ರೂಪ ಮಂಜುನಾಥರವರ ಪ್ರಬಂಧ-ಒಂದ್ ಡೇ ವಿತ್ ಗಣಪ!

ಇತರೆ

ಒಂದ್ ಡೇ ವಿತ್ ಗಣಪ!

ರೂಪ ಮಂಜುನಾಥ

ಆ ದಿನ ಭಾದ್ರಪದ ಶುಕ್ಲದಾ ಚೌತಿ! ಬೆಳಗಿನಿಂದಲೇ ಮುದ್ದು ವಿನಾಯಕನನ್ನು ಸ್ವಾಗತಿಸಲು ಸಂಭ್ರಮದಿಂದ ಮಿಂದು ಮಡಿಯನುಟ್ಟು,ದೇವರ ಮನೆಯ ಮಾಡಿ ಅಚುಕಟ್ಟು,ಪೂಜಾ ಸಲಕರಣೆಗಳನ್ನು ಜೋಡಿಸಿಟ್ಟು, ಹೂ ಬಿಡಿಸಿಟ್ಟು,ಫಲತಾಂಬೂಲ ನೈವೇದ್ಯಕಿಟ್ಟೂ, ಗಣಪನಿಗೆ ಒಳ್ಳೆಯ ಪೀಠವಿಟ್ಟೂ, ಅಡಿಗೆಮನೆಗೆ ಹೆಜ್ಜೆಯಿಟ್ಟು,ನಮ್ಮ ಈಶಣ್ಣನ ಮಗ ಗಣಪ್ಪನ ಜೊತೆಗೆ ನಮ್ಮ ಮನೆಯಲಿರುವ ಗಣಪ್ಪನಿಗೆ( ನನ್ ಮಗನೂ ಸ್ವಲ್ಪ ಠೊಣಪನೇ) ಇಷ್ಟವಾಗುವ ಅಡಿಗೆಯ ತಯಾರಿಯಲ್ಲಿದ್ದೆ.ಅಪ್ಪ ಮಕ್ಕಳು ಎದ್ದು ಸ್ನಾನ ಮಾಡಿ ಪೂಜೆ ಮಾಡಲು ಸಿದ್ದವಾದರು. ನಮ್ಮ ಟ್ಯಾಬ್ ಗುರುಗಳನ್ನ “ ಸ್ವಾಮಿ ಬರ್ತೀರಾ”?ಅಂದಿದ್ದೇ ತಡ 4-G ಸ್ಪೀಡಿನಲ್ಲಿ “ಇದೋ ಬಂದೇ”, ಅಂತ “ಆಗಮಾರ್ಥಂತು ದೇವಾನಾಂ, ಗಮನಾರ್ಥ್ಂತು ರಾಕ್ಷಸಾಮ್”, ಅಂತ ಗಂಟೆ ಅಲ್ಲಾಡಿಸುತ್ತಾ ಬಂದೇಬಿಟ್ಟರು. ಇಬ್ಬರೂ ,ಸ್ವಾಮಿಗಳು ಆದೇಶಿಸಿದಂತೆ ,ಭಕ್ತಿಯಲ್ಲಿ ಪೂಜಿಸುತ್ತಿದ್ದರು. ಕೊನೆಯ ಭಾಗ ನೈವೇದ್ಯಕ್ಕೆ ಪೂಜೆ ಬಂದು ನಿಂತಿತು.”ಪಂಚಭಕ್ಷ್ಯ ಪರಮಾನ್ನಾಲನಿ ತೆಚ್ಚಿ ಪೆಟ್ಟಂಡಮ್ಮಾ”, ಅಂದರು. ಒಂದು ಬೆಳ್ಳಿಯ ತಟ್ಟೆಯಲ್ಲಿ ಆಗಿನ್ನೂ ಇಳಿಸಿದ್ದ ಬಿಸಿಬಿಸಿಯಾದ ಕಡುಬು, ಇಡ್ಲಿ ಹಾಗೆ ಹುಣಸೆಗೊಜ್ಜನ್ನ ಬಟ್ಟಲಿಗೆ ಹಾಕಿ, ಮೇಲಷ್ಟು ತುಪ್ಪ ಬಡಿಸಿ,ನಾನು ತರುವುದಕ್ಕೂ ತಲೆಬಾಗಿಲಿನ ಬಳಿ ಗಣಪ ಬರುವುದಕೂ ಸರಿಹೋಯಿತು. ಆಶ್ಚರ್ಯದಿಂದ ಕಣ್ಣರಳಿಸಿದೆ.”ಹಯ್ ಆಂಟೀ”, ಅಂತ ಕೈ ಬೀಸಿದ ಗಣಪ. ಮಾತು ಬರದೇ ಮೂಕಳಾಗಿ ನಾನು ಆಶ್ಚರ್ಯ ತುಂಬಿದ ಕಂಗಳಿಂದ ನನಗರಿವಿಲ್ಲದಂತೆಯೇ

 ಕೈ ಬೀಸಿದೆ. ಗಣಪನೇ,”ಕ್ಯಾನ್ ಐ ಕಮ್ ಇನ್ ಆಂಟಿ?”, ಅಂದ.ನಾನು ತಲೆ ಕೆರೆದುಕೊಳ್ಳುತ್ತಾ,ಸ್ವಗತದಲ್ಲಿ,ಛೇ, ನೀನೆಂಥ ಪೆದ್ದು!ಗಣಪನ ಒಳಗೆ ಕರೆಯೋಕೆ, ತೋಚಿಕೊಳ್ಳಲಿಲ್ಲವೆಂದು ಬೈದುಕೊಳ್ಳುತ್ತಾ,,”ಅಯ್ಯೋ ನನ್ನಪ್ಪನೇ ಬಾರಯ್ಯಾ,”ಅಂತ ಪ್ರೀತಿಯಾದರದಲ್ಲಿ ಬರಮಾಡಿಕೊಂಡೆ.ಒಳಗೆ ಬರ್ತಲೇ, ನಮ್ಮನೆಯವರನ್ನ “ಹಯ್ ಅಂಕಲ್”, ಅಂದು, ನಂತರ ನನ್ನ ಮಗನ ಕಡೆ ತಿರುಗಿ,”ಹಯ್ ಬ್ರೋ”, ಎಂದು ಕೈ ಆಡಿಸಿದ.ನನ್ನ ಮಗನೂ ಗಣಪನ ಹಗ್ ಮಾಡಿ, “ಟೇಕ್ ಯುವರ್ ಸೀಟ್ ಬ್ರೋ”ಅಂದ. ಗಣಪನಿಗಾಗೇ ಇಟ್ಟಿದ್ದ ಆಸನದಲ್ಲಿ ನಮ್ಮ ಗಣಪ ಆಸೀನನಾದ. ನಂತರ, ನೈವೇದ್ಯಕ್ಕೇಂತ ಇಟ್ಟಿದ್ದ ಹಣ್ಣಿನ ತಟ್ಟೆಯನ್ನ ಮತ್ತು ಪಂಚಭಕ್ಷ್ಯ (ಮಾಡಿದ್ರೇ ಮೂರ್ ಥರ)

ತಟ್ಟೆಯನ್ನ ಗಣಪನಿಗೆ ನೀಡಿದೆ.ಗಣಪ್ಪ, ಹಣ್ಣಿನ ತಟ್ಟೆಯನ್ನ ಕಣ್ಣೆತ್ತಿಯೂ ನೋಡದೆ ಪಕ್ಕಕ್ಕೆ ಸರಿಸಿಬಿಟ್ಟ. ನಾನು,”ಯಾಕಪ್ಪಾ? ಹೆಲ್ದಿ ಫುಡ್ ತಿನ್ಬಾರ್ದಾ?”, ಅಂದೆ. ಅದಕ್ಕೆ ಗಣಪ್ಪ,”ಅಯ್ಯೋ …….ಹೋಗಿ ಆಂಟಿ, ಈ ಹಣ್ಣುಕಾಯಿ ಸೊಪ್ಪುಸೆದೆ ನಮ್ಮೂರಲ್ಲಿ ತಿನ್ನೋದ್ ಇದ್ದಿದ್ದೆ.ಕೈಲಾಸ್ದಲ್ಲಿ ನಮ್ಗೆ ಬೇರೆ ಏನ್ ಆಪ್ಷನ್ ಇದೆ ಹೇಳೀ? ಒಂದ್ ಹೋಟ್ಲಾ? ದರ್ಶಿನೀನಾ?ಡಾಬಾನಾ?ಕಡೆಗ್ ಒಂದ್ ಪಾನೀಪೂರೀ ಗಾಡೀನೂ ಕಾಣೇ.”, ಅಂತ ಮುಖ ಪೆಚ್ಚಗೆ ಮಾಡ್ಕೊಂಡ.ನಾನು,”ಅಯೋ ಹೌದೇ? ನೀವ್ಗುಳ್  ಪಾಪ, ಯಾವ್ ಹೋಟ್ಲು, ಡಾಬಾ, ದರ್ಶಿನಿ ಯಾವ್ದೂ ಇಲ್ದೇ ಹೆಂಗಪ್ಪಾ ಸರ್ವೈವ್ ಆಗಿದೀರೀ?ಅಟ್ಲೀಸ್ಟ್ ನಿಮ್ ಮಮ್ಮೀ ಶರ್ವಾಣೀನೂ ಏನೂ ಮಾಡ್ಕೊಡಲ್ವಾ?”, ಅಂತ ಪಾಪದ ಗಣಪನ ಕೇಳಿದೆ. ಅದಕ್ಕೆ ಗಣಪ ಅಳುವುದೊಂದೇ ಬಾಕಿ. “ಎಲ್ಲಿ ಆಂಟೀ, ನಮ್ಮಮ್ಮ ಎಲ್ಲಿ ಫ್ರೀ ಇರ್ತಾಳೆ ಹೇಳೀ?ಅವಳಿಗೆಷ್ಟೋ ಅಪ್ಲಿಕೇಷನ್ ಗಳು, ರಿಕ್ವೆಸ್ಟ್ ಗಳು, ಇನ್ವಿಟ್ಷನ್ಗಳೂ, ಒಂದೇ ಎರಡೇ? ಇದ್ರ ಜೊತೆಗೆ ಕಪಲ್ಸ್ ನ ಇನ್ವೈಟ್ ಮಾಡ್ದಾಗ

