ಡಾ ಸುರೇಶ ನೆಗಳಗುಳಿ-ರಕ್ತದಾನ

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ರಕ್ತದಾನ

ಜಾತಿ ಮತ ಬೇಧಗಳು ರುಧಿರಕ್ಕೆ ಇಹುದೇನು
ದಾತನಾಗಲು ಬಹುದು ದಾನವನು ಮಾಡಿ
ನೀತಿಯನು ಮನದಲ್ಲಿ ಇರಿಸುತಲಿ ಆತುರಗೆ
ಪ್ರೀತಿಯಲಿ ನೀಡು ನೀ ಧೀರತಮ್ಮ

ಕೆಂಪು ಬಣ್ಣದ ರಕ್ತ ದೇಹಕ್ಕೆ ಜೀವ ನಿಜ
ಕಂಪು ನೀಡಲು ರಕ್ತ ಪರಿಚಲನೆ ಸಹಿತ
ಪೆಂಪು ಬಾಳಿನ‌ರಥದಿ ಒದಗುವೆಡೆ ಬಳಲಿಹಗೆ
ಸೊಂಪು ರಕ್ತದ ದಾನ ಧೀರತಮ್ಮ

ಕಟ್ಟಿ ಇಟ್ಟರೆ ಸೊತ್ತು ಫಲವೇನು ಅದರಿಂದ
ಕೊಟ್ಟು ಬಿಡು ನೊಂದವಗೆ ಸ್ವಲ್ಪ ಪಾಲು
ನೆಟ್ಟು ಸೋದರ ಭಾವ ಮಾಡು ರಕ್ತದ ದಾನ
ಕೆಟ್ಟು ಹೋಗದು ಬಾಳು ಧೀರತಮ್ಮ

ಮಾಡಿದರೆ ವೆಚ್ಚವನು ಇನ್ನಷ್ಟು ಹೆಚ್ಚುವುದು
ಕೂಡಿಟ್ಟ ಧನಕಿಂತ ಭಿನ್ನವಾಗಿ
ದೂಡು ಹೊರಗಡೆ ಜ್ಞಾನ ರಕ್ತಗಳ ಜನಪದಕೆ
ನೀಡುವುದು ನಿನಗದನೆ ಧೀರ ತಮ್ಮ


ಡಾ ಸುರೇಶ ನೆಗಳಗುಳಿ


Leave a Reply

Back To Top