ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ-ವ್ಯೋಮದೊಳಗಿನ ಆತ್ಮ

ಕಾವ್ಯ ಸಂಗಾತಿ

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

ವ್ಯೋಮದೊಳಗಿನ ಆತ್ಮ

ಸಾರಾನಾಥದ ಸ್ತೂಪದ ಹೂದೋಟದಲ್ಲಿ ,
ದಮ್ಮನ ಪರಿಮಳ.
ಜಗವ ಕಂಡರಿಯದ ಧನ್ಯತೆ,
ಕಾಲಿರಿಸಿದ ನೆಲದಲ್ಲೆಲ್ಲ ಪುಳಕ.
ಯಾರದೋ ಧ್ವನಿ ನಿಶ್ಶಬ್ದದೊಳಗೆ,
ಹೊರಳಿದೆ, ಹುಡುಕಿದೆ ,ಬೆಚ್ಚಿದೆ.
ಅದು ಬಯಲೊಳಗಿನ ಆತ್ಮ.

ಜ್ಞಾನ ಭ್ರೂಣ ಹೊತ್ತ ಅದಕ್ಕೆ ನನ್ನೊಳಗೆ ಗರ್ಭೀಕರಿಸಿಕೊಳ್ಳುವ ಧಾವಂತ.
ಓ ಇದು ವ್ಯೋಮದ ಆತ್ಮವೇ .
ಹಾ ಇವನು ಬುದ್ಧನೇ ಬದ್ಧನೇ ಸಿದ್ಧನೆ.
ಕರುಣೆ, ಪ್ರೀತಿ, ಮಮತೆಗಳಿರುವಲ್ಲಿ
ಮತ್ತೆ ಹುಟ್ಟಬೇಕೆಂಬ ಅವನ ಛಲ ಮೆಚ್ಚಿದೆ.

ನಾನೀಗ ಗರ್ಭವತಿ,
ಸಂಗಮದಲ್ಲಿ ನನ್ನ ಜೋಳಿಗೆ ಜೀಕುತ್ತಿದೆ.
ಪ್ರಸವಿಸುವ ವೇದನೆ ಇಲ್ಲ, ಭಯವಿಲ್ಲ,
ಅದು ತಾನೇ ಹುಟ್ಟ ಬಯಸಿದ ಭ್ರೂಣ
ಆ ಕೂಸು ಯೋನಿಜವೂ ಅಲ್ಲ.

ಈಗ ಜೋಗುಳದ ಗಾನ ಬಯಲ ತುಂಬ.
ತೊಟ್ಟಿಲು ಸದಾ ತೂಗುತ್ತಲೇ ಇದೆ. ಶತಶತಮಾನಗಳಿಂದಲೂ
ಬುದ್ಧ ಬಸವರಿಗೆ ಬಾಣಂತಿಯರು
ಹಾಲುಣಿಸುತ್ತಲೇ ಇದ್ದಾರೆ.

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

Leave a Reply

Back To Top