ಅಪ್ಪನ ಜೊತೇಗೂ ಹೋಗ್ತಿರ್ಬೇಕೂ.ಅವ್ಳು ನಿಮ್ ಲೋಕದ ವರ್ಕಿಂಗ್ ವುಮೆನ್ ಗಿಂತ್ಲೂ ಬಾಳಾ ಬಿಸಿ.”, ಅಂತ ತನ್ ಗೋಳ್ನ ತೋಡ್ಕೋತಾ ತೋಡ್ಕೋತಾ, ತಿನ್ತಾ ಇದ್ದೋನು,ಏನೋ ಜ್ಞಾಪಕ ಬಂದಂತೆ,”ಆಂಟೀ, ಈ ತುಪ್ಪದ ಬದ್ಲಿಗೆ ನಿಮ್ಮೂರಿನ ಬೆಣ್ಣೆ ಹಾಕೋದಲ್ವಾ? ಹೊಳೆನರಸೀಪುರದ ಬೆಣ್ಣೆ ನಮ್ ಲೋಕದಲ್ಲೂ ಫೇಮಸ್”, ಅಂತ ಅಂದ.ಅದಕ್ಕೆ ನಾನು,”ಹೌದಾ? ತಂದೆ ಇರು ತಂದೆ”, ಅಂದು ಫ್ರಿಜ್ಜಿನಲ್ಲಿದ್ದ ಬೆಣ್ಣೆ ತಂದು ಬಡಿಸಿದೆ.ಗಣಪ,”ಆಹಾ! ಬಲು ರುಚಿಯಾಗಿದೆ.ಒಂದೆರೆಡು ಉಂಡೆ ಎಕ್‌ಸ್‌ಟ್ರಾನೇ ಹಾಕೀ ತೊಂದ್ರೆ ಇಲ್ಲ”, ಅಂದ.ನಾನು ಮನಸ್ನಲ್ಲೇ,”ಹೂ ಕಣಪ್ಪ ನಿಂಗೇನೂ ತೊಂದ್ರೆ ಇಲ್ಲ. ನಮ್ಮೂರಲ್ಲೀಗ ಹಸಿವಿನ ಬೆಣ್ಣೆ ಈಷ್ಟ್ ಗಾತ್ರದ ಉಂಡೆಗೆ ಇನ್ನೂರ್ ರೂಪಾಯಿ ದಾಟೋಗೈತೆ”, ಅಂತ ಹಣದುಬ್ಬರದ ಬಗ್ಗೆ ಅಬ್ಬರವಿಲ್ಲದೆ ಸಣ್ಣದಾಗಿ ನನಗೇ ಕೇಳುವಂತೆ ಹೇಳಿಕೊಂಡೆ.

 ಸಮರ್ಪಿಸಿದ ನೈವೇದ್ಯ ಸೇವಿಸತೊಡಗಿದ ಗಣಪ”ಇದೇನಾಂಟೀ, ಮೂರೇ ವೆರೈಟೀನಾ, ಇನ್ನೇನಾದ್ರೂ ಇದ್ಯೋ?ಇದಕ್ಕೆ ಫಿನಿಷ್, ಅಂದ್ಬಿಡ್ತೀರೋ”,ಅಂದ.ನಾನು,”ಅಯ್ಯೇ ಗಣಪ್ಪ ಡಯಟ್ಟು ಡಯಟ್ಟೂಂತ ಇದ್ನೇ ತಿನ್ನೋರಿಲ್ಲಾ. ಒಂದು ಮಾಡುದ್ರೆ ಫ಼್ಯಾಟೂಂತಾರೆ, ಇನ್ನೊಂದ್ ಮಾಡುದ್ರೆ ಕಾರ್ಬೋಹೈಡ್ರೇಟೂಂತಾರೆ, ಮತ್ತೊಂದ್ ಮಾಡುದ್ರೆ ಕೊಲೆಸ್ಟರಾಲೂಂತಾರೆ. ಇಷ್ಟೊಕೋಂದ್ ಸೂಕ್ಷ್ಮ ಆಗೋದ್ರೆ, ಏನೂಂತ ಮಾಡೋದೇಳೂ. ಅದುಕ್ಕೆ ಈಗ ಸಿಂಪಲ್ ಅಂಡ್ ಲೈಟ್ ರೆಸಿಪೀಗೆ ಚೇಂಜಾಗ್ ಬಿಟ್ಟಿದೀನೀ. ನಂಗೂ ಈಸಿ, ತಿನ್ನೋರ್ಗೂ ಈಸಿ.ಡಬಲ್ ಬೆನಿಫಿಟ್ಟೂ” ಅಂತ ಊರಗಲ ಹಲ್ಲ್ಗಿಂಜಿ ಹೇಳ್ದೆ.ಅದಕ್ಕೆ ಗಣಪ, ಮುಖ ದಪ್ಪಗೆ ಮಾಡಿಕೊಂಡು,”ಏ……ನೋ ಆಂಟಿ. ದಿಸ್ ಈಸ್ ನಾಟ್ ಫೇರ್! ಇದು ಇವತ್ತು ನಾಕ್ನೇ ಮನೆ.ಎಲ್ರೂ ಸಿಂಪಲ್ ಫುಡ್ ಅಂತ ಸಿಲ್ಲಿ ರೀಸನ್ ಕೊಟ್ಟು ಎಸ್ಕೇಪ್ ಆಗೋಕೆ ಶುರು ಹಚ್ಕೊಂಡಿದೀರಿ ಬಿಡಿ.ನಾನು ಈ ಎರಡೂ ಮತ್ತೊಂದು ಫುಡ್ ತಿನ್ನೋಕ್ ಅಷ್ಟಕೋಂದ್ ಲಾಂಗ್ ರೈಡ್, ಸಚ್ ಎ ಹಾರ್ಡ್ ಟೈಮ್ ಯೂ ನೋ? ಈ ಮೂಷಿಕನ್ ಜೊತೆ ಏಗ್ಕೊಂಡು, ಏರ್ಲಾರ್ದೆ ಏರ್ಕೊಂಡ್ ಆಲ್ ದ ವೇ

ಕೈಲಾಸ್ದಿಂದ ಬರ್ಬೇಕಿತ್ತಾ? ನಿಮ್ದೆಲ್ಲಾ ಟೂ ಮಚ್ ಆಯ್ತು ಬಿಡಿ. ಮೊದ್ಲೆಲ್ಲಾ ಎಷ್ಟು ವೆರೈಟ್ ಮಾಡಿ ಇಡ್ತಿದ್ರಲ್ಲಾ, ಅದಕ್ಕೇಂತಲೇ  ನಿಮ್ ಮನೆಗ್ ಬಂದ್ರೇ, ನೀವೂ……..ಬಾಳಾ ಡಿಸಪಾಯಿಂಟ್ ಮಾಡ್ಬಿಟ್ರೀ”, ಅಂತ ರಾಗ ಎಳೆದ.”ಅರೆರೆರೆ, ಏನ್ ಗಣಪ, ಬಂದಾಗ್ನಿಂದ್ಲೂ ವ್, ನೀನೂ ಕಂಗ್ಲೀಷ್ ಮಾತಾಡೋಕೆ ಸ್ಟಾರ್ಟ್ ಮಾಡ್ಬಿಟ್ಟಿದ್ದೀಯಲ್ಲಾ” ಅಂದೆ”, ಅದ್ದಕ್ಕವ,”ಏಸ್ ಆಂಟಿ. ಟೈಮ್ ಟು ಟೈಮ್ ಅಪ್ಡೇಟ್ ಆಗ್ಬೇಕಲ್ಲಾ. ನಮ್ ಸಾಫ್ಟ್ ವೇರ್ ಬ್ರೋ  ಗಳ ಜೊತೆ ಪ್ಯೂರ್ ಕನ್ನಡ ಮಾತಾಡಿದ್ರೆ ಅವ್ರಿಗೆ ಅರ್ಥವಾಗ್ಬೇಕಲ್ಲಾ?ಅಲ್ವಾ ಮಚ್ಚಾ?”, ಅಂತ ನನ್ನ ಮಗನ ಕಡೆ ನೋಡಿ ಕಣ್ಣು ಮಿಟುಕಿಸಿದ. ನನ್ ಮಗ,”ಥ್ಯಾಂಕ್ಸ್ ಬ್ರೋ, ಫಾರ್ ಅಂಡರ್ಸ್ಟಾಂಡಿಗ್ ಅವರ್ ಪ್ರಾಬ್ಲಂ”, ಅಂತ ಥಮ್ಸಪ್ ಮಾಡಿದ.

