ಮೈಸೂರು ದಸರಾ ಫಿಲಂ ಫೆಸ್ಟಿವಲ್ ನಲ್ಲಿ “ಬ್ರಹ್ಮ ಕಮಲ” ಕನ್ನಡ ಚಲನಚಿತ್ರ ಗೊರೂರು ಅನಂತರಾಜು

ಸಿನಿಮಾ ಸಂಗಾತಿ

ಮೈಸೂರು ದಸರಾ ಫಿಲಂ ಫೆಸ್ಟಿವಲ್ ನಲ್ಲಿ

“ಬ್ರಹ್ಮ ಕಮಲ” ಕನ್ನಡ ಚಲನಚಿತ್ರ


“ಮೈಸೂರು ದಸರಾ ಫಿಲಂ ಫೆಸ್ಟಿವಲ್ ನಲ್ಲಿ “ಬ್ರಹ್ಮ ಕಮಲ” ಕನ್ನಡ ಚಲನಚಿತ್ರ

ಮೈಸೂರು ದಸರಾ ಫಿಲಂ ಫೆಸ್ಟಿವಲ್ ನಲ್ಲಿ ಭಾರತೀಯ ವಿಭಾಗದಿಂದ “ಬ್ರಹ್ಮಕಮಲ” ಆಯ್ಕೆ ಆಗಿದೆ
ದಿನಾಂಕ 16/10/2023 ಸೋಮವಾರ ಮಧ್ಯಾಹ್ನ 1:15ಕ್ಕೆ ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತದೆ.ಇದು
ಪೂರ್ಣಚಂದ್ರ ಫಿಲಂಸ್ ಲಾಂಛನದ ಚೊಚ್ಚಲ ಚಿತ್ರ. . ಈ ಚಿತ್ರ ಈಗಾಗಲೇ ಹಲವು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

“ದಾರಿ ಯಾವುದಯ್ಯಾ ವೈಕುಂಠಕೆ” ಖ್ಯಾತಿಯ ನಿರ್ದೇಶಕರಾದ “ಸಿದ್ದು ಪೂರ್ಣಚಂದ್ರ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾಸನ ಜಿಲ್ಲೆಯ ಇವರು ನನ್ನ ಆತ್ಮೀಯ ಮಿತ್ರರು.

ಇವತ್ತಿನ ನಗರ ಪ್ರದೇಶದ ಹೆಣ್ಣು ಮಕ್ಕಳ ಕಥೆಯಾಧಾರಿತ ಈ ಚಿತ್ರ ಬಂಜೆತನದ ಮಾನಸಿಕ ಯಾತನೆಯನ್ನು ನೆನಪಿಸುತ್ತದೆ.
ಮದುವೆಯಾಗಿ ತುಂಬಾ ವರ್ಷವಾದರೂ ಇನ್ನೂ ಮಕ್ಕಳಾಗದ ಬಂಜೆಯೊಬ್ಬಳ ಮಾನಸಿಕ ತೊಳಲಾಟ ಮತ್ತು ಅವಳಿಗೆ ಅವಮಾನಗಳನ್ನು ಸಹಿಸುವ ಶಕ್ತಿ ಕಡಿಮೆಯಾದಾಗ “ಖಿನ್ನತೆ” ಅವಳನ್ನು ಹೇಗೆ ಆವರಿಸುತ್ತದೆ ಎನ್ನುವುದೇ ಕಥಾ ಹಂದರ. ಸಮಾಜದಲ್ಲಿ ತಾನೂ “ತಾಯಿ” ಆಗಬೇಕೆಂಬ ಆಸೆ ಹೆಮ್ಮರವಾಗುತ್ತಿರುವ ಹೊತ್ತಿಗೆ ಅವಳ ಮನಸ್ಸಲ್ಲಿ ಕೆಟ್ಟ ಆಲೋಚನೆಯೊಂದು ಸುಳಿದಾಡುತ್ತದೆ.


