ಸಾವಿಲ್ಲದ ಶರಣರು ಮಾಲಿಕೆ-‘ಕನ್ನಡದ ಕುಲ ಪುರೋಹಿತ ಆಲೂರ ವೆಂಕಟರಾಯರು’- ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ- ಪೂನಾ

ಕನ್ನಡ ನಾಡು ನುಡಿ ನೆಲ ಜಲ ಸಂಸ್ಕೃತಿ ಸಾಹಿತ್ಯ ಸಮಗ್ರತೆ ಏಕತೆ ಏಕೀಕರಣ ಹೀಗೆ ಹತ್ತು ಹಲವು ರಂಗಗಳಲ್ಲಿ ಶ್ರಮ ವಹಿಸಿ ದುಡಿದು ಅಖಿಲ ಕರ್ನಾಟಕದ ಗತ ವೈಭವವನ್ನು ಕಟ್ಟಿ ಕೊಟ್ಟ ಧೀಮಂತ ಕನ್ನಡದ ಕಟ್ಟಾಳು ಕನ್ನಡದ ಕುಲ ಪುರೋಹಿತ ಆಲೂರ ವೆಂಕಟರಾಯರು ಕರ್ನಾಟಕವು ಕಂಡ ಅಪ್ಪಟ ಕನ್ನಡದ ಸೇನಾನಿ. ಬೇಂದ್ರೆ ಗೋಕಾಕ ಶಂಬಾ ಜೋಶಿ ಬೆಟಗೇರಿ ಕೃಷ್ಣ ಶರ್ಮ ರಂಶ್ರೀ ಮುಗಳಿ  ಮುಂತಾದ  ಅನೇಕ ಕನ್ನಡದ ಕವಿ ಸಾಹಿತಿ ಸಂಶೋಧಕರಿಗೆ ಮಾರ್ಗದರ್ಶಕರೆನಿಸಿಕೊಂಡ ಹಿರಿಯ ಚೇತನ
  1956  ನವೆಂಬರ್ ಕರ್ನಾಟಕ ರಾಜ್ಯವು ಉದಯವಾದಾಗ ಹಂಪಿ ವಿರೂಪಾಕ್ಷನಿಗೆ ಹೋಗಿ ಪೂಜೆ ಸಲ್ಲಿಸಿದ ಕಾರಣ ಇವರನ್ನು ಕುಲ ಪುರೋಹಿತ ಎನ್ನುತ್ತಾರೆ.  
ಆಲೂರು ವೆಂಕಟ ರಾವ್ (ಕೆಲವೊಮ್ಮೆ ಆಲೂರು ವೆಂಕಟ ರಾಯ ಎಂದೂ ಕರೆಯುತ್ತಾರೆ) (12 ಜುಲೈ 1880 – 25 ಫೆಬ್ರವರಿ 1964) ಒಬ್ಬ ಭಾರತೀಯ ಇತಿಹಾಸಕಾರ, ಬರಹಗಾರ ಮತ್ತು ಪತ್ರಕರ್ತ. ಪ್ರತ್ಯೇಕ ಕರ್ನಾಟಕ ರಾಜ್ಯದ ಉದ್ದೇಶಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ಅವರನ್ನು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕುಲಪುರೋಹಿತ ( ಕನ್ನಡ ಕುಟುಂಬದ ಪ್ರಧಾನ ಅರ್ಚಕ ) ಎಂದು ಪೂಜಿಸುತ್ತಾರೆ. ಮೈಸೂರು, ಬಾಂಬೆ ಪ್ರೆಸಿಡೆನ್ಸಿ ಮತ್ತು ನಿಜಾಮರ ಹೈದರಾಬಾದ್‌ನ ಕನ್ನಡ ಮಾತನಾಡುವ ಜನರಿಗಾಗಿ ರಾಜ್ಯ ರಚನೆಗೆ ಬೆಂಬಲವಾಗಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಕೈಗೊಂಡಿದ್ದಕ್ಕಾಗಿ ಅವರು ಪ್ರಸಿದ್ಧರಾದ್ದಾರೆ.

ರಾವ್ ಅವರು ಜಯ ಕರ್ನಾಟಕ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು ಮತ್ತು ಪತ್ರಿಕೆಯ ಏಕೈಕ ಗುರಿ ಕರ್ನಾಟಕದ ರಾಜ್ಯತ್ವಕ್ಕಾಗಿ ಶ್ರಮಿಸುವುದಾಗಿತ್ತು ಎಂದು ಹೇಳುತ್ತಿದ್ದರು.

