ಅರುಣಾನರೇಂದ್ರ ಅವರ ಹೊಸ ಗಜಲ್

ಅದೆಷ್ಟು ಜನ ಬಂದಿದ್ದಾರೆ ವಿದಾಯ ಹೇಳಲು ಅವನಿನ್ನು ಬರಲಿಲ್ಲ
ಕೊನೆಯ ಬಾರಿ ಮೈದಡವಿ ಮುಖ ನೋಡಲು ಅವನಿನ್ನು ಬರಲಿಲ್ಲ

ನಕ್ಷತ್ರಗಳ ಹೆಕ್ಕಿ ತರಲು ಹೋಗಿರಬೇಕು ನನ್ನ ಮುಡಿ ಸಿಂಗರಿಸಲು
ಹೋಗಿ ಬಾ ನನ್ನೊಲವೆ ಎಂದು ಬೀಳ್ಕೊಡಲು ಅವನಿನ್ನು ಬರಲಿಲ್ಲ.

ಊರ ಗಲ್ಲಿಯ ದಾಟಿ ಅಗಸಿಯ ಮುಂದೆ ಶವ ಯಾತ್ರೆ ನಡೆದಿದೆ
ಜಾಜಿ ಮಲ್ಲಿಗೆ ತಂದು ಜನಾಜ ಮೇಲೆ ಹಾಕಲು ಅವನಿನ್ನು ಬರಲಿಲ್ಲ

ಯಾರು ಯಾರೋ ಹೆಗಲುಗೊಟ್ಟು ಭಾರ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ
ನನ್ನೊಂದಿಗೆ ಕನಸುಗಳನೂ ಹೂತು ಮಣ್ಣು ಕೊಡಲು ಅವನಿನ್ನು ಬರಲಿಲ್ಲ

ನಿತ್ಯವೂ ಮೌನದೊಂದಿಗೆ ಸೆಣಸಾಡಿ ಸೋತು ಮಲಗಿದ್ದಾಳೆ ಅರುಣಾ
ಕೊನೆಗೊಮ್ಮೆ ಮುಖ ನೋಡಿ ಅತ್ತು ಹಗುರಾಗಲು ಅವನಿನ್ನು ಬರಲಿಲ್ಲ


Leave a Reply

Back To Top