ಡಾ ಅನ್ನಪೂರ್ಣ ಹಿರೇಮಠ ಏನಾಗಿದೆ ಇಂದು

ಡಾ ಅನ್ನಪೂರ್ಣ ಹಿರೇಮಠ

ಏನಾಗಿದೆ ಇಂದು

ಸ್ವತಂತ್ರಕ್ಕಾಗಿ ದುಡಿದು ಮಡಿದವರ ರಕ್ತದರ್ಪಣ
ಕೆಚ್ಚೆದೆಯಿಂದ ಜೀವದ ಹಂಗು ತೊರೆದು
ಅಮರರಾದ ಆ ಜೀವಗಳ ಅರ್ಪಣ
ನಿಮ್ಮ ಎದೆ ಮುಟ್ಟಿ ಹೇಳಿರೊಮ್ಮೆ
ಸಾರ್ಥಕವಾಗಿದೆಯೇ ಎಲ್ಲಾ
ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಕೇಳಿ
ರಾಮರಾಜ್ಯವಾಗಿದೆಯೇ ಇಂದು//

ಏಕೆ ತಂದುಕೊಟ್ಟರು ಸ್ವತಂತ್ರ
ಎಂಬರಿವಾಗಿದೆಯೇ ನಮಗೆ
ಜೀವದಾನ ಬಲಿದಾನಗಳ
ನೆನಪಿದೆಯೇ ನಮ್ಮ ಕಣ್ಣು ಮನಸಿಗೆ

ನೇಣುಗಂಬ ಏರಿದವರವರೇಷ್ಟೊ
ಆನೆ ಕುದುರೆಗಳ ಕಾಲಡಿಯಲಿ ಸಿಕ್ಕವರದೆಷ್ಟೋ
ತೋಫಿನ ಗುಂಡಿಗೆ ಗಂಡೆದೆ ನೀಡಿದವರದೆಷ್ಟೋ
ಪರಕೀಯರ ಕಿಚ್ಚಿಗೆ ಸುಟ್ಟು ಬೂದಿಯಾದವರದೆಷ್ಷೋ
ಅವರ ತ್ಯಾಗ ಬಲಿದಾನ ಅವರ ಮಾನ ಅಭಿಮಾನ
ಏನಾಗಿದೆಯೋ ಇಂದು ನೊಂದು
ಹೋಗಿದೆಯೋ ಭ್ರಷ್ಟತೆಯಲ್ಲಿ ಬೆಂದು ಬೆಂದು

ಕಂಡ ಕಂಡಲ್ಲಿ ಹೆಣ್ಣಿನ ಅತ್ಯಾಚಾರ
ಜಾತಿ ಮತ ಪಂಥಗಳ ಕಚ್ಚಾಟದಿ ನೆಮ್ಮದಿಯ ಹರಣ
ಹಣದಾಸೆಯ ಭೂತಗಳ ಅಟ್ಟಹಾಸ
ಕೊಲೆ ಸುಲಿಗೆ ಕಳ್ಳ ಸುಳ್ಳರ ಗದ್ದಲದ ಸಂತೆ
ಸುಸಂಸ್ಕೃತಿ ಸತ್ಯ ನೆಮ್ಮದಿ ಎಂಬ ತೋರಿಕೆಯ ನಾಟಕ
ಆತ್ಮಾಹುತಿ ದಾಳಿ ಭೂಗತ ದೊರೆಗಳಿಂದ ಎಲ್ಲಾ ದಿವಾಳಿ
ಭಯೋತ್ಪಾದಕರ ಕಾರ್ಖಾನೆಗಳು ತೆರೆದಿದವೆ ಅಲ್ಲಲ್ಲಿ

ದೇಶಮಾರಲು ನಿಂತಿರುವಂತ ಕಿರಾತಕರು
ತನ್ನ ದೇಶ ತನ್ನ ಜನರೆಂಬ ಪ್ರೀತಿ ಅಭಿಮಾನವಿಲ್ಲ
ಕೊಳ್ಳೆ ಹೊಡೆಯುವ ನಯ ವಂಚಕರೇ ತುಂಬಿ
ಭಾರತಮಾತೆಯುಟ್ಟ ರೇಶಿಮೆ ಸೀರೆಗೆ ಕೆಸರಂಟಿಸಿದ
ಮಾತೃದ್ರೋಹಿಗಳು ಬೆಚ್ಚಿ ಬೀಳಿಸುತಿಹರು
ಗೊಳ್ಳು ನಾಗರಿಕತೆಯ ನಾಗಾಲೋಟ
ಅನಾಗರೀಕರ ತಿಳಿಯದ ಹುಚ್ಚಾಟ
ಎಲ್ಲಾ ನನ್ನದಾಗಬೇಕೆಂಬ ಕಚ್ಚಾಟ
ಇದು ಸ್ವತಂತ್ರ ಭಾರತದ ಇಂದಿನ ಚಿತ್ರಣದ ನೋಟ


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top