ಮೇ-ದಿನದ ವಿಶೇಷ

ನತದೃಷ್ಟದವರು ನಾವು….!

ಶಂಕರಾನಂದ ಹೆಬ್ಬಾಳ

ಅದೇ ಜಲ್ಲಿ ಕಲ್ಲು
ತೂತು ಬಿದ್ದ ಬುಟ್ಟಿ
ಸಲಾಕೆ, ಹಾರೆ, ಪಿಕಾಸಿ
ಜೀವನ ಇದರಲ್ಲೆ ಕಳೆಯಿತಲ್ಲ…!
ಕಂಡ ಕನಸು
ಗಗನಕುಸುಮವಾಯಿತಲ್ಲ…..!!

ಚೂರು ಪಾರು ಸಾಲಕ್ಕಾಗಿ
ದಿನದುದ್ದಕ್ಕೂ ದುಡಿತ
ಬರದ ನಿದ್ದೆ,
ಒದ್ದಾಟದಲ್ಲೂ ತೀರದ ಸಾಲ..!
ಬೆಳೆದು ನಿಂತಿದೆ ಇಂದು
ಉದ್ದನೆಯ ಹನಮನ ಬಾಲ…!

ಮಗ ಪಿಯುಸಿಯಲ್ಲಿ ರ್ಯಾಂಕ
ಮುಂದೆ ಓದಿಸಲು ಹಣವಿಲ್ಲ,
ಸುಸ್ತಾದ ಜೀವಕೆ ಪಿಂಚಣಿಯಿಲ್ಲ,
ನೆಮ್ಮದಿಯಿಲ್ಲದ ಬದುಕಲ್ಲಿ
ಸಿರಿವಂತಿಕೆಯ ಬಯಕೆ
ಕನ್ನಡಿಯ ಗಂಟಾಯಿತಲ್ಲ….

ಹೆಂಡತಿ ಮಕ್ಕಳಿಗೆ
ಹಬ್ಬ ಹರಿದಿನಗಳಿಗೆ
ಹೊಸ ಬಟ್ಟೆಯಿಲ್ಲ,
ಕಾರು ,ಫ್ಯಾನು, ಏಸಿ
ಐಶಾರಾಮಿಯಿಲ್ಲದ
ದುಸ್ತರ ಬಾಳು…
ಬೆಂದ ಕಾಳಾಗಿ ನೋವಿನಲ್ಲಿ
ಕೊರಗುವ ಗೋಳು….

ಹಾಸಿಗೆಗೆ ಒರಗಿದ್ದೇನೆ
ಒಳಗೊಳಗೆ ಮರುಗಿದ್ದೇನೆ,
ಕಾಯಿಲೆಗಳ ಗೂಡಾಗಿದ್ದಾನೆ,
ಬದುಕಿ ಉಳಿಯಲು
ದೇವರು ದವಾ ಕೊಡಬೇಕು,….!
ಹಸಿದ ಹೊಟ್ಟೆಗೆ
ಮೃಷ್ಟಾನ್ನ ಭೋಜನ ಬೇಕು
ಹರಿದ ಹಚ್ಚಡಕೆ ತೇಪೆ
ಹಾಕಬೇಕು…
ಇದಕ್ಕೆಲ್ಲ ಅದೃಷ್ಟಬೇಕು
ಈ ಅದೃಷ್ಟವಿಲ್ಲದ
ನತದೃಷ್ಟರು ನಾವು….!!


ಶಂಕರಾನಂದ ಹೆಬ್ಬಾಳ

Leave a Reply

Back To Top