ಎಂದಿನಂತೆ  ಕಚೇರಿ ಕೆಲಸಕ್ಕೆ ಹೋಗುತ್ತಿದ್ದ ಸೋನಾಳಿಗೆ ಬೀದಿಯ ಕೊನೆಯ ಮನೆಯ ಮುಂದೆ ಸಾಕಷ್ಟು ಜನ ಸೇರಿದ್ದು ಕಂಡು ಗಾಬರಿಯಾಯಿತು. ಶ್ವೇತವರ್ಣದ ಸೀರೆಯನ್ನುಟ್ಟ ನಾರಿಯರ ಗುಂಪನ್ನು ಕಂಡ ತಕ್ಷಣ ಆ ಮನೆಯಲ್ಲಿ ಸಾವು ಸಂಭವಿಸಿದೆ ಎನ್ನುವುದು ಆಕೆಗೆ ಖಚಿತವಾಯಿತು. ಒಂದು ಕ್ಷಣ ಅಲ್ಲೇ ನಿಂತಳು. ” ಪಾಪ, ಇನ್ನೂ ನಲುವತ್ತರ ಹರೆಯ. ಇಷ್ಟು ಬೇಗ ದೇವರು ಕರೆಸಿಕೊಳ್ಳಬಾರದಿತ್ತು….” ನೆರೆದವರೊಬ್ಬರ ಮಾತು ಕೇಳಿ, “ಅಯ್ಯೋ…! ಸುಮಂಗಲಿ ತೀರಿಕೊಂಡಳೇ…! “ಸೋನಾ ಗರಬಡಿದವಳಂತೆ ಅಲ್ಲೇ ನಿಂತುಬಿಟ್ಟಳು. ಅನಾರೋಗ್ಯದಿಂದ ಬಳಲುತ್ತಿದ್ದ ಸುಮಂಗಲಿಯನ್ನು ನೋಡಿ, ಮಾತನಾಡಿಸಿ ಬರಬೇಕೆಂದು ಒಂದು ವಾರದಿಂದ ಯೋಚಿಸುತ್ತಲೇ ಇದ್ದ ಆಕೆಗೆ ಹೋಗಲು ಪುರುಸೊತ್ತೇ ಆಗಿರಲಿಲ್ಲ. ನಾಳೆ ಹೋದರಾಯಿತು.. ನಾಡಿದ್ದು ಹೋದರಾಯಿತು ಎಂದುಕೊಳ್ಳುತ್ತಿರುವಾಗಲೇ ತಿರುಗಿ ಬಾರದ ಊರಿಗೆ ಸುಮಂಗಲಿ ಪಯಣ ಬೆಳೆಸಿ ಆಗಿತ್ತು. ಹೂ ಗಿಡಗಳಿಗೆ ನೀರುಣಿಸುತ್ತಾ ಹೂ ಚಟ್ಟಿಯಿಂದ ಕಳೆ ಕೀಳುತ್ತಾ ಕಾಲ ಕಳೆಯುತ್ತಿದ್ದ ಸುಮಂಗಲಿ ಕಳೇಬರವಾಗಿ ಮಲಗಿದ್ದಾಳೆ… ಛೇ, ತಾನು ನಿಧಾನ ಮಾಡಬಾರದಾಗಿತ್ತು.. ಪಶ್ಚತಾಪದಿಂದ ನಲುಗಿ ಹೋದಳು ಸೋನಾ!