ಆರಂಭಿಕ ಜೀವನ
—————————————
ವೆಂಕಟರಾವ್ ಅವರು ಜುಲೈ 12, 1880 ರಂದು ಕಂದಾಯ ಇಲಾಖೆಯಲ್ಲಿ ಸಿರಸ್ತೇದಾರ್ ಆಗಿದ್ದ ಭೀಮಾ ರಾವ್ ಅವರಿಗೆ ಜನಿಸಿದರು. ಅವರು ಕರ್ನಾಟಕದ ಬಿಜಾಪುರದಲ್ಲಿ ಸಾಂಪ್ರದಾಯಿಕ ದೇಶಸ್ಥ ಮಾಧ್ವ ಬ್ರಾಹ್ಮಣ ಕುಟುಂಬದವರು. ಅವರ ಹಿರಿಯರ ಮೂಲ ಊರು ಇವತ್ತಿನ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು . ಅವರು ಫರ್ಗುಸನ್ ಕಾಲೇಜಿನಲ್ಲಿ ಬಿಎ ಮತ್ತು ಎಲ್ಎಲ್‌ಬಿ ಪದವಿಗಾಗಿ ಅಧ್ಯಯನ ಮಾಡಿದರು, ಅಲ್ಲಿ ಅವರು ವಿನಾಯಕ ದಾಮೋದರ್ ಸಾವರ್ಕರ್, ಸೇನಾಪತಿ ಬಾಪಟ್ ಮತ್ತು ಬಾಲಗಂಗಾಧರ ತಿಲಕ್ ಅವರ ಸಂಪರ್ಕಕ್ಕೆ ಬಂದರು. ರಾವ್ ಅವರು ತಿಲಕರ ಆತ್ಮೀಯ ಸ್ನೇಹಿತರಾಗಿದ್ದರು ಮತ್ತು ಅವರ ಗೀತ ರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದರು.

ಶಿಕ್ಷಣ
——————————————
ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ1903 ರಲ್ಲಿ ಬಿ.ಎ. ಪದವಿ ಪಡೆದರು.1905 ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿ, ಧಾರವಾಡಕ್ಕೆ ಮರಳಿದರು.

ಸೇನಾಪತಿ ಬಾಪಟ್ ರವರು ಮತ್ತು ವೀರ್ ಸಾವರ್ಕರ್ ರವರು ಇವರ ಸಹಾಧ್ಯಾಯಿಗಳು.

ಒಮ್ಮೆ ಬೇಸಿಗೆ ರಜೆಯಲ್ಲಿ, ನವ ವೃಂದಾವನ, ಆನೆಗೊಂದಿಗಳನ್ನು ಸಂದರ್ಶಿಸಿ ಅಲ್ಲಿಂದ ಹಂಪಿಗೆ ಹೋದರು. ಹಂಪಿಯ ಅವಶೇಷಗಳು ಅವರ ಮನಸ್ಸಿನ ಮೇಲೆ ಅಪೂರ್ವ ಪರಿಣಾಮ ಉಂಟುಮಾಡಿದವು. ಅವರ ಮಾತಿನಲ್ಲೇ ಹೇಳುವುದಾದರೆ: “ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನನ್ನ ಮುಂದೆ ಬಿದ್ದಿದೆ. ಆ ದರ್ಶನವು ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು.” ಇದರಿಂದಾಗಿ ಆಲೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ವ್ಯಾಸಂಗಕ್ಕೆ ತೊಡಗಿದರು.

ಆ ಕಾಲದಲ್ಲಿ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ಮರಾಠಿಯದೆ ಪ್ರಾಬಲ್ಯ. ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದರು. ಸಂಘದ ಸ್ಥಿತಿ ಅಷ್ಟೊಂದು ಸಮರ್ಪಕವಾಗಿಲ್ಲದ ಕಾರಣ, ಅದರ ಕಾರ್ಯಭಾರವನ್ನು ಹೊತ್ತುಕೊಂಡರು. ಕನ್ನಡಿಗರನ್ನು ಜಾಗೃತಗೊಳಿಸಲು ವೆಂಕಟರಾಯರು ೧೯೦೬ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು. ತಮ್ಮ ಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟರು. ವಕೀಲಿ ವೃತ್ತಿಯನ್ನು ತೊರೆದು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. 1922   ನವೆಂಬರ್ ೪ರಂದು ಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಆರು ವರ್ಷಗಳವರೆಗೆ ನಡೆಯಿತು. ಈ ಪತ್ರಿಕೆಗೆ ಬೆಟಗೇರಿ ಕೃಷ್ಣಶರ್ಮ, ದ.ರಾ.ಬೇಂದ್ರೆ ಮೊದಲಾದ ಶ್ರೇಷ್ಠ ಸಾಹಿತಿಗಳು ಸಹಸಂಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಇದರಂತೆಯೆ ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಸಹ ವಹಿಸಿಕೊಂಡಿದ್ದರು.

ಅಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳ ಕೊರತೆಯನ್ನು ನೀಗಿಸಲು ಕರ್ನಾಟಕದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎರಡು ಬಾರಿ ಗ್ರಂಥಕರ್ತರ ಸಮಾವೇಶವನ್ನು ಕರೆದರು. ಮೂರನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಬೇಕೆಂಬ ಆಶಯ ರೂಪುಗೊಂಡಿದ್ದು ಆರು ವರ್ಷಗಳ ನಂತರ.1922 ರಲ್ಲಿ ನಡೆದ ಆ ಘಟನೆ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿಹಾಡಿತು. ಧಾರವಾಡದಲ್ಲಿದ್ದುಕೊಂಡೆ ಆಲೂರರು ಈ ಕಾರ್ಯವನ್ನು ಆಗು ಮಾಡಿದರು.