ನಾನು,”ಏ ಹೋಗ್ಲಿ ಬಿಡಪ್ಪಾ! ನೀನಾದ್ರೂ ಸ್ವಲ್ಪ ಹೆಲ್ತ್ ಕಾನ್ಷಿಯಸ್ ಆಗ್ಬೇಕ್ ಅಲ್ವೇನಪ್ಪಾ? ಹಿಂಗೇ ಆದ್ರೆ ಮುಂದೆ,ಒಬೆಸಿಟಿ, ಹಾಳೂ ಮೂಳೂಂತ, ಇಲ್ದಿದ್ ರೋಗವೆಲ್ಲಾ ಮುತ್ಕೊಳುತ್ತೆ! ಇನ್ನೂ ನಿನ್ಗೆ ಮದ್ವೇನೂ ಆಗಿಲ್ಲ. ಯು ಹ್ಯಾವ್ ಟು ಲುಕ್ ಸ್ಮಾರ್ಟ್ ಅಂಡ್ ಫಿಟ್ ಕಣಪ್ಪಾ! ನನ್ ಮಗ್ನಿಗೂ ದಿನಾ ಇದೇ ವಿಷ್ಯ ಹೇಳೀಹೇಳೀ ಸಾಕಾಗ್ ಹೋಗುತ್ತೆ”, ಅಂದೆ. ನಾನು ಹಂಗಂದಿದ್ದೇ ತಡ, ಸದಾ ವಾಹನಗಳ ಖಯಾಲಿನಲ್ಲೇ ಇರುವ ನನ್ನ  ದೀ…. ಬೆಸ್ಟ್  ಹಾಫು,”ಹೌದು ಗಣೇಶ್, ಈ ಓಲ್ಡ್ ಮಾಡಲ್, ಲೈವ್ ಮೌಸು ನಿಮ್ಗೆ ಟೂ ಸ್ಮಾಲ್!ಕಮಾನ್ ಅಪ್ ಡೇಟ್ ಏಸೇ! ನಿಮ್ ಪರ್ಸನಾಲಿಟಿಗೆ, ನಿಮ್ ಸ್ಟೇಟಸ್ ಗೆ  ಏನಿಲ್ಲಾದ್ರೂ ಒಂದೊಳ್ಳೆ ಹೈಯೆಂಡ್ ಆಡೀನೋ, ಬೆನ್ಜ಼ೋ,ಕೊನೆ ಪಕ್ಷ ಹಾರ್ಲೆ ಡೇವಿಡ್ಸನ್ ಬೈಕಾದ್ರೂ ಇಟ್ಕೊಂಡ್ರೆ ಯಾವುದಾದ್ರೂ ಪ್ರಪೋಸಲ್ಸ್ ಬರುತ್ತೆ.ಏ……ನಿಮ್ಗೇನ್ರೀ? ನಿಮ್ ಡ್ಯಾಡ್ ಕೈಲಾಸಕ್ಕೇ ಓನರ್ರು!”,ಅಂದ್ರು. ಗಣಪ್ಪ,ಎಲ್ರನ್ನೂ ನೋಡಿ ಸುಮ್ನೆ ನಕ್ಕು,”ನಿಮ್ಗೇನ್ರಪ್ಪಾ ಭೂಲೋಕ್ದವ್ರಿಗೆ ಕಾಸು ಕಮಾಯ್ಸೋಕೆ, ನನ್ ಹಬ್ಬಾನೂ ಸೇರ್ಕೊಂಡು ನೂರಾರ್ ದಾರಿ ಇದೆ, ಝಮ್ ಅಂತ ಖರ್ಚು ಮಾಡಿ ಮಜಾ ಮಾಡ್ತೀರಿ. ನಮ್ ಕಷ್ಟ ನಿಮ್ಗೇನ್ ಗೊತ್ತಾಗ್ಬೇಕೂ? ಅವರ್ ಕೈಲಾಸ್ ಈಸ್ ಎ ಗ್ರೇವ್ ಯಾರ್ಡ್ ಯುನೋ? ಜೊತೆಗೆ ನಮ್ಮಪ್ಪಾನೇ ಭಿಕ್ಷೆಗೆ ಹೋಗ್ತಾನೇ,ಅವನೇ ಇನ್ನೂ ಒಂದು ಎತ್ತಿನ್ ಗಾಡೀನೂ ಕೊಂಡ್ಕೊಂಡಿಲ್ಲಾ.

ಹಿಂಗಿದ್ದಾಗ ಯಾವ್ ಡೇವಿಡ್‌ಸನ್ ನ ನಂಗ್ ಕೊಡುಸ್ತಾನೆ ಹೇಳ್ರೀ?ಅದೇನೋ ಹೇಳ್ತಾರಲ್ಲಾ ದೇವಾನುದೇವತೆಗಳೇ ತರಗೆಲೆ ತಿಂತಾ ಇದ್ರೆ, ಭಕ್ತನೊಬ್ಬ ತಂಬಿಟ್ ವರ ಕೇಳುದ್ನಂತೆ! ಹಾಗಾಯ್ತು ಈ ಅಂಕಲ್ ಕತೆ”,

ಅಂತ ತಾನೇ ಗೊಣಗಿಕೊಂಡರೆ, ಮೂಷಿಕ “ಹೌದು ಸರ್, ನೀವ್ ಹೇಳಿದ್ ಬಾಳ ಒಳ್ಳೇದಾಯ್ತು. ನಾನೂ ಈ ಗಣಪ್ಪನ ಭಾರಾ ಹೊತ್ತೂಹೊತ್ತೂ ಮುದಿಯಾಗಿಬಿಟ್ಟಿದ್ದೀನಿ”, ಅಂತ ಹೇಳುವ ಭಾವವನ್ನು ತೋರಿತು.ಆಗ ನಾನೆಂದುಕೊಂಡೆ,ಅಯ್ಯೋ ಪಾಪ, ಇಲ್ಲಿ ಭೂಲೋಕದಲ್ಲಿ ಗಣಪ್ಪನ ಹಬ್ಬ ಬಂತೆಂದರೆ, ಗಣಪತಿ ಮೂರ್ತಿಗಳಿಗೆ, ಅಬ್ಬಬ್ಬಬ್ಬಾ! ಅದೇನ್ ವೈಭವ ಅದೇನು ಆಡಂಬರಾ?ಅದೇನ್ ಖರ್ಚೂ? ಆದರೆ ಕೈಲಾಸದಲ್ಲಿಯ ಜೀವನಾ……..?ಗಣಪನಾದರೂ ಯಾರಿಗೆ ಹೇಳಿಕೊಳ್ಳುತ್ತಾನೆ ಅವನ ಕಷ್ಟಾನಾ?ಅಯ್ಯೋ ಅದಕ್ಕೆ ಕಣ್ರೀ ಹೇಳೋದು. ದೇವಾದಿದೇವತೆಗಳಿಗೂ ಹಣೆಬರಹ ತಪ್ಪಿದ್ದಲ್ಲಾಂತಾ!

 ಪೂಜೆಗೆ ಬ್ರೇಕು ಕೊಟ್ಟು ಗಣಪ್ಪ ಮುಂದಿಟ್ಟ ತಿಂಡಿ ತಿನ್ನುವುದರಲ್ಲಿ ಇಷ್ಟೆಲ್ಲಾ ಮಾತು ಮುಗಿದು ನಿದ್ದೆ ಮಾಡ್ತಿದ್ದ ಸ್ವಾಮಿಗುಳ್ನ ಮತ್ತೆ ತಟ್ಟಿ ಎಬ್ಸಿದ್ದಾಯ್ತು. ನಮ್ ಸ್ವಾಮೀಜಿಗುಳು ಬಾಳಾ ಅಲರ್ಟು ಜೊತ್ಗೆ ಬಾಳಾಬಾಳಾ ಮೆಮೋರಿ ಜಾಸ್ತಿ ಎಲ್ಲಿಗ್ ಪೂಜೆ ನಿಲ್ಸಿದ್ರೋ, ಫಟ್ ಅಂತ ಅಲ್ಲಿಂದ್ಲೇ ಮುಂದುಕ್ ಮಂತ್ರ ಶುರು ಮಾಡುದ್ರು.ಕರ್ಪೂರ್ದಾರ್ತಿ, ಏಕಾರ್ತಿ, ಮೂರ್ ಕಣ್ಣಾರ್ತೀ, ಪಂಚಾರ್ತಿ ಎಲ್ಲಾ ಮಾಡಿ,

ಮುಂದಿನ ಪೂಜೆ ಮುಗಿಸಿ ಗಣಪನಿಗೆ ಆರತಿ ಮಾಡೋಕೆ ಹೇಳಿದ್ರು. ಮೊದ್ಲೇ ಗಣಪ ನಾನು ಅಪ್ಡೇಟ್ ಆಗಿದೀನೀಂತ ಹೇಳ್ಕೊಂಡಿದಾನೆ.ನಾನ್ ಮಾತ್ರ ಓಬೀರಾಯನ ಕಾಲದ ಮುತ್ತೈದೆಯಾಗಿ ಆರತಿ ಪದ ಹಾಡಿದ್ರೆ ಹೆಂಗೇ? ಅದಕ್ಕೆ ನಾನೂ ಒಂದು ಕಂಗ್ಲೀಷ್ ಆರ್ತಿ ಹಾಡ್ನ ಚಕಚಕಾಂತ ಕಟ್ಬಿಟ್ಟ ಪಟಪಟಾಂತ ಉದುರುಸ್ದೇ……

