ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಒಲವೆಂದರೇ ಮಿಡಿಯುವುದಲ್ಲದೇ ಮತ್ತಿನ್ನೇನು…?

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಯೋಗ ಕ್ಷೇಮವೇ ಅಂತಿಮ ಧ್ಯೆಯ” ಎನ್ನುವ ಮಾತೊಂದು ಇದೆ.

 ಇಲ್ಲಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ  ಅದ್ಭುತವಾಗಿರತಕ್ಕಂಹ ಸರ್ಕಾರವೆಂದರೆ ಅದು ‘ಪ್ರಜಾಪ್ರಭುತ್ವ ಸರ್ಕಾರ’ ಪ್ರಜಾಪ್ರಭುತ್ವದ ಸರ್ಕಾರದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇವು ಮೂರು ಮುಖ್ಯ ಆಧಾರ ಸ್ತಂಭಗಳು. ಇವುಗಳಲ್ಲದೆ ಅಲಿಖಿತ ಮತ್ತು ಲೋಕೋಕ್ತಿಯಂತೆ ಪತ್ರಿಕಾರಂಗವು ಪ್ರಜಾಪ್ರಭುತ್ವದ ನಾಲ್ಕನೇಯ ಮುಖ್ಯ ಅಂಗವಾಗಿದೆ. ಹಿಂದೆ ಪತ್ರಿಕಾರಂಗವೂ ಒಂದು ಅತ್ಯಂತ ವಿಶಿಷ್ಟವಾದ ಮತ್ತು ಪ್ರತಿಷ್ಠಿತವಾದ ಸೇವೆ ಮಾಡುವ ಅಂಗವೆಂದು ಗುರುತಿಸಲ್ಪಟ್ಟಿತು.

 ಈ ಮೇಲಿನ ಮೂರು ಅಂಗಗಳು ಅಂದರೆ ಶಾಸಕಾಂಗ, ಕಾರ್ಯಂಗ, ನ್ಯಾಯಾಂಗಗಳು  ತಪ್ಪು ಮಾಡಿದಾಗ,  ವಿರೋಧ ಪಕ್ಷವು ಆಡಳಿತ ಪಕ್ಷದೊಂದಿಗೆ ಕೈಜೋಡಿಸಿದಾಗ ಇವುಗಳನ್ನು ಪ್ರಬಲವಾಗಿ ವಿರೋಧಿಸಿ ಜನಸಾಮಾನ್ಯರಿಗೆ ನ್ಯಾಯವನ್ನು ದೊರಕಿಸಿಕೊಡುವ ಗುರುತರವಾದ ಜವಾಬ್ದಾರಿ ಈ ಅಂಗದ್ದಾಗಿದೆ.

 ಪತ್ರಿಕಾರಂಗ ಇಂದು  ಕೇವಲ ಅಕ್ಷರ ಮಾಧ್ಯಮವಾಗಿರದೆ ಸಮೂಹ ಮಾಧ್ಯಮ, ಯುಟ್ಯೂಬ್ ಚಾನೆಲ್ ಮಾಧ್ಯಮಗಳು.. ಬಂದು ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ.  ತನ್ನ ಮೊದಲಿನ ಗಟ್ಟಿತನಕ್ಕೆ ಇದ್ದ ಬೇರುಗಳು ಸಡಿಲಗೊಂಡಿವೆ.

