ಹನಿಬಿಂದು ಕವಿತೆ-ಬಿತ್ತ ಬೇಕಿದೆ ಕಾಳು

ಮೇ-ದಿನದ ವಿಶೇಷ

ಹನಿಬಿಂದು

ಬಿತ್ತ ಬೇಕಿದೆ ಕಾಳು

ಆ ಮುಗುಳು ನಗೆಯ ಹಿಂದೆ
ಅದೆಷ್ಟು ನೋವುಗಳು ಮಡುಗಟ್ಟಿ ನಿಂತಿವೆ!
ಭೂಮಿಯ ಆಳದ ಕಲ್ಲಿದ್ದಲು, ಚಿನ್ನ ಕಬ್ಬಿಣದಂತೆ
ಬಹು ಗಟ್ಟಿ ಕಪ್ಪು ಮಣ್ಣು ಮಿಶ್ರಿತ!

ಆ ಅಂದದ ನಗೆಯ ಹಿಂದೆ
ಅದೆಷ್ಟು ಕಹಿ ನೆನಪುಗಳ ನರ್ತನ!
ನೋಡಿದ ಕೇಳಿದ ಘಟಿಸಿದ ಮೆರೆದ
ಮರೆತರೂ ಮರೆಯಲಾರದ ಕಥೆ
ಮತ್ತೆ ಜೀವ ಹಿಂಡುವ ವ್ಯಥೆ!

ಆ ದಾಳಿಂಬೆ ದಂತಪಂಕ್ತಿ ಒಳಗೆ
ಅದೆಷ್ಟು ಉತ್ತಮ ನಾಲಿಗೆ!
ಅದೆಷ್ಟು ಸಿಹಿ ಮಧುರ ಮಾತುಗಳು
ಆದರೂ ಅದೇಕೆ ಹೂವಿನ ಹಿಂದೆ ಮುಳ್ಳುಗಳು?

ಆ ರಮ್ಯ ನೋಟದ ಮುದ್ದು ಮುಖದ ಹೂವಿಗೆ
ಅದೇಕೆ ಸಿಗದು ಮಕರಂದ
ರವಿ ಕಿರಣದ ಸ್ಪರ್ಶ ಬೇಕಲ್ಲವೇ ಇಳೆಗೆ?
ಮತ್ತೆ ಹೂವು ಕಾಯಾಗಿ ಮಾಗಿ ಹಣ್ಣಾಗಲು!

ಆ ಹಾರದೆ ಕುಳಿತ ಮೌನ ಚಿಟ್ಟೆಗೆ
ತನ್ನ ರೆಕ್ಕೆಯ ಕುರಿತು ನೆನಪಿಸಬೇಕಿದೆ
ನಿಧಾನಕ್ಕೆ ಏರಲು ಎತ್ತರೆತ್ತರಕ್ಕೆ
ನೆಮ್ಮದಿ ಸಾಂತ್ವನದ ಕಡೆಗೆ
ಒಲವಿನ ಒರತೆಯ ಬದಿಗೆ!

ಆ ಮುಗ್ದ ಮುಖದಲಿ ಕಾಣಬೇಕಿದೆ
ಸಂತಸದ ಎಳೆ ಚಿಗುರ ಹಸಿರು
ಎಳೆ ಎಳೆಯಾಗಿ ಕೊಂಚ ತಿಳಿಯಾಗಿ
ಬಿಟ್ಟ ಬೇಕಿದೆ ಮೊಳಕೆ ಕಾಳು
ಸುಖವಾಗಿ ಹಿತವಾಗಿ ಸಾಗಲು ಬಾಳು.

——-


ಹನಿಬಿಂದು

Leave a Reply

Back To Top