O my dear ಗಣಪ

o my dear ಗಣಪ

Eagerly waiting ನಿನಗೆ,

ಬಾರೋ ನಮ್ಮಪ್ಪಾ

 ಕಡುಬು and ಮೋದಕಾ

ಮಾಡಿರುವೆ ಸುಮುಖಾ

Fulfill ಮಾಡಯ್ಯಾ

 ನನ್ನ every ಕಾಯಕಾ

Bless me wisdom ಶ್ರೀಷಾ

My lord Son of ಈಶಾ

Give me one ಅವಕಾಶಾ

To  serve you ವಿಘ್ನನಾಶಾ

Pray ಮಾಡುವೆ ಬೆನಕಾ

Grace me o ವಿನಾಯಕಾ

Almighty ಏಕದಂತಾ

 love you o ಗಣನಾಥಾ

ಅಂತ ಆರತಿ ಎತ್ತಿ ಗಣಪನ ಬೇಡಿಕೊಂಡೆ.ಗಣಪ bless ಮಾಡ್ತಾ ಮಾಡ್ತಾ ಕಿಸಕ್ ಕಿಸಕ್ ಎಂದು ನಗುತ್ತಾ

,”ಅಲ್ಲಾ ಆಂಟಿ ಒಳ್ಳೊಳ್ಳೆ ಹಾಡ್ ಬರೀತೀರೀ. ಇದ್ಯಾವ್ದೂಂತ ಈ ಕಂಗ್ಲೀಷ್ ಹಾಡು ನನಗೇಂತ ಕಟ್ಕೊಂಡ್ ಬಂದ್ರೀ? ವಾಟ್ ಈಸ್ ಗೋಯಿಂಗ್ ಆನ್ ಹಿಯರ್ ಆಂಟೀ? ಐ ಆಮ್ ನಾಟ್ ಕ್ಲಿಯರ್,ಎವೆರಿಥಿಂಗ್ ಈಸ್ ವೇಗ್ ಹಿಯರ್”, ಅಂತ ಗೊಂದಲ ತುಂಬಿದ  ತಲೆಯನ್ನ ನಗಾಡುತ್ತಾ  ಅಡ್ಡಡ್ಡ ಅಲ್ಲಾಡಿಸಿದ. ನನಗ್ಯಾಕೋ ತುಂಬಾ ಅವಮಾನವಾದಂತಾಗಿ, ಫೀಲ್ ಆಯ್ತು.”ನನಗ್ ಮಾತ್ರ ಇದೆಲ್ಲಾ ಇಷ್ಟ್ವೇನೋ ಗಣಪಾ?ನೀನೇ ಹೇಳ್ದಲ್ಲಾ! ಅಪ್‌ಡೇಟ್ ಆಗ್ಬೇಕೂಂತಾ! ನಾನೂ ನಿಜವೇನೋ ಅಂತ ಕಷ್ಟ ಪಟ್‌ ಗಡ್ಬಿಡೀಲಿ ಕಟ್ದೆ. ಹೋಗ್ಲಿಬಿಡು ನೆಕ್‌ಸ್ಟ್ ಟೈಮು, ಪ್ಯೂರ್ ಕನ್ನಡದ ಸಾಂಗೇ ಸಿಂಗ್ ಮಾಡ್ತೀನೀ.ಹ್ಯಾಪೀನಾ ಗಣಪಾ”ಅಂತ ಹೇಳಿ, ನನ್ ಮೈಂಡಲ್ಲಿದ್ದಿದ್ದೂ ಹೇಳೇಬಿಟ್ಟೆ.”ನೀನೂ ಅಷ್ಟೇ ಕಣಪ್ಪಾ. ನನ್ ಆಂಟಿ ಅನ್ಬೇಡ! ಆಂಟಿ ಪದ ಹೃದಯಕ್ಕೆ ಮುಟ್ಟೋಲ್ಲ”, ಅಂತ ಮೂತಿ ಊದಿಸಿಕೊಂಡೆ. “ಸರಿ, ಹಂಗಾದ್ರೆ ಅಕ್ಕಾ ಅಂತೀನಿ ಬಿಡೀ, ನಿಮ್ಗೆ ಓಕೇನಾ”, ಅಂದ. ಖುಷಿ ಆಯ್ತು,” ಹೂ ಹಾಗೇ ಮಾಡು”,ಅಂದೆ. ಅವನಿಗೂ ಖುಷಿಯಾಯಿತು.

ಸ್ವಾಮಿಗುಳು ಪೂಜೆ ನೆರವೇರ್ಸಿದ್ ಮೇಲೆ,ಮತ್ತೊಂದ್ ಸಾರಿ ಅವ್ರನ್ ತಟ್ಟಿ ಮಲಗ್ಸಿದ್ದಾಯ್ತು.ಆದ್ರ ಆ ಸ್ವಾಮಿಗುಳು ಮಾತ್ರ ಬಾಳಾ ಪ್ರಿನ್ಸಿಪಲ್ಡ್ ಕಣ್ರೀ. ನಾವೇನೇ ಮಾತಾಡ್ಲೀ, ಅಡ್ ಬಾಯಿ ಹಾಕಲ್ಲಾ, ಅದ್ ಸರಿ, ಇದ್ ತಪ್ಪೂಂತ ಹೇಳಲ್ಲಾ, ನಿಮಗೆಂಗ್ ಬೇಕೋ ನೀವ್ ಮಾಡ್ಕೊಂಡೋಗಿ, ನನಗೆಂಗ್ ಬೇಕೋ ನಾನ್ ಏಳ್ಕೊಂಡ್ ಹೋಗ್ತೀನೀ”, ಅಂತ ತಮ್ ಕೆಲ್ಸ ಏನಿದ್ಯೋ ಅದ್ನ ಯಾವ್ ಲೋಪದೋಷ ಇಲ್ದೇ ಮುಗ್ಸಿಕೊಡ್ತಾರೆ! ಎದ್ದು ಅಡಿಗೆ ಮನೆಗೆ ಹೊರಟು ಎಲ್ಲರಿಗೂ ತಿನ್ನೋಕೇಂತ ಇನ್ನೊಂದ್ ಇಬ್ಬೆ ಇಡ್ಲಿ ಇಟ್ಟೆ. ಹಾಲಿನಲ್ಲಿ ಮೂವರೂ ಕರೆಂಟ್ ಹೋಗಿದ್ರಿಂದ ಟಿವಿ ಸೌಂಡ್ ಇಲ್ದೇ ನಮ್ ದೇಶದ ಕರೆಂಟ್ ಅಫೇರ್ಸ್ ಬಗ್ಗೆ ಮಾತಾಡ್ತಾ ಕೂತಿದ್ರು.ಪಕ್ಕದ ಮನೆಯ ಕ್ಯಾಟು ಮಾಡ್ತಿದ್ದ ಮಿಯಾವ್ ಮಿಯಾವ್ ಸದ್ ಕೇಳಿ ಗಣಪನ ಪೂರ್ ವೆಹಿಕಲ್ ರ್ಯಾಟು ಹೋಗಿ ಸೋಫಾದ ಸಂದಿಯಲ್ಲಿ  ಸೇರಿಕೊಂಡಿತ್ತು.ಬಿಸಿಬಿಸಿ ಇಡ್ಲಿ, ಕಡುಬು ಒಂದು ತಟ್ಟೆಗೆ ಹಾಕಿ ನನ್ನ ಮಗ ಗಣಪನಿಗೆ ಮತ್ತೊಂದು ಸರಿ ಆಫರ್ ಮಾಡಿದ.ಗಣಪ,”ನೋ ಮಚ್ಚಾ,ಜಸ್ಟ್ ನೌ ಐ ಹ್ಯಾಡ್ ಮೈ ಬ್ರೇಕ್ಫಾಸ್ಟ್. ಯು ನೋ,”ಅಂದ. ಅದಕ್ಕೆ ನಮ್ ಗಣಪ,”ಐ ನೋ ಬ್ರೋ,  ನಮ್ಗೆ ಕಂಪನಿ ಕೊಡಪ್ಪಾ. ಅದು ಜಸ್ಟ್ ನೈವೇದ್ಯ.“ಅಂದಿದ್ದಕ್ಕೆ ಗಣಪಾನೂ ಪ್ರೀತಿಯ ಆಬ್ಲಿಗೇಷನ್ ಗೆ ಬಿದ್ದು ಮತ್ತೊಂದ್ ರೌಂಡ್ ತಿಂಡಿ ತಿಂದು,”ನಾನು ಹೊರಡ್ತೀನಕ್ಕಾ”, ಅಂದ. ಅದಕ್ಕೆ ನಮ್ ಮನೆ ಗಣಪ,”ಏನ್ ಬ್ರೋ, ಪ್ರತೀ ಸರೀ ನಮ್ಗೂ ಆಫೀಸ್ ಇರುತ್ತೆ. ಊರಿಗ್ ಬರೋಕೆ ಆಗ್ತಿರ್ಲಿಲ್ಲ. ಈ ಸರಿ ಪಾರ್ಚುನೇಟ್ಲೀ ನಾನೂ ಇದೀನಿ. ನೀನು ಬಂದಿದೀಯ. ಪ್ಲೀಸ್ ಇವತ್ ನಂಜೆೊತೆ ಟೈಮ್ ಸ್ಪೆಂಡ್ ಮಾಡು ಬ್ರೋ. ನನ್ಗೂ ವರ್ಕ್ ಫ್ರಮ್ ರೂಮೂಂತ ರೂಮಲ್ಲೇ ಸೇರ್ಕೊಂಡು ಒಳ್ಳೆ ಜೈಲಿನ್ ಲೈಫ್ ತರ ಆಗೋಗಿದೆ ಜೀವ್ನ.”ಅಂತ ಗೋಗರೆದುಕೊಂಡಿದ್ದಕ್ಕೆ ಕರುಣಿಸಿ “ಅಸ್ತೂ”ಅಂದೇಬಿಟ್ಟ. ನನಗೂ ಬಲು ಖುಷಿಯಾಯ್ತು.ಸೋಫಾ ಸಂದೀಲಿದ್ ಮೂಷಿಕನಿಗೆ ನನಗಿಂತ್ಲೂ ಖುಷಿ ಆಯ್ತು.”ಸಧ್ಯ, ಭಾರ ಹೊತ್ಕೊಂಡ್ ಮತ್ತೆ ಊರೆಲ್ಲಾ ಸುತ್ತೋದಕ್ಕೆ ಸ್ವಲ್ಪ ರೆಸ್ಚ್ ಸಿಕ್ತೂ”ಅಂತ ಅಲ್ಲೇ ಸೋಫಾ ಕೆಳ್ಗೆ ಚಪ್ಪಾಳೆ ತಟ್ಕೊಂಡ್ ತಕತಕ ಕುಣೀತಾ ಇತ್ತು.

