ಶ್ರಾವಣದ. ಭರವಸೆ

ಕಾವ್ಯ ಸಂಗಾತಿ

ಶ್ರಾವಣದ. ಭರವಸೆ

ಕುಸುಮಾ ಮಂಜುನಾಥ

ಶ್ರಾವಣದ -ಭರವಸೆ
ಶ್ರಾವಣದ ಸಂಭ್ರಮದಿ
ನಡೆದಿತ್ತು ಜಾತ್ರೆ
ಘಮಘಮಿಸಿತ್ತು ಮಲ್ಲಿಗೆ
ದವನ ತುಳಸಿ ಪತ್ರೆ

ಝಗ ಝಗಿಪ ವಸ್ತ್ರ
ವಜ್ರ ವೈಢೂರ್ಯ ಗಳ ಅಲಂಕಾರ
ದ್ರಾಕ್ಷಿ ಖರ್ಜೂರ ಬಾದಾಮಿ
ಏಲಕ್ಕಿಗಳ ಮುಕುಟಮಣಿ ಪ್ರಾಯ

ತುಂಬಿತ್ತು ತಟ್ಟೆಗಳು
ಹುಂಡಿಗಳು ಝಣಝಣ ಕಾಂಚಾಣದಿ
ನೂಕಿ ಜಗ್ಗಾಡುತ ಗದ್ದಲಿಸುವ ಜನಗಳ
ಕಲ್ಲಾಗಿ ನೋಡುತ್ತಿದ್ದ ದೇವ ದಿಗ್ಮೂಡನಾಗಿ…

ಹೊರಗೆ ಪುರಿ ಬತ್ತಾಸುಗಳ ರಾಶಿ
ನೀರೂರಿಸಿತ್ತು ಜಿಲೇಬಿ ಜಾಂಗೀರುಗಳ ಸಾಲು
ಅಲ್ಲಿ ವ್ಯಾಪಾರ ನಡೆಸಿದ್ದರು ಜೋರಾಗಿ
ರಾಮ ರಹೀಮ ಅಬ್ದುಲ್ಲಾರು
ಮುಗಿಬಿದ್ದರು ಜನರಲ್ಲಿ ವಹಿವಾಟಿಗಾಗಿ..

ದೂರದಲ್ಲೆಲ್ಲೋ ಜೋರಾದ ಕೂಗು
ಹಿಜಾಬ್ ಹಲಾಲ್ ಕಟ್ ಬಾಯ್ಕಾಟ್ ಗಳು
ಅವ್ಯಾವೂ ತಡೆದಿಲ್ಲ ಇಲ್ಲಿ ಸಡಗರವ
ಇಲ್ಲಿ ಹರಡಿತ್ತು ಹಾಲು ಬೆಳದಿಂಗಳು
ಮನದಂಗಳವ ಶುಭ್ರಗೊಳಿಸಲು…


Leave a Reply

Back To Top