ಯುಗಾದಿ ಕಾವ್ಯ

ಚೈತ್ರೋತ್ಸವ

Image result for photos of mango flowers

ಕೆ.ಎ.ಸುಜಾತಾ ಗುಪ್ತ

ಸದ್ದು ಗದ್ದಲವಿಲ್ಲದೆ

ಈ ಸೃಷ್ಟಿಯ ಅರಮನೆಗೆ

ಅತಿಥಿಯಾಗಿ ಆಗಮಿಸಿರುವ

ಉಲ್ಲಸಿತ ವಸಂತ ಋತುವು..

ಸಾಕ್ಷಿಯಾಯಿತು ನಿಶ್ಯಬ್ಧದಲಿ

ಋತು ಮನ್ವಂತರಕೆ…

ಚೇತೋಹಾರಿಯೋ..

ಚಿತ್ತ ಮನೋಹರಿಯೋ..

ವಿಸ್ಮಿತ ನೇತ್ರಗಳಲಿ

ಸುಹಾಸಿನಿಯೋ..!

ಹೃನ್ಮನಗಳಿಗೆ ಸುಲಲಿತೆಯೋ..

ಈ ನವ ವಸಂತವು.

ಚೈತ್ರವು ವಸಂತದ ಕೈಹಿಡಿದು

ಕಿಣಿ ಕಿಣಿ ನಾದದೆ ಹೆಜ್ಜೆಯನಾಕಿ

ಚೈತ್ರೋತ್ಸವಸಂಭ್ರಮಿಸುತಿರೆ.

ಪ್ರಕೃತಿ ಮುಗ್ಧ ಮನೋಹರಿ,

ಭಾವೋಜ್ವಲೆ..

ಹೃದ್ಗೋಚರ ದೃಶ್ಯಕೆ ಹರ್ಷೋದ್ಭವವು..

ಈ ನರ ಜನುಮ ಪಾವನವೋ.

ತಿಳಿ ಹಸಿರು, ಗಿಳಿ ಹಸಿರು, ಪಚ್ಚ ಪಸಿರು

ಪರ್ಣಗಳು ತಲೆದೂಗಲು ಪಾದಪಗಳಲಿ ,

ಕಾಮನಬಿಲ್ಲಿಗೇ ಸೋಜಿಗವೆನಿಸೋ..

ಹೋಳಿಯಲಿ ಮಿಂದೆದ್ದ ವರ್ಣಮಯ ಪ್ರಸೂನಗಳು,

ಬಯಸಿರಲು ವಸಂತನಿಗೆ ಸ್ವಾಗತವ,

ಅತಿಶಯದೆ ವಸಂತವಿರೆ ದಿಗ್ಭಾಂತಿಯಲಿ..

ಚೈತ್ರದೂತ  ಹಸಿರು ರೆಕ್ಕೆ  ಬಡಿದು

ಉಬ್ಬಿ ತಬ್ಬಿ ಹರುಷ ತೋರುತ

ಕಂಠ ಸಿರಿಯ ಸಮೀರದಲಿ ಸಮೀಕರಿಸಿ,

ಕೂಜನಗೈಯೇ ಕುಹೂ.ಕುಹೂ.

ಷಡೃತುಗಳ ಚೂಡಾಮಣಿ ತಾ ವಸಂತ

ತೇಜೋಮಯದೆ ಕಣ್ ಸೆಳೆಯಿತು.

ಬೇವು- ಮಾವು ಗಂಧ ಬೀರೆ

ಹಸಿರು ಗಿಳಿ ಕೆಂಪು ಕೊಕ್ಕಿನಿಂದ

ಹಸಿರು ಮಾವು ಕುಕ್ಕಿ ತಿನ್ನೆ,

ಮನೆ ಮನೆಗೆ ಹಸಿರು ಮಾವಿನ

ತೋರಣವ

ಹಿಡಿದು ಬರಲು ನವ ಯುಗಾದಿ

ನಾವೆಲ್ಲ ಸೇರಿ ಬೇವು – ಬೆಲ್ಲ ತಿಂದು

ಸಂಭ್ರಮಿಸುವ ಚೈತ್ರೋತ್ಸವವ.

*********************

Leave a Reply

Back To Top