     “ಕಮ್ ಬ್ರೋ,  ಟೈಮಾಯ್ತು. ನಾನು ವರ್ಕ್ ಮಾಡ್ತಿರ್ತೀನಿ. ನೀನು ಬೇಕಿದ್ರೆ ಒಂದ್ ರೌಂಡ್ ಆರಾಮ್ ಸೆ ನಿದ್ದೆ ತೆಗೀ”, ಅಂತ ನಮ್ ಗಣಪ, ಗಣಪನನ್ನ ಕರೆದ್ಕೊಂಡು ಮೇಲಿದ್ದ ತನ್ನ ಕೋಣೆಗೆ ಕರೆದುಕೊಂಡು ಹೋದ. ಇನ್ನು ನಮ್ಮ ಮುಗಿಯದ ಕೆಲಸಗಳ ಕಡೆಗೆ ಮುಗಿಸಲು ನಾನು ಹೊರಟೆ.ಒಂದು ಗಂಟೆ ಗಡದ್ದಾಗಿ ನಿದ್ದೆ ತೆಗೆದ ಗಣಪ ಕೆಳಗಿಳಿದು ಬಂದ. ನಾನು,”ಗಣಪ, ನಿದ್ದೆ ಆಯ್ತಾಪ್ಪಾ?”, ಅಂದೆ. “ ಹೂನಕ್ಕಾ ಆಯ್ತು,”ಅಂದು,”ಏನಾದರೂ ಸ್ನಾಕ್ಸ್ ಇಟ್ಟಿದ್ದೀಯೇನಕ್ಕಾ?”, ಅಂದ.ನಾನು ಮೊನ್ನೆ ತಾನೇ ಆಗಿದ್ದ ಕಲ್ಯಾಣೋತ್ಸವದ ಪ್ರಸಾದ,  ಹಾಗೆ ಮದುವೆಯ ಮನೆಯವರು ಕರೆಯಲು ಬಂದಾಗ ತಂದುಕೊಟ್ಟ ಚಕ್ಕುಲಿ ಪ್ಯಾಕೆಟ್ ತೆಗೆದು ಒಂದು ತಟ್ಟೆಯಲ್ಲಿ ಲಾಡೂ,ನಿಪ್ಪಟ್ಟು, ಚಕ್ಕಲಿ,ತೇನ್ತೊಳೆ ಇಟ್ಟು ಒಂದು ಪುಟ್ಟ ಬಟ್ಟಲಲ್ಲಿ  ಚಟ್ನಿಪುಡಿಗೆ ಮೊಸರು ಹಾಕಿ ಕಲೆಸಿ ಕೊಟ್ಟೆ.ತಿನ್ನುತ್ತಾ “ವ್ಹಾ ವ್ಹಾ”, “ ಭಲೆ ಭಲೆ “, ಎಂದು ಆಸ್ವಾದಿಸುತ್ತಿದ್ದರೆ, ಚಕ್ಕುಲಿ,ನಿಪ್ಪಟ್ಟಿನ ವಾಸನೆಗೆ ಆಯಾಸದಿಂದ ನಿದ್ದೆ ತೆಗೆಯುತ್ತಿದ್ದ ಮೂಷಿಕ ಮಹಾಷಯ ಚಕ್ ಅಂತ ಎಚ್ಚರಗೊಂಡು,ವಾಸನೆ ಮೂಸುತ್ತಾ ಮೂಸುತ್ತಾ ಮೈಮುರಿದುಕೊಂಡು ಸೋಫಾ ಸಂದಿ ಬಿಟ್ಟು ಮೆಲ್ಲನೆ ಆಚೆ ಬಂದ. ಗಣೇಶ ಮೂಷಿಕನನ್ನು ನೋಡುತ್ತಲೇ,”ಬಾರಯ್ಯ ದೊರೆ.ನನ್ಗೆ ಗೊತ್ತಿತ್ತು, ಈ ಸ್ಮೆಲ್ ಗೆ ನೀನೆಲ್ಲಿದ್ರೂಬರ್ತೀಯಾಂತ.

