ಹನಿಬಿಂದು ಅವರಿಗೆ ಶಿಕ್ಷ ರತ್ನ ಪ್ರಶಸ್ತಿ (ಅವಾರ್ಡ್‌) ಪ್ರಶಸ್ತಿ ಪ್ರಧಾನ

ವಿಶೇಷ

ನಿನ್ನೆ ಅಂದರೆ ದಿನಾಂಕ 9/06/2023 ರಂದು ಶನಿವಾರ ಸಂಜೆ, ಮಂಗಳೂರಿನಲ್ಲಿ ಸಂಗಾತಿ ಪತ್ರಿಕೆಯ ಸಹಸಂಪಾದಕರಾದಹನಿ ಬಿಂದುಅವರಿಗೆ ಮ್ಯಾಕ್‌ ಲೈಫ್ ಇನ್ಷುರೆನ್ಸ್‌ ಮತ್ತು ಆಕ್ಸಿಸ್‌ ಬ್ಯಾಂಕ್‌ ವತಿಯಿಂದ ಹನಿಬಿಂದು ಅವರ ಸಾಹಿತ್ಯ ಮತ್ತು ಶಿಕ್ಷಣದ ಕ್ಷೇತ್ರಗಳ ಸಾಧನೆಗಳನ್ನು ಗುರತಿಸಿ ಶಿಕ್ಷ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಹನಿಬಿಂದು ಅವರಪರಿಚಯ:

ಪ್ರೇಮಾ ಆರ್  ಶೆಟ್ಟಿ  ಮೂಲ್ಕಿ ಇವರು “ಹನಿ ಬಿಂದು” ಎಂಬ ಕಾವ್ಯ ನಾಮದಿಂದ ಕನ್ನಡ, ತುಳು ಹಾಗೂ ಆಂಗ್ಲ ಭಾಷೆಗಳ ಸಾಹಿತ್ಯದಲ್ಲಿ ಕೈಯಾಡಿಸಿದವರು. ಅವರು ದಿ. ರಮೇಶ್ ಶೆಟ್ಟಿ  ಮತ್ತು ಗುಲಾಬಿ ಶೆಟ್ಟಿ ಇವರ ಮಗಳಾಗಿ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಡಿಸೆ0ಬರ್ 10,  1980 ರಂದು ಜನಿಸಿದರು. ಶ್ರೀ ಮೂಜಿಲ್ನಾಯ ಹಿರಿಯ ಪ್ರಾಥಮಿಕ ಶಾಲೆ ಈದು ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ಕುದುರೆಮುಖ ಇಲ್ಲಿ ಪ್ರೌಢ ಶಿಕ್ಷಣ ಪಡೆದು ಹತ್ತನೇ ತರಗತಿಗೆ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದರು. ಶಾಲಾ ಮಟ್ಟದಲ್ಲಿ , ಅಂತರ್ ಶಾಲಾ ಮಟ್ಟದಲ್ಲಿ ನಡೆಯುವ ಎಲ್ಲಾ ಪ್ರಬಂಧ ಸ್ಪರ್ಧೆಗಳಲ್ಲಿ  ಇವರಿಗೆ ಮೊದಲ ಸ್ಥಾನ ಸಿಗುತ್ತಿತ್ತು. ಬಳಿಕ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತಮ್ಮ ಪಿಯುಸಿಯನ್ನು ಪಿ ಸಿ ಎಮ್ ಬಿ ವಿಷಯದಲ್ಲಿ  ಪೂರೈಸಿದರು. ಅಲ್ಲಿನ ಆಗ ಕನ್ನಡ ಉಪನ್ಯಾಸಕ ಹಾಗೂ ಬರಹಗಾರರಾದ   ಶ್ರೀಯುತ ಚೇತನ ಸೋಮೇಶ್ವರ ಅವರಿಂದ ಪ್ರಭಾವಿತಾರಾದವರು. ನಂತರ ಕಂಪ್ಯೂಟರ್ ಕೂಡಾ ಕಲಿತರು.

