ಮಹಾ ಅನುಭಾವಿ ದಿಟ್ಟ ಶರಣ ಆದಯ್ಯನವರ ಜೀವನ ಚರಿತ್ರೆ ಒಂದು ವೃತ್ತಾಂತ .

ವಿಶೇಷ ಲೇಖನ

ಡಾ.ಶಶಿಕಾಂತ.ಪಟ್ಟಣ

ಮಹಾ ಅನುಭಾವಿ ದಿಟ್ಟ

ಶರಣ ಆದಯ್ಯನವರ ಜೀವನ ಚರಿತ್ರೆ

ಒಂದು ವೃತ್ತಾಂತ .

ಮಹಾ ಅನುಭಾವಿ ದಿಟ್ಟ ಶರಣ ಆದಯ್ಯನವರ ಜೀವನ ಚರಿತ್ರೆ ಒಂದು ವೃತ್ತಾಂತ .

ಶರಣರ ಆಂದೋಲನ ಹೋರಾಟ ಚಳುವಳಿ ಪರಿವರ್ತನೆಯ ಜೊತೆಗೆ ಅನುಭಾವದ ಗರಡಿಯನ್ನು ಶರಣರು ನಿರ್ಮಿಸಿದರು. ವೈದಿಕ ಆಗಮಿಕರ ಮುಂದೆ ಸೊಲ್ಲೆತ್ತದೆ ಶತಮಾನದಿಂದ ದಾಸ್ಯತ್ವಕ್ಕೆ ಒಳಗಾದ ದಲಿತರು ಅಸ್ಪ್ರಶ್ಯರು ಮಹಿಳೆಯರು ಮುಕ್ತವಾಗಿ ಕನ್ನಡದಲ್ಲಿ ತಮ್ಮ ಅನುಭಾವವನ್ನು ಬರೆಯ ಹತ್ತಿದರು.
ಅಂದಿನ ಶರಣ ಚಳುವಳಿಯಲ್ಲಿ ಕನ್ನಡೇತರ ಅನೇಕ ಶರಣರು ಬಸವಣ್ಣನವರ ತತ್ವಕ್ಕೆ ಮಾರು ಹೋಗಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಅವರಲ್ಲಿ ತೆಲಗು ಮಸಣೆಶ, ಮಾದಾರ ಚೆನ್ನಯ್ಯ ಬೊಂತಾದೇವಿ ಕಾಶ್ಮೀರದ ಮಹಾದೇವ ಭೂಪಾಲ ಮುಂತಾದ ನೂರಾರು ಶರಣರಲ್ಲಿ ,ಆದಯ್ಯನೂ ಒಬ್ಬನು .
ಆದಯ್ಯ ವಚನ ಚಳುವಳಿಯ ಶ್ರೇಷ್ಠ ವಚನಕಾರನು .
ಆದಯ್ಯನ ಜೀವನ ಚರಿತ್ರೆಯನ್ನು ಹರಿಹರ ಆದಯ್ಯನ ರಗಳೆಯಲ್ಲಿ ರಸವತ್ತಾಗಿ ಹೇಳಿದ್ದಾನೆ,ರಾಘವಾಂಕನ ಸೋಮನಾಥ ಚರಿತ್ರೆ ಕೃತಿಯಲ್ಲಿ ಆದಯ್ಯನ ಭಕ್ತಿಯ ಶೃದ್ಧೆಯನ್ನು ಸೊಗಸಾಗಿ ವಿವರಿಸಲಾಗಿದೆ. ಆದಯ್ಯನು ಮೂಲತಃ ಗುಜರಾತದ ಸೌರಾಷ್ಟ್ರದವನು .ಬನಿಯಾ ಅಥವಾ ಬಣಜಿಗನಾದ ಈತನು ಊರಿನಿಂದ ಊರಿಗೆ ವಲಸೆಯಾಗಿ ವ್ಯಾಪಾರ ಮಾಡಲು ಹೋಗಿ ಪುಲಿಗೆರೆ ಅಂದರೆ ಇಂದಿನ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿ ವಾಸ ಮಾಡಿ ತನ್ನ ವ್ಯಾಪಾರ ವಹಿವಾಟವನ್ನು ನಡೆಸುತ್ತಾನೆ. ಆಗ ಅಲ್ಲಿ ಪದ್ಮಾವತಿ ಎಂಬ ಜೈನ ಕನ್ಯೆಯನ್ನು ಪ್ರೀತಿಸಿ ಮದುವೆಯಾದನು .
ಈ ಮದುವೆಗೆ ಪದ್ಮಾವತಿಯ ತಂದೆ ಒಪ್ಪದಿದ್ದಾಗ ವಾದಕ್ಕೆ ನಿಂತು ಸೌರಾಷ್ಟ್ರದಿಂದ ಸೋಮೇಶ್ವರನನು ತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸೋಮೇಶ್ವರನನ್ನು ಸ್ಥಾಪಿಸಿ ತಾನೊಬ್ಬ ನಿಜ ಶಿವ ಭಕ್ತನೆಂದು ಹೇಳಿಕೊಂಡನು.

