಓದಲು ಕಾಣಿಕೆಯಾಗಿ ನೀಡಿದ್ದು ತುಂಬಾ ಸಂತಸದಾಯಕ ಹಾಗೂ ಹೆಮ್ಮೆ ಎನಿಸುತ್ತದೆ . ಈ ಕೃತಿಗೆ ನಮ್ಮ ನಾಡಿನ ಅಚ್ಚುಮೆಚ್ಚಿನ ಹಿರಿಯ ಸಾಹಿತಿಗಳು ಲೇಖಕರು ಆದ ಶ್ರೀಯುತ ತಮ್ಮಣ್ಣ ಬೀಗಾರ್ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಇವರು ಚಂದವಾದ ಮುನ್ನುಡಿ ಬರೆದು ಕವಿಗಳನ್ನು ಪ್ರೇರೇಪಿಸಿದ್ದಾರೆ. ಹಾಗೆಯೇ ರೆಕ್ಕೆಯ ಬಿಚ್ಚಿ ಗಗನಕ್ಕೆ “ಹಾರುವ ಹಕ್ಕಿ” ಈ ಕೃತಿಗೆ ಮತ್ತೊಬ್ಬ ನಮ್ಮ ನಾಡಿನ ಹಿರಿಯ ಕವಿ,  ಕಥೆಗಾರರು, ಸಾಹಿತಿಗಳು , ಲೇಖಕರು ಆದ ಶ್ರೀಯುತ ವೈ ಜಿ ಭಗವತಿ (ಕಲಘಟಗಿ) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಆದ ಇವರು ಈ ಕೃತಿಗೆ ಸುಂದರವಾದ ಅರ್ಥಪೂರ್ಣವಾದ ಬೆನ್ನುಡಿಯನ್ನು ಬರೆದು ಕವಯಿತ್ರಿಯರನ್ನು /ಲೇಖಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

     “ಹಾರುವ ಹಕ್ಕಿ ” ಈ ಮಕ್ಕಳ ಕವನ ಸಂಕಲನವು ಒಟ್ಟು 65 ಮಕ್ಕಳ ಪದ್ಯಗಳನ್ನು ಒಳಗೊಂಡಿದೆ . ಈ ಪದ್ಯಗಳು ರೈತರ ಬದುಕು , ಶಾಲೆಯ ಪರಿಸರ , ಹೊಲಗದ್ದೆ ತೋಟಗಳು , ಪರಿಸರ ಪ್ರೇಮ , ಪ್ರಾಣಿ ಪಕ್ಷಿಗಳು,  ಚಂದ್ರ, ಆಕಾಶ , ಚಿಟ್ಟೆ , ಅಮ್ಮನ ಅಂತ:ಕರುಳು, ಹೆತ್ತವರ ಅಳಲು ಹೀಗೆ ಅನೇಕ ವಿಷಯಗಳನ್ನು ಕುರಿತು ರಚಿಸಿದ ಪದ್ಯಗಳಾಗಿವೆ. ಲೇಖಕರು ಮಕ್ಕಳ ಮನದ ತಲ್ಲಣಗಳ,  ಮಿಡಿಯುವ ಹೃದಯಗಳ ಭಾವನೆಗಳನ್ನು ಬಹಳ ಚೆನ್ನಾಗಿ ಅರಿತು ಅಚ್ಚುಕಟ್ಟಾಗಿ ಕವಿತೆಗಳನ್ನು ರಚಿಸಿದ್ದಾರೆ.

      ಕವಿಗಳು ಸ್ವತಃ ಪ್ರಾಥಮಿಕ ಶಾಲಾ ಶಿಕ್ಷಕಿಯರಾದ ಪ್ರಯುಕ್ತ ಮಕ್ಕಳ ಮನವನ್ನು ಗೆಲ್ಲುವಲ್ಲಿ ಬಹಳ ಸಮಯ ತೆಗೆದುಕೊಳ್ಳದೆ ಸಫಲರಾಗಿದ್ದಾರೆ. ಅವರ ಈ ಕೃತಿಯು “ನಮ್ಮ ಶಾಲೆ ” ಎಂಬ ಪದ್ಯದೊಂದಿಗೆ ಪ್ರಾರಂಭವಾಗುತ್ತದೆ. ಜ್ಞಾನವೊಂದೇ ಕತ್ತಲೆಯನ್ನು ಹೊಡೆದು ಓಡಿಸುವ ಅಸ್ತ್ರ , ವಿದ್ಯೆಯೇ ಬಾಳಿಗೆ ಬೆಳಕು ಎನ್ನುತ್ತಾ ಮಕ್ಕಳನ್ನು ಶಾಲೆಗೆ ಕರೆತರುವ ಅವರ ಕವನವು ಓದುಗರ ಮನಸ್ಸನ್ನು ಸೆಳೆಯುತ್ತದೆ