      ಬಳಿಕ ಮೈಸೂರಿನ ಸುಪ್ರಸಿದ್ಧ ಮಹಾರಾಣಿ ಮಹಿಳಾ ಶಿಕ್ಷಕ ಶಿಕ್ಷಣ ಸಂಸ್ಥೆಯಲ್ಲಿ ಡಿ.ಎಡ್ ಶಿಕ್ಷಣದಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್ ಪಡೆದು ಉತ್ತೀರ್ಣರಾದರು. ಕಾಲೇಜಿನ ಮ್ಯಾಗಝಿನ್ “ಮಹಾರಾಣಿ” ಯಲ್ಲಿ ಹಲವಾರು ಕಥೆ, ಕವನ, ಲೇಖನಗಳು ಆಗಲೇ ಪ್ರಕಟಗೊಂಡಿದ್ದು , ಕಾಲೇಜಿನ ವರ್ಷದ ಆಕ್ಟಿವ್ ವಿದ್ಯಾರ್ಥಿನಿ ಆಗಿಯೂ ಆಯ್ಕೆ ಆಗಿದ್ದರು. ಆಗಲೇ  ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

         ತದನಂತರ 2004ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ  ಶಾಲೆ ಉಳಿಬೈಲು, ಬಂಟ್ವಾಳ ತಾಲೂಕು ಇಲ್ಲಿ ವಿಜ್ಞಾನ ಶಿಕ್ಷಕರಾಗಿ ಸರಕಾರಿ ಸೇವೆಗೆ ಪಾದಾರ್ಪಣೆಗೈದರು. ಅದೇ ಶಾಲೆಯಲ್ಲಿ  ಬೋಧನೆಯಲ್ಲಿ ತೊಡಗಿರುವಾಗಲೇ ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಆಂಗ್ಲ ಭಾಷೆಯಲ್ಲಿ ಪದವಿ ಮತ್ತು ಬಿಎಡ್ ಪದವಿ ಪಡೆದರು. ಜೊತೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ವಿಶೇಷ ಶ್ರೇಣಿಯ ಅಂಕಗಳೊಂದಿಗೆ  ಸ್ನಾತಕೋತ್ತರ ಪದವಿ ಪಡೆದರು. ಬೋಧನಾ ಕಾರ್ಯ, ಕಲಿಕೆ, ಟೈಲರಿಂಗ್ ತರಗತಿ ನಡೆಸುತ್ತಾ ಆಗಲೂ ಬರವಣಿಗೆಯಲ್ಲಿ ಕೈಯ್ಯಾಡಿಸುವುದನ್ನು ಬಿಡಲಿಲ್ಲ. “ನಮ್ಮ ಬಂಟ್ವಾಳ” ವಾರ ಪತ್ರಿಕೆಯಲ್ಲಿ “ಪ್ರೇಮಾ ಉಳಿಬೈಲು” ಎಂಬ ಹೆಸರಿನಲ್ಲಿ ನಿರಂತರ ಮೂರು ವರ್ಷಗಳ ವರೆಗೆ ಇವರ ಅಂಕಣ ಬರಹ “ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ” ಹಾಗೂ ತದ ನಂತರ ನಮ್ಮ ಬಂಟ್ವಾಳ ಈ ಪತ್ರಿಕೆಯಲ್ಲಿ “ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ ” ಎಂಬ ಅಂಕಣ ಬರಹ  ಪ್ರಕಟವಾಗುತ್ತಿತ್ತು. ಅದು ಅವರಿಗೆ ಅಪಾರ ಜನ ಮನ್ನಣೆ ಗಳಿಸಿ ಕೊಟ್ಟಿತು. ಬಂಟ್ವಾಳ  ತಾಲೂಕಿನಲ್ಲಿ ಆಂಗ್ಲ ಭಾಷಾ ಶಿಕ್ಷಕರಿಗೆ ಸಂಪನ್ಮೂಲ  ವ್ಯಕ್ತಿಯಾಗಿ ಆಂಗ್ಲ ಭಾಷಾ ತರಬೇತಿ ಕೊಡುವ ಕಾರ್ಯವನ್ನು ತಾಲ್ಲೂಕಿನಲ್ಲಿ ಮಾಡುತ್ತ ಎಲ್ಲರ ಪ್ರೀತಿ ಪಾತ್ರರಾದರು, ಮಕ್ಕಳಿಗೂ ನೆಚ್ಚಿನ ಶಿಕ್ಷಕಿಯಾದರು. ಶಿಕ್ಷಕರಿಗೆ ಪ್ರತಿವರ್ಷ ಏರ್ಪಡಿಸುವ ರಸಪ್ರಶ್ನೆ, ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲೂ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುದೇ ಅಲ್ಲದೆ, ವಿಜ್ಞಾನ ವಿಚಾರ ಗೋಷ್ಟಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮೈಸೂರಿನಲ್ಲಿ ಪ್ರತಿನಿಧಿಸಿ ಭೇಷ್ ಅನ್ನಿಸಿಕೊಂಡರು.ಆಂಗ್ಲ ಭಾಷಾ ಸೌಂಡ್ಸ್ ಬಗ್ಗೆ ಶಿಕ್ಷಕರಿಗೆ ತರಬೇತಿಯನ್ನೂ ನೀಡಿರುವರು. 