ಮುಂದೆ ಕಲ್ಯಾಣದ ಅನುಭವ ಮಂಟಪದ ವಚನಗಳ ಸುಮಧುರ ಧ್ವನಿ ಕೇಳಬರಹತ್ತಿತು ಪರಿಮಳದ ವಾಸನೆ ಲಕ್ಷ್ಮೇಶ್ವರಕ್ಕೂ ಬರ ಹತ್ತಿತು . ಆದಯ್ಯ ತನ್ನ ವ್ಯವಹಾರದಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಅಷ್ಟೊಂದು ಆಸ್ಥೆ ವಹಿಸಿರಲಿಲ್ಲ. ಆದರೆ ಒಂದೊಮ್ಮೆ ಆದಯ್ಯನು ವ್ಯಾಪಾರಕ್ಕಾಗಿ ಕಳಚೂರ್ಯರ ಕಲ್ಯಾಣಕ್ಕೆ ಹೋಗಲು ಅಲ್ಲಿನ ಶರಣರ ಅನುಭಾವ ಚಿಂತನೆಯ ಪ್ರಭಾವಕ್ಕೆ ಒಳಗಾಗಿ ತಾನೂ ಕೂಡ ಇಂತವರ ಜೊತೆ ಅನುಭಾವ ಮಾಡಬೇಕೆಂಬ ಉತ್ಕಟ ಬಯಕೆಯಿಂದ ಅಲ್ಲಿ ಕೆಲ ಕಾಲ ನಿಂತು ಬಸವಣ್ಣನವರಿಂದ ಶರಣರಿಂದ ಲಿಂಗದ ಮಹಿಮೆ ತತ್ವ ತಿಳಿದು ತಾನು ಲಿಂಗಾಯತನಾದನು. ಬನಿಯಾ ಬಣಜಿಗನಾದ ಆದಯ್ಯ ಲಿಂಗಾಯತನಾದ ಮೇಲೆ ಸತ್ಯ ಶುದ್ಧವಾದ ಕಾಯಕ ಮಾಡುತ್ತಾ ಶರಣರ ಅನುಭಾವವನ್ನು ಜನರಿಗೆ ಪರಿಚಯಿಸುತ್ತ, ತನ್ನಂತೆ ಅನೇಕ ಬನಿಯಾ-( ಇವರು ವೈಶ್ಯರಲ್ಲ ಆದರೆ ವ್ಯಾಪಾರಿಗಳು-ಇದರಲ್ಲಿ ಬಹುತೇಕರು ಜೈನರು ) ತನ್ನಂತೆ ಇದ್ದ ವ್ಯಾಪಾರಿಗಳನ್ನು ಲಿಂಗಾಯತ ಧರ್ಮಕ್ಕೆ ಸೇರಲು ಪ್ರೇರೇಪಿಸುತ್ತಾನೆ..ಇವರಲ್ಲಿ ಜೈನರೇ ಅಧಿಕಾರಿದ್ದ ಕಾರಣ ಅವರು ಲಿಂಗಾಯತ ಧರ್ಮವನ್ನು ಸ್ವೀಕರಿಸಿದರು.ಬಣ ಜಿನ ಅಂದರೆ ಜೈನರ ಬಣ (ಬಣಜಿಗ )ಆಗುವ ಸಾಧ್ಯತೆಯೇ ಜಾಸ್ತಿಯಾಗಿದೆ.

ಒಬ್ಬ ಶ್ರೇಷ್ಠ ಅನುಭಾವಿ ಆದ್ಯಯ್ಯ ವಚನಕಾರನ ಸಮಾಧಿಯ ಹುಡುಕುತ್ತಾ ಹೊರಟಾಗ .