ನಾನು ಸೇಫಾಗಿರ್ಬೇಕೂಂದ್ರೆ ನೀನ್ ಮೊದ್ಲು ಚೆನ್ನಾಗಿರ್ಬೇಕು.”, ಅಂತ, “ಅಕ್ಕ, ಅವ್ನಿಗೂ ಎಲ್ಲಾ ವೆರೈಟಿ ಇಟ್ ಕೊಡಕ್ಕಾ”, ಅಂದ.ನಾನು ಒಂದು ಬಟ್ಟಲಲ್ಲಿ ಎಲ್ಲ ಅಷ್ಟಷ್ಟು ಮುರಿದು ಹಾಕಿ ತಂದು ಮೂಷಿಕನ ಮುಂದಿಟ್ಟೆ. ಕಟಕಟ ತಿನ್ನಲು ಶುರುಮಾಡಿಯೇ ಬಿಟ್ಟಿತು.”ಏನ್ ಪುಣ್ಯವಂತರಕ್ಕಾ ನೀವು ಮನುಷ್ಯರೂ. ತಿನ್ನೋಕೂ, ತಿರ್ಗೋಕೂ,ಪ್ರತಿಯೊಂದುಕ್ಕೂ ಏನ್ ವೆರೈಟಿ? ಏನ್ ಟೇಸ್ಟೀ!ಅಬ್ಬಬ್ಬಬ್ಬಾ! ನಮ್ ಲೋಕ್ದಲ್ಲಿ ಏನೇನೂ ಕಾಣೆ ಕಣಕ್ಕಾ! ಛೇ ಬೇಜಾರಾಗಿ ಹೋಗಿದೆ.ಒಂದೊಂದ್ ಸರಿ ಬರೋವಷ್ಟರಲ್ಲಿ ಅದೆಂತೆಂಥದ್ದೋ ಹೊಸ ನಮೂನೆ ಫುಡ್ಗುಳು ಫುಟ್ ಪಾತಲ್ಲಿ ನೋಡ್ತಿರ್ತೀನಿ.ಐ ವಂಡರ್, ಅದೇನು ಈ ಮನ್ಷುರ್ಗೆ ನಮ್ ಬ್ರಹ್ಮ ಅಂಕಲ್ ತಲೆಗೆ ತುಂಬಿ ಕಳಿಸಿರ್ತಾರೋ ಐ ಡೋನ್ಟ್ ನೋ!”, ಅಂದು “ಹೆಂಗಿದೇ ಗುರೂ ಸ್ನಾಕ್ಸೂ?”, ಅಂತ ಮೂಷಿಕನ ಕಡೆ ತಿರುಗಿ ಕೇಳಿದ ಗಣೇಶ.ಅದಕ್ಕೆ ಮೂಷಿಕ.”ಕೇಳ್ತೀಯಲ್ಲಾ ಗುರೂ, ಈ ಹಾಳ್ ತಿಂಡಿ ಆಸೆಗ್ ಆಸೆಬಿದ್ ತಾನೇ ನಮ್ ಖಾನ್ದಾನ್ ಎಲ್ಲ, ನಿರ್ವಂಶ ಆಗ್ತಿರೋಜು?ಏನ್ಮಾಡೋದ್ ಹೇಳಪ್ಪಾ,ನಮ್ ವೀಕ್ನೆಸ್ಸೇ ನಮ್ಮನ್ನ ಡೆಸ್‌ಟ್ರಾಯ್ ಮಾಡೋದು. ನಿಜ ತಾನೇ?”, ಅಂತ ಆಧ್ಯಾತ್ಮ ಬೋಧಿಸಿತು. ಸರಿ, ಇಬ್ಬರೂ ತಿಂದು ಮುಗಿಸಿ ಡರ್ ಅಂತ ತೇಗಿದರು. ನಾನು,”ಹೋಗ್ಲಿ ಹೋಗಪ್ಪಾ ಗಣೇಶ, ಹಂಗೇ ಮನೆ ಮುಂದಿರೊ ಎರ್ಡು ಬೀದಿ ಸುತ್ತಾದ್ರೂ ಹಾಕೊಂಬಾರೋ. ತಿಂದಿದ್ ಅರ್ಗುತ್ತೆ”,ಅಂದೆ.ಅದಕ್ಕೆ ಮೈ ಮುರಿಯುತ್ತಾ,”ಏ….ಹೋಗಕ್ಕಾ. ಅದೇನ್ ಬೀದಿ ಕುಲ್ವಾ? ಕೆಸುರ್ ಗದ್ದೆ ಯಾವ್ದೂ,ರಸ್ತೆ ಯಾವ್ದೂಂತ ತಿಳೀತಾ ಇಲ್ಲಾ!ಈ ರಸ್ತೆಗುಳಲ್ಲಿ ಅದ್ಯಾವ್ ನಂಬ್ಕೆ ಮೇಲೆ ಓಡಾಡ್ಕೊಂಡು ಜೀವ್ನಾ ಮಾಡ್ತಿದೀರೋ? ಓ ಮೈ ಪಾಪಾ”, ಅಂದ. ಅದಕ್ಕೆ ನಾನು,“ಇನ್ನೇನ್ಮಾಡೋದೋ ಯಪ್ಪಾ! ಎಲ್ಗಾದ್ರೂ ಹೋಗ್ಬೇಕೂಂದ್ರೆ ಏನ್ ನಮ್ ಹತ್ರ ಪುಷ್ಪಕ ವಿಮಾನವಾ ಇದೇ?“ಅಂದೆ ಮುಖ ಸಪ್ಪಗೆ ಮಾಡಿಕೊಂಡು. ಅಷ್ಟರಲ್ಲಿ ನಮ್ಮನೆ ಗಣಪ ಲಂಚ್ ಬ್ರೇಕೂಂತ ಬಂದ ನಾನು ಸ್ವಲ್ಪ ಸಲಾಡ್, ಫ್ರೂಟ್ ಮಿಕ್ಸ್ ಮಾಡಿ ಇಟ್ಟಿದ್ದೆ, ಅವನಿಗೆ ಕೊಟ್ಟು, ಗಣಪನ ಕಡೆ ನೋಡಿದೆ. ಅವ,”ಏ…..ಬೇಡಪ್ಪಾ, ಈಗ್ ತಾನೇ ಭರ್ತಿ ಕುರುಕುಲನ್ನ ಕುರುಕಿದೀನಿ”, ಅಂದ. ಅದಕ್ಕೆ ನನ್ ಮಗ,”ಹ್ಯಾವ್ ಇಟ್ ಬ್ರೋ , ದಿಸ್ ವಿಲ್ ನಾಟ್ ಆಡ್ ಎನಿ ಕ್ಯಾಲೋರಿಸ್. ಐ ಪ್ರಾಮಿಸ್. ನಮ್ ಜಿಮ್ ಟ್ರೇನರ್ ಅಶೂರೆನ್ಸ್ ಕೊಟ್ಟಿದ್ದಾರೆ. ಬೇಕಾದ್ರೆ ಸಂಜೆ ಹೋಗೋಣ ಬನ್ನಿ ಕೇಳುಸ್ತೀನಿ.”ಅಂದ.ಅದಕ್ಕೆ ಗಣಪ,”ಇಟ್ಸೋಕೆ ಬ್ರೋ. ಐ ಟ್ರಸ್ಟ್ ಯೂ”, ಅಂತ ಫಲಾಹಾರ ಸೇವಿಸುತ್ತಾ ಕೂತಿದ್ರೆ, ಮೂಷಿಕ ಸಣ್ಣಗೆ,”ಸ್ವಲ್ಪ ನಿಮ್ ಟಮ್ಮಿಗೆ ರೆಸ್ಟ್ ಕೊಡಿ ಗುರೂ.ಇಲ್ದೋದ್ರೆ, ನಿಮ್ ಟಮ್ಮಿಗೆ ಸುತ್ಕೊಳೋಕೆ ಈಗಿನ ಭೂಲೋಕದಲ್ಲಿ ನಿಮ್ಗೆ ಆಗ್ ಸಿಕ್ಕಂಗೆ ಯಾವ ಸರ್ಪೆಂಟ್ ಬೆಲ್ಟೂ ಬೇಗ ಸಿಗಲ್ಲ”, ಅಂತ ಎಚ್ಚರಿಸಿದ.ಅದಕ್ಕೆ ನಮ್ ಗಣಪ.”ಅರೇ ನೋ ವರೀಸ್ ಬ್ರೋ.ವಿಲ್ ಗಿವ್ ಯೂ ಮೈ ಬೆಲ್ಟ್.ಓಕೆ.ಟಾಮಿ ಹಿಲ್ಫಿಗರ್ ದು.ಸ್ಟ್ರಾಂಗರ್ ದ್ಯಾನ್ ಯುವರ್ ಲೈವ್ ಬೆಲ್ಟ್”, ಅಂತ ಅಶೂರೆನ್ಸ್ ಕೊಟ್ಟಮೇಲೆ, ಗಣಪ ಫಲಾಹಾರ ಸೇವಿಸುತ್ತಾ,”ಏನೇ ಆಗ್ಲಿ ಬ್ರೋ, ಈ ಸ್ಟ್ರೀಟ್ ಫುಡ್ ನಲ್ಲಿರೋ ವಾ…ವ್ ಎಲುಮೆಂಟು ಈ ಸಾಲಡ್,ಪಾಲಾಡ್ ನಲ್ಲಿ ಸಿಗಲ್ಲ. ಯೂ ನೋ”,ಅಂದ ಅದಕ್ಕೆ ಮೂಷಿಕ,”ಗುರೂ ನಿನ್ ದಮ್ಮಯ್ಯ ಸದ್ಯ ಸ್ಟ್ರೀಟ್ ಫುಡ್ ಸುದ್ದಿಗ್ ಮಾತ್ರ ಹೋಗ್ಬೇಡಪ್ಪೋ, ನಿಮ್ಮಮ್ಮಿ ಮೊದ್ಲೇ ನಂಗ್ ಆರ್ಡ್ರು ಮಾಡಿ ಕಳಿಸಿದಾರೆ, ಗಣಪ ಫುಟ್ಪಾತ್ ನಲ್ಲಿ ಏನೇ ತಿನ್ನೋಕೇಂದ್ರೂ ನೀನು ನಿಲ್ಕೂಡ್ದೂಂತ. ಹಂಗೇನಾದ್ರೂ ನೀವ್ ತಿಂದ್ರೆ ನಾನು ಆ ತಾಯೀದೂ ಭದ್ರಕಾಳಿ ರೂಪಾನ ನೋಡ್ಬೇಕಾಗುತ್ತೆ”,ಅಂತ ಕೈ ಮುಗಿದು ಬೇಡಿಕೊಳ್ಳುತ್ತಾ ಎರಡೇ ಕಾಲಿನಲ್ಲಿ ನಿಂತುಕೊಂಡ. ಅದಕ್ಕೆ ನನ್ ಮಗ,”ಈ ಮಮ್ಮಿಗಳು ಎಲ್ಲಿದ್ರೂ ಒಂಥರಾ ಯೂನಿವರ್ಸಲ್ ಡಿಕ್ಟೇಟರ್ಗುಳಿದ್ದಂಗೆ ಬ್ರೋ.ನಮ್ಮ ಮಮ್ಮೀದೂ ಇದೇ ಟ್ಯೂನೂ. ಆದ್ರೆ ನಮ್ ಬಗ್ಗೆ ಗೊತ್ತಲ್ಲಾ , ಅವ್ರು ಮ್ಯಾಟ್ ಕೆಳಗಿ ತೂರುದ್ರೆ ನಾವು ಅಂಡರ್ ಪಾಸ್  ಒಳಗೆ ತೂರೋರು.ಏನೋ ರೀಸನ್ಸ್ ಕೊಟ್ಕೋಂಡ್ ಈವಿನಿಂಗ್           ಒಂದ್ ರೌಂಡು ಮುಗ್ಸೇ ಬರೋದು”,ಅಂತ ಹೆಮ್ಮೆಯಿಂದ ಹೇಳಿಕೊಂಡ.ನನಗೆ ರೇಗಿಕೊಂಡು ಬಂತು,”ಅದನ್ನೇನ್ ಅಷ್ಟು ಬಿಲ್ಡಪ್ ಕೊಟ್ಕೊಂಡ್ ಹೇಳ್ಕೊಂತೀಯೋ ಮೂದೇವೀ”,ಅಂತ ಅವ್ನ ಮುಖಕ್ಕೆ ತಿವಿದು, ನನ್ ಕೆಲಸಕ್ಕೆ ಹೋದೆ.ಸಂಜೆ ಕೆಲಸ ಮುಗಿಸಿದ ನಮ್ ಮನೆ ಗಣಪ, ನಮ್ ಮನೆಗೆ ಬಂದ ಗೆಸ್ಟು ಗಣಪನ ಜಿಮ್ಮಿಗೆ ಕರ್ಕೊಂಡು ಹೋಗ್ತೀನೀಂತ ಹೋದ. ಜಿಮ್ಮು ಅಂತ ಕೇಳಿದ್ದೇ ಸೈ, ಒಳಗಿದ್ದ ಮೂಷಿಕ,”ಬರಿ ಓಳೂ ಬರಿ ಓಳೂ”, ಅಂತ ಉಪೇಂದ್ರನ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡತೊಡಗಿದ್ದವನನ್ನ ನೋಡಿ ಗಣಪನಿಗೆ ಪಿತ್ತ ನೆತ್ತಿಗೇರಿತು.ದಡದಡ ವಾಪಸ್ಸು ಬಂದವನೇ,ಮೂಷಿಕನ ತಲೆ ಮೇಲೊಂದು ಜೋರಾಗಿ ಮೊಟಕಿ,”ಎಲವೆಲವೋ ಮೂಷಿಕ, ನೀನ್ ನೋಡ್ಕಾ ನಿನ್ ಕಾಯಕ”, ಅಂತ ಹೇಳಿ ಬಿರಬಿರನೆ ನಮ್ ಗಣಪನ ಜೊತೆಗೆ ಆಚೆ ಗಾಡಿಯಲ್ಲಿ ರೈಡ್ ಹೊರಟ.ಪಾಪ, ಮೂಷಿಕನ ನೆತ್ತಿ ಹೋಗಿ ಹಲ್ಲಿಗಂಟಿಕೊಂಡ್ ಮಾಷಿಕನ ಮೂತಿಯ ಶೇಪೇ ಬದಲಾಗಿಹೋಯ್ತು!