ಮದುವೆ ಸಮಾರಂಭವೊಂದರಲ್ಲಿ ಓಡಿ ಆಡುತ್ತಿದ್ದ ಪುಟ್ಟ ಮಕ್ಕಳ ತುಂಟಾಟವನ್ನು ನೋಡುತ್ತಾ ಮಹಿಳೆಯರಿಬ್ಬರು ಮಾತನಾಡಿಕೊಳ್ಳುತ್ತಿದ್ದರು. “ಮಕ್ಕಳ ಪುಂಡುತನ ನೋಡುವುದೇ ಕಣ್ಣಿಗೊಂದು ಹಬ್ಬ. ಆದರೆ ನಮ್ಮ ಮಕ್ಕಳು ಈ ಹಂತದಲ್ಲಿ ಇದ್ದಾಗ ನಾವು ಅವರ ತುಂಟಾಟವನ್ನು ಕಂಡು ಆನಂದಿಸಿದ್ದೇ ಕಡಿಮೆ. ಓದಿಸುವ, ಬರೆಯಿಸುವ ಭರದಲ್ಲಿ ಅವರ ಬಾಲ್ಯ ಕಳೆದದ್ದೇ ಗೊತ್ತಾಗಲಿಲ್ಲ. ಮಕ್ಕಳಾಟ ನೋಡುತ್ತಾ ಕೂರಲು ಪುರುಸೊತ್ತೇ ಇರುತ್ತಿರಲಿಲ್ಲ.

ಪರೀಕ್ಷೆಯಲ್ಲಿ ಅನುತ್ತೀಣಗೊಂಡ ಹುಡುಗನ ತಾಯಿಯೊಬ್ಬಳು ಆತನನ್ನು ಮರು ಪರೀಕ್ಷೆಗೆ ಕೂರಿಸುವ ವಿಚಾರವಾಗಿ ಕಾಲೇಜಿನ ಕಛೇರಿಯಲ್ಲಿ ಮಾತನಾಡುತ್ತಾ, “ಅವನ ಮಾರ್ಕ್ಸ್  ನೋಡಿ. ಕಾಲೇಜಿಗೆ ಬಂದು ನಮ್ಮ ಜೊತೆಗೆ ಸ್ವಲ್ಪ ಮಾತನಾಡಿ, ನಮ್ಮ ಜೊತೆಗೆ ಸಹಕರಿಸಿ..” ಎಂದು ಉಪನ್ಯಾಸಕರು ಪದೇ ಪದೇ ಫೋನ್ ಮಾಡಿದಾಗಲೂ ಬರಲು ಪುರುಸೊತ್ತೇ ಆಗಿರಲಿಲ್ಲ… ಈಗ ನೋಡಿದರೆ ಹೀಗೆ ಆಯಿತು. ಪಶ್ಚಾತಾಪದ ಕಣ್ಣ ಹನಿಗಳು.

‘ ಸಮಯ ‘ ಅನ್ನೋದು ಒಮ್ಮೆ ಕಳೆದರೆ ಹಿಂದಿರುಗಿ ಪಡೆಯಲಾಗದ ಒಂದು ಅಮೂಲ್ಯ ಆಸ್ತಿ. Time and tide waits for none ಎನ್ನುವ ಆಂಗ್ಲವಾಣಿ ಇದನ್ನೇ ಹೇಳುತ್ತದೆ. ಬಿಟ್ಟ ಬಾಣ, ಆಡಿದ ಮಾತು, ಹರಿದು ಹೋದ ನೀರು, ಕಳೆದು ಹೋದ ಕಾಲ ಇವು ಎಂದಿಗೂ ತಿರುಗಿ ಬರಲಾರವು. ಸಮಯ ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದು. ಆದರೆ ಅದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಕಲೆಗಾರಿಕೆಯ ಮೇಲೆ ನಮ್ಮ ದೈನಂದಿನ ಕೆಲಸ -ಕಾರ್ಯಗಳ ಸಫಲತೆ ವಿಫಲತೆ ನಿಂತಿದೆ.