ಜನರಿಗಾದ ಸಮಸ್ಯೆಗಳನ್ನು ಮುಖ್ಯ ಕೇಂದ್ರ ವಿಷಯವನ್ನಾಗಿ ಇಟ್ಟುಕೊಂಡು ಆಡಳಿತಾತ್ಮಕ ವ್ಯವಸ್ಥೆಯೊಂದಿಗೆ ಸದಾ ಹೋರಾಟ ಮಾಡಿ, ಜಯಗಳಿಸಿದ ಎಷ್ಟೋ ಪತ್ರಕರ್ತರನ್ನು  ನಾವು ಕಾಣುತ್ತೇವೆ. ಹಿಂದೆ ಪತ್ರಿಕಾ ವರದಿಗಳೆಂದರೆ ಎಲ್ಲರಲ್ಲಿಯೂ ಕುತೂಹಲವಿರುತ್ತಿತ್ತು. ಅದರಲ್ಲೂ ತನಿಖಾ ವರದಿಗಳೆಂದರೆ ಕುತೂಹಲ, ರೋಚಕವಾಗಿರುತ್ತಿದ್ದ ವು.  ಪತ್ರಕರ್ತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಂಶೋಧನಾತ್ಮಕ ಮತ್ತು ತನಿಖೆಗೆ ಒಳಪಡಿಸಿ, ತಪ್ಪಿಸ್ಥರಿಗೆ ಶಿಕ್ಷೆಯನ್ನು  ಕೊಡಿಸುವ, ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸುವ, ಜನಪರ ವರದಿಗಾರಿಕೆಗಳು ಅತಿ ಹೆಚ್ಚು ಜನಮನ್ನಣೆಗಳಿಸಿದ್ದವು. ಆದರೆ ಕಾಲ ಗತಿಸಿದಂತೆ ಅಂತಹ ವರದಿಗಳನ್ನು ಕುತೂಹಲದ ಕಣ್ಣುಗಳಿಂದ ಹುಡುಕಬೇಕಾಗಿರುವುದು ವಿಷಾದನೀಯ.

ಜನರ ಆರೋಗ್ಯವನ್ನು ಹದಗೆಡಿಸುವ ಕಾರ್ಖಾನೆಗಳು ವಿಷಾನಿಲ ಮತ್ತು ಹೊಲಸು ನೀರನ್ನು ಜನವಸತಿ ಪ್ರದೇಶದ ಮಧ್ಯದಲ್ಲಿ ಬಿಟ್ಟಾಗ ಆ ಕಾರ್ಖಾನೆಯ ಮಾಲೀಕರನ್ನು ಪ್ರಶ್ನಿಸುತ್ತಲೇ ಸಿಂಹಸ್ವಪ್ನ ವರದಿಗಾರಿಕೆ ಮಾಡಿರುವುದು.

ಆಡಳಿತ ಪಕ್ಷಗಳು ಒಂದು ಯೋಜನೆಯನ್ನು ದುರುಪಯೋಗ ಮಾಡಿಕೊಂಡು, ಜನವಿರೋಧಿ ನೀತಿಯನ್ನು ಅನುಸರಿಸಿದಾಗ ಮತ್ತೆ ಅದನ್ನು ಜನಪರವಾಗಿ ಮುನ್ನೆಲೆಗೆ ತರಲು ಆಡಳಿತ ಪಕ್ಷಕ್ಕೆ ಚಾಟಿ ಬೀಸುವ ವರದಿಗಾರಿಕೆಯನ್ನು ಜನಮಾನಸದಲ್ಲಿ ಬಿಂಬಿಸುವಂತೆ ಮಾಡುತ್ತಿರುವ ಪತ್ರಕರ್ತರು.

ಆಡಳಿತ ಪಕ್ಷ ತಪ್ಪು ಮಾಡಿದಾಗಲೂ ಕಣ್ಮುಚ್ಚಿ ಕುಳಿತುಕೊಳ್ಳುವ ವಿರೋಧ ಪಕ್ಷಗಳನ್ನು ಸದಾ ಎಚ್ಚರಿಸುವ ಕೆಲಸವನ್ನು ಮಾಡುವ ಮಾಧ್ಯಮಗಳ ಗಟ್ಟಿತನ.

