ಮಹೇಶ್ ಹೆಗಡೆ ಹಳ್ಳಿಗದ್ದೆ ಕವಿತೆ-ಮನದ ಮಾತು

ಕಾವ್ಯ ಸಂಗಾತಿ

ಮನದ ಮಾತು

ಮಹೇಶ್ ಹೆಗಡೆ ಹಳ್ಳಿಗದ್ದೆ

ಮರೆಯಬೇಕು ಮನವೆ ನೀನು
ಎದೆಯಲಿರುವ ನೋವನೆಲ್ಲ
ತೆರೆಯಬೇಕು ಬೆಳಕಿನೆಡೆಗೆ
ಹೊಸತು ಹರಿದು ಬರಲಿ ಎಲ್ಲ

ಕಾಲಚಕ್ರ ಉರುಳುತಿರಲು
ಕಾಯಬೇಕು ತಾಳ್ಮೆಯಿಂದ
ಸಮಯ ಬರಲು ಸನಿಹ ಸರಿದು
ಹಾಯಬೇಕು ಧೈರ್ಯದಿಂದ

ಒಡೆದ ಒಲವಿನೆದೆಯ ಭಾವ
ಕೂಡಬೇಕು ಪ್ರೀತಿಯಿಂದ
ಸಿಡಿಲು ಬಡಿದ ಮೋಡ ಕರಗಿ
ಸುರಿಸಬೇಕು ಮಳೆಯನೊಂದ

ಉರಿಯಬೇಕು ಗುಡಿಯ ದೀಪ
ಗಾಳಿಮಳೆಗೂ ಆರದಂತೆ
ನಡೆಯಬೇಕು ಬದುಕ ದಾರಿ
ವಿಧಿಯ ನಿಯಮ ಮೀರದಂತೆ


ಮಹೇಶ್ ಹೆಗಡೆ ಹಳ್ಳಿಗದ್ದೆ

Leave a Reply

Back To Top