ಕಾವ್ಯಯಾನ

ಸಗ್ಗದ ಬಾಗಿಲು

ನಿರ್ಮಲ ಆರ್.

ವಸಂತಕೆ ಹೊಸ ಚಿಗುರು,ಹೊಸ ಯೌವ್ವನ
ನಿಸರ್ಗ ಸೌಂದರ್ಯಕೆ ಮನ ತಾಳಿತು ಮೌನ
ನಭದಲಿ ನಗುತಿಹನು ರವಿ
ಹಸಿರಿನಿಂದ ಕಂಗೊಳಿಸುತಿಹುದು ಭುವಿ

ಅಲ್ಲಲ್ಲಿ ಹಕ್ಕಿಗಳ ಇಂಚರ
ಸೃಷ್ಟಿಯೊಂದು ಬನದೇವಿಯ ಭವ್ಯ ಮಂದಿರ
ಇರುಳಲಿ ಉಲ್ಲಸಿತನಾದ ಚಂದಿರ
ತಾಯ ಕಂಕುಳಲಿರುವ ಕಂದನಿಗವನೇ ಸುಂದರ

ಕಪ್ಪು ಮೋಡವ ಹೊತ್ತುತರುವ ಮಳೆರಾಯ
ದುಯ್ ಎನ್ನುತ ತೊಳೆವ ಇಳೆಯ ಮೇಲಿನ ಕೊಳೆಯ
ಮಳೆಯ ಜಿನುಗಿಗೆ ನವಿಲ ನರ್ತನ ಕಂಡೆಯ
ಮನ ಅಚ್ಚರಿಗೊಂಡಿತು ಕಂಡು ಬನಸಿರಿಯ

ಪ್ರಕೃತಿ ಸೌಂದರ್ಯ ನೋಡುತಿರೆ
ಮೈ, ಮನ ವಿಹರಿಸಲು ಹೊರಟಂತೆ
ಬೇರೆಡೆ ಸಗ್ಗವ ಹುಡುಕ ಹೊರಡುವುದೆಂತು
ಸಗ್ಗದ ಬಾಗಿಲು ಇಲ್ಲಿಯೇ ತೆರೆದಂತೆ.

***************

Leave a Reply

Back To Top