ಜನರ ಸೇವೆಗಾಗಿ ಸದಾ ಮೀಸಲಾಗಿರಬೇಕಾಗದ್ದ ಸರಕಾರಿ ನೌಕರರು ತಮ್ಮ ಸೇವೆಯನ್ನು ಮಾಡದೆ, ಬೇರೆ ತಮ್ಮದೇ ಆದ ಖಾಸಗಿ ಕೆಲಸದಲ್ಲಿ ತೊಡಗಿದಾಗ ಅವರ ನಿಲುವನ್ನು ಪ್ರಶ್ನಿಸಿ ವರದಿಗಾರಿಕೆ ಮಾಡುವುದು.

ಭ್ರಷ್ಟ ಅಧಿಕಾರಿಯ ದುರಾಸೆಯನ್ನು ಲಂಚಗುಳಿತನವನ್ನು ಹೊರ ಎಳೆಯುವ ಅಧಿಕ ವರದಿಗಳನ್ನು ಮಾಡುವ ದಿಟ್ಟತನದ ಪತ್ರಕರ್ತರನ್ನು ಸಮಾಜ ಸದಾ ಎಲ್ಲವನ್ನು ಸೋಜಿಗದ ಕಣ್ಣಿನಿಂದ ಗಮನಿಸುತ್ತಿರುತ್ತದೆ.

ವಯಸ್ಸಾದ ವೃದ್ಧೆಗೆ  ವೃದ್ಯಾಪ್ಯವೇತನ ದೊರಕದಿದ್ದಾಗ, ಅಂಗವಿಕಲರಿಗೆ ಸರಿಯಾದ ಪ್ರಮಾಣದಲ್ಲಿ ಮೀಸಲಾತಿ ಸಿಗದಿದ್ದಾಗ,  ಯಾವುದೇ ಬಡ ಕುಟುಂಬಕ್ಕೆ ಪಡಿತರ ಚೀಟಿ ಸಿಗದೇ ಇದ್ದಾಗ, ಸದಾ ಹಗಲಿರಲು ದುಡಿಯುವ ಕಾರ್ಮಿಕ ವರ್ಗಕ್ಕೆ ಮಾಲೀಕ ವರ್ಗದಿಂದಾದ ಅನ್ಯಾಯವನ್ನು ಸರಿಪಡಿಸದೇ ಇರುವ ಇಂತಹ ಜನಹಿತಕರವಲ್ಲದ ವಿಷಯಗಳನ್ನು ಮುಖ್ಯ ವರದಿಗಳನ್ನಾಗಿ ಮಾಡದೆ, ಆಳುವ ವರ್ಗವನ್ನು ಹಾಡಿ ಹೊಗಳುತ್ತಾ, ಅವರ ಮನಸ್ಸನ್ನು ಗೆಲ್ಲುವ ಪತ್ರಿಕೆಗಳು ಜನರ ಮನಸ್ಸಿನಲ್ಲಿ ಉಳಿಯುವುದಾದರೂ ಹೇಗೆ…?

 ಜನಸಾಮಾನ್ಯರ ನೋವುಗಳಿಗೆ ಪರಿಹಾರಕ್ಕೆ ಕಾರಣವಾಗಬೇಕಾಗಿದ್ದ ಪತ್ರಿಕೆಗಳು, ವರದಿಗಳು,  ಸಂಪಾದಕರು, ವರದಿಗಾರರು ವಾಣಿಜ್ಯ ಮತ್ತು ಕಾರ್ಖಾನೆ ಮಾಲೀಕರ ಕೈಯಲ್ಲಿ ಸಿಕ್ಕು ಹಾಕಿಕೊಂಡು  ಲೋಕದ ಕಲ್ಯಾಣವನ್ನ ಬಯಸದ ಪತ್ರಿಕೆಗಳನ್ನು ಜನರು ನಂಬುವುದಾದರೂ ಹೇಗೆ…??

