ಅನುರಾಧಾ ರಾಜೀವ್ ಸುರತ್ಕಲ್-ಗಜಲ್

ಕಾವ್ಯಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್-

ಗಜಲ್

ಹನಿಗಳು ಹೆಣೆದಿಹ ನೂಲೆಳೆಯ ಹಿಮವನದಲಿ ಬದುಕು ಕಟ್ಟಿದೆಯಾ
ತಣಿಸುತ ತಂಪಿನಲಿ ಎಣಿಸುತ ತಾರೆಗಳಂದದಿ ಕನಸ ಮೆಟ್ಟಿದೆಯಾ

ಇನಿಯನ ಇಂಗಿತವ ಅರಿತಿರೆ ಎದೆಯಾಳದಲಿ ಸಂಘರ್ಷ ಏತಕೆ
ಸನಿಹದಿ ಬೆರೆತಿದೆ ಹೃದಯ ಅರಮನೆಯಲಿ ಒಲವು ಹುಟ್ಟಿದೆಯಾ

ಮೀನಿನ ಹೆಜ್ಜೆಯನು ಅನುಸರಿಸಿ ನಡೆದರೆ ಗುರಿಯ ತಲುಪಲಾರೆ
ಜೇನಿನಲಿ ಸಿಹಿಯನು ಬೆರೆಸುತ ಸ್ನೇಹಹಸ್ತವ ಚಾಚಲು ಅಟ್ಟಿದೆಯಾ

ಮನಸಿನ ಆಕಾಂಕ್ಷೆಯ ಮುಖತಃ ಅರುಹಬೇಕು ಪೂರೈಸುವ ಬಯಕೆಯಲಿ
ನೆನೆದಿಹ ಆಸೆಗಳ ಪರಿಧಿಯು ದಾಟಿಹೋಗಲು ಭಾವನೆ ತಟ್ಟಿದೆಯಾ

ಮುನಿಸನು ತೋರದೆ ಮೌನದಲಿ ಮಾಧವನ ಸ್ಮರಿಸುವಳು ರಾಧೆ
ನನಸಾದ  ಮಾತುಗಳು ಬಣ್ಣದ ಎರಕವನು ಹೊಯ್ಯಲು ಮುಟ್ಟಿದೆಯಾ


ಅನುರಾಧಾ ರಾಜೀವ್ ಸುರತ್ಕಲ್

Leave a Reply

Back To Top