ಅನ್ನಪೂರ್ಣ ಸು ಸಕ್ರೋಜಿ ಕವಿತೆ-ಕಾಡು ಮಲ್ಲಿಗೆ

ಮುಡಿಗೇರದ ಗುಡಿ ಸೇರದ
ಕಾಡು ಮಲ್ಲಿಗೆ
ನೋಡಿ ಮದುವೆಯಾದ
ನಾಡ ಮಲ್ಲಿಗೆ
ಕೂಡದ ಬಂಧನದಿಂದ
ಬಾಡಿ ಹೋಯಿತು

ಮುದುಡಿದ ಮಲ್ಲಿಗೆ ಮೊಗ್ಗು
ಘಮ ಬೀರುತ್ತಿತ್ತು
ನೋಡಿದ ಜನ ಆಡಿಕೊಂಡರು
ಮೊಗ್ಗು ಬಿಕ್ಕುತ್ತಿತ್ತು
ಆಡಿ ಬೆಳೆದ ಮನೆ ಸೇರಿತು
ಬಂಧ ಕಾಡುತ್ತಿತ್ತು

ಬಂಧ ತಾನೆ ಕಿತ್ತೊಗೆಯಿತು
ಮುಕ್ತವಾಯಿತು
ಮನಸೋಕ್ತ ಹಾಡು ಹೇಳಿತು
ಹೊಸ ಶಕ್ತಿ ಪಡೆಯಿತು
ಸಂಕಲ್ಪ ಮಾಡಿ ನಡೆಯಿತು
ಅಶ್ವದಂತೆ ಓಡಿತು

ಮುಡಿಗೇರದಿದ್ದರೆ ಏನಾಯಿತು
ಗುರಿ ಮುಂದಿತ್ತು
ಗುಡಿ ಸೇರದಿದ್ದರೆ ಏನಾಯಿತು
ದೇಶಸೇವೆ ಕಾದಿತ್ತು
ಕಾಡುಮಲ್ಲಿಗೆ ಆದರೆ ಏನಾಯಿತು
ದೇಶಕೆ ಮುಡಿಪಾಗಿತ್ತು

Leave a Reply

Back To Top