ಟಿ.ಎಸ್.ಲೋಹಿತಾಶ್ವ ಇನ್ನು ನೆನಪು ಮಾತ್ರವೂ..! —

ನೆನಪು

ಟಿ.ಎಸ್.ಲೋಹಿತಾಶ್ವ ಇನ್ನು ನೆನಪು ಮಾತ್ರವೂ..!

ಅದ್ವಿತೀಯ, ಅಪ್ರತಿಮ ಬರಹಗಾರ ಮತ್ತು ಕಲಾವಿದರಾದ ಟಿ.ಎಸ್.ಲೋಹಿತಾಶ್ವ ಇನ್ನೂ ನೆನಪು ಮಾತ್ರ

ಕನ್ನಡ ರಂಗಭೂಮಿಯ ಮತ್ತು ಚಲನಚಿತ್ರ ರಂಗದ ಹಿರಿಯ ಕಲಾವಿದ, ನಾಟಕಕಾರ, ಕವಿ ಮತ್ತು ಅಂಕಣಕಾರ ಟಿ.ಎಸ್.ಲೋಹಿತಾಶ್ವ ಅವರು ದಿನಾಂಕ 08.11.2022 ರಂದು ತಮ್ಮ ಸಾವನ್ನು ಅಪ್ಪಿದ್ದಾರೆ..!

ಅವರಿಗೆ ಎಂಭತ್ತು ವರುಷ ವಯಸ್ಸಾಗಿತ್ತು. (1942-08.11.2022)..!
ಕಳೆದ ಒಂದು ತಿಂಗಳಿಂದ ವಯೋ ಸಹಜ ದೈಹಿಕ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು ಅವರು.

ಲೋಹಿತಾಶ್ವ ಅವರು ಸರ್ಕಾರಿ ಕಾಲೇಜಿನ‌ ಪ್ರಾಧ್ಯಾಪಕರಾಗಿ ವೃತ್ತಿ ಜೀವನವನ್ನು ತುಮಕೂರಿನ ಸರ್ಕಾರಿ ಕಾಲೇಜಿನಿಂದ ಆರಂಭಿಸಿದರು. ನಂತರ ರಾಜ್ಯದ ಹಾಗೂ ಬೆಂಗಳೂರಿನ ವಿವಿಧ ಸರ್ಕಾರಿ ಕಾಲೇಜಿನಲ್ಲಿ ಸೇವೇ ಸಲ್ಲಿಸಿದರು. ನಗರದ ಕೆ.ಆರ್.ಪುರಂ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿಯನ್ನು ಹೊಂದಿದರು..!

ಲೋಹಿತಾಸ್ವರಿಗೆ ಇಬ್ಬರು ಗಂಡು ಮಕ್ಕಳು – ಶರತ್ ಮತ್ತು ರಾಹುಲ್, ಮತ್ತು ಒಬ್ಬಳು ಮಗಳು ವಿನಯಕುಮಾರಿ, ಮತ್ತು ಪತ್ನಿ ವತ್ಸಲಾ ಮತ್ತು ಸೊಸೆ, ಅಳಿಯ, ಮೊಮ್ಮಕ್ಕಳಿದ್ದರು. ಈಗ ಅವರೆನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ..!

ಕನ್ನಡದ ಅತ್ಯಂತ ಜನಪ್ರಿಯ ನಾಟಕ ‘ಮುಖ್ಯಮಂತ್ರಿ’ ನಾಟಕವನ್ನು ಹಿಂದಿಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದವರು ಲೋಹಿತಾಶ್ವರು. ಅದೇ ರೀತಿಯಾಗಿ ‘ಕಬೀರ’ ನಾಟಕವನ್ನೂ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದರು ಲೋಹಿತಾಶ್ವರು. ‘ಅಕ್ಕಡಿ ಸಾಲು’ ಎಂಬ ಅಂಕಣ ಬರಹಗಳ ಮತ್ತು ಹೊತ್ತು ‘ಹೋಗುವ ಮುನ್ನ’ ಎಂಬ ಕವನ ಸಂಕಲವನ್ನೂ ಪ್ರಕಟಿಸಿದ್ದಾರೆ ಅವರು..!

