ಹಮೀದಾ ಬೇಗಂ ದೇಸಾಯಿ-ಗಜಲ್

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್

ಒಡಲ ಕಿಚ್ಚಿಗೆ ಕರುಳು ಮೌನದಲಿ ಉರಿಯುತಿದೆ ಸಖಿ
ವಿಧಿಯ ನಗೆಗೆ ಹೃದಯ ನೋವಿನಲಿ ಬಿರಿಯುತಿದೆ ಸಖಿ

ಕಾಳರಾತ್ರಿಯು ಕರಗಬಾರದೇ ಮಂಜು ಹನಿಗಳಲಿ ಇಂದು
ಹೊರಳಿ ಮರಳಿದ ಇರುಳು ಅಣಕಿಸುತಲಿ ಸುರಿಯುತಿದೆ ಸಖಿ

ಕಂಗಳ ಅಂಚಿನಲಿ ಕಂಬನಿ ಮಡುಗಟ್ಟಿದೆ ಇಳಿಯದೆ ನೋಡು
ಬವಣೆಗೆ ಸೋತ ಬದುಕು ದುಗುಡದಲಿ ಜರಿಯುತಿದೆ ಸಖಿ

ಭಾರವಾಗಿದೆ ಮನವು ನಂಜು ತುಂಬಿದ ಜಗದ ನಡೆಗೆ
ನಂಬುಗೆಯ ಝರಿಯು ಪ್ರೀತಿ ಅರಸುತಲಿ ಹರಿಯುತಿದೆ ಸಖಿ

ಭಾವಗಳೆಲ್ಲ ಮುರುಟಿ ಒಣಗಿ ತರಗಾಗಿ ಹೋಗಿವೆ ಬೇಗಂ
ಮುಗಿಯದ ದುಮ್ಮಾನದಿ ಸಮಯ ತೆವಳುತಲಿ ಸರಿಯುತಿದೆ ಸಖಿ


ಹಮೀದಾ ಬೇಗಂ ದೇಸಾಯಿ

Leave a Reply

Back To Top