ಜಯಂತಿಸುನಿಲ್ ಅವರ ಕವಿತೆ-ಸೋತ ಉಸಿರು

ಹತಾಶೆಯಲಿ ಬಿರಿದ ಮುಖ
ಮಣ್ಣಲಿ ಹುದುಗಿದ ಕಾಲು
ಹಾಳು ಬಿದ್ದ ಆಗಸ
ಇರಿದ ದಿನಗಳು
ಛೇದಿಸುವ ಶೋಕಗಳು
ಪೀಡಿಸುವ ಬೆಳಕ ಕಿರಣಗಳು
ರೇಗಿಸುವ ಕಣ್ಣ ದೃಶ್ಯಗಳು
ತಲೆಗಂಟಿದ ಕೆಸರು
ಮುಳ್ಳುಕಂಟಿಗಳ ನಡುವೆ ಬರಿದೆ ಕಾಲಲಿ ನಡೆದು ಸೋತ ಉಸಿರು
ಹೀಗೆ ಒಂದೇ? ಎರಡೇ?
ಬುಡ ಮೇಲಾಗುವ ಹಳೆಯ ಬೇರಿನಂತಹ ಜೀವಕೆ ಬದುಕು ಕರುಣಿಸಿದ್ದು ತುಂಬಿ ತುಳುಕುವ ಏಕಾಕಿತನ..!!

ಬದುಕಲಿ ಸೋತ ಉಸಿರಿನ ಕೂಗು ಮೆಲ್ಲನೆ ನುಡಿಯುತ್ತದೆ
ಓ.. ಪ್ರಭುವೇ….
ಈಗಲಾದರೂ ನರಕದ ಬಂಧೀಖಾನೆಯ ಬಾಗಿಲು ತೆರೆ
ಉಳಿದ ನನ್ನೆದೆಯ ಕವಿತೆಯ ಸಾಲು ಜಗಕೆ ಕೇಳಬೇಕಿದೆ
ಗಡಿಯಿರದ ಗಾಳಿ ನನ್ನ ಮೖ ಸೋಕುವುದಿದೆ
ಈ ದೇಹ ಚೂರಾಗುವವರೆಗೆ ನಕ್ಷತ್ರಗಳಿಗೆ ಹೆಸರಿಡಬೇಕಿದೆ
ನನ್ನ ನರನಾಡಿ ತೊಗಲನ್ನು ಕಸೂತಿ ಮಾಡಿ ನನ್ನವಳಿಗೆ ನೀಡಬೇಕಿದೆ..!!

ಓ ಬದುಕಿನ ಪರಮಾನಂದವೇ..
ನನ್ನ ದನಿಯಾಲಿಸು
ಅವಳಿರುವಲ್ಲಿ ಹಸಿರಿದೆ
ತೋರಿಸೊಮ್ಮೆ ಅವಳ ಮೊಗವನು
ನನ್ನ ಕನಸಿನ ರಾಣಿಯನು
ಸ್ವರ್ಗಸುಖದ ಕೋಣೆಯನು
ಸುಗಂಧವೇ ತುಂಬಿದ ಲೋಕವನು
ನಿಶೆಯನು ತುಂಬಿಕೊಡುವ ಸಾಕಿಯ ಮಧುಶಾಲೆಯನು..!!

ಭೂತದ ಪುರಾಣವೆನಬೇಡ
ಭವಿಷ್ಯದ ಕಥೆಯಿದು
ಕೊಂಚ ಕಾಲವಾದರೂ ಅವಳನೂ, ಜಗವನು ಪ್ರೀತಿಸಬೇಕಿದೆ ನಾನು
ದಯಮಾಡಿ…
ನನ್ನುಸಿರ ಬಲೂನಿಗೆ ಚುಚ್ಚಬೇಡ
ಅದರೊಳಗೆ ಸೋತ ನನ್ನುಸಿರ ಕಾವು.. ತಣ್ಣಗಾಗುವವರೆಗಾದರೂ ಸುಮ್ಮನಿದ್ದುಬಿಡು
ಸುಮ್ಮನಿದ್ದುಬಿಡು..!!


Leave a Reply

Back To Top