ತಾಯ್ತನದ ಹಂಬಲವೇ ಬೇಗುದಿಯಾದಾಗ…
ಗೌರಿಗೆ ಹೆರಿಗೆ ನೋವು ಶುರುವಾದಾಗ ರಾತ್ರಿಯಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಬಂದ ಗಂಡ ರವಿ ಅವಳಿಗಾಗಿ ಏನನ್ನೋ ತರಲು ಹೋದವ ಸಮಸ್ಯೆಗೆ ಸಿಲುಕಿ ಸಕಾಲಕ್ಕೆ ಹಿಂದಿರುಗಲು ಸಾಧ್ಯವಾಗಲೇ ಇಲ್ಲ. ಆ ರಾತ್ರಿ ಗೌರಿಗೆ ಹುಟ್ಟಲಿರುವ ಆ ಮಗುವಿನ ಸ್ಪರ್ಷಕ್ಕಾಗಿ ಇನ್ನೂ ತಾಯಿಯಾಗದ ಅಪೇಕ್ಷ ಕಾತುರದಿಂದ ಕಾಯ್ದು ಕುಳಿತಿದ್ದಾಳೆ. ಅವಳ ತಾಯ್ತನದ ಹಂಬಲವೇ ಎದೆಯ ಬೇಗುದಿಯಾದಾಗ ಅವಳು ತಾಯಿಯಾಗಿಲ್ಲ ಎಂಬ ಸತ್ಯ ಗಂಡ, ಅತ್ತೆ ಮಾವ ಎಲ್ಲರಿಗೂ ತಿಳಿದುಬಿಟ್ಟಿತು. ಇತ್ತ ಬಸುರಿ ಹೆಂಡತಿ ಗೌರಿಗಾಗಿ ಮಿಡಿಯುತ್ತಿರುವ ಗಂಡ ರವಿ ಅಪೇಕ್ಷಳೊಂದಿಗಿನ ವ್ಯವಹಾರ ಮುಗಿಸಿಕೊಂಡು ಮತ್ತೆ ಹೇಗೆ ಬಂದು ಗೌರಿಯನ್ನು ಸೇರಿದ? ಹಾಗೆ ಹೋದ ಗಂಡನನ್ನು ಆತಂಕದಿಂದಲೇ ಹುಡುಕುತ್ತ ಹೋದ ಗೌರಿಗೆ ಕೊಂಪೆಯೊಂದರಲ್ಲಿ ಹೆರಿಗೆಯಾಗಿ ಹುಟ್ಟಿದ ಮಗು ಕಡೆಗೆ ಏನಾಯಿತು? ಅಪೇಕ್ಷಳ ಕೈ ಸೇರಬೇಕಿದ್ದ ಮಗು ರಾತ್ರಿಯೇ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ‘ಬ್ರಹ್ಮಕಮಲ’ವಾಯಿತು. ಇದು ‘ಬ್ರಹ್ಮ ಕಮಲ’ ಚಿತ್ರದ ಕಿರು ಕತೆ.

ದಾದಾ ಸಾಹೇಬ್ ಫಾಲ್ಕೆ, ಆಸ್ಟ್ರೇಲಿಯಾದ ಮೆಲ್ಬೋರ್ನ್, ಇಂಡೋ ಸಿಂಗಾಪುರ್, ಟೆಕ್ಕಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ಸೌತ್ ಸೂಡಾನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ಲ್ಲೋರಿ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ಮೆರ್ಮೈಡ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ಬುಲವಾಯೋ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್,ಈಡಿ ಪ್ಲೇ ಫಿಲಂ ಫೆಸ್ಟಿವಲ್, ನವಾಡ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ಓಲ್ಡ ಮಂಕ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ಪಟ್ಟಾಯ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್,ವಂಡರ್ ಲ್ಯಾಂಡ್ ಫಿಲಂ ಫೆಸ್ಟಿವಲ್, ಮೌಂಟ್ ಬ್ಲಾಂಕ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ರೋಷನಿ ಫಿಲಂ ಫೆಸ್ಟಿವಲ್, ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಸೇರಿದಂತೆ ಇನ್ನೂ ಅನೇಕ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ಈ ಚಿತ್ರದಲ್ಲಿ ಅಧ್ವಿತಿ ಶೆಟ್ಟಿ, ಋತು ಚೈತ್ರ, ಬಲ ರಾಜ್ವಾಡಿ, ಲೋಕೇಂದ್ರ ಸೂರ್ಯ, ಮಮತಾ ರಾಹುತ್, ರಾಧಾ ರಾಮಚಂದ್ರ, ಕವಿತಾ ಕಂಬಾರ್, ಪ್ರಮಿಳಾ ಸುಬ್ರಹ್ಮಣ್ಯಂ, ಗಂಡಸಿ ಸದಾನಂದ ಸ್ವಾಮಿ, ಆಟೋ ನಾಗರಾಜ್, ಶೀಬಾ ಮೂರ್ತಿ, ರಾಜು ಕಲ್ಕುಣಿ, ಸೆವೆನ್ ರಾಜ್, ಸುನೇತ್ರ, ಪ್ರೇಮ ಗೌಡ ರಾಜುವೇಣಿ, ಶ್ರೀಧರ್ ಇನ್ನೂ ಮುಂತಾದವರು ಜೊತೆಗೆ ನಿದೇ೯ಶಕರು ಅಭಿನಯಿಸಿದ್ದಾರೆ. ಅನಂತ್ ಆರ್ಯನ್ ರವರ ಸಂಗೀತವಿದೆ, ಡಿ. ಓ. ಪಿ ಲೋಕೇಂದ್ರ ಸೂರ್ಯ ರವರು ದೀಪಕ್ ಸಿ ಎಸ್ ಸಂಕಲನ, ನಾಗರತ್ನ ಕೆ ಹೆಚ್ ನಿರ್ಮಾಣ ನಿರ್ವಹಣೆ, ಬಸವರಾಜ್ ಆಚಾರ್ಯ ಕೆ ಆರ್ ರವರ ಕಲಾ ನಿರ್ದೇಶನವಿದೆ. ಚಿತ್ರ ನೋಡಿ ಯುವ ನಿರ್ದೇಶಕರನ್ನು ಪ್ರೋತ್ಸಾಹ ಬೆಂಬಲಿಸಿ.


ಗೊರೂರು ಅನಂತರಾಜು

Leave a Reply

Back To Top