ಗಜಲ್

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಉಡಿಯ ತುಂಬದಿದ್ದರೂ ಪರ್ವಾಗಿಲ್ಲ
ಸಂಬಂಧವನು ಕತ್ತರಿಸಬೇಡಿ
ಕರೆದು ಸತ್ಕರಿಸದಿದ್ದರೂ ಪರ್ವಾಗಿಲ್ಲ
ಜನರೆದುರು ಅವಮಾನಿಬೇಡಿ

ಕೀಳಾಗಿ ನೋಡುವ ಮನೋಭಾವ
ಇನ್ನಾದರೂ ಬಿಡಲಿಲ್ಲವೇಕೆ
ತುತ್ತು ಅನ್ನ ಹಾಕದಿದ್ದರೂ ಪರ್ವಾಗಿಲ್ಲ
ಉಪವಾಸ ಕೆಡುವಬೇಡಿ

ಹೆಣ್ಣನ್ನು ಹುಣ್ಣೆಂದು ನೋಡುವವರು
ಉಂಟಲ್ಲ ಎಲ್ಲ ಕಡೆ
ನಾಮಕರಣಕ್ಕೆ ಕರೆಯದಿದ್ದರೂ ಪರ್ವಾಗಿಲ್ಲ
ಬಂಜೆಯೆಂದು ನಿಂದಿಸಬೇಡಿ

ಒಡಲೊಳಗಿನ ಜ್ವಾಲೆಯದು ರೋಷದಲ್ಲಿ
ಉಕ್ಕಿ ಹರಿಯುತಿದೆ ನೋಡು
ಶಿರದಿ ಕುಂಭ ಹೊರಿಸದಿದ್ದರೂ ಪರ್ವಾಗಿಲ್ಲ
ಛೀಮಾರಿಹಾಕಿ ಜರಿಯಬೇಡಿ

ಅಭಿನವನ ಹೃದಯವನು ಕೊರೆಯುತಿಹ
ಪ್ರಶ್ನೆಗೆ ಉತ್ತರವಿಲ್ಲ
ಸುಖದ ಸುಪ್ಪತ್ತಿಗೆ ಕೊಡಿಸದಿದ್ದರೂ ಪರ್ವಾಗಿಲ್ಲ
ಭಿಕಾರಿಯೆಂದು ದೂರಿಡಬೇಡಿ


Leave a Reply

Back To Top