ಸಮುದಾಯ ಬೆಂಗಳೂರಿನ ಕತ್ತಲೆ ದಾರಿ ದೂರ, ಹುತ್ತವ ಬಡಿದರೆ, ಅದೇ ಅಧೂರೆ, ಜನಪದ ತಂಡದ ಹುಲಿಯ ಸೀರೆ, ಮುಂತಾದ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು ಲೋಹಿತಾಶ್ವರು. ಹೀಗೆಯೇ ಐನೂರಕ್ಕೂ ಹೆಚ್ಚು ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯಿಸಿರುವ ಲೋಹಿತಾಶ್ವ, ತಮ್ಮ ಕಂಚಿನ ಕಂಠ ಹಾಗೂ ಕನ್ನಡ ಭಾಷೆಯ ಸ್ಪಷ್ಟವಾದ ಉಚ್ಚಾರಣೆಗೆ ಮನೆ ಮಾತಾಗಿದ್ದರು ಅವರು..!
ತಮ್ಮ ಎತ್ತರದ ನಿಲುವಿನಿಂದಾಗಿ, ಅಭಿನಯಿಸುವ ಪಾತ್ರಗಳಿಗೆ ಗಾಂಭೀರ್ಯವನ್ನು ತರುತ್ತಿದ್ದವರು ಲೋಹಿತಾಶ್ವರು..!

ಬೆಂಗಳೂರು ಸಮುದಾಯದ ‘ತಾಯಿ’ ನಾಟಕದಿಂದಾಗಿ ತುಂಬಾ ಪ್ರಭಾವಿತರಾಗಿದ್ದವರು ಲೋಹಿತಾಶ್ವರು..!
ಈ ನಾಟಕದ ನಂತರ, ತುಮಕೂರಿನಲ್ಲಿ ಸಮುದಾಯ ಘಟಕವನ್ನು ಪ್ರಾರಂಭಿಸಿ, ಸಿ.ಜಿ.ಕೆ. ನಿರ್ದೇಶನದ ‘ಪಂಚಮ’ ಮತ್ತು ‘ಯಾರು ಗೆಳೆಯ ನೀನು ಯಾರು’ ನಾಟಕಗಳನ್ನು ಪ್ರಯೋಗಿಸಿದ್ದವರು ಅವರು..!

ತುಮಕೂರಿನಲ್ಲಿ, ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿ, ‘ಕತ್ತಲೆ ದಾರಿ ದೂರ’ ನಾಟಕವನ್ನು ನಿರ್ದೇಶಿಸಿ, ತುಮಕೂರು, ಉಡುಪಿ, ಮಂಗಳೂರು ಮುಂತಾದ ಕಡೆಗಳಲ್ಲಿ ಪ್ರದರ್ಶನ‌ ನೀಡಿದ್ದವರು ಅವರು..!

ಅರವತ್ತು — ಎಪ್ಪತ್ತು ಪ್ರದರ್ಶನಗಳನ್ನು ಕಂಡ ಈ ತುಮಕೂರಿನ ಪ್ರಯೋಗವು, ಟಿ.ಎನ್.ನರಸಿಂಹನ್ ನಿರ್ದೇಶನದ ಬೆಂಗಳೂರಿನ‌ ‘ಕತ್ತಲೆ ದಾರಿ’ ದೂರದಷ್ಟೇ ಯಶಸ್ವಿಯಾಗಿ ಪ್ರಯೋಗವಾಗಿತ್ತು. ಸಮುದಾಯ ರಾಜ್ಯ ಸಮಿತಿ ಸಂಯೋಜಿಸುವಲ್ಲಿ, ಸಮುದಾಯ ವಾರ್ತಾಪತ್ರ ಹೊರತರುವಲ್ಲಿಯೂ ಲೋಹಿತಾಶ್ವ ಅವರ ಕೊಡುಗೆ ಸಮುದಾಯಕ್ಕೆ ಅಪಾರವಾದದ್ದಾಗಿದೆ..!

