ಚಂದ್ರಶೇಖರ ಹೆಗಡೆ-ಚಿದಂಬರ ರಹಸ್ಯ

ಕಾವ್ಯ ಸಂಗಾತಿ

ಚಿದಂಬರ ರಹಸ್ಯ

ಚಂದ್ರಶೇಖರ ಹೆಗಡೆ

ಮೋಹವನ್ನೇಕೆ ಶಸ್ತ್ರವನ್ನಾಗಿಸುವೆ ಅರಿದು ಇರಿಯಬಾರದೇ ಹೃದಯ
ಪರವಶನಾಗಿಬಿಡುವೆ ಉಸಿರಲ್ಲಿಯೇ
ನೀನೆಂದೆಂದಿಗೂ ಮಾಯದ ಗಾಯ

ಸನ್ನೆಯಲ್ಲೇಕೆ ಬೀಸುವೆ ಕಂಗಳ ಗತ್ತಿ
ಶರಣಾಗಿರುವೆನಲ್ಲ ಅಲಂಕಾರವನ್ನೆಲ್ಲ ಕಳಚಿ
ಹಾದಿಯೆಲ್ಲಿದೆ ಹಿಡಿ ಒಲವಿನ ಹಿಲಾಲು
ಹಿಂಬಾಲಿಸುವೆ ಕಾಮನಬಿಲ್ಲಾಗಿ ಬಣ್ಣಗಳ ಚಾಚಿ

ಮನವಿಲ್ಲದಿದ್ದರೂ ಕಾಡುವೆಯೇಕೆ ಮಾಯೆ
ಸಾಕು ಬಾಳಿಗೊಂದು ಭಾವಗೀತೆಯ ಛಾಯೆ
ತೀರದಲ್ಲಿಯೇ ಕುಪ್ಪಳಿಸಿ ಕುಣಿದು ಹಾಡು
ನಿನ್ನ ಗಾಳಿಯ ಗಾಳಕ್ಕೆ ಮೀನಾಗದಂತೆ ಕಾಯೆ

ಎತ್ತ‌ ನೋಡಿದರತ್ತ ಅನುರಾಗದ ಅಲೆ
ಅದಾವ ರೂಪದಲ್ಲಿಹುದೋ ಬೀಸಿದ ಬಲೆ
ಗೊತ್ತಿಲ್ಲ ನಾಳೆ ಎಲ್ಲಿದೆಯೋ ಮೂಲದೆಳೆ
ಏನಾದರಾಗಲಿ ಈ ಒಲವೊಂದು ನಿಗೂಢವಾದ ಕಲೆ

ಅಣಕಿಸುವುದೇಕೆ ನೀ ಮುಡಿದ ಮಲ್ಲಿಗೆ
ಅದೆಷ್ಟು ಬಾಣಗಳೋ; ಬರಿದಾಗದ ಬತ್ತಳಿಕೆ
ಕಾರುಣ್ಯವರಸಿ ದೂರ ಹಾರಿಬಿಡಿ ರೆಕ್ಕೆಗಳೇ
ಕೊರಳಲ್ಲಿ ಉಳಿದಿರುವುದೊಂದೇ ಬಿಕ್ಕಳಿಕೆ


Leave a Reply

Back To Top