         ಇವರು 2011ರಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು, ಸುಳ್ಯ ಇಲ್ಲಿನ ಪ್ರೌಢ ಶಾಲಾ ವಿಭಾಗಕ್ಕೆ ಆಂಗ್ಲ ಭಾಷಾ ಸಹಶಿಕ್ಷಕರಾಗಿ ಪದೋನ್ನತಿ ಹೊಂದಿದರು. ಹತ್ತು ವರ್ಷಗಳ ಅಲ್ಲಿ ಬೋಧನೆಯಲ್ಲಿ ನಿರತರಾಗಿದ್ದರು.ಅಲ್ಲಿಯೂ ಸುಳ್ಯದ “ಸುಳ್ಯ ಸುದ್ಧಿ” ಹಾಗೂ “ಅಮರ ಸುದ್ದಿ” ಪತ್ರಿಕೆಗಳಲ್ಲಿ ಹಾಗೂ ಅವರ ದೀಪಾವಳಿ ವಿಶೇಷಾಂಕಗಳಲ್ಲಿ  ಇವರ ಹಲವಾರು  ಲೇಖನ, ಕವನಗಳು ಪ್ರಕಟಗೊಂಡಿದ್ದೇ ಅಲ್ಲದೆ ಸುದ್ದಿ ಲೈವ್ ಟಿ ವಿ ಚಾನೆಲ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಎದುರಿಸಲು ಕಿವಿಮಾತು ಹಾಗೂ ಅವರ ನೇರ ಫೋನ್ ಪ್ರಶ್ನೆಗಳಿಗೆ ಉತ್ತರವನ್ನೂ ಕೊಟ್ಟರು.

       2021ರಲ್ಲಿ ಬಿಡುಗಡೆ ಆದ ಎಸ್ ಬಂಗೇರ ಮುಂಬೈ ಅವರ ನಿರ್ಮಾಪಕತ್ವದ, ಪಿ ವಿ ಪ್ರದೀಪ್ ಕುಮಾರ್ ಕಥಾ ಬಿಂದು ಪ್ರಕಾಶನ ಇವರ ನಿರ್ದೇಶನದ ಕಿರು  ಚಲನಚಿತ್ರ “ಬದಲಾಗದವರು ಜೀವನದಲ್ಲಿ ಬದಲಾಗುವರೇ?” ಎಂಬ ಕಿರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವ ಹೆಮ್ಮೆ ಇವರದ್ದು.

