ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಬೆತ್ತಲಾಗುವ ಬಯಲು
ಜಯಂತಿ ಸುನಿಲ್
ಪ್ರತಿರಾತ್ರಿ ಗುನುಗುತ್ತಾಳೆ
ಸಿಗ್ನಲ್ ದೀಪದಡಿ ನಿಂತ ಹುಡುಗಿತನದ ಹೆಣ್ಣೊಬ್ಬಳು ಅದೇ ಹತಾಶೆಯ ಹಾಡನ್ನು…
ಕಳಚಿಕೊಳ್ಳುತ್ತಾಳೆ ದಿನದಿನವೂ ಪಾವಿತ್ರ್ಯದ ಪೊರೆಯನ್ನು…
ಅವಳ ಬದುಕೀಗ ಇರುಳುಗಳಲ್ಲಿ ಉರುಳು..!!
ಜೀವನದ ಮೊದಲ ಹಂತವೇ
ಕೊನೆಯಿರದ ಬೇಸಿಗೆ
ಕಂಬನಿ ಬಟ್ಟಲನ್ನಿಡಿದು ತುತ್ತು ಚೀಲವನ್ನೊರುವ ಶಿಲೆ..
ಸಾಗಿದ ಹಾದಿಗುಂಟ ಬರೀ ಕಲ್ಲುಮುಳ್ಳುಗಳೇ ಸರಮಾಲೆ..!!
ಕೊನೆ ಮೊದಲಿಲ್ಲದ ರಾತ್ರಿಗಳಲ್ಲಿ
ಬೆತ್ತಲಾಗುವ ಕಾಯ..
ಗೀರಿ ಹಚ್ಚಿದ ಬೆಂಕಿಯ ಕಿಡಿಯಂತ ಬಿಡಿಗಾಸು ತೋರಿಸಿ ಕುಕ್ಕಿ ತಿನ್ನುವ ನರಹದ್ದುಗಳಿಂದ ನಿರಂತರ ಗಾಯ..!!
ಹೂಗಳ ಕಡೆ ನೋಡಿ
ನಗುತ್ತಾಳೆ,ನುಡಿಯುತ್ತಾಳೆ
ಪೂಜೆಗೆ ನಿಮ್ಮಂತೆ ನಾನು ಸಲ್ಲಬೇಕಾದವಳು
ನೀವು ಹಗಲಲ್ಲಿ ಬಾಡಿದರೆ
ನಾ ಇರುಳಲ್ಲಿ ನಲುಗುವೆ
ಬೇರೇನಿದೆ ಬಾಳಲ್ಲಿ? ಬಾಳೆಲ್ಲಾ ಬರೀ ಇರುಳು..!!
ಅದೇ ಬೆಳಗು ಬೈಗು,ಅದೇ ನೋವು,ಅದೇ ಬಿರುಗಾಳಿ
ಖಾಲಿ ಕೊಡವಾಗಿ ತುಂಬಿಸಿಕೊಂಡು ಮತ್ತೆ ಖಾಲಿ ಖಾಲಿಯಾಗುವ ಭಾವ
ಕಾಯುತ್ತಾಳೆ ಹತ್ತಿರ ಬರುವ ರಾತ್ರಿಗಳಿಗೆ
ಏನು ಮಾಡುವುದು ಈ ಹಾಳು ರಾತ್ರಿಗಳು ಬಲುಸುಧೀರ್ಘ..!!
ತುತ್ತಿನ ಚೀಲ ತುಂಬಿಸಿಕೊಳ್ಳಲು ತನ್ನನ್ನೇ ಅರ್ಪಿಸಿಕೊಂಡವಳಿಗೆ
ಲೋಕ ನೀಡುವ ಬಿರುದು ಸಾಮಾನ್ಯದ್ದಲ್ಲಾ ನೋಡಿ..
ಮತ್ತದೇ ಕಾಯಕದಲ್ಲಿ ಕಾಯವನ್ನು..
ಲೋಕಕ್ಕಂಜದೇ ನೆಲದ ಮೇಲೆ ಊರುತ್ತಾಳೆ
ಸತ್ತಹೆಣಕ್ಕೆ ರಣಹದ್ದುಗಳ ಮುತ್ತಿಗೆ..
ಬಯಲು ಪುನಃ ಬೆತ್ತಲಾಗುತ್ತದೆ..!!
ಜಯಂತಿ ಸುನಿಲ್
ಜಯಂತಿ ಮೇಡಂ, ನಿಮ್ಮ ‘ಬೆತ್ತಲಾಗುವ ಬಯಲು’
ಕವಿತೆ ಓದಿ, ತಳಮಳಗೊಂಡೆ. ಧನ್ಯವಾದಗಳು, ಮೇಡಂ.
— ಪ್ರಭುರಾಜ ಅರಣಕಲ್
ಧನ್ಯವಾದಗಳು ಸರ್
ಅದ್ಭುತ ಕವನ ಅಭಿನಂದನ
ಧನ್ಯವಾದಗಳು ಸರ್
ಚೆನ್ನಾಗಿದೆ
ಧನ್ಯವಾದಗಳು ಸರ್
ಬಹಳ ಅರ್ಥವತ್ತಾಗಿದೆ ಮೇಡಮ್
ಧನ್ಯವಾದಗಳು ಸರ್
ಮನದಳಲು ತುಂಬಾ ಚೆನ್ನಾಗಿ ವ್ಯಕ್ತವಾಗಿದೆ…ಮನ ತಟ್ಟುವ ಸಾಲುಗಳು..
ಹಮೀದಾ ಬೇಗಂ ಸಂಕೇಶ್ವರ.
ವಾಸ್ತವದ ಅನಾವರಣ.