ಲಕ್ಷ್ಮೇಶ್ವರ (ಪುಲಿಗೆರೆ) ಅಂದಿನ ಬಹುತೇಕ ಅನುಭವಿಗಳ ವಾಸಸ್ಥಳ . ನಮ್ಮ ತಾಯಿ ತವರು ಮುಳಗುಂದದಿಂದ ಕೇವಲ ಹದಿನೈದು ಕಿಲೋಮೀಟರು ಅಂತರದಲ್ಲಿರುವ ಊರು ಲಕ್ಷ್ಮೇಶ್ವರ . ಅಲ್ಲಿನ ಬಹು ಹಳೆಯ ಸೋಮನಾಥ ದೇವಾಲಯ ಅತ್ಯಂತ ಪುರಾತನ ಮತ್ತು ಪ್ರಾಚ್ಯ ಮಂದಿರವಾಗಿದೆ.
ಆದಯ್ಯನು ಬಣಜಿಗನಾಗಿ ಜೈನ ಕನ್ಯೆಯನ್ನು ಮದುವೆಯಾಗಿ ಮುಂದೆ ಜೈನ ಬಸದಿಯಲ್ಲಿಯೇ ಸೋಮನಾಥನ ವಿಗ್ರಹ ಸ್ಥಾಪಿಸಿ ಮುಂದೆ ಶರಣರ ಸಂಪರ್ಕದಲ್ಲಿ ಬಂದು ಬಹು ದೊಡ್ಡ ವಚನಕಾರನಾದಾಗ ಇದೆ ಸೋಮನಾಥ ದೇವಾಲಯದಲ್ಲಿ ಬಂದು ಕುಳಿತು ಕಾಯಕದ ನಂತರ ವಚನ ರಚನೆ ಮಾಡಿದ್ದು ಅನುಭಾವ ಮಾಡಿದ್ದು ಇದೆ ಬಸದಿ ಅಥವಾ ಮಂದಿರವೆಂದು ತಿಳಿಯಿತು.ಸೋಮನಾಥ ದೇವಸ್ಥಾನದ ಪಕ್ಕದಲ್ಲಿ ಒಂದು ಪುಟ್ಟ ಗುಡಿಯಿದೆ , ಅದುವೇ ಶ್ರೇಷ್ಠ ಅನುಭಾವಿ ಆದ್ಯಯ್ಯನ ಸಮಾಧಿಯಾಗಿದೆ.

ಕಲ್ಯಾಣ ಕ್ರಾಂತಿಯ ಪೂರ್ವದಲ್ಲಿಯೇ ಆದಯ್ಯನು ತನ್ನ ವ್ಯಾಪಾರ ವಹಿವಾಟಿಗಾಗಿ ಲಕ್ಷ್ಮೇಶ್ವರಕ್ಕೆ ಬರುವುದು ಮತ್ತು ಕಲ್ಯಾಣಕ್ಕೆ ಹೋಗುವುದು ಸಹಜವಾಗಿತ್ತು.
ಕಲ್ಯಾಣ ಕ್ರಾಂತಿಯ ವಚನ ರಕ್ಷಣಾ ಕಾರ್ಯದಲ್ಲಿ ಅಷ್ಟೊಂದು ಕಾಣಬರದ ಆದಯ್ಯನು ಪುಲಿಗೆರೆಯಲ್ಲಿ ಐಕ್ಯವಾಗಿದ್ದಾನೆ.
ಈಗಲೂ ಪುಲಿಗೆರೆಯಲ್ಲಿ ಅನೇಕ ಸಣ್ಣಪುಟ್ಟ ದೇವಾಲಯಗಳು ಬಸದಿ ಹೋಲುವ ಮಂದಿರಗಳು ಕಾಣ ಬರುತ್ತವೆ .

ಅನುಭವಿ ಆದಯ್ಯನು ತನ್ನ ವಚನಗಳಲ್ಲಿ “ಸೌರಾಷ್ಟ್ರ ಸೋಮೇಶ್ವರ “ಅಂಕಿತವನ್ನು ಬಳಸಿದ್ದಾನೆ ಕೆಲವು ವಚನಗಳಲ್ಲಿ ಮಲ್ಲಿಕಾರ್ಜುನ ಎಂಬ ಅಂಕಿತವನು ಕಾಣ ಬಹುದು. ಆದಯ್ಯನು ಬರೆದ ಒಟ್ಟು ವಚನಗಳು 403 . ಇವುಗಳಲ್ಲದೆ ಅನೇಕ ಸ್ವರ ವಚನಗಳು ಬರೆದಿರುವುದು ಗಮನಾರ್ಹವಾಗಿದೆ.ಆದಯ್ಯನು ತನ್ನ ವಚನಗಳಲ್ಲಿ ಸಾಂಸಾರಿಕ ಸಾಹಿತಿಕ ಅಂಶಗಳಿಗಿಂತ ಶರಣ ಧರ್ಮದ ತಾತ್ವಿಕ ಚಿಂತನೆಗೆ ಒತ್ತು ಕೊಟ್ಟಿದ್ದಾನೆ. ಅನುಭಾವದಲ್ಲಿ ಅಲ್ಲಮರಿಗೆ ಸರಿ ತೂಗುವ ಆದಯ್ಯ ಕಲ್ಯಾಣ ನಾಡಿನ ಅಪ್ರತಿಮ ವಚನಕಾರ. ಸುಂದರ ಭಾಷೆಯ ಬಳಕೆ ,ವಿಷಯ ನಿರೂಪಣೆ ,ವಚನಗಳಲ್ಲಿನ ಸಾಂಗತ್ಯ ಶೈಲಿ ಅದ್ಭುತವಾಗಿವೆ.ಆದಯ್ಯ ತನ್ನ ವಚನಗಳಲ್ಲಿ ರೇವಣ ಸಿದ್ಧಯ್ಯ,ಮರುಳ ಸಿದ್ಧಯ್ಯ,ಏಕೋರಾಮಯ್ಯ,ಪಂಡಿತಾರಾಧ್ಯರ ಹೆಸರುಗಳನ್ನೂ ವ್ಯಕ್ತಗೊಳಿಸಿರುವದರಿಂದ ಈತ ನೇರವಾಗಿ ಕಲ್ಯಾಣದ ಅನುಭಾವ ಮಂಟಪದಲ್ಲಿ ಪಾಲ್ಗೊಳ್ಳದಿರುವುದು ಕಾರಣ ಅಷ್ಟೇ ಅಲ್ಲ ಆದಯ್ಯನ ನಿಲುವನ್ನು ಪ್ರಶಂಸಿಸಿ ಇತರ ವಚನಕಾರರ ವಚನಗಳು ಹೆಚ್ಚಾಗಿ ಕಂಡು ಬರುವದಿಲ್ಲ.ಈ ಕಾರಣದಿಂದ ಈತ ತನ್ನ ಕಾಯಕ ಭೂಮಿಯಲ್ಲಿ ತನ್ನ ಐಕ್ಯವನ್ನು ಕಂಡನು ಎಂದೆನ್ನ ಬಹುದು.