           ಸುಳ್ಯದಲ್ಲಿ ಇರುವಾಗಲೇ ಅಲ್ಲಿನ ಶಿಕ್ಷಕರ ಗುಂಪಿನ ಜೊತೆ ಸಿ ಸಿ ಆರ್ ಟಿ ಗೆ ಸೇರಿ ಉತ್ತರಾಖಾಂಡ ರಾಜ್ಯದಲ್ಲಿ ಕರ್ನಾಟಕದ ಹಾಗೂ ತುಳು ನಾಡಿನ  ಸಂಸ್ಕೃತಿಯನ್ನು ಪ್ರತಿನಿಧಿಸಿದ್ದೆ ಅಲ್ಲದೆ, ಆಂಗ್ಲ ಭಾಷಾ ವಿಷಯದಲ್ಲಿ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರಗಳನ್ನು ನಡೆಸಿ ಕೊಟ್ಟರು. ಕೇರಳದ ಅರಿಕ್ಕೋಡ್ ಶಾಲೆಯಲ್ಲೂ ಸ್ಪೋಕನ್ ಇಂಗ್ಲಿಷ್ ಹಾಗೂ ಇಂಗ್ಲಿಷ್ ಬರವಣಿಗೆ ವಿಷಯದ ಮೇಲೆ ಕಾರ್ಯಾಗಾರ ನಡೆಸಿ ಕೊಟ್ಟರು. ಸುಳ್ಯ ಸಮೀಪದ ಸಂಪಾಜೆ, ಹರಿಹರಗಳಲ್ಲೂ ಸ್ಪೋಕನ್ ಇಂಗ್ಲಿಷ್ ಹಾಗೂ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯನ್ನು ಕಲಿಯುವ, ಬರೆಯುವ ಸುಲಭ ವಿಧಾನಗಳ ಬಗ್ಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿ ಕೊಟ್ಟಿರುವರು.

        ನೂರಕ್ಕೂ ಮಿಕ್ಕಿ ತಾಲೂಕು, ಜಿಲ್ಲಾ, ರಾಜ್ಯ, ಅಂತರ ರಾಜ್ಯ, ಹೊರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕವಿಗೋಷ್ಠಿ, ಕಥಾ ಗೋಷ್ಟಿಗಳಲ್ಲಿ  ಕವಿಯಾಗಿ, ಕವಿಗೋಷ್ಟಿಯ ಅಧ್ಯಕ್ಷರಾಗಿ, ಉದ್ಘಾಟಕರಾಗಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೀರ್ತಿ ಇವರದ್ದಾಗಿದೆ. ತಾವು ಮಾತ್ರ ಭಾಗಿಗಳಾಗದೆ ತನ್ನ ಶಾಲಾ ಆಸಕ್ತಿಯುತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಬರೆಯಲು ಪ್ರೇರೆಪಿಸಿ ಜಿಲ್ಲಾ, ರಾಜ್ಯ ಹಾಗೂ ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿಗಳಿಗೆ ಕರೆದುಕೊಂಡು ಹೋಗಿ ಅವರಿಂದ ಕವನ ವಾಚನ ಮಾಡಿಸಿರುವರು. 2020ರಲ್ಲಿ   ಆಗ 10ನೇ ತರಗತಿಯಲ್ಲಿ ಓದುತ್ತಿದ್ದ ಇವರ ವಿದ್ಯಾರ್ಥಿನಿ ಕುಮಾರಿ ಹಿಮಾಲಿ ಮಡ್ತಿಲ ಇವಳ “ಸೃಷ್ಟಿಯ ಸೊಬಗು” ಎಂಬ ಕವನ ಸಂಕಲನವನ್ನು ಮುನ್ನುಡಿ ಬರೆದು ಸುಳ್ಯ  ತಾಲೂಕು ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ಅದನ್ನು ಬಿಡುಗಡೆಗೊಳಿಸಿರುವರು. ತಮ್ಮ ಮಗಳಿಗೂ ಬರವಣಿಗೆಗೆ ಪ್ರೋತ್ಸಾಹಿಸಿ ಅವಳು ಬರೆದ ಪುಟ್ಟ ಪುಟ್ಟ ಕವನಗಳ ಪುಸ್ತಕ ” ಚಿಟಾಣಿ ಚಿಟ್ಟೆ” ಯನ್ನು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ 2022ರಲ್ಲಿ ಬಿಡುಗಡೆ ಮಾಡಿಸಿರುವರು. ಖ್ಯಾತ ಭಾರತನಾಟ್ಯ ಕಲಾವಿದೆ, ಕವಯತ್ರಿ , ವಕೀಲೆ ಪರಿಮಳಾ ಮಹೇಶ್ ಇವರ ಕವನ ಸಂಕಲನ “ರಾಜ ಬೀದಿಯ ಹೂವಾಡಗಿತ್ತಿ” ಎಂಬ ಪುಸ್ತಕಕ್ಕೆ ಮುನ್ನುಡಿ ಬರೆದ ಹೆಮ್ಮೆ ಇವರದು.