ಆದ್ಯತೆಗೆ ಅನುಗುಣವಾಗಿ ಸಮಯವನ್ನು ಬಳಸುವ ಜಾಣ್ಮೆಯನ್ನು ಮೈಗೂಡಿಸಿಕೊಳ್ಳದಿದ್ದರೆ ‘ಪುರುಸೊತ್ತಿಲ್ಲ ‘ ಎನ್ನುವ ನುಡಿಗೇ ಮತ್ತೆ ಮತ್ತೆ ಮುಗಿ ಬೀಳಬೇಕಾಗುತ್ತದೆ. ಸಮಯವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ ಆದರೆ ಅದನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಹೋದರೆ ನಮ್ಮ ಆಲೋಚಿತ ಕೆಲಸ ಕಾರ್ಯಗಳಿಗೆ ಪುರುಸೊತ್ತು ಸಿಕ್ಕೀತು. ಊಟ, ನಿದ್ದೆ, ಮನೋರಂಜನೆ, ಇತ್ಯಾದಿಗಳಿಗೆ ಸಮಯ ಸಿಗುವ ಹಾಗೆ ಬಾಂಧವ್ಯಗಳನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಮಯ ಸಿಗಬೇಕಾದರೆ ದಿನದಲ್ಲಿ ಪೂರೈಸಬೇಕಾದ ಕೆಲಸ – ಕಾರ್ಯಗಳ ಬಗ್ಗೆ ನಿಖರವಾದ ನಿಲುವು ಮತ್ತು   ಆ ಗುರಿ ತಲುಪಲೇಬೇಕು ಎನ್ನುವ
ಛಲವೂ ಇರಬೇಕು.”ಇವತ್ತು ನೀನು ಮಾಡುವ ಕಾರ್ಯಗಳ ಮೇಲೆ ನಾಳಿನ ನಿನ್ನ ಭವಿಷ್ಯ ನಿರ್ಧರಿತವಾಗುತ್ತದೆ ” ಎನ್ನುವ ಮಾತೊಂದಿದೆ. ಶ್ರೇಷ್ಠ ವ್ಯಕ್ತಿಗಳು ಸಮಯದ ನಿರ್ವಹಣೆಯನ್ನು ಮಾಡಿದ್ದರಿಂದಲೇ ಶ್ರೇಷ್ಠ ಎನಿಸಲು ಸಾಧ್ಯವಾಯಿತು ಎಂದಿದ್ದಾನೆ ಅಲೆಕ್ಸಾಂಡರ್ ಗ್ರಹಾಂಬೆಲ್. ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಇನ್ನೊಂದು ಕೆಲಸಕ್ಕೆ ತೊಡಗುವುದು, ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು, ಸ್ವಯಂ ಶಿಸ್ತಿನ ಅಭಾವ ಇವೆಲ್ಲ “ಪುರುಸೊತ್ತಿಲ್ಲ” ಎನ್ನುವ ಕಾರಣಕ್ಕೆ ಪೂರಕ ಅಂಶಗಳು. “ಹತ್ತೆಡೆಯೊಳು ತೋಡಿ ಒಂದಡಿಯಷ್ಟನು ಬರಲಿಲ್ಲ ನೀರೆನ್ನಬೇಡ, ಒಂದೆಡೆಯೊಳು ತೋಡು ಹತ್ತಡಿಯಷ್ಟನು ಚಿಮ್ಮವುದುದಕವು ನೋಡಾ” ಎನ್ನುವ ಎಸ್. ವಿ. ಪರಮೇಶ್ವರ ಭಟ್ಟರ ಮಾತಿನಂತೆ ಹಿಡಿದ ಕಾರ್ಯವನ್ನು ನಿಷ್ಠೆ ಮತ್ತು ಬದ್ಧತೆಯಿಂದ ಮಾಡಿ ಮುಗಿಸುವ ಏಕಾಗ್ರತೆ ಉಳ್ಳವನಿಗೆ ಇನ್ನೊಂದು ಕೆಲಸಕ್ಕೆ ಸಮಯ ಕೂಡಿ ಬರುತ್ತದೆ. ಯಾವುದು ಮೊದಲು? ಯಾವುದು ನಂತರ? ಎನ್ನುವ ನಿಯೋಜಿತ ಸಂಕಲ್ಪ ಹೊಂದಿದವನಿಗೆ ಇಂದಿನ ಕೆಲಸವನ್ನು ನಾಳೆಗೆ ಮುಂದೂಡುವ ಸಂದಿಗ್ಧತೆ ಎದುರಾಗುವುದಿಲ್ಲ. ಯಾವ ಕ್ರಮದಲ್ಲಿ ತನ್ನ ಇಂದಿನ ಕೆಲಸ -ಕಾರ್ಯಗಳು ಸಾಗಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡು ಅದರಂತೆ ನಡೆವವನಿಗೆ ಸಮಯವನ್ನು ಸರಿದೂಗಿಸಿಕೊಂಡು ಹೋಗಲು ಕಷ್ಟ ಎನಿಸುವುದಿಲ್ಲ.