ಹೀಗೆ ಇಂತಹ ಹತ್ತು ಹಲವಾರು ಸಮೂಹ ಮಾಧ್ಯಮಗಳು ಮತ್ತು ಪತ್ರಿಕ ಮಾಧ್ಯಮಗಳು ಆಳುವ ವರ್ಗಕ್ಕೆ ಸಿಂಹ ಸ್ವಪ್ನವಾಗಿರಬೇಕೆ ಹೊರತು ಅದರೊಂದಿಗೆ ತಾನು ಒಂದು ಭಾಗವಾಗಿ ಮಾರ್ಪಾಡಾಗಬಾರದು.  ಯಾವುದೋ ಆಮಿಷಕ್ಕೆ ಒಳಗಾದ ಕಪ್ಪು ಚುಕ್ಕೆಯನ್ನು ಅಂಟಿಸಿಕೊಳ್ಳಬಾರದು.

 ಈ ನಾಡಿನ ಪ್ರಗತಿಪರ ಚಿಂತಕರು, ಪತ್ರಿಕಾ ಸಂಪಾದಕರು, ವರದಿಗಾರರು, ಛಾಯಾಗ್ರಹಾಕರು ಜನಹಿತದ ಅನೇಕ ವರದಿಗಳನ್ನು ತಮ್ಮ ವಾಹಿನಿಯ ಮೂಲಕ ಇಲ್ಲವೇ ಪತ್ರಿಕೆಯ ಮೂಲಕ ಜನರಿಗೆ ತಲುಪಿಸುತ್ತಲೇ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ. ಇಂತಹ ಧೀಮಂತರ ಸಂಖ್ಯೆಗೆ ಕೊರತೆ ಇಲ್ಲ.

ಜನರ ನೋವು ನಲಿವುಗಳಿಗೆ ಮಿಡಿಯದೆ ಹೋದರೆ ಅದನ್ನು ಒಲವೆಂದು ಕರೆಯುವದಾದರೂ ಹೇಗೆ..? ಮಿಡಿಯುವದೆಂದರೆ ಒಲವಧಾರೆ..! ಒಲವಧಾರೆ ಎಂದರೆ ಹೃದಯ ಮಿಡಿಯುವದು..!! ಹೃದಯ ಮಿಡಿತದ ವರದಿಗಾರಿಕೆ, ಅಂಕಣಗಳು, ಲೇಖನಗಳು ಪತ್ರಿಕೆಯ ಭಾಗವಾಗಬೇಕು.

ಇಂತಹ ಜನಪರ ಪತ್ರಿಕಾ ಮಾಧ್ಯಮದವರ ಜನಪರ ಒಲವಧಾರೆಯನ್ನುವಮರೆಯಲಾಗುವುದೇ..??


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

One thought on “

  1. ಈಗ ನಾಡಿನ ಪ್ರಮುಖ ದಿನ ಪತ್ರಿಕೆಗಳು ಒಂದೊಂದು ರಾಜಕೀಯ ಪಕ್ಷದ ಹ್ಯಾಂಡ್ ಬಿಲ್ ಗಳಂತೆ ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ ಟಿ. ವಿ ಚಾನೆಲ್ ಗಳು ತಮ್ಮ ರೇಟಿಂಗ್ ಸಲುವಾಗಿ ಹಸಿ ಹಸಿ ಸುಳ್ಳುಗಳ ಸುದ್ದಿ, ಡಿಬೇಟ್ ಹೆಸರಲ್ಲಿ ಜನರಿಗೆ ವಂಚನೆ ಮಾಡುತ್ತಿವೆ.

    ಅವುಗಳ ಬಗ್ಗೆ ಬರೆಯುತ್ತಾ ಹೋದರೆ ಮುಗಿಯುವುದೇ ಇಲ್ಲ!

    ಅದಿರಲಿ, ತಾವು ತಮ್ಮ ಅಂಕಣಕ್ಕೆ ಉತ್ತಮ ವಿಷಯ ಆರಿಸಿಕೊಂಡಿದ್ದು ಸಂತಸ ತಂದಿದೆ.

    ಹಾರ್ದಿಕ ಅಭಿನಂದನೆಗಳು ರಮೇಶ್ ಬನ್ನಿಕೊಪ್ಪ ಅವರಿಗೆ

Leave a Reply

Back To Top