ಕಾವ್ಯ ಸಂಗಾತಿ
ಡಾ. ಪದ್ಮ. ಟಿ. ಚಿನ್ಮಯಿ
ಬುದ್ದನಾಗಿ

ತಡಕಿ ತಡಕಿ ತಡವರಿಸಿದೆ
ಕಣ್ಣು ಕಾಣುವಷ್ಟು ಬಯಲು ಬರಿ ಬಯಲು
ಬಯಲೆಂಬ ಬಯಲೊಳಗೆ
ಹುಡುಕಿದೆ ಬಾಯಾರಿಕೆಯ ತಂಪಿಗೆ
ಕಾಣಲೇ ಇಲ್ಲ ಕಡೆಗೂ ಒಂದು ಹನಿ
ಸಾಕಿತ್ತು ಬೇಕಿತ್ತು ಬೊಗಸೆಯಷ್ಟೇ ಪ್ರೀತಿ
ಬಿಸಿಲ ಜಳದಲ್ಲಿ ಉರಿದು ಸಿಕಾದ ಮನಕೆ
ಒಡಲ ಕೆಂಡ ದುಂಡೆಗಳ ತಣಿವಿಗೆ
ಮಲಯ ಮಾರುತದ ಮಿಳಿತಕೆ
ಕಡೆಗೆ ಶಾಂತತೆಗೆ
ಅತ್ತಲೋ ಇತ್ತಲೋ ಎತ್ತಲಾದರೂ
ಬರಬಹುದೇ ನನ್ನತ್ತ
ಹಿಡಿದು ಬೋಗಸೆ ತುಂಬಾ ಪ್ರೀತಿಯನು
ಕುಡಿಸಿ ಕುಣಿಸುವವನ ಕಾಣಲು
ಒಂದೇ ಉಸಿರಲಿ ತೊಡರ ಕಾಲಲ್ಲಿ ನಿಂತೆ
ತುದಿಗಾಲಾಗಿ ಉಸಿರ ಹಸಿರಲಿ
ಹರಸುತ್ತ ಜೀವನದಿಯಾಗಿ
ನೆತ್ತಿ ಹತ್ತಿದ ಸೂರ್ಯ
ಏರು ಏರುತ್ತಲೇ ಇದ್ದ ಒಳ ಬೆಂಕಿ
ಒಳ ಹೊರಗಿನ ತಾಪದ ಉರಿಯುವಿಕೆಗೆ
ಬಾಣಲೆಯ ಕುದಿಯ ಕುರುಕಲ ಕರುಕಲಾಗಿದ್ದೆ .
ಇಳಿ ಹೊತ್ತ ಹೊತ್ತು ತರುವ ಚಂದಿರನೆ
ಕಾದೆ ಕಾದೆ ಬೋರ್ಗರೆವ ಕಡಲಾಗಿ
ಬೆಳದಿಂಗಳ ಬೆಳ್ಳನೆಯ ಬೆಳಕಾಗಿ
ಬುದ್ಧನಾಗಿ ಬಸವನಾಗಿ ನನಗೆ ನಾನಾಗಿ
ಕಂಡಿದ್ದೆ ಪ್ರೀತಿಯ ಬೊಗಸೆಯಲಿ
————————————————————————-
ಡಾ. ಪದ್ಮ. ಟಿ. ಚಿನ್ಮಯಿ

Spontaneous outpouring of your inner turmoil and search for a spiritual solace
ಕೊನೆಯ ಸಾಲುಗಗಳಲ್ಲಿ ಪರಮಾರ್ಥದ ಸಾಕ್ಷಾತ್ಕಾರದ.ದರ್ಶನವಾಗಿದೆ ಪದ್ಮ.