ಸಾಮಾಜಿಕ ಕಾರ್ಯ
————————————-
ಆಲೂರು ವೆಂಕಟರಾಯರು ಆ ಕಾಲದ ಸಾಮಾಜಿಕ ಚಟುವಟಿಕೆಗಳ ಮುಂಚೂಣಿಯಲ್ಲಿದ್ದರು. 1921 ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ(ಧಾರವಾಡ), ಈ ಎಲ್ಲಾ ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ. 1907 ರಲ್ಲಿಯೆ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕಾಶಕರಿಗೆ ಅನುಕೂಲವಾಗಲು ಕರ್ನಾಟಕ ಗ್ರಂಥ ಮಂಡಳಿಯನ್ನು ಸ್ಥಾಪಿಸಿದ್ದರು.

ಉದ್ಯಮಶೀಲತೆ
———————————
ವೆಂಕಟ ರಾಯ  ಆಲೂರರ ಉದ್ಯಮಶೀಲತೆ ಅಸಾಧಾರಣವಾದದ್ದು. ತಾವು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ಬೆಂಕಿಪೆಟ್ಟಿಗೆ ಕಾರಖಾನೆ, ಪೆನ್ಸಿಲ್ ಕಾರಖಾನೆ, ಉಡುಗೆ ಫ್ಯಾಕ್ಟರಿ, ಡ್ರಾಯಿಂಗ್ ಪೆಯಿಂಟಿಂಗ್ ಕ್ಲಾಸು, ಮತ್ತು ಪ್ರಿಂಟಿಂಗ್ ಕ್ಲಾಸುಗಳನ್ನೂ ಪ್ರಾರಂಭಿಸಿದರು. ಆಗಿನ ಬ್ರಿಟಿಷ್ ಆಳ್ವಿಕೆಯ ಹತ್ತಿಕ್ಕುವ ನೀತಿಯಿಂದಾಗಿ ಈ ಸಂಸ್ಥೆಯನ್ನು ಮುಚ್ಚಬೇಕಾಗಿ ಬಂತು. ನಂತರ ಸಕ್ಕರೆ ಕಾರಖಾನೆ, ಬೆಳಗಾವಿಯ ಹತ್ತಿರ ಖಾನಾಪುರದಲ್ಲಿ ಹಂಚಿನ ಕಾರಖಾನೆ,ಹೊಳೆ ಆಲೂರಿನಲ್ಲಿ ಹತ್ತಿಯ ಮಿಲ್ಲು, ಹೀಗೆ ಒಂದಾದಮೇಲೊಂದು ಉದ್ಯಮಗಳನ್ನು ಹುಟ್ಟುಹಾಕಿದರು. ನಂತರ ಮಿತ್ರರೊಂದಿಗೆ ಅಗ್ರಿಕಲ್ಚರಲ್ ಸೊಸೈಟಿ ತೆರೆದರು. ನಂತರ ಬಟ್ಟೆ ಅಂಗಡಿ ತೆರೆದರು. ತದನಂತರ ಮ್ಯೂಚುವಲ್ ಹೆಲ್ಪ್ ಫಂಡ್ ತೆರೆದರು. ದುರದೃಷ್ಟವಶಾತ್ ಇವು ಯಾವುದೂ ಯಶಸ್ವಿಯಾಗಲಿಲ್ಲ. ಈ ಪ್ರಯತ್ನಗಳಲ್ಲಿ ಬರಿಯ ಲಾಭ ಮಾಡಿಕೊಳ್ಳುವ ದೃಷ್ಟಿಯಿರದೆ, ಅವೆಲ್ಲವುಗಳಲ್ಲಿ ಒಂದು ವಿಶಿಷ್ಟ ರಾಷ್ಟ್ರೀಯ ಸೊಗಡಿದ್ದು, ಭಾರತದ ಔದ್ಯೋಗಿಕ ಪ್ರಗತಿಯ ಅಂಗವಾಗಿದ್ದವು.

ಸಾಹಿತ್ಯ
————————-
ಆಲೂರು ವೆಂಕಟರಾಯರು ಸುಮಾರು ಇಪ್ಪತ್ತೈದು ಕೃತಿಗಳನ್ನು ಬರೆದಿದ್ದು ಕೆಲವು ಇಂತಿವೆ:

ಶ್ರೀ ವಿದ್ಯಾರಣ್ಯ ಚರಿತ್ರೆ , ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ಶಿಕ್ಷಣ ಮೀಮಾಂಸೆ(ಅನುವಾದ), ರಾಷ್ಟ್ರೀಯತ್ವದ ಮೀಮಾಂಸೆ, ಕನ್ನಡಿಗರ ಭ್ರಮನಿರಸನ(ನಾಟಕ), ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಸ್ವಾತಂತ್ರ್ಯಸಂಗ್ರಾಮ, ಗೀತಾಪ್ರಕಾಶ, ಗೀತಾಸಂದೇಶ, ಗೀತಾಪರಿಮಳ, ಗೀತಾಭಾವ ಪ್ರದೀಪ, ಶ್ರೀ ಮಧ್ವಾಚಾರ್ಯರ ಮೂಲ ಸಿದ್ಧಾಂತ, ಶ್ರೀ ಮಧ್ವಾಚಾರ್ಯರ ಪೂರ್ಣ ಬ್ರಹ್ಮವಾದ. ಆತ್ಮಕಥನ – ನನ್ನ ಜೀವನ ಸ್ಮೃತಿಗಳು ಎಂಬ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಪ್ರಕಟಿಸಿದ್ದಾರೆ. ಲೋಕಮಾನ್ಯ ತಿಲಕರ ಗೀತಾ ರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಆಲೂರು ವೆಂಕಟರಾಯರು 1930 ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಜನತೆ ಇವರಿಗೆ ದೇಶಸೇವಾಧುರೀಣ , ಸ್ವಭಾಷಾರಕ್ಷಕ ಎಂದು ಕರೆದು ಸನ್ಮಾನಿಸಿದೆ. ಅಲ್ಲದೆ ಕರ್ನಾಟಕದ ಕುಲಪುರೋಹಿತ ಎಂದು ಗೌರವಿಸಿದೆ.

