ಮನ ಸೆಳೆದ ನಾಟ್ಯಕಲಾ ನಿವಾಸ್ ಭರತನಾಟ್ಯಗೊರೂರು ಅನಂತರಾಜು

ಹಾಸನದ  ನಾಟ್ಯ ಕಲಾ ನಿವಾಸ ರತ್ನ ಕಲಾ ಪದ್ಮ ಕುಟೀರ ಟ್ರಸ್ಟ್ ಇವರಿಂದ  ೧೭ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಹಾಸನಾಂಬ ಕಲಾಕ್ಷೇತ್ರದಲ್ಲಿ  ಪ್ರದರ್ಶಿಸಿದ ವೈವಿಧ್ಯ ಭರತನಾಟ್ಯ ನೃತ್ಯರೂಪಕ  ಪ್ರೇಕ್ಷಕರ ಮನ ಸೆಳೆಯಿತು. ಕಿರಿಯ ವಿಭಾಗದ ಮಕ್ಕಳಿಂದ ಗುರು ವಂದನೆ, ಹಿರಿಯ ವಿಭಾಗದ ವಿದ್ಯಾರ್ಥಿಗಳಿಂದ ನೃತ್ಯ ಸಂಗಮ ಮತ್ತು ಸ್ವತ: ಗುರು ವಿದ್ವಾನ್ ಉನ್ನತ್ ಅವರ ಉನ್ನತ ಮಟ್ಟದ ನೃತ್ಯ ಮಕ್ಕಳಿಗೆ ಪಾಠವಾಗಿತ್ತು.
ಮೊದಲಿಗೆ ಪುಷ್ಪಾಂಜಲಿ ನೃತ್ಯದಲ್ಲಿ ವಿದ್ಯಾರ್ಥಿಗಳು ಪುಷ್ಪ ಹಿಡಿದು ಗುರುಗಳು, ಸಂಗೀತ ವಿದ್ವಾಂಸರು, ಹಿರಿಯರು,  ಪ್ರೇಕ್ಷಕರು ಒಳಗೊಂಡು ಸರ್ವರಿಗೂ ನೃತ್ಯದಲ್ಲೇ ನಮಸ್ಕರಿಸಿದರು.  
ಪಿಳ್ಳಾರಿ ಗೀತೆಗಳು ಸಂಗೀತದ ಸ್ವರ ಸಾಹಿತ್ಯ ತಾಳಗಳ ಸಂಯೋಜನೆಯನ್ನು ಅಭ್ಯಾಸ ಮಾಡಲು ಮೊದಲ ಮೆಟ್ಟಿಲು. ಈ ಗೀತೆಗಳಲ್ಲಿ ಸಾಹಿತ್ಯ ಚಿಕ್ಕದು. ಹೀಗಾಗಿ ಇವು ಪಿಳ್ಳಾರಿ ಗೀತೆಗಳು. ಈ  ಹಾಡುಗಾರಿಕೆಯಲ್ಲಿ ವಿಧುಷಿ ಹರ್ಷಿತಾ ವಿದ್ಯಾ ಬೆಂಗಳೂರು ಪ್ರೇಕ್ಷಕರಲ್ಲಿ ಹರ್ಷ ತಂದರು. ಪಕ್ಕದಲ್ಲಿ ಕುಳಿತ್ತಿದ್ದ ಕವಿ ಸುಂದರೇಶ ಬೆಂಗಳೂರಿನಲ್ಲಿ ಮಳೆ ಗೊರೂರಿನಲ್ಲಿ ಹೊಳೆ ಎಂದು ಜೋರು ಚಪ್ಪಾಳೆ ತಟ್ಟಿದ್ದರು.  
 ಸ್ವರಗಳ ಜೋಡಣೆಯಲ್ಲಿ ಯಾವುದಾದರೂ ಒಂದು ರಾಗದಲ್ಲಿ ಸಂಯೋಜಿಸಿದ ಜತಿಸ್ವರಕ್ಕೆ ಅಡವುಗಳನ್ನು ಒಟ್ಟುಗೂಡಿಸಿ ಮುಕ್ತಾಯದೊಡನೆ ಮುಗಿಯುವ ಜತಿಗಳನ್ನು ಮಾಡುವ ಜತಿಸ್ವರ ಸಾಹಿತ್ಯದಲ್ಲಿ ಪಲ್ಲವಿ ಅನುಪಲ್ಲವಿ ಚರಣಗಳಿಂದ ಕೂಡಿ ಪಲ್ಲವಿ ಅನೇಕಾವರ್ತಿ ಹಾಡಿ ಅವುಗಳಿಗೆ ಬೇರೆ ಬೇರೆ ವಿಧದ ಅಡವುಗಳನ್ನು ಜೋಡಿಸಿ ನೃತ್ಯಗಾರರ ಹಲವು ನಿರ್ದಿಷ್ಠ ಚಲನೆ ಗುರುತಿಸಲ್ಪಡುತ್ತದೆ. ಈ ನೃತ್ಯವು ಕನ್ನಡ ರಾಗ ಆದಿತಾಳದಲ್ಲಿ ನಿಬದ್ದವಾಗಿದ್ದು ರಚನೆಕಾರರು ವೀಣೆ ಶೇಷಣ್ಣನವರು.