 ನಮ್ಮ ಶಾಲೆ ನಮ್ಮಶಾಲೆ
ನೋಡ ಬನ್ನಿರಿ
ಅಕ್ಷರವ ಕಲಿಯಲೆಂದು ಪಾಟಿ ತನ್ನಿರಿ //



ನಂತರದಲ್ಲಿ ತುಂತುರು ಮಳೆ ಬರುವ ಕಾಲಕ್ಕೆ ಆಕಾಶದಲ್ಲಿ ಕಾಣುವ ಕಾಮನಬಿಲ್ಲನು ನೋಡಿದ ಮಕ್ಕಳಲ್ಲಿ ಉಂಟಾಗುವ ಪ್ರಶ್ನೆಗಳನ್ನು ಕುರಿತು ಬರೆದ ಪದ್ಯ “ಬಣ್ಣ ತುಂಬಿದವರು ಯಾರು? “….



  ಕಾಮನ ಬಿಲ್ಲಿಗೆ ಮೆಲ್ಲಗೆ ಬಂದು
ಬಣ್ಣವ ತುಂಬಿದವರು ಯಾರು?
ಕಿತ್ತಳೆ, ನೇರಳೆ,ಹಳದಿ ಕೆಂಪು ಬಣ್ಣದ
ಹೊಳಪು ಇಟ್ಟವರು ಯಾರು.?.
….  

ಎಂದು ಮಕ್ಕಳ ವಿಚಿತ್ರ ಭಾವನೆಗಳ ಪ್ರಶ್ನೆಗಳು ತುಂಬಾ ಸೊಗಸಾಗಿ ಈ ಪದ್ಯದಲ್ಲಿ ಮೂಡಿ ಬಂದಿವೆ.  ಹಾಗೆಯೇ ಮುಂದುವರಿದು ರೆಕ್ಕೆ ಬಿಚ್ಚಿ ಮೇಲೆ ಗಗನದಿ ಹಾರುವ ಹಕ್ಕಿಗಳು ತಮ್ಮ ಪಯಣದಲ್ಲಿ ಸುತ್ತಲೂ ಕಂಡು ನೋಡಿ ಸಂತೋಷ ಪಟ್ಟ ವಿಷಯಗಳಾದ ನದಿಗಳು ತಾರೆಗಳು ಚಂದ್ರ ಬೆಳ್ಳಿ ಚುಕ್ಕಿಗಳು ನಾಡಿನ ಪ್ರವಾಸಿ ತಾಣಗಳ ಬಗ್ಗೆ ಚೆನ್ನಾಗಿ ಚಿತ್ರಿಸಿದ್ದಾರೆ….

     ಹಾರುವ ಹಕ್ಕಿ ರೆಕ್ಕೆ ಬೆಚ್ಚಿ ಮುಗಿಲಿನತ್ತ ಹಾರಿತ್ತು
ಹಾರುತ ಹಾರುತ ಸಂತಸದಿಂದ
ಮನದಲಿ ಹಿರಿ ಹಿರಿ ಹಿಗ್ಗಿತ್ತು /
/

     ಹೀಗೆ ಪಕ್ಷಿ ಪ್ರೇಮವನ್ನು ಅಭಿವ್ಯಕ್ತಿಗೊಳಿಸುತ್ತಾ, ಹಕ್ಕಿಯ ಬಗ್ಗೆ ಮತ್ತೊಂದು ಪದ್ಯವನ್ನು ಬರೆದಿದ್ದಾರೆ, ಅದು ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

