ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಸಾಗುವ ದಾರಿಯಲಿ

ಮೌನದ ನೇಣಿಗೇರಿದ ಮಾತು
ಮತ್ತೆ ಹೊರಗೆ ಬರಲೇ ಇಲ್ಲ
ಮುಗಿದ ಮಾತಿನ ನಂತರ
ಬದುಕು ಮತ್ತೆ ಅರಳಲೆ ಇಲ್ಲ
ನೋವಿನಿಂದ ಬಿಗಿದ ಕೊರಳು
ನಲಿವು ಕಾಣಲೇ ಇಲ್ಲ
ಕಣ್ಣಲ್ಲಿ ತುಂಬಿದ ಕಂಬನಿ
ಕರಗಿ ಹೊರಗೆ ಬರಲೇ ಇಲ್ಲ
ಮೊದಲಿದ್ದ ಲವಲವಿಕೆಯ
ಚಿಲುಮೆ ಮತ್ತೆ ಚಿಮ್ಮಲಿಲ್ಲ
ಕತ್ತಲಿಟ್ಟ ಮನದ ಮೂಲೆಯಲ್ಲಿ
ಬೆಳಕು ಮೂಡಲೇ ಇಲ್ಲ
ಯಾರದೋ ಪಿತೂರಿಗೆ
ಮುಗ್ಧಮನಸು ಬಲಿ ಆಯಿತಲ್ಲ
ವಾಸ್ತವದ ಅರಿವಿರದ ಮೇಲೆ
ಮಾತನಾಡುವುದು ತರವಲ್ಲ
ಇನ್ನೊಬ್ಬರಿಗೆ ನೋವನೀಡಿ
ಖುಷಿಯ ಪಡುವುದು ಯೋಗ್ಯವಲ್ಲ
ಸಾಗುವ ದಾರಿಯಲಿ ಮುಳ್ಳನ್ನೆಟ್ಟಿ
ಹೂವ ಬೆಳೆಯುವುದು ಸಾಧ್ಯವಿಲ್ಲ
ಬೆಳಕ ಬಿತ್ತಿ ಮುಂದೆ ಸಾಗಬೇಕು
ಬರುವವರಿಗೆ ದಾರಿದೀಪವಾಗಬೇಕು
ನಾಗರಾಜ ಜಿ. ಎನ್. ಬಾಡ

Very nice….