      ಸಂಜೆ ಮನೆಗೆ ಬಂದ್ರಾ, ನಾನು ಗಣಪನ್ನ ಸಂಜೆ ಆರತಿ, ನೈವೇದ್ಯಕ್ಕೆ ಪಂಚಕಜ್ಜಾಯಕ್ಕೆ ಸರಿ ಮಾಡ್ತಿದ್ದೆ.ಏಳೇಳೂವರೆ ಆಗಿರ್ಬೋದು, ನಮ್ ಬೀದೀ ಪಡ್ಡೆ ಹುಡುಗ್ರು ಇಟ್ಟಿದ್ದ ಗಣಪನಿಗೆ ಭಾರೀ ಉತ್ಸವ, ಭರ್ಜರಿ ಡಿಜೆ, ಪಟಾಕಿ ಪ್ರದರ್ಶನ ಮಾಡಿಕೊಂಡು, ಕುಣಿದಾಡುತ್ತಾ ನಮ್ ಮನೆ ಮುಂದೇನೇ ಹೊಳೆ ಕಡೆಗೆ ವಿಸರ್ಜನೆಗೇಂತ ಹೊರಟರು.”ಆ ಹಾಳು ಡಿಜೆ ದಡಾರ್ದಡಾರ್ ಬೀಟುಗಳಿಗೆ ನಮ್ ಹಾರ್ಟು ಡಮಾರ್ ಅಂದೋಗುತ್ತೆ.ನೀನ್ ಇವ್ರ ಕಾಟ ಹೆಂಗಪ್ಪಾ ತಡ್ಕೋತೀಯಾ”, ಅಂತ ಗಣಪನಿಗೆ ಅಂದೆ. ಅದಕ್ಕವ,”ಅಯ್ಯೋ ಇದ್ಯಾವ್ ಸೌಂಡೂಂತ ಹೆದ್ರಿಕೊಳ್ಳಿ ಹೇಳಕ್ಕಾ. ನಮ್ ಡ್ಯಾಡಿ ಡಮರುಗ ಹಿಡ್ದು ತಾಂಡವಕ್ಕೆ ನಿಂತ್ರೆ ಕೈಲಾಸವೇ ಅದ್ರಿ ಹೋಗುತ್ತೆ. ನಮ್ಮಮ್ಮಿ ವೆಹಿಕಲ್ಲೂ ಶಿವರ್ ಮಾಡ್ತಾ ಬೆಕ್ಕಿನ ಥರ ಥರಥರ ನಡುಗ್ತಾ ಬಂಡೆ ಸಂದೀಲಿ ಕೂತ್ಬಿಡುತ್ತೆ”, ಅಂತ ಗಹಗಹಿಸಿ ನಕ್ಕ. ನಾನು ಆಶ್ಚರ್ಯದಿಂದ,”ಆ…ಹೌದಾ? ಅದೂ ಸರಿನೇ. ಶಿವಪ್ಪನ ಡಾನ್ಸೂಂದ್ರೆ ರುದ್ರತಾಂಡವ ತಾನೇ”, ಅಂತ ಬಾಯಮೇಲೆ ಬೆರಳಿಟ್ಕೊಂಡೆ.ಉತ್ಸವ ಹತ್ರ ಬರ್ತಾ ಬರ್ತಾ ನಮ್ ಮನೆ ಕಿಟಕೀ ಗಾಜುಗಳೆಲ್ಲಾ ಡರಾ ಡರಾ ಅಂತ ಅದ್ರೋಕೆ ಶುರುವಾದವು.”ಬನ್ನಿ ಬ್ರೋ, ಹೋಗಿ ನೋಡೋಣ”,ಅಂತ ಗಣಪನ ಭುಜದ ಮೇಲೆ ಕೈ ಹಾಕಿ ನಮ್ ಮನೆ ಗಣಪ, ಗಣಪನನ್ನ ಆಚೆಗೆ ಕರೆದುಕೊಂಡು ಹೋಗುವಾಗ,”ನೀವು ಬನ್ನಿಸರ್”,ಅಂತ ಮೂಷಿಕರಾಜನನ್ನೂ ಕರೆದ. ಅದಕ್ಕವರು, ಕೈ ಮುಗಿದು, “ನೀವು ಹೋಗಿ, ನಾನಿಲ್ಲಿ ಸಂದೀಲಿ ವಿಶ್ರಾಂತಿ ತಗೋತೇನೆ”, ಅಂತ ಹೇಳಿ ಕಳಿಸಿಕೊಟ್ಟಿತು. ಇಬ್ಬರೂ ಆಚೆಗೆ ಹೋದರು. ಡಿಜೆಯಲ್ಲಿ ಗಣಪನ ಮುಂದೆ ಎಲ್ಲಾ ಹುಡುಗರೂ ಫುಲ್ ಟೈಟಾಗಿ ಚಿತ್ರವಿಚಿತ್ರವಾಗಿ ಅವರವರಿಗೆ ಬೇಕಾದ ಭಂಗಿಯಲ್ಲಿ ನುಲಿಯುತ್ತಾ,ತೂರಾಡುತ್ತಾ,ವಾಲಾಡುತ್ತಾ,”ಊ ಅಂಟಾವಾ ಮಾಮ ಊಹೂ ಅಂಟಾವಾ ಮಾಮ”, ಹಾಡಿಗೆ ಕುಣೀತಿದ್ರಾ, ಮತ್ತಿನ್ ಸ್ವಲ್ಪ ಹುಡುಗ್ರು ಬಣ್ಣಬಣ್ಣದ ರಾಕೆಟ್ಟುಗಳ್ನ ಹಚ್ಚಿಹಚ್ಚಿ ಉತ್ಸವಕ್ಕೆ ರಂಗೇರಿಸ್ತಾ ಇದ್ರು. ನಮ್ ಮನೆ ಮುಂದೆ ಹಚ್ಚಿದ ಒಂದು ರಾಕೆಟ್ಟು ಸೋ……..ಯ್ ಅಂತ ಮೇಲಕ್ಕೆ ಹೋದದ್ದೇ ತಡ, ಗಣಪ ಅತ್ಲಕಡೆ ನೋಡಕ್ಕೂ, ಅಲ್ಲಿ ಚಂದಮಾಮ ಗಣಪ್ಪುನ ನೋಡ್ಕೊಂಡು ನಗ್ತಾ ನಿಂತಿದ್ದ. ಗಣಪ,”ಅಯ್ಯೋ ……ನಾನ್ ಕೆಟ್ಟೇ, ಓ ನಮ್ ಅಪ್ಪ್ನೇ”, ಅಂತ್ಕೋತಾ ಮನೆ ಒಳಗೆ ಓಡೇ ಬಂದ್ಬಿಟ್ಟ. ತಲೆ ಬುಡ ಏನೂ ಅರ್ಥವಾಗ್ದೇ,ನಾನು ಬುಸುಬುಸು ಮನೆ ಒಳಗೆ ಓಡೇ ಬಂದೆ.” ಯಾಕಪಾ ಗಣೇಶ,ಯಾಕೇ ಹಿಂಗ್ ಒಂದೇ ಸಮಾ ಓಡ್ ಬಂದೇ?”ಅಂತ ಕೇಳ್ದೆ. ನನ್ ಮಗಾನೂ ಗಣಪನ ಹಿಂದೆಯೇ “ವೈ ಬ್ರೋ, ವಾಟ್ ಹ್ಯಾಪನ್ಡ್”, ಅಂತ ಬಂದ. ಮೂಲೆ ಸೇರಿದ್ ಮೌಸ್ ಮಹಾಶಯರು,ಏನಾಯಿತೋ ಅಂತ ಪ್ರಶ್ನಾರ್ಥಕ ಮುಖ ಮಾಡಿ ಇಣುಕಿ ನೋಡತೊಡಗಿದರು. ಅದಕ್ಕೆ ಮುಖ ಕಪ್ಪಿಟ್ಟುಕೊಂಡಂತೆ ಗಣಪ,”ಅಯ್ಯೋ…..ಆಕ್ಕಾ ನಾನ್ ಕೊಟ್ ಶಾಪ ನಂಗೇ ಮುಳ್ವಾಗೋಯ್ತಲ್ಲಾ! ಈಗೇನ್ ಮಾಡ್ಲೀ?ಪ್ಲೀಸ್ ಏನಾದ್ರೂ ಐಡಿಯಾ ಇದ್ರೆ ಹೇಳಿ”, ಅಂದ.ಅದಕ್ಕೆ ನಾನು,” ಇಲ್ಲಪ್ಪ ನನ್ದು ಯಾವ ಐಡಿಯಾ ಪ್ಲಾನ್ಸೂ ಇಲ್ಲ.