ಲಲಿತಾ ಪ್ರಭು ಅಂಗಡಿ ಕವಿತೆ-ಪ್ರಣಾಳಿಕೆ.

ಕಾವ್ಯ ಸಂಗಾತಿ

ಪ್ರಣಾಳಿಕೆ.

ಲಲಿತಾ ಪ್ರಭು ಅಂಗಡಿ

ಮಂಕುಬೂದಿ ಎರಚುವ
ಪ್ರಣಾಳಿಕೆಯ ಮತಿಭ್ರಮಣಕೆ
ಮರುಳಾಗದಿರು ಮನವೆ
ಪುಕ್ಕಟೆಯ ಪುಸಲಾಯಿಸುವಿಕಗೆ
ಪುನರ್ ಪರಿಶೀಲಿಸಿ ವಿವೇಚಿಸು ಆಸೆಯೆ
ದುಡಿದುಂಡರೆ ಶ್ರಮ ಸಾರ್ಥಕವೆಂದು ನೀ ಅರಿ ಮರುಳೆ
ಗುಲಾಮನಾಗಿ ಸಲಾಂ ಹೊಡೆಯದಿರು
ಮನವೆ
ಗಾಳಿಯ ಹವೆಯಲಿ ತೇಲಾಡದಿರು ಬುದ್ದಿಯೆ
ಮಂಕುಬೂದಿ ಎರಚುವವರ ನಂಬದಿರು
ಚಿತ್ತವೆ
ಸುಳ್ಳು ಮೂಟೆಯ ಗಂಟುಕಟ್ಟಿ
ಡೊಳ್ಳು ಹೊಟ್ಟೆಯ ಟೊಳ್ಳು ಮಾತಿಗೆ ಮರುಳಾಗಿ
ಐದು ವರುಷಕೊಮ್ಮೆ ಬಣ್ಣ ಹಚ್ಚುವವರ
ಮೆಚ್ಚದಿರು ಮನವೆ
ಭೂಮಿ ಆಕಾಶವನೆ ಕಬಳಿಸುವ ಸ್ವಾರ್ಥಿಗಳು ಜನಹಿತವನೆತ್ತ ಬಲ್ಲರು


ಮೋಹದ ಕುದುರೆಯನೇರಿದವರಿಗೆ
ಯಾವ ಲಗಾಮು ಹಾಕಬಲ್ಲೆವು
ತನ್ನಂತೆ ಎಲ್ಲರೂ ಸಮಾನರೆನ್ನುವ
ಮನೋಗತದ ಅಬ್ಯರ್ಥಿಯ ಹುಡುಕುವದು ದುಸ್ತರ ನೋಡಾ
ಗಾಳಿ ಬೆಳಕನೆ ಮಾರಾಟಕ್ಕಿಟ್ಟು
ಅಂಗಳದಲಿ ಅಬ್ಬರಿಸುವವರ ನಂಬದಿರುವ ಮನವೆ ದುಡುಕದಿರು
ದುರುಳರ ಮೋಹದ ಪಾಶಕೆ ಮನವೆ
ಸೋಗಿನಾಟಕದ ಬಣ್ಣದ ಪರದೆಯ ಹಿಂದಿನ
ನಿಜವನರಿತು ನೀ ಮುನ್ನಡೆ
ಮನುಜಮತವೆ
ಕಾಯಕದ ಕೈಲಾಸವ ಅರಿಯದೆ
ಅನ್ಯರ ಎಂಜಲಕೆ ಕೈ ಚಾಚಿದರೆ
ನಮ್ಮ ನಡೆ ನುಡಿಯನೆತ್ತ ಮೆಚ್ಚುವರು ಶರಣರು.
ಸ್ವತಂತ್ರವೆಂಬ ವಿಚಾರ ಅರಿತು
ನಿಸ್ವಾರ್ಥಿ ಮನುಜ ಮನೋಗತಕೆ ನೀ ಒಪ್ಪು ಮನವೆ.


ಲಲಿತಾ ಪ್ರಭು ಅಂಗಡಿ

Leave a Reply

Back To Top