ಅಂಬೇಡ್ಕರ್ ಜಯಂತಿ ವಿಶೇಷ

ಸಂವಿಧಾನ ಶಿಲ್ಪಿ ಡಾ.ಬಾಳಾಸಾಹೇಬ ಅಂಬೇಡ್ಕರ್…

ಹಮೀದಾ ಬೇಗಂ ದೇಸಾಯಿ

ಪ್ರತಿವರ್ಷ ಏಪ್ರಿಲ್ 14- ರಂದು ಅಂಬೇಡ್ಕರ್ ಜಯಂತಿಯನ್ನು ದೇಶದಲ್ಲಿ ಮತ್ತು ಜಗತ್ತಿನ ಕೆಲವು ಕಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರ ಜೊತೆ ಜೊತೆಗೆ ಅಂಬೇಡ್ಕರ್ ಜಯಂತಿ ಟೀಕೆಗಳಿಗೂ ಗುರಿ ಆಗುತ್ತಲಿದೆ. ಏಕೆಂದರೆ ಸ್ವತಃ ಅಂಬೇಡ್ಕರ್ ಅವರು ಯಾವುದೇ ಪ್ರತಿಮೆ ಸ್ಥಾಪನೆ ಹಾಗೂ ವ್ಯಕ್ತಿ ಪೂಜೆಯ ವಿರೋಧಿ ಆಗಿದ್ದರು. ಸಂವಿಧಾನ ರಚನೆಯ ಜವಾಬ್ದಾರಿ ಅವರ ಹೆಗಲಿಗೆ ಬಿದ್ದಾಗ , ದೇಶದ ಎಲ್ಲ ಜಾತಿ-ಮತ- ವರ್ಗದ ಜನರನ್ನು ಸಮಾನತೆಗೆ ಒಯ್ಯುವ ಆಶಯಗಳನ್ನು ಹೊಂದಿರುವ ಸಂವಿಧಾನ ರಚಿಸುವ ಮೂಲಕ ಅಂಬೇಡ್ಕರ್ ಅವರು ಆಧುನಿಕ ಭಾರತ ರೂಪುಗೊಳ್ಳಬೇಕಾದ ಮಾರ್ಗ ತೋರಿದರು. ರಾಜಕೀಯ ಅಧಿಕಾರ ಮತ್ತು ಸಾಂವಿಧಾನಿಕ ಅವಕಾಶಗಳನ್ನು ಬಳಸಿಕೊಂಡು ದಲಿತ ಸಮುದಾಯ ಸದೃಢವಾಗಬೇಕು ಎಂದು ಅಂಬೇಡ್ಕರ್ ಅವರು ನಂಬಿಕೆ ಇಟ್ಟಿದ್ದರು. ಯಾವುದೇ ರಾಜಕೀಯ ನಾಯಕನಿಗೆ ಸಿಗುವ ಪಬ್ಲಿಕ್ ಸ್ಪೇಸ್ ಪ್ರಭುತ್ವದಿಂದ ಕೊಡಲ್ಪಟ್ಟಿರುತ್ತದೆ. ಆದರೆ ಅಂಬೇಡ್ಕರ್ ಇಂದು ದೇಶದಲ್ಲೆಡೆ ತಲುಪಿದ ರೀತಿ , ಸಾರ್ವಜನಿಕ ಸ್ಥಳಗಳಲ್ಲಿ ಆಕ್ರಮಿಸಿಕೊಂಡಿರುವ ರೀತಿ ಯಾವುದೇ ಪ್ರಭುತ್ವ ದೊರಕಿಸಿ ಕೊಟ್ಟ ಕೊಡುಗೆ ಅಲ್ಲ. ಭಾರತೀಯ ಸಮಾಜದ ವಿಮೋಚನೆಗೆ ದುಡಿದ ಅಂಬೇಡ್ಕರ್ ಭಾವಚಿತ್ರಕ್ಕೆ ಸಂಸತ್ ಭವನದಲ್ಲಿ ಜಾಗ ಸಿಗಲು ತೊಂಬತ್ತರ ದಶಕದವರೆಗೆ ಕಾಯಬೇಕಾದ ಸಂದರ್ಭ ಇತ್ತು. ಜಗತ್ತಿನ ಯಾವುದೇ ನಾಯಕನಿಗೆ ಸಿಗದ ಪಬ್ಲಿಕ್ ಸ್ಪೇಸ್ ಅವರಿಗೆ ಸಿಕ್ಕಿದೆ ಎಂದರೆ ಅದು ದಲಿತ ಸಮುದಾಯ ಅವರನ್ನು ತನ್ನ ಪ್ರಜ್ಞೆಯನ್ನಾಗಿ ಸ್ವೀಕರಿಸಿದ ಕಾರಣಕ್ಕಾಗಿ ಎಂಬುದು ಅಷ್ಟೇ ಸತ್ಯ.
ರಾಜಕೀಯ ಅಧಿಕಾರದ ಸಾಮಾಜಿಕ ಮಹತ್ವವನ್ನು ಇತರರಿಗಿಂತ ದಲಿತರು ಸಮರ್ಥವಾಗಿ ಅರಿತಿದ್ದಾರೆ. ಆಧುನಿಕ ರಾಜಕೀಯ ಪ್ರಜ್ಞೆಯೇ ಇಲ್ಲದ ದೇಶದ ಒಟ್ಟು ಜನಕೋಟಿಯ ಸಾಮಾಜಿಕ ಬದಲಾವಣೆಯ ರಥದ ಜೊತೆಗೆಯೇ ರಾಜಕೀಯ ರಥವನ್ನು ಕೂಡ ಅಂಬೇಡ್ಕರ್ ಮುಂದೆ ಒಯ್ದಿದ್ದಾರೆ ಎಂಬ ಕೃತಜ್ಞತೆಯಿಂದ ಅಂಬೇಡ್ಕರ್ ಜಯಂತಿಯನ್ನು ಇಡೀ ದೇಶವೇ ಅರ್ಥಪೂರ್ಣವಾಗಿ ಆಚರಿಸಬೇಕು.

( ವಿವಿಧ ಮೂಲಗಳಿಂದ )


2 thoughts on “ಅಂಬೇಡ್ಕರ್ ಜಯಂತಿ ವಿಶೇಷ

  1. ಸಂದರ್ಭೋಚಿತವಾಗಿ ಅರ್ಥಪೂರ್ಣವಾಗಿ ಮೂಡಿಬಂದಿದೆ.

  2. ಅವರು ಇಡೀ ಭಾರತದ ಪ್ರಜ್ಞೆ ಮೇಡಂ. ಚೆನ್ನಾಗಿದೆ ನಿಮ್ಮ ಬರವಣಿಗೆ.

Leave a Reply

Back To Top