ಆದಯ್ಯನ ತಾತ್ವಿಕ ನಿಲುವು

ಆದಯ್ಯನು ಅತ್ಯಂತ ಉಗ್ರವಾಗಿ ವೇದ ಆಗಮ ಶಾಸ್ತ್ರಗಳನ್ನು ವಿರೋಧಿಸಿದನು.ವೈದಿಕ ಕರ್ಮಕಾಂಡಗಳ ಬೆನ್ನು ಹತ್ತಿದವನ ಕಂಡು ಮುಮ್ಮಲ ಮರುಗುವ ಆದಯ್ಯ ಈ ರೀತಿ ತನ್ನ ವಚನಗಳಲ್ಲಿ ಹೇಳಿದ್ದಾನೆ.

ವೇದಂಗಳ ಹಿಂದೆ ಹರಿಯದಿರು ಹರಿಯದಿರು.
ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು.
ಪುರಾಣಂಗಳ ಹಿಂದೆ ಬಳಸದಿರು ಬಳಸದಿರು.
ಆಗಮಂಗಳ ಹಿಂದೆ ತೊಳಲದಿರು ತೊಳಲದಿರು.
ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು
ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.

ವೇದಗಳ ಹಿಂದೆ ಹರಿಯದಿರು ಹರಿಯದಿರು ಮತ್ತೆ ಮತ್ತೆ ಅರ್ಥವಿಲ್ಲದ ವೇದಗಳ ಹೋಗುವ ಕಾರಣವನ್ನು ಕೇಳುತ್ತಾನೆ ಆದಯ್ಯ. ಸುಳ್ಳು ಹೇಳುವ ಶಾಸ್ತ್ರದ
ಹಿಂದೆ ಸುಳಿಯದಿರು ಎಂದಿದ್ದಾನೆ . ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು ಎಂದು ಹೇಳುತ್ತಾ ಶಾಸ್ತ್ರಗಳ ಬಳಕೆಯನ್ನು ಖಂಡಿಸುತ್ತಾನೆ.
ಪುರಾಣಂಗಳ ಹಿಂದೆ ಬಳಸದಿರು ಬಳಸದಿರು.- ಜೊಳ್ಳು ಕಥೆ ಹೇಳುವ ಪುರಾಣಗಳಿಗೆ ಆಂಟಿ ಬೀಳದಿರು ಎಂದಿದ್ದಾನೆ .ಆಗಮಂಗಳ ಹಿಂದೆ ತೊಳಲದಿರು ತೊಳಲದಿರು.-ಅನವರತ ಚಿಂತನೆಗಳ ಅನುಭಾವವಿರುವಾಗ ಆಗಮಗಳ ಹಿಂದೆ ಹೋಗಿ ತೊಳಲುವ ಕಾರಣವೇನು ಎಂದು ಪ್ರಶ್ನಿಸಿದ್ದಾನೆ.

ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.