 ರೆಕ್ಕೆ ಬಲಿತ ಹಕ್ಕಿಯೊಂದು ಸೊಕ್ಕಿನಿಂದ ಮೆರೆಯಿತು /
ಉಕ್ಕಿ ದುಃಖ
ಹಕ್ಕಿ ತಾಯಿ
ಬಿಕ್ಕಿ ಬಿಕ್ಕಿ ಸೊರಗಿತು //  

       ಹೀಗೆ ಹಕ್ಕಿಗಳ ಉಪಮೇಯ ನೀಡುತ್ತಾ ಎತ್ತವರ ಸಂಕಟ , ಕಷ್ಟಗಳನ್ನು ಸೊಗಸಾಗಿ ಬಿಂಬಿಸಿದ್ದಾರೆ. ಇದಲ್ಲದೆ ಇನ್ನು ವಿಭಿನ್ನ ರೀತಿಯ ಪದ್ಯಗಳಾದ ಬೇಸಿಗೆಯ ಬಿಸಿಲು, ಗುಬ್ಬಿಮರಿ ಬೆಳೆಯಲಿ ಹಬ್ಬಿ, ಬಣ್ಣದ ಲೋಕದ ಚಿಣ್ಣರು,  ಅಕ್ಕಿ-ಹಕ್ಕಿ, ನಾಗರ ಪಂಚಮಿ,  ದೇವ ಜೀವ, ತಿಂಗಳ ಬೆಳಕಿನ ಚಂದಮಾಮ, ಶಾಲೆ ಮಂದಿರ, ಮೋಡ ನೀ.. ಓಡಬೇಡ,  ಕಾ.. ಕಾ.. ಕಾಗೆಮರಿ,  ಅರಳುವ ಹೂಗಳು, ಬೆಳ್ಳಿಮೋಡ, ಕಂದ ನೀ ನಡೆ ಜ್ಞಾನದ ಬೆಳಕಿನ ಕಡೆಗೆ,  ಒಲವು ಜ್ಯೋತಿ, ಅಮ್ಮ ದೇವರು,  ಕಾಣುವದಾದರೆ ಕಾಣು ಕನಸು, ಮತ್ತು ಕನ್ನಡ ಭಾಷೆಯ ಕುರಿತಾದ ಅಭಿಮಾನ ಕೆರಳಿಸುವ ಬೆಳೆಯುತಿರು.. ಬೆಳಗುತಿರು ಎಂಬ ಪದ್ಯ, ಹಾಗೂ ಒಂದೇ ತೋಟದ ಹೂಗಳು, ಹಸಿರು ತೋರಣ, ನೆಲ ಜಲವ ಕುರಿತಾಗಿ ಬರೆದ ನೆಲದ ವೈಭವ, ರಾಷ್ಟ್ರ ಅಭಿಮಾನ ಉಕ್ಕಿಸುವ ಪದ್ಯವಾದ ನಮ್ಮ ಧ್ವಜವು ಹೆಮ್ಮೆಯ ಧ್ವಜವು, ಮುದ್ದು ಗಿಳಿ ಪುಟ್ಟಿ ಆಸೆ, ಬಾನಚಂದಿರ, ಸಂಕ್ರಾಂತಿ ಹೀಗೆ ಹತ್ತು ಹಲವು ಬಗೆಯ, ಒಂದಲ್ಲ ಎರಡಲ್ಲ 65 ಪದ್ಯಗಳಲ್ಲಿ ಕೆಲವು ಪದ್ಯಗಳು ಒಂದೇ ಭಾವದ ಪದ್ಯಗಳಾಗಿ ಪುನರಾವರ್ತಿವೆ ಎನಿಸಿದರೂ ಸಹ ಓದುಗರು ಕೊಡುವ ಹಣಕ್ಕೆ ನಷ್ಟವಿಲ್ಲ, ಮಕ್ಕಳಿಗೆ ಹಾಡು ಕಲಿಯಲು ಈ ಪುಸ್ತಕವು ಉಪಯುಕ್ತ ಎನಿಸುತ್ತದೆ.

