ಭರತ ನಾಟ್ಯ ನೃತ್ಯ ಪಟು ಉನ್ನತ್ ಹೆಚ್.ಆರ್.ಗೊರೂರು ಅನಂತರಾಜು

ಭರತನಾಟ್ಯ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಉನ್ನತ್ ಹೆಚ್.ಆರ್. ಹಾಸನದ ಹೆಸರಾಂತ ಭರತನಾಟ್ಯ ನೃತ್ಯ ಪ್ರತಿಭೆ. ಇವರು ದೇಶ ವಿದೇಶಗಳಲ್ಲಿ ತಮ್ಮ ನಾಟ್ಯ ಪ್ರದರ್ಶನದಿಂದ ಗಮನ ಸೆಳೆದಿರುವರು. ಇವರು ಅತ್ಯುತ್ತಮ ನೃತ್ಯ ಕಲಾ ನಿರ್ದೇಶಕರು ಹಾಗೂ ನೃತ್ಯ ಸಂಯೋಜಕರು ಹೌದು.  ಹಾಸನದ ಹೆಚ್.ಬಿ. ರತ್ನರಾಜು ಮತ್ತು ಜಯಪದ್ಮ ದಂಪತಿಗಳ ಸುಪುತ್ರರು. ಉನ್ನತ್‌ರವರು ವಿಧೂಷಿ ಅಂಬಳೆ ರಾಜೇಶ್ವರಿಯವರ ಶಿಷ್ಯರಾಗಿ ಭರತನಾಟ್ಯದಲ್ಲಿ ವಿದ್ವತ್ ಪಡೆದಿದ್ದಾರೆ.  ಎಂ.ಎ. ಪದವೀಧರರು. ಹಾಸನದಲ್ಲಿ ತಮ್ಮ ನಿವಾಸದಲ್ಲಿ ೨೦೦೭ರಲ್ಲಿ  ರತ್ನಕಲಾ ಪದ್ಮ ಕುಟೀರ ಟ್ರಸ್ಟ್ ಸ್ಥಾಪಿಸಿ ನಂತರ ನಾಟ್ಯ ಕಲಾ ನಿವಾಸ ನೃತ್ಯ ಶಾಲೆ ಪ್ರಾರಂಭಿಸಿ ಸಾವಿರಾರು ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಾ ಬಂದು ನೃತ್ಯ ಕಲಾಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ದೂರದರ್ಶನದ ಎ ಗ್ರೇಡ್ ಆರ್ಟಿಸ್ಟ್. ಹಲವಾರು ನೃತ್ಯಗಳಿಗೆ ಕೊರಿಯೊಗ್ರಫಿ ಮಾಡಿದ್ದಾರೆ. ಭಾರತದ ಪ್ರಸಿದ್ದ ಸ್ಥಳಗಳಲ್ಲಿ ಅಲ್ಲದೆ ರಷ್ಯ, ಯು.ಎಸ್., ಮಲೇಷಿಯಾ, ಬೆಲಾರಸ್, ಥೈಲ್ಯಾಂಡ್, ಶ್ರೀಲಂಕಾದಲ್ಲಿ ಇವರ ನೃತ್ಯ ಪ್ರದರ್ಶನ ನೆಡೆದಿದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನದಂದು ಸಾವಿರ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನಕ್ಕೆ ಕೊರಿಯೋಗ್ರಾಫ್ ಮಾಡಿ ಮೂರು ಬಾರಿ ಯಶಸ್ವಿ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದು. ೨೦೧೪ರ ಹಂಪಿ ಉತ್ಸವ, ಹಳೆಬೀಡು ಬೇಲೂರು, ಹೊಯ್ಸಳ ಉತ್ಸವ, ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ನಾಟ್ಯ ರಾಣಿ ದರ್ಪಣ ಡ್ಯಾನ್ಸ್ ಫೆಸ್ಟಿವೆಲ್ ನಲ್ಲಿ ಭಾಗಿಯಾಗಿದ್ದಾರೆ. ಕಲ್ಕತ್ತಾ, ಬಾಂಬೆ, ಒರಿಸ್ಸಾ, ಚತ್ತೀಸ್ಗರ್, ಎಲ್ಲೋರ, ಕೇರಳ, ಗೋದಾವರಿ, ತಮಿಳುನಾಡು, ಹೀಗೆ ಭಾರತ ದೇಶದ ಹಲವೆಡೆ ಇವರ ನೃತ್ಯ ಪ್ರದರ್ಶನ ನಡೆದಿದೆ.

ಬೆಂಗಳೂರಿನಲ್ಲಿ ನೃತ್ಯ ಕಲಾ ಪರಿಷತ್ ವತಿಯಿಂದ ನಡೆದ ನಟರಾಜ ನೃತ್ಯೋತ್ಸವ, ನೂಪುರ ನೃತ್ಯೋತ್ಸವ, ಶಂಕರ ನೃತ್ಯೋತ್ಸವ, ಸೇವಾ ಸಧನದ ಸ್ವಾಮಿ ನೃತ್ಯೋತ್ಸವ ಸೇರಿದಂತೆ ಇವರ ಹತ್ತಾರು ನೃತ್ಯ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಾಸನ, ಮೈಸೂರು, ಬೆಂಗಳೂರಿನಲ್ಲಿ ಇವರ ಕಾರ್ಯಕ್ರಮ ಏರ್ಪಾಡಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಮೂಡಬಿದ್ರೆ, ಕಳಸ, ಸುಳ್ಯ, ಬಿಜಾಪುರ, ಹುಬ್ಬಳ್ಳಿ, ಪುತ್ತೂರು, ಶ್ರವಣಬೆಳಗೊಳ, ತುಮಕೂರು ಹೀಗೆ ರಾಜ್ಯಾದ್ಯಾಂತ ಕಾರ್ಯಕ್ರಮ ನೀಡಿ ಹಾಸನದ ಹೆಸರು ಮೆರೆಸಿದ್ದಾರೆ. ೨೦೦೯ರಲ್ಲಿ ಒರಿಸ್ಸಾದಲ್ಲಿ ಏಕಲವ್ಯ ಸನ್ಮಾನ್, ಆಂಧ್ರಪ್ರದೇಶದಲ್ಲಿ ನಾಟ್ಯ ಕೌಸ್ತುಭ ಅಭಿನಯ ನೃತ್ಯ ಕಾಮಂಧಿ, ೨೦೧೦ರಲ್ಲಿ ಮತ್ತೆ ಆಂದ್ರದಲ್ಲಿ ನಟರಾಜ ಗೋಪಿಕೃಷ್ಣ ಸನ್ಮಾನ್, ಮುಂಬೈ, ಮಹಾರಾಷ್ಟ್ರ, ಛತ್ತಿಸಗಡದಲ್ಲಿ ಅನೇಕ ಪ್ರಶಸ್ತಿಗಳು ಇವರಿಗೆ ದೊರಕಿವೆ. ೨೦೧೩ರಲ್ಲಿ ಕಲಾಮಂದಿರ ಪುರಸ್ಕಾರ, ೨೦೧೪ರಲ್ಲಿ ಕೇರಳದಲ್ಲಿ ನಾಟ್ಯ ಮಯೂರಂ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.


Leave a Reply

Back To Top