  2021 ಡಿಸೆ೦ಬರ್ ನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಮೂಲ್ಕಿ, ಮಂಗಳೂರು ತಾಲೂಕು ಇಲ್ಲಿಗೆ ವರ್ಗಾವಣೆಗೊಂಡು ಅಲ್ಲಿಯೇ ತಮ್ಮ ವೃತ್ತಿಯನ್ನು ಮುಂದುವರೆಸುತ್ತಿದ್ದಾರೆ. ಅಲ್ಲಿಯೂ ಆಂಗ್ಲ ಭಾಷಾ ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ಒಬ್ಬರಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕವಿಗೋಷ್ಠಿಗಳಲ್ಲಿ , ಕವಿ ಸಮ್ಮೇಳನಗಳಲ್ಲಿ ಭಾಗವಹಿಸುವುದರ ಜೊತೆಗೆ ಸಾಹಿತ್ಯದ ಕೃಷಿಯನ್ನೂ ಮುಂದುವರೆಸುತ್ತಿದ್ದಾರೆ.

ಬೋಧನೆಯ ಜೊತೆಗೆ ಬರವಣಿಗೆ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್ , ಪ್ರವಾಸ, ಗೆಳೆತನ, ಓದುವುದು, ತನ್ನ ಮಿತಿಯಲ್ಲಿ ಸಮಾಜ ಸೇವೆ,  ಇತರ ಕವಿಗಳನ್ನೂ ಪ್ರೋತ್ಸಾಹಿಸಿ ಬೆಳೆಸುವುದು ಇವರ ಹವ್ಯಾಸ. “ನಮ್ಮ ಬಂಟ್ವಾಳ”ವಾರಪತ್ರಿಕೆ, ಡಿಜಿಟಲ್ ಪತ್ರಿಕೆಗಳಲ್ಲೂ ಪ್ರಕಟವಾದ ಬಳಿಕ ಈಗ  ‘ ಹಾಸನವಾಣಿ  ‘ ದಿನಪತ್ರಿಕೆ ಗಳಲ್ಲಿ ಇವರ ಅಂಕಣ “ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ” 153  ವಾರಗಳಿಂದ ಪ್ರಕಟವಾಗುತ್ತಿದೆ. ಪ್ರತಿಲಿಪಿ ಬರವಣಿಗೆಯ ಆ್ಯಪ್ ನಲ್ಲಿ ಇವರ ಬರವಣಿಗೆಗಳಿಗೆ 36  ಸಾವಿರಕ್ಕೂ ಅಧಿಕ ಓದುಗರಿರುವರು.