ಸೃಷ್ಟಿಯ ಸಂಕೇತ ಜೈವಿಕ ಚಿತ್ಕಳೆ ಸಮಷ್ಟಿಯಾದ ಇಷ್ಟಲಿಂಗಾಕಾರದ ಕುರುಹು .ಕೈಯಲ್ಲಿರುವಾಗ ವೇದ ಶಾಸ್ತ್ರ ಪುರಾಣ ಆಗಮಗಳ ಹಿಂದೆ ಹೋಗಿ ಹೋಗಿ ಶಬ್ದಕ್ಕೆ ಬಳಲಿದಂತೆ ಎಂದಿದ್ದಾರೆ ಆದಯ್ಯನವರು. ಎಂತಹ ಗಟ್ಟಿತನವನ್ನು ವಚನಗಳಲ್ಲಿ ಕಾಣಬಹುದು.

ಇದೆ ರೀತಿಯಲ್ಲಿ ಇನ್ನೊಂದು ವಚನದಲ್ಲಿ ಈ ರೀತಿಯಾಗಿ ಹೇಳಿದ್ದಾನೆ.

ವೇದಾಗಮಂಗಳು ಹೋದ ಸರಣಿಯಲ್ಲಿ ಹೋದರಲ್ಲದೆ
ದ್ವೈತಾದ್ವೈತಕ್ಕೆ ನಿಲುಕದ ನಿಜವ ಕಂಡವರಾರನೂ ಕಾಣೆ.
ವಾಣಿಯ ಹಂಗಿನಲ್ಲಿ ಉಲಿದುಲಿದು ಹೋದರಲ್ಲದೆ
ಉಲುಹಡಗಿದ ನಿಲವ ಕಂಡವರಾರನೂ ಕಾಣೆ.
ತನು ಕರಣ ಭುವನ ಭೋಗಂಗಳ ಕಂಡಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗದುಳುಮೆಯ ಕಂಡು
ಸುಖಿಯಾದವರಾರನೂ ಕಾಣೆ.

ವೇದಾಗಮಂಗಳು ಹೋದ ಸರಣಿಯಲ್ಲಿ ಹೋದರಲ್ಲದೆ ದ್ವೈತಾದ್ವೈತಕ್ಕೆ ನಿಲುಕದ ನಿಜವ ಕಂಡವರಾರನೂ ಕಾಣೆ.

ವೇದ ಆಗಮಗಳು ಹೋದ ದಾರಿಯಲ್ಲಿ ಹೋದರಲ್ಲದೆ ದ್ವೈತಾದ್ವೈತಕ್ಕೆ ನಿಲುವಿನ ನಿಲುಕದ ನಿಜದ ಪರಿಯನ್ನು ಕಂಡವರನ್ನು ಯಾರನ್ನು ಕಾಣೆನು. ಅಂದರೆ ವೇದ ಆಗಮಗಳು ಬೋಧೆಗೆ ಮಾತ್ರ ಸೀಮಿತವಾಗಿವೆ.ಅವುಗಳಲ್ಲಿನ ಅಂತಃಶಕ್ತಿಯ ಅರಿವನ್ನು ಅದರ ನಿಜದ ನಿಲುವನ್ನು ಅಥವಾ ಆ ಆಳದ ಎತ್ತರಕ್ಕೆ ನಿಲುಕಿದವರನ್ನು ಕಾಣೆನು ಎಂದಿದ್ದಾನೆ.

ವಾಣಿಯ ಹಂಗಿನಲ್ಲಿ ಉಲಿದುಲಿದು ಹೋದರಲ್ಲದೆ ಉಲುಹಡಗಿದ ನಿಲವ ಕಂಡವರಾರನೂ ಕಾಣೆ.

ಶಬ್ದಗಳ ವಾಣಿಯ ಹಂಗಿನಲ್ಲಿ ಪ್ರವಚನ ಪುರಾಣ ಕೇಳಿ ಉನ್ಮಾದದಲ್ಲಿ ಉಲಿದುಲಿದು ಹೋಗುವ ಜನ ಆ ಉಲುಹಿನಲಿ ಅಡಗಿದ ನಿಜದ ನಿಲುವ ಕಂಡವರನ್ನು ಕಾಣೆನು ಎಂದಿದ್ದಾನೆ.

ತನು ಕರಣ ಭುವನ ಭೋಗಂಗಳ ಕಂಡಲ್ಲದೆ,ಸೌರಾಷ್ಟ್ರ ಸೋಮೇಶ್ವರಲಿಂಗದುಳುಮೆಯ ಕಂಡು ಸುಖಿಯಾದವರಾರನೂ ಕಾಣೆ.