ಕನ್ನಡಕ್ಕಾಗಿ ಕಾಯಕಲ್ಪ
—————————————-
ಆಲೂರವೆಂಕಟ ರಾಯರ ‘ಕರ್ನಾಟಕ  ಗತವೈಭವ’ದಲ್ಲಿನ ಈ ಕೆಳಗಿನ ಮಾತುಗಳಲ್ಲಿನ ವೀರ್ಯವತ್ತಾದ ಶೈಲಿ ಇಂತಿದೆ… “ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ”. ಈ ಮಾತುಗಳು ಆಲೂರರು ಕಂಡ ಅಂದಿನ ಕನ್ನಡದ ದುರ್ಗತಿ, ಅದಕ್ಕಾಗಿ ಅವರು ರೂಢಿಸಿಕೊಂಡ ಮನೋಧರ್ಮ ತೋರುತ್ತವೆ. ಅವರು ಮಾಡಿದ ಕೆಲಸಗಳಾದರೋ ಅವರು ಮುಂದೆ ಕನ್ನಡಕ್ಕೆ ನೀಡಿದ ಕಾಯಕಲ್ಪವನ್ನು ಸಾರಿ ಹೇಳುತ್ತವೆ. ಕನ್ನಡದಲ್ಲಿ ಮುಂದೆ ಆದ ಕೆಲಸಗಳು, ಪಡೆದ ಕೀರ್ತಿ ಇವೆಲ್ಲಕ್ಕೂ ಆಲೂರು ವೆಂಕಟರಾಯರು ಮಾಡಿದ ಕಾರ್ಯಗಳು ಬುನಾದಿ ಒದಗಿಸಿವೆ.

ಜಯ ಕರ್ನಾಟಕದ ಲೇಖನ
——————————————————
ಆಲೂರರು ಪ್ರಸಿದ್ಧ ‘ಜಯಕರ್ನಾಟಕ’ ಪತ್ರಿಕೆಯನ್ನು 1922 ರಲ್ಲಿ ಸ್ಥಾಪಿಸಿದರು. ಆಲೂರರು ತಮ್ಮನ್ನು ತಾವು ಒಬ್ಬ ಸಾಹಿತಿಯೆಂದು ಎಲ್ಲಿಯೂ ಬಣ್ಣಿಸಿಕೊಂಡೇ ಇಲ್ಲ. ಆದರೆ, ದ.ರಾ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ ಜೋಷಿ, ರಂಗರಾವ್ ದಿವಕಾರ ಮುಂತಾದ ಹಲವು ಜನಪ್ರಿಯ ಸಾಹಿತಿ ಶ್ರೇಷ್ಠರಿಗೆ ಪೋಷಣೆ, ಪ್ರೋತ್ಸಾಹಗಳನ್ನು ನೀಡಿದರು. ಜಯಕರ್ನಾಟಕದ ಸಂಪಾದಕೀಯದಲ್ಲಿನ ಅವರು ಮಾತುಗಳು ಇಲ್ಲಿ ಉಲ್ಲೇಖನೀಯ. “ಕಚ್ಚಾ ಲೇಖಕರಿಗೂ, ಕಚ್ಚಾ ಕವಿಗಳಿಗೂ, ಅಶುದ್ಧ ಬರಹಗಳಿಗೂ ಆಸ್ಪದ ಕೊಟ್ಟಿರುವೆ. ಕರ್ನಾಟಕದ ಸಕಲಭಾಗಗಳಲ್ಲಿಯೂ ಲೇಖಕರು ಕವಿಗಳೂ ಹುಟ್ಟಬೇಕೆಂಬುದೇ ನನ್ನ ಉದ್ದೇಶ.”

