ಕಾವ್ಯ ಸಂಗಾತಿ
ನೀಲಕಂಠನೆ ಆಗು
ಅಬ್ಳಿ,ಹೆಗಡೆ


ಎದೆಯ ಕಡಲೊಡಲಿನಲಿ
ಮಡುವುಗಟ್ಟಿರೆ ಶೋಕ
ಮುಖದಲ್ಲಿ ಸುಖದ ನಗು
ನಗಲಿ ಹೇಗೆ.?
ನನ್ನೊಳಗೆ ತುಂಬಿರಲು
ಬರಿ ಮೌನ, ಏಕಾಂತ
ಬಾಯಿಂದ ಸವಿನುಡಿಯ
ನುಡಿವೆ ಹೇಗೆ..?
ಬದುಕ ಪಾತ್ರೆಯತುಂಬ,
ತುಂಬಿ ತುಳುಕಿರೆ ಕಹಿಯು,
ಸುತ್ತ ಸಿಹಿಯುಣಬಡಿಸೆ,
ಸಾಧ್ಯವೇನು.?
ಕುರುಡ ಕತ್ತಲಿನಲ್ಲಿ
ದಾರಿಯರಸುತಲಿರಲು,
ಬೆಳಕೆ ಇಲ್ಲದೆ ದಾರಿ
ಕಾಣ್ವುದೇನು.?
ಬರಿ ಸುಖವು,ಸವಿನುಡಿಯು,
ಬರಿ ಸಿಹಿಯು,ಬರಿ ಬೆಳಕು,
ಏಕತಾನದ ಬದುಕು
ಸಪ್ಪೆಯಹುದು.
ದುಃಖ ಕಳೆಯಲು ಖುಷಿಯು
ಕಹಿಯಳಿಯೆ ಸಿಹಿ ಇಹುದು
ರಾತ್ರಿ ಕಳೆಯಲು ಹಗಲು
. ಬಂದೆ ಬಹುದು.
ನಿತ್ಯ ವೈವಿಧ್ಯಮಯ
ಸುಂದರತೆ ಬದುಕಲ್ಲಿ
‘ನೀಲಕಂಠನೆ ಆಗು’
ಸೋಲೆ ಇಲ್ಲ.
ನಿರ್ಜೀವ ಜಡಶಿಲೆಗೆ
ದೇವ ಭಾವವ ಬೆಸೆದು,
ಕಾಡಿ ಬೇಡಲು ಕಷ್ಟ
ಕಳೆವುದಿಲ್ಲ.
————————–
ಅಬ್ಳಿ ಹೆಗಡೆ