     ಈ ಕೃತಿಯಲ್ಲಿ ಪರಿಸರ ಪ್ರೇಮಿ, ವೃಕ್ಷ ಮಾತೆ, ಸಾಲು ಸಾಲು ಮರಗಳ ನೆಟ್ಟ ಸಾಲುಮರದ ತಿಮ್ಮಕ್ಕನ ಕುರಿತಾದ ಪದ್ಯವು ಓದುಗರ ಗಮನ ಸೆಳೆದು ಮನ ಮೆಚ್ಚುವಂತಿದೆ, “ತಿಮ್ಮಕ್ಕನ ಮರಗಳ ಸಾಲು” ಈ ಪದ್ಯದಲ್ಲಿ ಹಸಿರೇ ಉಸಿರು ಎಂದು ಹೇಳುತ್ತಾ ಹಸಿರಿನ ಮಹತ್ವವನ್ನು ಕವಿಗಳು ಹೀಗೆ ಬಣ್ಣಿಸಿದ್ದಾರೆ

     ತಿಮ್ಮಕ್ಕನಂತೆ ನೀವು ಬೆಳೆಸಿ ಎಲ್ಲಾ ಗಿಡಮರ ಬೆಳೆದು ಜಗವ ಬೆಳಗಲಿ ಬಲು ಸುಂದರ//

ಹಸಿರು ಇದ್ದರೆ ತಾನೆ ನಾವು ನೀವೆಲ್ಲ
ಹಸಿರು ಇಲ್ಲದೆ
ಉಸಿರು ಇಲ್ಲವೇ ಇಲ್ಲ  //

      ಹೀಗೆ ಈ ಕೃತಿಯು ಹಲವಾರು ಕಾರಣಗಳಿಂದ ಹಾಗೂ ಅನೇಕ ಉತ್ತಮ ಕವನಗಳನ್ನು ಒಳಗೊಂಡಿದ್ದರಿಂದ ಮತ್ತು ಆಕರ್ಷಕವಾದ ಮುಖಪುಟವನ್ನು ಹೊಂದಿದ್ದರಿಂದ ಈ ಕವನ ಸಂಕಲನ ಪುಸ್ತಕವು ಮನ ಸೆಳೆಯುತ್ತದೆ. ಕವಯಿತ್ರಿಯರು ಮಕ್ಕಳ ಸಾಹಿತ್ಯದಲ್ಲಿ ಇನ್ನು ಹೆಚ್ಚಿನ ಅಧ್ಯಯನ ಮಾಡಿ ಛಂದಸ್ಸು, ಲಯ ಆದಿ ಪ್ರಾಸ,  ಅಂತ್ಯಪ್ರಾಸ, ಯತಿ ಇವುಗಳ ಕಡೆಗೆ ಹೆಚ್ಚು ಹೆಚ್ಚು ಆದ್ಯತೆ ನೀಡಿದರೆ ಅವರಿಂದ ಮುಂದಿನ ದಿನಗಳಲ್ಲಿ ಈ ಕೃತಿಗಿಂತಲೂ ಶ್ರೇಷ್ಠವಾದ ಕೃತಿಗಳು ಅವರಿಂದ ಹೊರ ಬರುವವು ಎಂಬ ಭರವಸೆ ನನಗಿದೆ. ಹಾಗೂ ಇಂತಹ ಒಂದು ಮಕ್ಕಳ ಲೋಕಕ್ಕೆ ಓದುಗರನ್ನು ಕರೆದೊಯ್ಯುವಂತಹ ಕೃತಿಯನ್ನು ಕನ್ನಡ ಸಾರಸತ್ವ ಲೋಕಕ್ಕೆ ಅರ್ಪಿಸಿದ ಕವಿಗಳಿಗೆ ಮತ್ತೊಂದು ಬಾರಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ಕನ್ನಡದ ಅಭಿಮಾನಿಗಳಾದ ತಾವೆಲ್ಲರೂ ಈ ಕೃತಿಯನ್ನು ಕೊಂಡು ಓದಿ ಕವಿ / ಲೇಖಕರನ್ನು ಪ್ರೋತ್ಸಾಹಿಸಿ , ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸುವಿರೆಂದು ಆಶಿಸುತ್ತೇನೆ….

̲———————————

Leave a Reply

Back To Top