ರಾಷ್ಟ್ರೀಯತ್ವಕ್ಕಾಗಿ ಹೋರಾಟ
————————————————-
ಆಲೂರರು ಕರ್ನಾಟಕಕ್ಕಾಗಿ ಹೇಗೆ ಹೋರಾಡಿದರೋ ಅದೇ ರೀತಿಯಲ್ಲಿ ರಾಷ್ಟ್ರೀಯತ್ವಕ್ಕಾಗಿ ಹೊಡೆದಾಡಿದರು. 1928  ರಲ್ಲಿ ಅವರು “ರಾಷ್ಟ್ರೀಯ ಮೀಮಾಂಸೆ” ಎಂಬ ಒಂದು ಕಿರುಹೊತ್ತಗೆಯನ್ನು ಬರೆದು ಪ್ರಕಟಿಸಿದರು. ರಾಷ್ಟ್ರೀಯತ್ವವನ್ನು ಸುಂದರವಾಗಿ ವರ್ಣಿಸುವ, ಆಲೂರರ ಈ ವಾಕ್ಯವೃಂದವನ್ನು ನೋಡುವಾಗ, ನಮಗೆ ಅವರ ಕಲ್ಪನೆಯ ನಿಚ್ಚಳತೆ ಕಂಡುಬರುತ್ತದೆ. “ರಾಷ್ರೀಯತೆಯನ್ನು, ಅಥವಾ ರಾಷ್ಟ್ರಾಭಿಮಾನ ಎಂಬುದನ್ನು ಅಥವಾ ಅಹಂಕಾರವನ್ನು ಒಂದು ನದಿಗೆ ಹೋಲಿಸಬಹುದು. ಈ ಅಹಂಕಾರ ರೂಪ ನದಿಯ ಉಗಮವು ಚಿಕ್ಕದಿದ್ದು, ಅದು ತನ್ನ ಸ್ವಂತ ಮನಸ್ಸು ಎಂಬಷ್ಟರಮಟ್ಟಿಗೆ ಮಾತ್ರವೇ ಇರುತ್ತದೆ. ಆದರೆ ಅದು ಮುಂದೆ ವಿಸ್ತಾರವಾಗುತ್ತ ತನ್ನ ಹೆಂಡಿರು, ಮಕ್ಕಳು, ತನ್ನ ಊರು, ತನ್ನ ಪ್ರಾಂತ್ಯ, ತನ್ನ ರಾಷ್ಟ್ರ – ಇಲ್ಲಿಯವರೆಗೆ ವಿಸ್ತಾರಹೊಂದಿ ಕೊನೆಗೆ ಅದು ಸರ್ವಭೂಸಹಿತ ಸಮುದ್ರಕ್ಕೆ ಹೋಗಿ ಕೂಡುತ್ತದೆ”. “ರಾಷ್ಟ್ರೀಯತ್ವಕ್ಕೆ ಒಂದೇ ಜಾತಿ ಅಥವಾ ಜನಾಂಗವಿರಬೇಕೆಂಬ ಅವಶ್ಯಕತೆಯೂ ಇಲ್ಲ, ಒಂದೇ ಭಾಷೆಯಿರಬೇಕೆಂಬುದೂ ಹೇಳಲಾಗುವುದಿಲ್ಲ; ಒಂದೇ ಧರ್ಮವೂ ಬೇಕೇಬೇಕಂತಲ್ಲ; ಒಂದೇ ದೇಶವೂ ಕೂಡ ಇಲ್ಲದಿದ್ದರೂ ಸಾಗಬಹುದು.”

ಆಧ್ಯಾತ್ಮಿಕತೆ
——————————————
ವೆಂಕಟ ರಾಯ ಆಲೂರರು ಮೂಲತಃ ಧಾರ್ಮಿಕ ವ್ಯಕ್ತಿ. ಬಾಲಗಂಗಾಧರ ತಿಲಕರ ‘ಗೀತಾರಹಸ್ಯ’ದ ಅನುವಾದ ಕಾರ್ಯ, ಅವರ ರಾಜಕಾರಣ ಮತ್ತು ಧರ್ಮದೃಷ್ಟಿಗಳ ಸಮನ್ವಯಕ್ಕೆ ಒಂದು ದಾರಿ ಮಾಡಿಕೊಟ್ಟಿತು ಎನ್ನಬಹುದು. ‘ಗೀತಾ ರಹಸ್ಯ’ದ ಅನುವಾದ ಕಾರ್ಯ ಕೈಗೊಂಡದ್ದು, ತಿಲಕರ ಒತ್ತಾಯದ ಮೇರೆಗೆ. ಅನುವಾದ ಎಲ್ಲರಿಗೂ ಸಮ್ಮತವಾಗಬೇಕೆಂದ ದೃಷ್ಟಿಯಿಂದ, ಬಿ.ಎಂ.ಶ್ರೀ ಮತ್ತಿತರರ ಅಭಿಪ್ರಾಯ ಪಡೆದು ಅದನ್ನು ಪರಿಷ್ಕರಿಸಿದರು. ಆಲೂರರ ಜೊತೆಗೆ ಕೆರೂರು ವಾಸುದೇವಾಚಾರ್ಯರು ಕೊನೆಯ ಭಾಗದ ಕೆಲವು ಶ್ಲೋಕಗಳನ್ನು ಅನುವಾದ ಮಾಡಿ ಸಹಕರಿಸಿದರು. ಅಲೂರ ವೆಂಕಟರಾಯರದು ಆಧ್ಯಾತ್ಮಿಕ ಪ್ರವೃತ್ತಿ. 1931  ರಲ್ಲಿ ಬ್ರಿಟಿಷ್ ಸರ್ಕಾರ ಅವರಿಗಾಗಿ ‘ಸರ್ಚ್ ವಾರೆಂಟ್’ ಅನ್ನು ಹೊರಡಿಸಿತು. ಅವರನ್ನು ಸೆರೆಹಿಡಿದು ಕಲಘಟಗಿಯಲ್ಲಿ ದಿಗ್ಭಂದನದಲ್ಲಿ ಇರಿಸಿದರು. ಇದರ ಪರಿಣಾಮ ಆಲೂರರ ಮೇಲೆ ಒಳ್ಳೆಯದನ್ನೇ ಮಾಡಿತು. ಅವರ ಆಧ್ಯಾತ್ಮ ಚಿಂತನೆಗೆ, ಅಧ್ಯಯನಕ್ಕೆ ಈ ಬಿಡುವು ಅನುವು ಮಾಡಿಕೊಟ್ಟಿತು. ಅವರು ಗೀತೆಯ ಬಗ್ಗೆ ಅನಂತರ ಬರೆದ ನಾಲ್ಕು ವಿದ್ವತ್ ಪೂರ್ಣ ಗ್ರಂಥಗಳ ಬರವಣಿಗೆಗೆ ಇಲ್ಲಿ ನಡೆಸಿದ ಚಿಂತನೆ ಮತ್ತು ಅಧ್ಯಯನಗಳೇ ಬುನಾದಿ ಹಾಕಿದವು ಎಂದು ಹೇಳಬಹುದು. ಒಬ್ಬ ಮಾಧ್ವ ಧರ್ಮಾನುಯಾಯಿಯಾಗಿಯೂ ವೆಂಕಟರಾಯರು ಹಲವು ವಿಭಿನ್ನ ಮನೋಧರ್ಮದ ಗ್ರಂಥಗಳನ್ನು ಬರೆದರು.