ವ್ಯಕ್ತಿ ತನ್ನ ತಾನು ಸುಖಕ್ಕಾಗಿ ತನ್ನ ಪಂಚೇಂದ್ರಿಗಳ ಸುಖಕ್ಕಾಗಿ ಭುವನ ಮನೆ ಸಂಸಾರಗಳ ಭೋಗಗಳಿಗೆ ಮಿಡಿಯುವರಲ್ಲದೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಆ ತತ್ವಗಳನ್ನು ಉಳುಮೆಯ ಕಂಡು ಸುಖಿಯಾದವರನ್ನು ಯಾರನ್ನೂ ಕಾಣೆನು ಎಂದಿದ್ದಾನೆ ಆದಯ್ಯ.
ಶಬ್ದ ಸ್ಪರ್ಶ ರೂಪ ರಸ ಗಂಧಗಳಿಗೆ ಬೆರಗಾಗುವ ಮನುಷ್ಯ ತನ್ನೊಳಗಿನ ಅಂತರಂಗದ ಅನುಭಾವಕ್ಕೆ ಮಿಡಿಯುವದಿಲ್ಲ ಎಂದು ಮರುಗುವ ಆದಯ್ಯನು
ಸಮಾಜದಲ್ಲಿ ತನ್ನಲ್ಲಿ ಉತ್ತಮ ಗುಣಗಳ ಉಳುಮೆ ಮಾಡಿ ಆ ಫಲವನ್ನು ಅನುಭವಿಸುವ ಸುಖವನ್ನು ಉಣ್ಣುವ ಸಾಧಕರನ್ನು ಭಕ್ತರನ್ನು ಕಾಣೆನು ಎಂದಿದ್ದಾರೆ.
ಸುಂದರ ಲಿಂಗಾನುಸಂಧಾನದ ಪರಾಕಾಷ್ಠತೆ ಇದಾಗಿದೆ.

ಅಂಗವು ಲಿಂಗವೇಧೆಯಾದ ಬಳಿಕ
ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ
ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು
.

ಶರಣರು ತಮ್ಮನ್ನು ಲಿಂಗ ಸಮಾಜಕ್ಕೆ ಅರ್ಪಿಸಿಕೊಂಡಮೇಲೆ ಭಕ್ತ ತನಗೆ ಮತ್ತೆ ಬೇರೆ ದೇಹವನ್ನು ಕಾಣನು ತತ್ವ ದಿಟಗೊಂಡದ್ದಲ್ಲದೆ ಸಜ್ಜನಕ್ಕೆ ಮೌಲ್ಯಕ್ಕೆ ಅಂಗವುಂಟೆ
ಲಿಂಗವಲ್ಲದೆ ? ಕಾರಣ ಭಕ್ತನೆಂಬುವವನು ಶರಣನಿಂಗೆ ವ್ಯಕ್ತಿ ದೇಹವಿರದು ಅವನು ನಿರ್ದೇಹಿ .

ಆದಯ್ಯ ಒಬ್ಬ ಶ್ರೇಷ್ಠ ಮಟ್ಟದ ಅನುಭಾವಿ ವಚನಕಾರ ತನ್ನ ವಚನಗಳಲ್ಲಿ ಕೆಲ ಬೆಡಗುಗಳನ್ನು ಬಳಸಿ ವಚನಗಳ ಮೌಲ್ಯ ಅರ್ಥವನ್ನು ವಿಸ್ತರಿಸುವ ಮತ್ತು ಆಧ್ಯಾತ್ಮಿಕ ಅನುಭವನ್ನು ಪುಟ್ಟ ವಚನಗಳಲ್ಲಿ ಅಡಗಿಸುವ ಕಲಾ ಕೌಶಲ್ಯವನ್ನು ಹೊಂದಿದ್ದಾನೆ.

ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,
ಒಬ್ಬನ ರೂಹು ಹೋಗುತ್ತ ಬರುತ್ತದೆ.
ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ.
ಕಂಡಡೆ ಉಣಲಿಲ್ಲ, ಕಾಣದಿರ್ದಡೆ ಉಣದಿರಲಿಲ್ಲ.
ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ.

ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,ಒಬ್ಬನ ರೂಹು ಹೋಗುತ್ತ ಬರುತ್ತದೆ.

ಪ್ರಸಕ್ತ ಈ ವಚನದಲ್ಲಿ ನಿರಾಕಾರ ಸಾಕಾರದ ರೂಪಗಳ ಮಧ್ಯ ಲಿಂಗವೆಂಬ ಆಕಾರವು ನಿರಾಕರವಾಗುತ್ತ ತನ್ನ ರೂಪದ ಹಂಗು ಹರಿದುಕೊಳ್ಳುತ್ತಾ ಮತ್ತೆ ಮತ್ತೆ ಆಕಾರವಾಗಿ ಕರಸ್ಥಲಕ್ಕೆ ಬಂದು ನಿರಾಕಾರದ ತತ್ವಕ್ಕೆ ಸಾಗುವ ಸುಂದರ ಪಯಣವು ಅದ್ಭುತವಾಗಿದೆ ಎಂದಿದ್ದಾನೆ ಆದಯ್ಯ.

ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ.