ಪುರುಸೊತ್ತಿಲ್ಲ ಎನ್ನುವ ಪದ ಸೋಮಾರಿಗಳ ಮೊದಲ ಲಕ್ಷಣ. ನಾವಾಗಿ ಬಿಡುವು ಮಾಡಿಕೊಳ್ಳದ ಹೊರತು ನಮಗೆ ಸಮಯ ಸಿಗುವುದಿಲ್ಲ. ಕೆಲವರು ಸಮಯ ಹಂಚಿಕೆಯಲ್ಲಿ ಸಿದ್ಧಹಸ್ತರು. ಅಂಥ ವ್ಯಕ್ತಿಗಳು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಒಂದು ಸೀಮಾ ರೇಖೆಯನ್ನು ಹಾಕಿಕೊಂಡಿರುತ್ತಾರೆ. ಅಪೇಕ್ಷಿತ, ಅನಗತ್ಯ ಎನಿಸುವ ಆಹ್ವಾನ ಇರಬಹುದು, ಕೆಲಸ ಕಾರ್ಯಗಳಿರಬಹುದು ‘ಇಲ್ಲ… ಆಗಲ್ಲ…’ ಎನ್ನುವುದನ್ನು ಅವರು ಕಲಿತಿರುತ್ತಾರೆ. ಡಾ. ಶಿವರಾಮ ಕಾರಂತರು ಕೆಲವೊಂದು ಆಹ್ವಾನಗಳಿಗೆ ಈ ರೀತಿ ಉತ್ತರಿಸುತ್ತಿದ್ದರಂತೆ, “ನಾನು ಸದಾ ನಡೆದಾಡುವ ವ್ಯಕ್ತಿ.‌ ನನಗೆ ಬರಲು ಬಿಡುವಿಲ್ಲ”! ಎಲ್ಲವನ್ನೂ ಎಳೆದುಹಾಕಿಕೊಂಡು ಕೊನೆಗೆ ಮಾಡಲೇಬೇಕಾದ ಕಾರ್ಯವನ್ನು ಮಾಡದೆ ಕೊನೆಗೆ ಪಶ್ಚಾತ್ತಾಪ ಪಡುವುದಕ್ಕಿಂತ ಕೆಲವೊಮ್ಮೆ ‘ ನೋ ‘ ಅನ್ನುವುದನ್ನು ರೂಢಿಸಿಕೊಳ್ಳಬೇಕು.

ಒಟ್ಟಿನಲ್ಲಿ ಸಮಯದ ಸದ್ಬಳಕೆ ಮಾಡಬಲ್ಲವನಿಗೆ ‘ಪುರುಸೊತ್ತಿಲ್ಲ ‘ ಎನ್ನುವ ಸಮಸ್ಯೆ ಕಾಡುವುದಿಲ್ಲ. ಆತ  ಪಶ್ಚಾತ್ತಾಪದ ಬೇಗೆಯಲ್ಲಿ ಬೇಯಬೇಕಾದ ಪರಿಸ್ಥಿತಿ ಬಂದೊದಗುವುದಿಲ್ಲ.
ಮಾನಸಿಕ ಒತ್ತಡದೊಂದಿಗೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯೂ ಅವನಿಗೆ ಎದುರಾಗುವುದಿಲ್ಲ.


2 thoughts on “

Leave a Reply

Back To Top