ಲಿಟರೇಚರ್ ಆಫ್ ಹನಿ ಬಿಂದು ಇದು  ಇವರ ಬ್ಲಾಗ್. ಇಲ್ಲಿ ಎರಡು ಸಾವಿರಕ್ಕೂ ಅಧಿಕ ಬರಹ, ಕವನ, ಗಝಲ್, ಲೇಖನ, ಚುಟುಕು,  ಕಥೆ ಮೊದಲಾದ ಸಾಹಿತ್ಯ ಪ್ರಕಾರಗಳ ಕೃಷಿ ಇವರದಾಗಿದೆ. ಪ್ರತಿ ಲಿಪಿ ಆಪ್ ನ ಬರಹಗಾರರು ಇವರಾಗಿದ್ದು ಅಲ್ಲಿ ಇವರಿಗೆ 37,000ಕ್ಕೂ ಅಧಿಕ ಓದುಗರು ಇದ್ದಾರೆ. ಅಲ್ಲಿ
ತನ್ನ ಹಾಗೇ ಬೆಳೆದ ಮತ್ತು ಜೀವನದಲ್ಲಿ ಸಾಧನೆ ಮಾಡಿ ಮೆರೆದ ಸಾಧಕರ ಬಗೆಗಿನ ಲೇಖನ ಮಾಲೆ ” ಯಶೋಗಾಥೆ” ,  ಶಾಲಾ ವೃತ್ತಿ ಜೀವನದ ಅನುಭವಗಳ ಲೇಖನಮಾಲೆ “ಶಿಕ್ಷಕರ ಕಕ್ಷೆಯೊಳಗೆ”. ಚುಟುಕು, ಟಂಕಾ, ಕಾದಂಬರಿ, ಕಥೆ, ಲೇಖನ, ಕವನ,  ಹೀಗೆ ಅನೇಕ ಬರಹಗಳು ತುಳು, ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ  ಪ್ರತಿಲಿಪಿಯಲ್ಲಿ ಪ್ರಕಟವಾಗುತ್ತಿವೆ.

       ತುಳು ಕಲಿಕೆಗಾಗಿ ಯೂ ಟ್ಯೂಬ್ ಹಾಗೂ ಇನ್ಸ್ಟಾ ಗ್ರಾಮ್ , ಮುಖಪುಟಗಳಲ್ಲಿ ತುಳು ಕಲ್ಪುಗ ಎಂಬ ಚಾನಲ್ ಒಂದನ್ನು ತೆರೆದು ಮಗಳು ದಿಯಾ ಜೊತೆ ಪ್ರತಿನಿತ್ಯ ಕನ್ನಡ ಮಾತು ಬಲ್ಲವರಿಗೆ ತುಳು ಭಾಷೆಯನ್ನು ಕಲಿಸುವ ಕಾರ್ಯವನ್ನೂ ಸದ್ದಿಲ್ಲದೆ ಮಾಡುತ್ತಿರುವವರು ಇವರು. ಜೊತೆ ಜೊತೆಗೆ ಕಾಲೇಜಿನ ಸುವರ್ಣ ಮಹೋತ್ಸವ ಸಂಧರ್ಭದಲ್ಲಿ ಪ್ರಕಟವಾಗುವ ಸುವರ್ಣ ಮಹೋತ್ಸವ ಸಂಚಿಕೆಯ ಜವಾಬ್ದಾರಿ ಹೊತ್ತಿದ್ದು ಅದಕ್ಕೆ ಹಲವಾರು ವಿದ್ಯಾರ್ಥಿ ಗಳನ್ನು ತಯಾರುಗೊಳಿಸಿ ಬರೆಸುವ ಕಾರ್ಯದಲ್ಲಿ ಉಳಿದ ಶಿಕ್ಷಕರ ಜೊತೆ ನಿರತರಾಗಿದ್ದಾರೆ..