ಇಂತಹ ಆಕಾರ ಸಾಕಾರ ಮತ್ತು ನಿರಾಕಾರ ರೂಪದಲ್ಲಿ ಕಂಡು ಕಾಣದರಿಯದೇ ಕೂಡುವ ಮೂರು ಸ್ಥಿತಿಗಳನ್ನು ಒಂದೆಡೆ ತಂದರೆ ಅವರ ಆಗು ಹೋಗು ಅವರು ಎಂತವರು ಎಂಬುದನ್ನು ನೀವೇ ನೋಡಿಕೊಳ್ಳಿ ಎಂದು ಸಲಹೆ ನೀಡುತ್ತಾನೆ.

ಕಂಡಡೆ ಉಣಲಿಲ್ಲ, ಕಾಣದಿರ್ದಡೆ ಉಣದಿರಲಿಲ್ಲ.ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ.

ಸಾಕಾರ ರೂಪವು ತನ್ನ ಮುಂದಿನ ಪ್ರಸಾದವನ್ನು ಉಣಲಾಗದು .ಆದರೆ ರೂಪವಿಲ್ಲದ ಆತ್ಮದ ಪ್ರಾಣಲಿಂಗವು ಹೊರಗಿನ ಪದಾರ್ಥವನ್ನು ಉಣದೆ ಇರದು .
ಆಕಾರವು ಬಯಸುವದಿಲ್ಲ ನಿರಾಕಾರದ ಜ್ಞಾನ ಆತ್ಮ ಜ್ಯೋತಿಯು ಪ್ರಾಣಲಿಂಗವು ಲಿಂಗ ಸಮಾಜವು ಜಂಗಮ ಸಮಾಜವು ಉಣದೆ ಇರಲಾರದು. ಇದು ಎಂತಹ ಸೋಜಿಗ ಸೌರಾಷ್ಟ್ರ ಸೋಮೇಶ್ವರಾ ಎಂದು ಪ್ರಶ್ನಿಸಿಕೊಂಡಿದ್ದಾನೆ ಆದಯ್ಯನು.

ಸಮಷ್ಟಿಯ ಉಳಿವು ಹುಟ್ಟು ಚರಾಚರ ಪಕ್ಷಿ ಪ್ರಾಣಿಗಳ ಬಗ್ಗೆ ಚಿಂತಿಸುವ ಆದಯ್ಯನು ತನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾನೆ.

ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ
ಸಚರಾಚರಂಗಳಷ್ಟಮೂರ್ತಿಗಳಾಗಿ
ಆಗಿ ಆಗಿ ಅಳಿವುತ್ತಿಪ್ಪವಯ್ಯಾ.
ಇದಕ್ಕೆ ಶ್ರುತಿ:
ಬ್ರಹ್ಮಣೋ ವೃಕ್ಷಾನ್ಮಹತೋ ಪತ್ರಂ ಕುಸುಮಿತಂ ಫಲಂ
ಚರಾಚರಾಷ್ಟಮೂರ್ತಿಂ ಚ ಫಲಿತಂ ಫಲಶೂನ್ಯವತ್
ಇಂತೆಂದುದಾಗಿ,
ಅಷ್ಟಮೂರ್ತಿಗಳು ನಷ್ಟವಾದಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂಬ
ಮಿಟ್ಟಿಯ ಭಂಡರನೇನೆಂಬೆನಯ್ಯಾ..

ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ,ಸಚರಾಚರಂಗಳಷ್ಟಮೂರ್ತಿಗಳಾಗಿ ಆಗಿ ಆಗಿ ಅಳಿವುತ್ತಿಪ್ಪವಯ್ಯಾ.

ಸೃಷ್ಟಿ ಹುಟ್ಟು ಎಂಬ ಮರದಲ್ಲಿ ಫಲ ಪತ್ರ ಕುಸುಮಗಳೆಂಬ ಸಸ್ಯಗಳು ,ಸಚರಾಚರ ಅಷ್ಟ ಮೂರ್ತಿಗಳು ಮಾನವ ಪ್ರಾಣಿ ಕೀಟಗಳು ಜಲಚರ ಭೂಚರ ವಾಯು ಸಂಚಾರಿ ಪಕ್ಷಿಗಳು , ಸರಿಸೃಪಗಳು ,ಅಂಡಜಗಳು ,ಮುಂತಾದ ಅಷ್ಟ ತರದ ಜೀವಗಳು ಆಗಿ ಆಗಿ ಅಳಿವು ಕಾಣುತ್ತವೆ.

