ಎಸ್ ವಿ ಹೆಗಡೆ ಅವರ ಕವಿತೆ-ಬಿದಿರು

ಬೆಳೆಯುತ್ತಲೇ ಇರುತ್ತವೆ ಜೊತೆಯಾಗಿ
ಬಿರುಗಾಳಿಗೆ ಬಗ್ಗಿದರೂ ಮತ್ತೆ ತಲೆಯೆತ್ತಿ ನಿಲ್ಲುತ್ತವೆ ಲೆಕ್ಕಿಸದೆ ಸುತ್ತಲಿನ ಮರಗಳು
ಧರೆಗೆ ಉರುಳುತ್ತಿರಲು

ಸತ್ತಜೀವವ ಹೊತ್ತು ಮಸಣಕ್ಕೆ ಹೊರಟರೂ
ಕಣ್ಣೀರು ಬಿಡಲಿಲ್ಲ ನಡೆವರು ಮೌನದಲಿ
ಜನುಮ ಮರಣದ ಗುಟ್ಟು ಅರಿತವರು
ಸುತ್ತಲಿನ ಜನರು ಅತ್ತು ಮರೆಯುವರು

ಎದೆಯ ಸೀಳಿದರೂ ಏಕೆಂದು ಕೇಳದಿವರು
ಬಡವರ ಗುಡಿಸಲಿಗೆ ನೆರಳು ಕೊಟ್ಟವರು
ಎಳೆ ಎಳೆಯಾಗಿ ಸಿಗಿದು ಕುಶಲದಲಿ ನೆಂದರು
ಉಸಿರು ಬಿಡದೆ ಹಸೆಯಾಗಿ ಮಲಗುವರು

ದೌರ್ಜನ್ಯಗಳ ಸರಮಾಲೆ ಮರೆತು ಇನ್ನೊಬ್ಬರ
ನೆರವಾಗಿ ನಿಂತವರು ಹುಟ್ಟಿದ ಮಕ್ಕಳು ಕೈಬಿಟ್ಟರೂ ಜೊತೆಯಾಗಿ ಕೊನೆವರೆಗೆ
ನಡೆಯುಲು ಆಧಾರ ನೀಡಿದವರು

ಬಿರುದು ಬಾವಲಿಗಳ ತೊರೆದು ಸೇವೆಯಲಿ
ಮುಳುಗಿದರು ಸಿಡಿದು ಆಕ್ರೋಶದಲಿ
ಕ್ರೌರ್ಯ ಮಿತಿಮೀರಿದರೆ ತಲೆಯೊಡೆದು
ಸೊಂಟ ಮುರಿದು ನೆಲಕ್ಕೆ ಚಚ್ಚ ಬಲ್ಲ ವರು


Leave a Reply

Back To Top