ಕಾರಂತ, ಪ್ರಸನ್ನ, ನಾಗೇಶ್, ಸಿ.ಜಿ.ಕೆ, ಎಮ್ ಎಸ್ ಸತ್ಯು, ಸಾಣೇಹಳ್ಳಿ ಸ್ವಾಜಿಗಳು, ಸುತ್ತೂರು ಸ್ವಾಮೀಜಿಗಳು, ಹೆಚ್.ಎಸ್.ಶಿವಪ್ರಕಾಶ್, ಡಿ.ಆರ್. ನಾಗರಾಜ್, ಶೂದ್ರ ಶ್ರೀನಿವಾಸ್, ಜರಗನಹಳ್ಳಿ ಶಿವಶಂಕರ್, ಸಿದ್ದಲಿಂಗಯ್ಯ,
ಎಸ್.ಜಿ.ಸಿದ್ದರಾಮಯ್ಯ, ಬರಗೂರು, ಟಿ ಎನ್ ನರಸಿಂಹನ್, ಸೀತಾರಾಂ, ಡಾ.ಜಿ.ಆರ್, ಟಿವಿಎಮ್, ಎಮ್.ಸಿ.ಆನಂದ್, ಎಮ್.ಜಿ.ವೆಂಕಟೇಶ್, ಸಿ.ಆರ್.ಸಿಂಹ, ಕಪ್ಪಣ್ಣ, ದೇವರಾಜ್, ಸತ್ಯಸಂಧ, ಮಾಲತಿ, ಅವಿನಾಶ್, ಎ.ಎಸ್.ಮೂರ್ತಿ, ಹಳೇಮನೆ, ಜನ್ನಿ, ಬಸು, ವಾಲ್ಟರ್ ಡಿಸೌಜ, ಮುಖ್ಯಮಂತ್ರಿ ಚಂದ್ರು, ರಾಜಾರಾಂ, ಶ್ರೀನಿವಾಸ ಮೇಷ್ಟ್ರು, ಯತಿರಾಜ್, ಆರಾಧ್ಯ, ಸಣ್ಣಗುಡ್ಡಯ್ಯ, ಚಿಕ್ಕವೀರಯ್ಯ, ಟಿ.ಎಸ್.ಅನಂತರಾಮು, ಆರಾಧ್ಯ.ಕೆ.ಎಮ್.ಎಸ್., ಮೋಹನ್.ಕುಮಾರ್, ಲಲಿತ ಚಿಂದಗುಡಿ, ಸನತ್ ಕುಮಾರ್, ಉಮಾಶ್ರೀ, ಮುಂತಾದ ಇನ್ನೂ ಅಸಂಖ್ಯಾತ ಕಲಾವಿದರು, ನಿರ್ದೇಶಕರೊಟ್ಟಿಗೆ ಆತ್ಮೀಯ ಸಂಪರ್ಕವನ್ನು ಇಟ್ಟುಕೊಂಡಿದ್ದ ಲೋಹಿತಾಸ್ವರು, ಪ್ರಗತಿಪರ ಚಿಂತನೆಗಳನ್ನು ಮತ್ತು ಮೂಡ ನಂಬಿಕೆಗಳ ವಿರುದ್ದದ ಚಿಂತನೆಗಳನ್ನು‌ ಸದಾಕಾಲವೂ ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಸ್ನೇಹಿತರಿಗೆ ಅಲ್ಲದೇ ನಾಡಿನ ಜನರಿಗೆ ಭೋದಿಸಿದವರು ಲೋಹಿತಾಶ್ವರು..!

ಇಂತಹ ಲೋಹಿತಾಸ್ವರು ಕೊನೆಯ ಕಾಲದವರೆವಿಗೂ ತಮ್ಮ ಪ್ರಗತಿಪರ ಚಿಂತನೆಗಳಲ್ಲಿ ರಾಜಿ ಮಾಡಿಕೊಳ್ಳದೇ ಲೋಹಿತಾಸ್ವರು, ತಮಗಿಷ್ಟವಾದ, ತಮಗೆ ಸರಿ ಅನಿಸಿದ ರೀತಿಯಲ್ಲಿ ಅತ್ಯಂತ ಸರಳ ಬದುಕನ್ನು‌ ಒಪ್ಪಿಕೊಂಡು ಬಾಳಿದವರು..!

ತಮ್ಮ ಬದುಕಿನ ಕೊನೆಯ ಒಂದು ತಿಂಗಳು‌ ಸ್ವಲ್ಪ ಅನಾರೋಗ್ಯದಿಂದ ನರಳಿದ್ದನ್ನು ಬಿಟ್ಟರೆ, ಅತ್ಯಂತ ಆರೋಗ್ಯಕರವಾಗಿ, ಪ್ರಭಲವಾದ ಮಿದುಳು ಮತ್ತು ಮನಸ್ಸನ್ನು ಹೊಂದಿದ್ದ ಲೋಹಿತಾಸ್ವರು, ಇನ್ನಷ್ಟು ಕಾಲ ನಮ್ಮೊಟ್ಟಿಗೆ ಇರಬೇಕಿತ್ತು ಅನಿಸುತ್ತಿದೆ..!

ಆಯಿತು ಹೋಗಿ ಬನ್ನಿ ಅದ್ವಿತೀಯ, ಅಪ್ರತಿಮ, ಕಲಾವಿದ ಟಿ.ಎಸ್.ಲೋಹಿತಾಸ್ವರೇ..!


ಕೆ.ಶಿವು.ಲಕ್ಕಣ್ಣವರ

Leave a Reply

Back To Top