ಗಝಲ್

ಕಾವ್ಯಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಹೆರಳಿಗೆ ಕಾಮನ ಬಿಲ್ಲನ್ನು ಮುಡಿಸುವೆ
ನೀನೊಪ್ಪಿದರೆ
ಪಾದಕೆ ಮದರಂಗಿ ಮೆರಗು ಕೊಡಿಸುವೆ
ನೀನೊಪ್ಪಿದರೆ

ಬದುಕಿನ ಸಂತಸದ ಕ್ಷಣಗಳನ್ನು ತೊರೆದು
ಬಾಳಲೇನು
ತನುವಿಗೆ ರೇಷ್ಮೆ ಸೀರೆಯ ಉಡಿಸುವೆ
ನೀನೊಪ್ಪಿದರೆ

ಜಗವ ಸುತ್ತಿದರೂ ಸಿಗದಿರುವ ಅಮೂಲ್ಯ
ರತ್ನವಿದು
ನಲಿವ ಕರಗಳಿಗೆ ಹೊನ್ನಬಳೆ ತೊಡಿಸುವೆ
ನೀನೊಪ್ಪಿದರೆ

ವದನದಿ ಹಾಸಬೀರಿ ಸುಮ್ಮನೆ ಕೂಡಬೇಡ
ಗೆಳತಿ
ನಡೆವ ಹಾದಿಗೆಲ್ಲ ಚಿತ್ತಾರ ಬಿಡಿಸುವೆ
ನೀನೊಪ್ಪಿದರೆ

ಸ್ವರ್ಗದಲಿ ನಿಶ್ಚಯಿಸಿ ಒಂದಾದ ಒಲವಿನ
ಜೋಡಿಯಿದು
ಅಭಿನವನಿಂದ ಪ್ರೇಮಗೀತೆ ಹಾಡಿಸುವೆ
ನೀನೊಪ್ಪಿದರೆ


Leave a Reply

Back To Top