ಹನುಮನ ಕಥಾ ಆಧಾರಿತ ನೃತ್ಯ ರೂಪಕ ವೀರಮೂರ್ತಿ ಆದಿತಾಳ ರಾಗಮಾಲಿಕದಲ್ಲಿ ಪ್ರಸ್ತುತಿಗೊಂಡಿತು. ಸೇಬು ಅಂತ ಸೂರ‍್ಯನನ್ನು ಹಿಡಿಯಲು ಹೋಗುವ, ಲಂಕೆಗೆ ಬೆಂಕಿ ಹಾಕುವ, ಸಂಜೀವಿನಿ ಪರ್ವತವನ್ನೇ ಹೊತ್ತು ತರುವ  ಬಲಶಾಲಿ ಹನುಮನ ಕಥಾ ರೂಪಕಕ್ಕೆ ಹನುಮ ಭಜನೆಯೂ ಸೇರಿತ್ತು. ಬಾಲ ಮುರುಳಿ ಕೃಷ್ಣ ರಚನೆಯ ವರ್ಣಂ ಗಂಬೀರ ನಾಟ ಆದಿತಾಳದಲ್ಲಿ ಪ್ರಸ್ತುತಿಗೊಂಡರೆ, ವೆಂಕಟಕವಿ ರಚನೆಯ ಪ್ರಬದ್ದ ಕಾಮವರ್ಧಿನಿ ರಾಗದಲ್ಲಿ, ಮುರುಳಿಧರನ್ ರಚಿತ ಮಹಾಕಾಳಿ ಗೌಳ ರಾಗ ಆದಿತಾಳದಲ್ಲಿ ಮೂಡಿಬಂತು. ವಾಗದೀಶ್ವರಿ ರಾಗ ಆದಿತಾಳದಲ್ಲಿ ಜಿ.ಗುರುಮೂರ್ತಿ ರಚನೆಯ ದೇವಿಸ್ತುತಿಯು  ಮಾತೃಸ್ವರೂಪಿಯಾದ ದೇವಿ ಶಕ್ತಿ ಸ್ವರೂಪಿಣಿಯೂ ಆಗಿ  ತ್ರಿಮೂರ್ತಿಗಳಿಗೂ ಸಂಹರಿಸಲಾಗದ ದೈತ್ಯರನ್ನು ಸಂಹರಿಸಿ ಲೋಕಕ್ಕೆ ಹಿತವನ್ನುಂಟು ಮಾಡುವ ನೃತ್ಯ ಪ್ರೇಕ್ಷಕರಿಗೂ ಹಿತವಾಗಿತ್ತು.   ಮೊದಲಿಗೆ ತನ್ನ ಸಹ ನೃತೃಗಾರರೊಂದಿಗೆ ಜುಗಲ್‌ಬಂದಿ ನರ್ತನದಿಂದ ಬೆವರು ಹರಿಸಿದರೂ ನಂತರ ಏಕವ್ಯಕ್ತಿ ನೃತ್ಯದಲ್ಲಿ  ಅಮ್ಮ ಎಂದರೆ ಇಡೀ ಪ್ರಪಂಚದ ಶಕ್ತಿಯನ್ನು ವಿಶ್ವದ ಒಂದು ರೂಪುರೇಷೆಯಲ್ಲಿ ತಾಯ್ತತನ ಎನ್ನೋದು ತಾಯಿಗೆ, ಒಂದು ಹೆಣ್ಣಿಗೆ ಹೇಗೆ ಎನ್ನಿಸುತ್ತೆ ಎಂಬುದನ್ನು ಕಲಾತ್ಮಕ ಅಭಿವ್ಯಕ್ತಿಯಲ್ಲಿ ಪ್ರಸ್ತುತಿಪಡಿಸಿ ಉನ್ನತ್ ತಮ್ಮ ವಿದ್ವತ್ ಪ್ರದರ್ಶಿಸಿದರು.  ನಟುವಾಂಗದಲ್ಲಿ  ವಿದ್ವಾನ್ ಉನ್ನತ್ ಹೆಚ್.ಆರ್. ಮತ್ತು ಮಾನಸ ಆರ್ ನಾಡಿಗ್, ಮೃದಂಗ: ವಿದ್ವಾನ್ ವಿಕ್ರಮ್ ಭಾರದ್ವಾಜ್ ವೈ.ಪಿ. ಮೈಸೂರು, ಪ್ಲೂಟ್: ವಿದ್ವಾನ್ ಸಮೃದ್ ಶ್ರೀನಿವಾಸ್, ಮೈಸೂರು, ವಯಲಿನ್: ವಿದ್ವಾನ್ ತುಮಕೂರು ಹೆಚ್.ಯಶಸ್ವಿ, ಮೈಸೂರು, ಕೊಳಲು ವಿದ್ವಾನ್ ವಿನಯ್ ರಂಗ್ದೋಲ್, ಮೈಸೂರು ಇವರ ಸಂಗೀತ ಸಂಗತ್ಯದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು. ಮೇಕಪ್ ವಸ್ತಾೃಲಂಕಾರ  ಹನುಮಂತು, ಲೈಟಿಂಗ್‌ನಲ್ಲಿ ಕಿರಣ್ ಸಿಸಿ ರಂಗು ತಂದರು. ಕಾರ್ಯಕ್ರಮ ನಿರೂಪಿಸಿದ ಲಕ್ಷ್ಮಿಯವರು ನೃತ್ಯದ ಹಿನ್ನೆಲೆಯನ್ನು ಸೊಗಸು ಭಾಷೆಯಲ್ಲಿ ವರ್ಣಿಸಿದರು.


Leave a Reply

Back To Top