ಇದಕ್ಕೆ ಶ್ರುತಿ:
ಬ್ರಹ್ಮಣೋ ವೃಕ್ಷಾನ್ಮಹತೋ ಪತ್ರಂ ಕುಸುಮಿತಂ ಫಲಂ,ಚರಾಚರಾಷ್ಟಮೂರ್ತಿಂ ಚ ಫಲಿತಂ ಫಲಶೂನ್ಯವತ್”ಇಂತೆಂದುದಾಗಿ,

ಶ್ರುತಿಯು ಹೇಳುವಂತೆ ಬ್ರಹ್ಮವೆಂಬ ವೃಕ್ಷದಲ್ಲಿ ಪತ್ರಂ ಕುಸುಮಿತಂ ಫಲಂ ಹುಟ್ಟುತ್ತವೆ ಜನ್ಮ ತಾಳುತ್ತವೆ.ಚರಾಚರ ಅಷ್ಟ ಬಗೆಯ ಜೀವಿಗಳು ಹುಟ್ಟಿ ಶೂನ್ಯವಾಗುತ್ತವೆ.

ಅಷ್ಟಮೂರ್ತಿಗಳು ನಷ್ಟವಾದಲ್ಲಿ,ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂಬ,ಮಿಟ್ಟಿಯ ಭಂಡರನೇನೆಂಬೆನಯ್ಯಾ..

ಸೃಷ್ಟಿಯೊಳಗಿನ ಜೈವಿಕ ಸಸ್ಯಗಳು ಪುಷ್ಪ ಕುಸುಮಗಳು ಪತ್ರಗಳು ,ಚರಾಚರ ಜೀವಿಗಳು ನಾಶವಾದ ಮಾತ್ರಕ್ಕೆ ಅಥವಾ ಅಳಿವುಗೊಂಡ ಮಾತ್ರಕ್ಕೆ ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವೂ ನಷ್ಟವಾಯಿತ್ತೆಂದು ಹೇಳುವ ಮಿಟ್ಟಿಯ ಭಂಡರನ್ನು ನಾನು ನಂಬೆನು ಎಂದು ಟೀಕಿಸಿದ್ದಾನೆ.
ಸೃಷ್ಟಿ ಸ್ಥಿತಿ ಲಯಗಳ ತತ್ವಗಳನ್ನಾಧರಿಸಿ ,ಲಯವು ಮತ್ತೆ ಆರಂಭಕ್ಕೆ ಮೂಲವಾಗುತ್ತದೆ ಎಂದು ಸೂಚಿಸುತ್ತಾ ಸೃಷ್ಟಿ ಸಮಷ್ಟಿಗೆ ಸಾವಿಲ್ಲ ಅದು ನಿರಂತರ ವಿಕಸನ ಗೊಳ್ಳುವುದು ಅದುವೇ ಚೈತನ್ಯ ಕರಸ್ಥಲದೊಳಗಿನ ಲಿಂಗ ಜಂಗಮವೆಂದಿದ್ದಾನೆ.

ಇಂತಹ ಅಪೂರ್ವ ವಚನಕಾರ ಆದಯ್ಯ ಗುಜರಾತದಿಂದ ಕನ್ನಡ ನೆಲಕ್ಕೆ ಬಂದು ಇಲ್ಲಿನ ಶರಣ ಚಳುವಳಿಯಲ್ಲಿ ಪಾಲ್ಗೊಂಡು ಅಂಗ ಲಿಂಗ ಅಭೇದ್ಯದ ಅರಿವನ್ನು ನೀಡಿ ವೃಷ್ಟಿ ಸಮಷ್ಟಿಯ ಬಂಧನದ ಜೊತೆಗೆ ಪ್ರಗತಿ ವಿಕಸನ ಕಾಣುವ ಹಂಬಲ ಚಿಂತನೆ ಶ್ಲಾಘನೀಯವಾಗಿದೆ. ಆಗಾಗ ಗುರು ಡಾ ವೀರಣ್ಣ ರಾಜೂರ ಅವರಿಗೆ ಫೋನಾಯಿಸಿ ನನ್ನ ಕೆಲ ಸಣ್ಣ ಪುಟ್ಟ ಸಂದೇಶಗಳನ್ನು ಪರಿಹರಿಸಿಕೊಂಡು ಅವರಿಂದಲೂ ಬೆನ್ನು ತಟ್ಟಿಸಿಕೊಳ್ಳುವ ಭಾಗ್ಯ ನನ್ನದಾಗಿದೆ ಇಂತಹ ಶ್ರೇಷ್ಠ ಸಂಶೋಧಕರಿಗೆ ಅನಂತ ಶರಣಾರ್ಥಿಗಳು.
ಶರಣರ ಸಮಾಧಿಯ ನೆಪದಲ್ಲಿ ಶರಣರ ಆಗಾಧ ಜ್ಞಾನ ಕ್ರಿಯೆಯನ್ನು ನೆನಪಿಸಿಕೊಂಡು ನಾವು ಬಸವಾದಿ ಪ್ರಮಥರಿಗೆ ಕೃತಾರ್ಥರಾಗೋಣ .


ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

Leave a Reply

Back To Top