ಕರ್ನಾಟಕದ ಪ್ರಾಣೋಪಾಸಕರು
———————————————-
ವರಕವಿ ದ.ರಾ. ಬೇಂದ್ರೆಯವರು ಅಲೂರರನ್ನು ‘ಕರ್ನಾಟಕದ ಪ್ರಾಣೋಪಾಸಕರು’ ಎಂದು ಕರೆದದ್ದು ಅರ್ಥಪೂರ್ಣವಾಗಿದೆ. ಬೇಂದ್ರೆಯವರು ಆಲೂರರ ವೈಶಿಷ್ಟ್ಯವನ್ನು ಹೀಗೆ ಗುರುತಿಸಿದ್ದಾರೆ: “ಬಹುಮುಖವಾಗಿಯೂ, ಏಕನಿಷ್ಠೆಯಿಂದಲೂ, ಅನನ್ಯ ಬುದ್ಧಿಯಿಂದಲೂ, ಸತತ ಅನುಸಂಧಾನದಿಂದಲೂ, ಕರ್ನಾಟಕದ ಸಲುವಾಗಿ ವಿಚಾರ ಮಾಡುವವರೂ, ತದನುಸಾರವಾಗಿಯೇ ಆಚರಿಸಲು ಪ್ರಯತ್ನಿಸುವವರೂ ಹಿರಿಯರಾದ ಕನ್ನಡಿಗರಲ್ಲಿ ಇನ್ನೂ ಇವರೊಬ್ಬರೇ! ಅದೇ ಇವರ ತಪಸ್ಸು. ಇವರ ಅದ್ವಿತೀಯವಾದ ಹೆಸರು ಅದರ ಫಲವು. ಇವರಲ್ಲಿ ಬುದ್ದಿಯ ಏಕಾಗ್ರ ವೃತ್ತಿಗಿಂತ ವ್ಯಾಪಕವೃತ್ತಿಯು ಹೆಚ್ಚು, ಮೂರ್ತಿಪೂಜೆಗಿಂತ ತತ್ವಪೂಜೆಯು ಅಧಿಕ. ಆಚಾರ ನಿಷ್ಠೆಗಿಂತ ವಿಚಾರ ನಿಷ್ಠೆ ಬಹಳ. ರಾಷ್ಟ್ರೀಯ ದೃಷ್ಠಿ ಹೆಚ್ಚು; ರಾಷ್ಟ್ರದರ್ಶನ ಕಡಿಮೆ. ಜನೋದ್ದೀಪನ ಹೆಚ್ಚು, ಜನ ನಿರ್ವಹಣ ಶಕ್ತಿ ಕಡಿಮೆ… ಇವರು ಜನನಾಯಕರಾಗದೆ ನೇತ್ರವಾಗಿದ್ದಾರೆ; ಮುಂದಾಳುಗಳಾಗದೆ ಪ್ರತಿನಿಧಿಗಳಾಗಿದ್ದಾರೆ.”