ನಂದು ಏರ್ಟೆಲ್ ಅಂದೆ”, ಅದಕ್ಕೆ ಗಣಪ,”ಬೀ ಸೀರಿಯಸ್ ಅಕ್ಕಾ. ದಿಸ್ ಇಸ್ ನಾಟ್ ಎ ಜೋಕ್”, ಅಂತ ಮುಖ ಹಿಂಡುಕೊಂಡ. ಅದಕ್ಕೆ ನಾನು ನಗುತ್ತಾ,”ಅರೇ,ಈ ದಿನ ಚಂದ್ರನ ದರ್ಶನ ಮಾಡಿದವರ ಮೇಲೆ ಮಿಥ್ಯಾರೋಪ ಬರುತ್ತದೆ ಅಂತ ನೀನೇ ಚಂದ್ರನಿಗೆ ಶಾಪ ಕೊಟ್ಟಿದ್ದು ತಾನೇ? ಅದರಿಂದ ನಿನಗೇನು ತೊಂದೆರೆ?”, ಅಂತಂದೆ. ಅದಕ್ಕವ,”ಅಯ್ಯೇ ಶಾಪ ಕೊಟ್ಮೇಲೆ ನನ್ಗೂ ಅದು ಅಪ್ಲೈ ಆಗುತ್ತಲ್ವೇನಕ್ಕಾ? ಅಯೋ ಏನೇನ್ ಆರೋಪ ಬರುತ್ತೋ? ಯಾರ್ಯಾರ್ ಹತ್ರ ಮಾತ್ ತಿನ್ಬೇಕೋ? ಮುಂದೆ ನನ್ ಗತಿ ಏನಪ್ಪಾ? ಈ ವಿಷ್ಟ ನಮ್ ಮಮ್ಮಿಗೇನಾದ್ರೂ ಗೊತ್ತಾದ್ರೆ ನನ್ಗೆ ಲೆಫ್ಟ್ ಅಂಡ್ ರೈಟ್ ತಗೋತಾಳೆ ಮಾತಾಯಿ ಚಾಮುಂಡಿ!ಓ….”, ಅಂತ ಕೈ ಕೈ ಹಿಸುಕಿಕೊಳ್ತಾ ಪಡಸಾಲೆ ತುಂಬಾ ಆಕಡೆ ಈಕಡೆ ಓಡಾಡತೊಡಗಿದ. ನಾನು”, ಅಯ್ಯೋ,ಅದಕ್ಯಾಕೆ ಇಷ್ಟು ಟೆನ್ಸ್ ಆಗ್ತೀಯೋ ಮಾರಾಯಾ? ಎಲ್ಲಾರೂ ಶಾಪಕ್ಕೆ ಏನ್ನಪರಿಹಾರ ಮಾಡ್ಕೋತಾರೋ, ಅದ್ನೇ ನೀನೂ ಮಾಡ್ಕೊಂಡ್ರಾಯ್ತು”, ಅಂದೆ.ನನ್ ಮಗಾನು,”ಬ್ರೋ ಲೆಟ್ ಅಸ್ ಫೈಂಡ್ ಸಮ್ ವೇ, ಕೂ….ಲ್ ಬ್ರೋ ಕೂ……ಲ್”,  ಅಂತ ವಿ ಚಿನ್ಹೆ ತೋರಿಸಿದ.ಅದಕ್ಕೆ ಗಣಪ,”ಎಲ್ರೂ ಏನ್ ಮಾಡ್ಕೋತಾರೇ?”, ಅಂದ.ಅದಕ್ಕೆ ನಾನು,”ಅಯ್ಯೋ ಇದ್ಯಾಕಪ್ಪಾ, ಮರ್ತೋಗ್ಬಿಟ್ಟಾ?ಹೂ….ಮ್, ಅದೂ ಸರಿ ಬಿಡು, ಜ್ಞಾಪಕಾ ಇಟ್ಕೊಳ್ಳೋಕೆ ನಿನ್ಗಾದ್ರೂ ಒಂದೇ ಎರಡೇ? ಏನೂ ವರಿ ಮಾಡ್ಕೋಬೇಡ ಬಾ.ಸಮಂತಕೋಪಾಖ್ಯಾನ ಕೇಳೋಣ. ಎಲ್ಲ ವರೀನೂ ಸರಿ ಹೋಗುತ್ತೆ”, ಅಂದೆ.ಅದಕ್ಕೆ ಗಣಪ್ಪ,”ಯೆ…..ಸ್ ಅಕ್ಕಾ.ಮರ್ತೇ ಹೋಗಿದ್ದೆ. ಹೂ ಕರಿಯಕ್ಕೆ ನಿಮ್ ಆನ್ಲೈನ್ ಪುರೋಹಿತರನ್ನ. ಕೇಳ್ಬಿಡ್ತೀನಿ.ನನ್ಗೂ ಸಮಾದಾನವಾಗುತ್ತೆ”, ಅಂದ. ನಾನು, ಮಲಗಿದ್ದ ನಮ್ ಸ್ವಾಮ್ಗಳ್ನ ತಟ್ಟೆ ಎಬ್ಬಿಸಿ,”ಸ್ವಾಮೀ, ನಮ್ ಗಣಪ್ಪನಿಗೋಸ್ಕರ ನೀವು ಸ್ವಲ್ಪ ದೊಡ್ ಮನ್ಸು ಮಾಡಿ ಸಮಂತಕೋಪಾಖ್ಯಾನ ಓದ್ಬಿಡಿ”,ಅಂತ ಕೇಳ್ಕೊಂಡೆ. ಅವರು,ಓಕೆ ಅಂದಿದ್ದೇ ಕಥೆ ಹೇಳಿ ಮುಗಿಸಿ, ಶುಭಮ್ ಅಂತ ಆಶೀರ್ವಾದ ಮಾಡಿಯೇ ಬಿಟ್ಟರು.ನಾನು ಗಣಪನಿಗೆ ನಮಸ್ಕಾರ ಹಾಕಿ, ಎಲ್ಲರಿಗೂ ಪಂಚಕಜ್ಜಾಯ ಹಂಚಿದೆ.ಗಣಪ ಮೂಷಿಕ ಏರಿ ಹೊರಡುವ ಸಮಯವಾಯ್ತು.ನಿಜ, ಬೆಳಗಿನಿಂದ್ಲೂ ಗಣಪನ ಜೊತೆ ಮಾತುಕತೆ, ಮೂಷಿಕನ ಕೀಟಲೆಯಿಂದ ಮನೆಗೆ ಹಬ್ಬದ ಸಂಭ್ರಮ ಬಂದು, ದಿನ ಕಳೆದದ್ದೇ ತಿಳಿಯಲಿಲ್ಲ. ನಮ್ಮ ಮನೆಯ ಗಣಪ,”ಥ್ಯಾಂಕ್ಸ್ ಬ್ರೋ, ನನ್ ರಿಕ್‌ವೆಸ್‌ಟನ್ನ ರೆಸ್ಪೆಕ್‌ಟ್‌ ಮಾಡಿ ಸ್ಟೇ ಮಾಡಿದ್ದಕ್ಕೆ.ಐ ಹ್ಯಾಡ್ ಎನ್ ಆಸಮ್ ಟೈಮ್ ವಿತ್ ಯೂ ಗಯ್ಸ್”,ಅಂತ ಮೂಷಿಕ ಹಾಗೂ ಗಣಪನಿಗೆ ಕೈ  ಗುದ್ದಿ, ಹಗ್ ಮಾಡಿದ. ಗಣಪನೂ ನಮ್ಮ ಗಣಪನಿಗೆ “ಮಿಸ್ ಯೂ ಮಚ್ಚಾ”, ಅಂದು ನನ್ ಕಡೆ ತಿರುಗಿ,”ಅಕ್ಕ ನೆಕ್ಟ್ ನಾನು ಬರೋ ಟೈಮ್ಗಾದ್ರೂ ಸ್ವಲ್ಪ ಲೇಜ಼ಿನೆಸ್ ಬಿಟ್ಟು, ಒಂದಿಷ್ಟು ಒಳ್ಳೆ ವೆರೈಟಿ ಫುಡ್, ಯೂ ಟೂಬಲ್ಲಿ ನೋಡಿ ಟ್ರೈ ಮಾಡಿ, ರೆಡಿ ಮಾಡಿಡಕ್ಕ.”, ಅಂದು, ಎಲ್ರಿಗೂ ಬೈ ಮಾಡಿ “ಸೀ ಯೂ ನೆಕ್ಸ್ಟ್ ಇಯರ್”,ಅಂತ ಹೇಳಿ, ಮತ್ತೇನೋ ಜ್ಞಾಪಿಸಿಕೊಂಡಂತೆ,”ಟೈಮ್ ಮಾಡ್ಕೊಂಡು ಪೆಂಡಾಲಿಗೆ ಬರ್ತಿರಕ್ಕಾ. ನಾನ್ ಅಲ್ಲಿ ಇನ್ನೂ ಒಂದ್ ತಿಂಗ್ಳು ಇರ್ತೀನಿ.ಟೈಮ್ ಆದ್ರೆ ಮಾತಾಡೋಣ”, ಅಂತ ಹೇಳಿ,ಗಣಪ ವಾಹನ  ಇಲಿರಾಯರ ಮೇಲೆ ಸವಾರಿ ಮಾಡ್ತಾ ಹೊರಟೇಬಿಟ್ಟ.ನಂತರ…..ಮನೆ, ಮನಸ್ಸೂ ಎರಡೂ ಖಾಲಿಯಾದ ಭಾವನೆಯಿಂದ ಸುತ್ತಲೂ  ಬಿಕೋ ಎನಿಸುತ್ತಿತ್ತು.

ಕಥೆ ಇಲ್ಲಿಗೆ ಸಧ್ಯಕ್ಕೆ ಬ್ರೇಕ್ ಕೊಟ್ಟು ಮುಗಿಸ್ತಿದೀನಿ.ಮುಂದೆ ಟೈಮಾದ್ರೆ ಕಂಟಿನ್ಯೂ ಮಾಡ್ತೀನಿ ಕಣ್ರೀ ನಮಸ್ಕಾರ!


ರೂಪ ಮಂಜುನಾಥ

Leave a Reply

Back To Top