ಸಾಕ್ಷಿ ಶ್ರೀಕಾಂತ ತಿಕೋಟಿಕರ -ಕವಿತೆ ನಾನಾರು

ಕಾವ್ಯ ಸಂಗಾತಿ

ಸಾಕ್ಷಿ ಶ್ರೀಕಾಂತ ತಿಕೋಟಿಕರ.

ನಾನಾರು

ಎದೆಯಭಾವಗಳನು ಮೀಟಿದಾಗ
ಸ್ವರವಲ್ಲದ ಒಂದು ನಿಟ್ಟುಸಿರು ಬಿಟ್ಟಿತು
ಮೆದುವಿನ ಮನಸನು ಸವರಿದಾಗ
ನುಣುಪಿನ ಸ್ಪರ್ಷವಿಲ್ಲ ಗಾಯ ತಟ್ಟಿತು

ಹೇಳಬೇಕಾದ ಮಾತುಗಳು ಬಹಳ
ಕೇಳ ಬೇಕೆನ್ನುವ ಮನಸ್ಸು ಯಾರಬಳಿ
ಹೃದಯದ ಪಿಸುಮಾತುಗಳು ರಸಗವಳ
ಅವರಿವರ ಬಾಯಲ್ಲಿ ಕೇಳಿ ಉಗುಳಿ

ಅರ್ಥವಾಗದವರೊಂದಿಗೆ ವಾದವೇಕೆ
ವ್ಯರ್ಥ ಕಣ್ಣೀರು ಸ್ಪಂದಿಸದವರ ಮುಂದೆ
ನೋವು ನುಂಗಿಬಿಡು ಹಂಚುವ ತವಕವೇಕೆ
ಆಡಿಕೊಳ್ಳುವರಿಗೇನು ಕಡಿಮೆ ಹಿಂದೆ

ಕಂಬನಿತೊಡೆದು ಗಟ್ಟಿಯಾಗು ಮನವೇ
ಅಂಬಲಿಗೆ ತಟ್ಟೆಯ ಹಂಗಿಲ್ಲ ತಂಪು ಹೊಟ್ಟೆ
ಸತ್ಯವನ್ನು ಬಲ್ಲಿದರು ಒಪ್ಪುವ ಜನವೇ
ಸೋಗಿನಡಿ ಬದುಕುವನ ನಯ ನಂಬಿಕೆಟ್ಟೆ

ಮಾತಿನಸಂತೆಯಲಿ ಮೌನದ ಸರಕಿನ ಬೆಲೆ
ತೂತಿನಕಾಸಿಗೂ ಕೊಳ್ಳುವರು ಇಲ್ಲ
ಅರಿವಿನ ನಡೆಯಲಿ ಕಾಣಬೇಕಿದೆ ಈಗ ನೆಲೆ
ಅರಿಯದೇ ಕಿಚಾಯಿಸುತಿರುವರು ಎಲ್ಲ.


Leave a Reply

Back To Top