ಮಹತ್ಕಾರ್ಯಗಳು
———————————-
ರಾಯರು ಚಂದ್ರೋದಯ, ಕರ್ನಾಟಕ ಪತ್ರ, ಮತ್ತು ರಾಜಹಂಸ, ಕರ್ನಾಟಕ ವೃತ್ತದಂತಹ ಪತ್ರಿಕೆಗಳಿಗೆ ಲೇಖನಗಳನ್ನು ಕೊಡುಗೆ ನೀಡುವುದರೊಂದಿಗೆ 1906 ರಲ್ಲಿ ಅವರು ವಾಗ್ಭೂಷಣ ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನವೆಂಬರ್ 1922 ರಲ್ಲಿ, ಅವರು ವಿವಿಧ ವಿಷಯಗಳ ಕುರಿತು ಲೇಖನಗಳನ್ನು ಪ್ರಕಟಿಸುವ ಜಯ ಕರ್ನಾಟಕ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು.ವೆಂಕಟ ರಾವ್ ಅವರು ಬರೆದ ಸುಮಾರು 27 ಪುಸ್ತಕಗಳು ಪ್ರಕಟವಾಗಿವೆ, ಅದರಲ್ಲಿ ಮೊದಲನೆಯದು 1907 ರಲ್ಲಿ ಪ್ರಕಟವಾದ ವಿದ್ಯಾರಣ್ಯ ಚರಿತ್ರೆ. ಅವರ ಇತರ ಕೃತಿಗಳಲ್ಲಿ ಕರ್ನಾಟಕ ಗಾಥಾ ವೈಭವ, ಕರ್ನಾಟಕ ವೀರರತ್ನಗಳು, ಕರ್ನಾಟಕತ್ವ ಸೂತ್ರಗಳು ಮತ್ತು ಕರ್ನಾಟಕತ್ವ ವಿಕಾಸ ಸೇರಿವೆ. 1907 ರಲ್ಲಿ ಅವರು ಕನ್ನಡ ಲೇಖಕರ ಸಮ್ಮೇಳನವನ್ನು ಆಯೋಜಿಸಿದರು ಮತ್ತು ಮರುವರ್ಷ ಕರ್ನಾಟಕ ಗ್ರಂಥ ಪ್ರಸಾರದ ಮಂಡಳಿಯನ್ನು ಪ್ರಾರಂಭಿಸಿದರು. 1930 ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ತಿಲಕರ ಆಶಯಕ್ಕೆ ಅನುಗುಣವಾಗಿ ಅವರು ಹಿಂದಿನ ಕೃತಿ ಗೀತ ರಹಸ್ಯವನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದರು. ಅವರು ಸ್ವತಂತ್ರವಾಗಿ ಭಗವದ್ಗೀತೆಯನ್ನು ಅರ್ಥೈಸಿದರು ಮತ್ತು ಕನ್ನಡದಲ್ಲಿ ಗೀತಾ ಪ್ರಕಾಶ, ಗೀತ ಪರಿಮಳ, ಗೀತಾ ಸಂದೇಶ, ಗೀತ ಕುಸುಮ ಮಂಜರಿ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ಕರ್ನಾಟಕದ ಕುಲಪುರೋಹಿತ
————————————————–
1956 ರ ನವೆಂಬರ್ 1 ರಂದು ಕರ್ನಾಟಕ ಏಕೀಕರಣಗೊಂಡಾಗ ರಾವ್ ಅವರು ಸಂತೋಷಪಟ್ಟರು. ಹಂಪಿಗೆ ಹೋಗಿ ವಿರೂಪಾಕ್ಷ ದೇವಸ್ಥಾನದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕರ್ನಾಟಕದ ಕುಲಪುರೋಹಿತ ಎಂಬ ಹೆಸರು ಪಡೆದರು. ರಾಷ್ಟ್ರಗೀತೆಯಲ್ಲಿ ಉಲ್ಲೇಖಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರಿಗೆ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡು ಭಾರತದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಅದರ ಸೇರ್ಪಡೆ ಬಗ್ಗೆ ಪತ್ರ ಬರೆದಿದ್ದರು . 1963 ರಲ್ಲಿ ರಾಜ್ಯ ರಚನೆಯ ಎಂಟನೇ ವಾರ್ಷಿಕೋತ್ಸವದಂದು ಬೆಂಗಳೂರಿನ ರಾಜಧಾನಿಯಲ್ಲಿ ಅವರನ್ನು ಗೌರವಿಸಲಾಯಿತು.

ಸತ್ಯ ಪ್ರತಿಪಾದಕರು
———————————
ಒಮ್ಮೆ ಮೈಸೂರು ವಿಶ್ವ ವಿದ್ಯಾಲಯದ ಡಾ ಡಿ ಎಲ್ ನರಸಿಂಹಾಚಾರ ಅವರು 12 ನೆಯ   ಶತಮಾನದ   ಶ್ರೀ ಸಿದ್ಧರಾಮ ಶಿವ ಯೋಗಿ  ಶೈವ  ಭಕ್ತನಾಗಿದ್ದನೆಂದು ಮತ್ತು ಆತ ಲಿಂಗ ಧಾರಣೆ ಮಾಡಿರಲಿಲ್ಲ ಎಂಬ ಹೊಸ ಪ್ರಬಂಧ ಮಂಡಿಸಿ ಅದು ಎಂ ಏ ಪಠ್ಯವಾದಾಗ
ಅದರ ವಿರುದ್ಧ ಧ್ವನಿ ಎಬ್ಬಿಸಿ ಪ್ರೊ ಶಿ ಶಿ ಬಸವನಾಳರ ಜೊತೆಗೂಡಿ ಶ್ರೀ ಸಿದ್ಧರಾಮರ ಮತ್ತು ಸಮಕಾಲೀನ ವಚನಕಾರರ ವಚನಗಳಿಂದ ಶ್ರೀ ಸಿದ್ಧರಾಮ ಶರಣರು  ಇಷ್ಟ ಲಿಂಗ ಧಾರಿಯಾಗಿದ್ದರು ಎಂದು ಸಾಧಿಸುತ್ತಾರೆ.