      “ಭಾವ ಜೀವದ ಯಾನ ” ಇವರ ಪ್ರಕಟಿತ ಕವನ ಸಂಕಲನ. “ಗವಿಯಡವಿಯ ಗಝಲ್ ಗಳು – ಗಝಲ್ ಸಂಕಲನ, ಶಿವ ಗೀತಮೃತ – ಭಕ್ತಿ ಗೀತೆಗಳ ಸಂಕಲನ, ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ – ಅಂಕಣ ಬರಹಗಳ ಸಂಕಲನ, ಕುಟುಕದ ಚುಟುಕುಗಳು – ಚುಟುಕು ಸಂಕಲನ, ಹೀಗೆ ಹಲವಾರು ಪುಸ್ತಕಗಳು ಅಚ್ಚಿನಲ್ಲಿ ಪ್ರಕಟಣೆಗಾಗಿ ಸಿದ್ಧವಾಗುತ್ತಿವೆ.

        ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ನಿಂದ “ಕನ್ನಡ  ಸೇವಾ ರತ್ನ” ಪ್ರಶಸ್ತಿ, ರಾಜ್ಯ ಮಟ್ಟದಲ್ಲಿ ಸ್ನೇಹ ಸಂಗಮ ಬರಹಗಾರರ ಬಳಗ ತುಮಕೂರು ಇವರು ಕೊಡಮಾಡಿದ “ಕನ್ನಡ ಸಾಹಿತ್ಯ ರತ್ನ” ಪ್ರಶಸ್ತಿ, ಸುಳ್ಯದ ಚಂದನ ಸಾಹಿತ್ಯ ವೇದಿಕೆ ಕೊಡಮಾಡುವ “ಕನ್ನಡ ಕಾವ್ಯ ರತ್ನ” ಪ್ರಶಸ್ತಿಗೆ ಭಾಜನರಾದ ಇವರು 100ಕ್ಕೂ ಹೆಚ್ಚು ರಾಷ್ಟ್ರ, ಅಂತರರಾಜ್ಯ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ  ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವರು. ಸಕಲೇಶಪುರ ತಾಲೂಕಿನ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಹೆಮ್ಮೆ ಇವರದ್ದು. ಬೆಂಗಳೂರು, ಕಾಸರಗೋಡಿನ ಪೆರ್ಲ ದ ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ  ಉದ್ಘಾಟಕರು ಹಾಗೂ ಮುಖ್ಯ ಅಥಿತಿಗಳಾಗಿ ಭಾಗವಹಿಸಿರುವರು.

        ತಮ್ಮ ಶಾಲಾ ವಿದ್ಯಾರ್ಥಿಗಳನ್ನೂ ಬರವಣಿಗೆಗೆ ಪ್ರೋತ್ಸಾಹಿಸುತ್ತಾ ಹಲವಾರು ವಿದ್ಯಾರ್ಥಿಗಳನ್ನು ರಾಜ್ಯ, ಅಂತರ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸುವಂತೆ ಮಾಡಿರುವುದೇ ಅಲ್ಲದೆ, ಇವರ ವಿಧ್ಯಾರ್ಥಿನಿ ಹಿಮಾಲಿ ಮಡ್ತಿಲ ಅವರು ಹತ್ತನೇ ತರಗತಿಯಲ್ಲಿ ಇರುವಾಗ ಅವರ ಮೊದಲ ಕವನ ಸಂಕಲನ “ಸೃಷ್ಟಿಯ ಸೊಬಗು” ಇದನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ 2020ರಲ್ಲಿ ಬಿಡುಗಡೆ ಮಾಡಲಾಯಿತು. ಮಗಳು ದಿಯಾ ಉದಯ್ ಇವಳ 9ನೇ ವರ್ಷದ ಸವಿ ನೆನಪಿಗಾಗಿ ಅವಳು ಬರೆದ ಹಲವಾರು ಪುಟ್ಟ ಕವನಗಳ ಸಂಕಲನ “ಚಿಟಾಣಿ ಚಿಟ್ಟೆ”  ಕಾಸರಗೋಡು ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಗ್ರಾಮ ಇಲ್ಲಿ 2022 ಸೆಪ್ಟೆಂಬರ್ 19ಕ್ಕೆ ವೆಂಕಟ ಭಟ್ ಎಡನೀರು ಅವರು ಬಿಡುಗಡೆ ಮಾಡಿರುವರು.

