ಕುಸುಮಾ ಮಂಜುನಾಥ್ ಕವಿತೆ-ನಾ ಮುಟ್ಟಬಾರದವನೇ….?

ಕಾವ್ಯ ಸಂಗಾತಿ

ನಾ ಮುಟ್ಟಬಾರದವನೇ….?!!!!

ಕುಸುಮಾ ಮಂಜುನಾಥ್

ತಂಗಾಳಿಯದು ತೀಡಿ ತಡಕಿಹುದು ಎನ್ನ
ಹೇಳಿ ನಾ ಮುಟ್ಟಬಾರದವನೇ..?!!!

ಮಳೆ ಹನಿಯ ಸಿಂಚನವದು ಪ್ರೋಕ್ಷಿಸಿರಲು
ಹೇಳಿ ನಾ ಮುಟ್ಟಬಾರದವನೇ…?!!!!

ಮಲ್ಲಿಗೆ ಸಂಪಿಗೆಗಳ ಸುಗಂಧವದು ಅಡರಿರಲು
ಹೇಳಿ ನಾ ಅಘ್ರಾಣಿಸಬಾರದವನೇ…?!!!!

ಪ್ರಕೃತಿಯು ಸುಂದರವಾಗಿ ಮೈದಾಳಿ ನಿಂತಿರಲು
ಹೇಳಿ ನಾ ನೋಡಬಾರದವನೇ……?!!

ದುಂಬಿಗಳ ಝೆಂಕಾರ ಪಕ್ಷಿಗಳ ಕಲರವ
ಹೇಳಿ ನಾ ಕೇಳಬಾರದವನೇ….?!!

ನವಿಲ ಅದುವು ಗರಿ ಬಿಚ್ಚಿ ಕುಣಿದಿರಲು
ಹೇಳಿ ನಾ ಕಣ್ತುಂಬಿಕೊಳ್ಳಬಾರದವನೇ…?!!!

ದೇವನವ ಸೃಷ್ಟಿಸಿಹ ಈ ಮಾಯಾ ಲೋಕವ
ಎನಗಾಗಿ… ನಾ ಅವನ ಗೊಜ್ಜು ಕೋಲನು
ಮುಟ್ಟಿ ಮೈಲಿಗೆಯ ಮಾಡಿದೆನೇನು..!!
ಹೇಳಿ ನಾ ಮುಟ್ಟಬಾರದವನೇ….?!!!!


Leave a Reply

Back To Top