ಗ್ರಂಥ ರಚನೆ
———————————-
ಆಲೂರ ವೆಂಕಟ ರಾವ್ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳೆಂದರೆ:

ವಿದ್ಯಾರಣ್ಯ ಚರಿತ್ರೆ (1907)
ಕನ್ನಡಿಗರ ಭ್ರಮನಿರಸನ (1915)
ಕರ್ನಾಟಕ ಗಾಥಾ ವೈಭವ (1917)
ಕರ್ನಾಟಕತ್ವದ ಸೂತ್ರಗುಲು ( ಕರ್ನಾಟಕವಾಡದ ಆಫ್ರಾರಿಸಂಸ್ )(1950)
ಕರ್ನಾಟಕತ್ವ ವಿಕಾಸ ( ಕರ್ನಾಟಕತ್ವದ ವಿಕಾಸ ) (1957)
ಗೀತ ರಹಸ್ಯ, ತಿಲಕರ ಮರಾಠಿ ಕೃತಿಯ ಕನ್ನಡಕ್ಕೆ ಅನುವಾದ (1918)
ನನ್ನ ಜೀವನ ಸ್ಮೃತಿಗಳು, ಅವರ ಆತ್ಮಕಥೆ (1941)
ಅವರು ಮಾಧ್ವ ತತ್ವಶಾಸ್ತ್ರದ ಮೇಲೆ ಆರು ಪುಸ್ತಕಗಳನ್ನು ಬರೆದಿದ್ದಾರೆ

ಮರಣ
——————————-
ಆಲೂರು ವೆಂಕಟರಾವ್ ಅವರು 25 ಫೆಬ್ರವರಿ 1964 ರಂದು ತಮ್ಮ 83 ನೇ ವಯಸ್ಸಿನಲ್ಲಿ ಧಾರವಾಡದ ತಮ್ಮ ನಿವಾಸದಲ್ಲಿ ನಾಲ್ವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಪಾರವಾದ ಸ್ನೇಹಿತ ಕನ್ನಾಡಿಭಿಮಾನಿಗಳನ್ನು ಬಿಟ್ಟು ಇಹಲೋಕ ಯಾತ್ರೆ ಮುಗಿಸಿದರು

 ಉಲ್ಲೇಖಗಳು

 1 “Who is Alur Venkat Rao?”. The Hindu. 2 June 2015.
 Datta, Amaresh (1987). Encyclopaedia of Indian Literature: A-Devo. Sahithya Akademi. p. 145. ISBN 9788126018031.
 2 Ganga Ram Garg (1992). Encyclopaedia of the Hindu World. Concept Publishing Company. p. 351. ISBN 9788170223757.
 3 Anjali Gera Roy, Chua Beng Huat (2014). Travels of Bollywood Cinema: From Bombay to LA. Oxford University Press. ISBN 978-0-19-908862-1.
 4 Harish Ramaswamy (2007). Karnataka Government and Politics. Concept Publishing Company. p. 39. ISBN 9788180693977.
5 ಅ.ನ. ಕೃಷ್ಣರಾಯ. “ಕನ್ನಡ ಕುಲರಸಿಕರು”. ಕನ್ನಡ ಸಾಹಿತ್ಯ ಪರಿಷತ್ತು, 2014. ಪುಟ 3 -6  ಕರ್ನಾಟಕ ಏಕೀಕರಣದ ನಾಲ್ವರು ಚಿಂತಕರು, ಮೂಲ:ಕೆ.ರಾಘವೇಂದ್ರ ರಾವ್, ಕನ್ನಡಕ್ಕೆ : ಆರ್ಯ, ಮನೋಹರ ಗ್ರಂಥ ಮಾಲಾ, ಧಾರವಾಡ ,2005 ಪುಟ 98-99


4 thoughts on “ಸಾವಿಲ್ಲದ ಶರಣರು ಮಾಲಿಕೆ-‘ಕನ್ನಡದ ಕುಲ ಪುರೋಹಿತ ಆಲೂರ ವೆಂಕಟರಾಯರು’- ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ- ಪೂನಾ

  1. ಸಾವಿಲ್ಲದ ಶರಣರು ಮಾಲಿಕೆಯಲ್ಲಿ ನಮಗೇನೂ ಹೆಚ್ಚಿನ ಮಾಹಿತಿ ಗೊತ್ತಿಲ್ಲದ, ನಮ್ಮವರೇ ಆದ ಆಲೂರ ವೆಂಕಟರಾಯರನ್ನು
    ಇನ್ನೊಮ್ಮೆ ನಿಮ್ಮ ಲೇಖನದ ಮೂಲಕ ನಮಗೆ ಎಳೆ ಎಳೆಯಾಗಿ ಅವರ ವ್ಯಕ್ತಿತ್ವ ಪರಿಚಯ ಮಾಡಿಕೊಡುವ ನಿಮ್ಮ ಶ್ರೇಷ್ಠ
    ಕಾರ್ಯಕ್ಕೆ ಅನಂತ ಧನ್ಯವಾದಗಳು ಸರ್

    ಸುಧಾ ಪಾಟೀಲ್
    ಬೆಳಗಾವಿ

  2. ಶ್ರೇಷ್ಠ ಸಾಹಿತಿಗಳ ಕುರಿತು ಅತ್ಯುತ್ತಮ,ಸಂಗ್ರಹಿಸಿ ಇಡುವಂಥ ಅಮೋಘ ಲೇಖನ ಸರ್,ಧನ್ಯವಾದಗಳು ತಮಗೆ.

Leave a Reply

Back To Top