ಯುಗಾದಿ ವಿಶೇಷ
ಗಜಲ್
ವಾಣಿ ಭಂಡಾರಿ
ನಾನೇ ಸರಿ ಸತ್ಯವೆಂದು ಸಾರಬೇಡ ವಾಣಿ ಕಾಲ ಗರ್ಭದಲಿ ಹೋದವರನ್ನು ಕಂಡಿದ್ದೇನೆ.
ನಾನೇ ಆನೆ ಬಲಶಾಲಿಯೆಂದು ತಿಳಿಯಬೇಡ ಕೆಡ್ಡದಲ್ಲಿ ಬಿದ್ದವರನ್ನು ಕಂಡಿದ್ದೇನೆ.
ಸರಿತಪ್ಪುಗಳ ಲೆಕ್ಕಚುಕ್ತದ ಸಮಯ ಬಂದಾಗ ಯಾರು ನಿಲ್ಲರು ತಕ್ಕಡಿಯ ಮುಂದೆ
ನಾನೇ ಅತಿ ಶ್ರೇಷ್ಟವೆಂದು ಮೆರೆಯಬೇಡ ಮಕಾಡೆ ಆದವರನ್ನು ಕಂಡಿದ್ದೇನೆ.
ಶ್ರೇಷ್ಟತೆಯ ವ್ಯಸನವು ಬಲಿ ಕೇಳುವುದು ಹಾದಿ ಬೀದಿಯೇ ಮನೆಯಾಗಬಹುದು
ನಾನೇ ಜ್ಞಾನಿ ಪಂಡಿತಳೆಂದು ತಿರುಗಬೇಡ ಹುಚ್ಚಾಗಿ ಇದ್ದವರನ್ನು ಕಂಡಿದ್ದೇನೆ.
ಮೂರು ದಿನದ ಸಂತೆಯಲ್ಲಿ ಈ ಒಣ ದೌಲತ್ ಹರಾಜಾಗುವುದು ಬಯಲಿನಲಿ
ನಾನೇ ವಿಶ್ವ ಸುಂದರಿಯೆಂದು ಕೊಚ್ಚಬೇಡ ದೇಹ ಮಣ್ಣಾಗಿದ್ದನ್ನು ಕಂಡಿದ್ದೇನೆ.
ಏಸಿದ್ದರೇನು ಈ ನೆಲದ ತುಂಬಾ ಪ್ರೀತಿ ಹಂಚು ನಿನ್ನ ನೆರಳಿಗೂ ಬೆಲೆ ಬರುವುದು
ನಾನೇ ಶಾಂತಿ ಸಂತಳೆಂದು ಸಾರಿಬಿಡು ವಾಣಿ ಶೂನ್ಯ ಅಪ್ಪಿದ್ದನ್ನು ಕಂಡಿದ್ದೇನೆ.