ವಾಟ್ಸ್ ಆ್ಯಪ್ ನಲ್ಲಿ “ಮಹಿಳಾ ಕವಿ ರತ್ನಗಳು” ಎಂಬ ಗುಂಪನ್ನು ಕನ್ನಡದ ಕವಯತ್ರಿ ಮತ್ತು ಬರಹಗಾರ್ತಿಯರಿಗಾಗಿ ತೆರೆದು, ಅದರಲ್ಲಿ ವರ್ಷಕ್ಕೊಮ್ಮೆ ಕವನ ಸ್ಪರ್ಧೆಯನ್ನು ಆನ್ ಲೈನ್ ನಲ್ಲಿ ಏರ್ಪಡಿಸಿ, ಪುಸ್ತಕ ಬಹುಮಾನ ನೀಡಲಾಗುತ್ತಿದೆ ಅಲ್ಲದೆ ಪ್ರತಿನಿತ್ಯ ಹಲವಾರು ಮಹಿಳಾ ಕವಿ ಮನಗಳಿಗೆ ತಮ್ಮ ಬರಹಗಳನ್ನು ಬಿತ್ತರಿಸಿ ಓದಲು ಅವಕಾಶ ಮಾಡಿ ಕೊಡಲಾಗುತ್ತಿದೆ. ಸ್ಟೂಡೆಂಟ್ಸ್ ಸ್ಟ್ರಾಂಗ್ ಟೀಮ್ ಎಂಬ ಗುಂಪಿನಲ್ಲಿ ಪ್ರಸ್ತುತ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ವಿವಿಧ ಉಪಯುಕ್ತ ವಿಷಯಗಳನ್ನು ನೀಡಲಾಗುತ್ತಿದೆ. ಲೇಡೀಸ್ ಗ್ಯಾಲರಿ ಎಂಬ ಗುಂಪಿನಲ್ಲಿ ಗುಂಪಿನ ಎಲ್ಲಾ ಮಹಿಳೆಯರಿಗೆ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ.

ನೈರುತ್ಯ, ನಮ್ಮ ಬಂಟ್ವಾಳ, ಪ್ರಜಾ ಪ್ರಗತಿ, ಮಂಗಳ, ವಿಜಯ ಕರ್ನಾಟಕ, ಸಂಪದ ಸಾಲು,ಹಾಸನ ವಾಣಿ , ಸುಳ್ಯ ಸುದ್ದಿ, ನವ ವೈಭವ,  ಪಂಜು ಪತ್ರಿಕೆಯಲ್ಲೂ  ಮುಂತಾದ ಹಲವಾರು ಪತ್ರಿಕೆ ಹಾಗೂ ಪುಸ್ತಕಗಳಲ್ಲಿ ಇವರ ಲೇಖನಗಳು , ಕವನಗಳು, ಬರಹಗಳು ಪ್ರಕಟವಾಗಿವೆ. ಹಲವಾರು ಶಾಲಾ, ಸಂಘಗಳ ವಾರ್ಷಿಕ ಸ್ಮರಣ ಸಂಚಿಕೆಗಳಲ್ಲಿ ಇವರ ಕವನ ಹಾಗೂ ಲೇಖನಗಳು ಪ್ರಕಟವಾಗಿವೆ. ಆಗುತ್ತಿವೆ. ಇದೀಗ ಸಂಗಾತಿ ಆನ್ಲೈನ್ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿದ್ದು ಇದೇ ಪತ್ರಿಕೆಯಲ್ಲಿ ಅಂಕಣ ಬರಹ ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ 25 ವಾರಗಳಿಂದ ಪ್ರಕಟಗೊಳ್ಳುತ್ತಿದೆ.ಕವನಗಳೂ ಪ್ರಕಟವಾಗುತ್ತಿವೆ.

ಫೋಟೊ ಆಲ್ಬಂ:

————————–


ಅನಿತಾ ಗೌಡ

Leave a Reply

Back To Top