ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತೆನೆಗಳೆಲ್ಲಿ ಅರಳುವುವು

ಬೆಂಶ್ರೀ ರವೀಂದ್ರ

Rice plant in rice field

ಗುಂಡಿಗಳು ಬಾಯ್ದೆರೆದಿವೆ
ಸೇತುವೆಗಳು ಮುರಿದಿವೆ
ಆಸ್ಪತ್ರೆಯಲಿ ಆಕ್ಸಿಜನ್ ಖಾಲಿ
ದೆಹಲಿಯಲ್ಲಿ ಅಮರಿದ ಹೊಂಜು

ತುಂಬಿದ ಹೊಟ್ಟೆಯೊಳಗೆ ಅವಳಿ ಮಕ್ಕಳು
ಡಾಕ್ಟರ ಬಳಿ ಸಮಯವಿಲ್ಲ
ಆಸ್ಪತ್ರೆಯ ಬಾಗಿಲು ಮುಚ್ಚಿದೆ
ಕರಳುಬಳ್ಳಿ ಹರಿದು ಹರಣ ಹಾರಿ
ಗುಡಿಸಲಲಿ ರಕ್ತ ಚೆಲ್ಲಿದೆ

ಎತ್ತರವಾದ ಶಾಲೆಗಳ ಹೆಬ್ಬಾಗಿಲು
ತೇಲುಗಣ್ಣು ಮಾಲುಗಣ್ಣಾಗಿದೆ ಈ ಮಣ್ಣು
ಅಮೇರಿಕ ವೀಸಾ ಹೆಚ್ಚು‌ ನೀಡಲಿದೆ

ಆಸೆಗೆ ಹೀಚುಕಾಯಿಗಳ ಬಲಿ
ಅರ್ಥಕಳೆದ ಬಣ್ಣಗಳಿಗೀಗ ಕೋರೆದಾಡಿಗಳು
ಬಾಚಿಹಲ್ಲುಗಳು ಹಸಿಮಾಂಸವ ಕಚ್ಚಿಕಚ್ಚಿ ಬಾಯಾಡಿಸುತ್ತ ಮೆಲುಕುತ್ತಿವೆ
ಕಟಬಾಯಿಯಿಂದ ರಕ್ತ ಸೋರುತ್ತಿದೆ

ಇಲ್ಲೂ ಕೇಳುತ್ತಿದೆ ದೂರದಲಿ ಸಿಡಿವ ಬಾಂಬುಗಳು
ವಾಲುತ್ತಿವೆ ಹದತಪ್ಪಿ ತಕ್ಕಡಿಯ ಹಲ್ಲೆಗಳು
ಪ್ರತಿಮಾ ರಾಜ್ಯದಲಿ ಅರ್ಜುನನೊಬ್ಬನೆ ಅಲ್ಲ ದಂಡಿಗೆ ದಂಡು ನುಗ್ಗಿದೆ; ಉಲ್ಕೆಗಳು ದಾಳಿ

ಎಲ್ಲೆಗಳು ಮುರಿದಿವೆ
ಹುಲ್ಲೂ ಹಲ್ಲೆಗೆ ಇಳಿದಿದೆ
ಹುಲ್ಲೆಗಳು ಬಸವಳಿದಿವೆ

ಇದೀಗ ವೇಗಕ್ಕೇ ಸಮಯ
ಕ್ಷಣದಲೆಲ್ಲ ಬದಲಾಗುವುದಂತೆ
ಯಾಕೆ ಹೀಗಾಡುವಿರಿ
ಮರೆತಿರಾ ನಿಮ್ಮ ಬೇರುಗಳ
ಬೇರುಗಳ ಊರಿ‌ ಉರಿಮುಗಿಲಿಗೆ ನೋಡಿ

ಆಕಾಶದೆತ್ತರಕೆ ಪ್ರತಿಮೆಗಳು
ನಗೆಮೊಗ, ಬಿರುಮೊಗ, ಧೀಮೊಗ, ಧೀರಮೊಗ… ಹೀಗೆ ಅಲ್ಲಿದೆ ತರಹೆವಾರಿ ಮೊಗ, ಮೊಗೆದುಕೊಳ್ಳಿ ಸೌಭಾಗ್ಯವ

ಬದುಕಿ ಬದುಕಿ ಪ್ರತಿಮಾ ಲೋಕದಲ್ಲಿ
ನಿಮ್ಮೆಲ್ಲರ ಸಮಸ್ಯೆಗೆ ಪರಿಹಾರವಲ್ಲಿ
ಆ ಪ್ರತಿಮೆಗಳ ಮುಸುಮುಸು ನಗುವಲಿ
ಸಮಾಧಿಗಳು ವಿಜೃಂಭಿಸುವಾಗ
ತೆನೆಗಳೆಲ್ಲಿ ಅರಳುವುವು

ಪೆಟ್ರೋಲು ವಾಸನೆ ಗಬ್ಬೆನ್ನುವಾಗ
ಮಣ್ಣಿನ ವಾಸನೆ ಮೂಗಿಗೆ ತಲುಪುವುದೆ.


About The Author

Leave a Reply

You cannot copy content of this page

Scroll to Top