ಕಾವ್ಯಯಾನ

ಬಿದಲೋಟಿ ರಂಗನಾಥ್

ಮೌನದ ಗೆರೆಯ ನಡುವೆ..

ಒಡಲುರಿಯ ಕನಸೊಂದು
ಚುಕ್ಕಿಗಳತ್ತ ಮುಖ ಮಾಡಿ
ಭಾವದಗೂಡಿನಲಿ ಅರಳಿ
ಮುತ್ತಾಗಿ ಸಮುದ್ರದ ಮೇಲೆ ಬರೆದ
ಕವನದ ಕರುಳ ತಂತಿಯಲಿ
ಸುತ್ತಿಕೊಂಡ ಸಂಬಂಧ

ಕಿತ್ತಾಡಿ ತಿನ್ನಲಿಲ್ಲ
ಒಟ್ಟಾಗಿ ಬೆಳೆಯಲಿಲ್ಲ
ಅತ್ತು ಕರೆದು ಕಣ್ಣೀರ ಕಡೆಯಲಿಲ್ಲ
ಅದೆಂಥದ್ದೋ ಭಾವದ ಸೆಳೆತ
ಹತ್ತಿರ ನಿಂತೆ ಹಾಡುತ್ತಿದೆ

ಕಣ್ಣ ಕನ್ನಡಿಯ ಬಿಂಬದಲಿ
ಕಟ್ಟಿದ ಕನಸುಗಳ ಕಂತೆ
ಬಿಚ್ಚಿ ನೋಡುವ ಬಯಲ ಕುದುರೆ
ಈ ಜಗದ ಮಿಣುಕು ಬೆಳಕು

ಎಲ್ಲೋ ನಿಂತು ನೋಡಿ
ಬೆಸೆದ ಅನುಬಂಧ ಮೀಟುತ್ತಿದೆ
ನನ್ನೊಳಗು ನಿನ್ನೊಳಗು
ನಿಷ್ಕಲ್ಮಶದ ದೀಪ ಉರಿಯುವಂತೆ
ತಿಳಿನೀರು ಬೊಗಸೆ ತುಂಬುವಂತೆ

ನಿನ್ನ ಕಣ್ಣೊಳಗು ಕಸ ಕಡ್ಡಿಯಿಲ್ಲ
ನನ್ನ ಕಣ್ಣೋ ಮೊದಲೇ
ಕರುಳು ಕಲೆತ ಭಾವದ ನಾಡಿ
ಭಯವಿಲ್ಲದ ಬೆಳದಿಂಗಳ ಬಯಲು

ತೆರೆದ ಕಣ್ಣಿನಲಿ
ಬೆಳೆದ ನಮ್ಮಗಳ ಮಾತು
ಶಾಂತವಲ್ಲದ ನದಿಯ ಮೇಲೆ ಕೂತ ಹಕ್ಕಿಗೆ
ಪಾಠವಾಗುತ್ತಿದೆ
ಮೌನದ ಗೆರೆಯ ನಡುವೆ
ಬರೆದ ಹಕ್ಕಿಯ ರೆಕ್ಕೆಗೆ ಜೀವ ಬಂದಿದೆ.

ಯಾರೆನಂದರೇನಂತೆ
ಕೂತ ತಾವು ಕತ್ತನು ಕೊಂಕಿಸಿಲ್ಲ
ಬಾಹುಗಳ ಚಾಚಿಲ್ಲ
ಒಡೆದ ಕನ್ನಡಿ ನನ್ನದೆನ್ನ

ಅಕ್ಕರೆಯ ಹಣೆ ಮುತ್ತು
ಅಕ್ಕನೊಡಲಿಗೆ ಬೆಂಗಾವಲು

============

Leave a Reply

Back To Top