ಕವಿತೆ ಕಾರ್ನರ್

ಆತ್ಮದ ಮಾತುಗಳು

person standing under a tree

ಈಗ ಹಗಲನ್ನು
ಇರುಳನ್ನೂ
ಕಳೆದುಕೊಂಡೆ

ಹೊಂಬಣ್ಣದ ಸಂಜೆಯೊಳಗೆ
ತುಂಗೆಯ ಮರಳುರಾಶಿಯಲ್ಲಿ ಮೂಡಿದ
ನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆ
ಕಾಲುಗಳು
ಹೂತುಹೋದದ್ದು ಗೊತ್ತಾಗಲೇ ಇಲ್ಲ

ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯ
ನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿ
ಕಳೆದುಕೊಂಡಿದ್ದೆ ನಿನ್ನನ್ನೂ.

ಕವಿತೆಯ ಪ್ರತಿಸಾಲನ್ನೂ
ನೀನು ಆಕ್ರಮಿಸುವಾಗ
ಪ್ರತಿ ಶಬುದವನ್ನೂ ಜತನದಿಂದ
ಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲು

ಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನು
ಮುಸುಕಿದ ಕತ್ತಲ ಕಂಡು
ತಿರುಗಿ ನೋಡುವಷ್ಟರಲ್ಲಿ
ನೀನಾಗಲೇ ವಿದಾಯ ಹೇಳಿಯಾಗಿತ್ತು

ಯಾಕೆ ಹೋದೆ
ಎಲ್ಲಿ ಹೋದೆ
ಯಾರಿರುವರು ಜೊತೆಗೆ
ಕೇಳಬಾರದ
ಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿ
ಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರ

ಬಯಲು ಸೀಮೆಯ ಕುರುಚಲು ಬಯಲುಗಳಲ್ಲಿ
ಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇ
ರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ!


ಕು.ಸ.ಮದುಸೂದನ್

3 thoughts on “ಕವಿತೆ ಕಾರ್ನರ್

  1. ಕೇಳಲಾರದ ಪ್ರಶ್ನೆಗಳಿಗೆ ‌ಉತ್ತರಕ್ಕೆ ಕಾಯುತ್ತಿದ್ದೇನೆ .
    ಮಾಂತ್ರಿಕ‌ ಸಾಲು
    ಮನೋಜ್ಞ ಕವಿತೆ

    1. ಕವಿತೆಯನ್ನು ಕಟ್ಟಿಕೊಂಡು ಹೋದ ರೀತಿ ತುಂಬಾ ಇಷ್ಟವಾಯಿತು.ಪ್ರೀತಿಸಿದ ಪ್ರತಿಯೊಬ್ಬ ಗಂಡಿನ ಪರಿಸ್ಥಿತಿ ಕೂಡ ಇದೆ ಆಗಿದೆ..
      ಹೃದಯದ ಭಾವನೆಗಳ ಬಡಿತ ಹೆಚ್ಚಿಸಿದಂತಿದೆ..
      ಸೂಪರ್ ಸರ್..

Leave a Reply

Back To Top