ಶೂದ್ರ ಶ್ರೀನಿವಾಸ್ ಮತ್ತು ಪಿ.ಲಂಕೇಶ್ ರ ಒಂದು ಮನಮುಟ್ಟುವ ಪಿಸುಮಾತು

ಲೇಖನ

ಶೂದ್ರ ಶ್ರೀನಿವಾಸ್ ಮತ್ತು ಪಿ.ಲಂಕೇಶ್ ರ ಒಂದು ಮನಮುಟ್ಟುವ ಪಿಸುಮಾತು

ಶೂದ್ರ ಶ್ರೀನಿವಾಸ್ ಮತ್ತು ಪಿ.ಲಂಕೇಶ್ ರ ಒಂದು ಮನಮುಟ್ಟುವ ಪಿಸುಮಾತು

ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು  ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973 ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು..!

1996 ರಲ್ಲಿ ‘ಸಮಕಾಲೀನ ಬದುಕಿಗೊಂದು ಸಲ್ಲಾಪ’ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿ ಒಂದು ವರ್ಷಕ್ಕೂಹೆಚ್ಚು ದಿನಗಳ ವರೆಗೆ ನಡೆಸಿದರು ಶೂದ್ರ ಶ್ರೀನಿವಾಸ್ ಸರ್. 2002 ರಲ್ಲಿ ‘ನೆಲದ ಮಾತು’ ಎಂಬ ತ್ರೈಮಾಸಿಕ ಪತ್ರಿಕೆಯನ್ನೂ ಪ್ರಾರಂಭಿಸಿದ್ದರು..!

ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿಯಾಗಿದ್ದಾರೆ. ಅವರು 1975-76 ರಲ್ಲಿ ‘ತುರ್ತು ಪರಿಸ್ಥಿತಿ’ಯಲ್ಲಿ ಎರಡು ಬಾರಿ ಬಂಧನವಾಗಿ ಮತ್ತು ಸೆರೆಮನೆ ವಾಸವನ್ನೂ ಕಂಡವರು..!

1976 ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ಪರಿಸ್ಥಿತಿ ವಿರೋಧಿ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅವರಿಗೆ 1986 ರಲ್ಲಿ ಶೂದ್ರದ ಅಂಕಣ ಬರಹದ ‘ಕನಸಿಗೊಂದು ಕಣ್ಣು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿವೂ ಸಂದಿದೆ.

1995 ರಲ್ಲಿ ರಾಷ್ಟ್ರೀಯ ಸಾಮರಸ್ಯ ಪ್ರಶಸ್ತಿ, 2012 ರ ಪ್ರೊ.ಕಿ.ರಂ. ನಾಗರಾಜ ಸಾಂಸ್ಕೃತಿಕ ಪ್ರಶಸ್ತಿ, 2013 ರ ‘ಮುರುಘಶ್ರೀ’ ಪ್ರಶಸ್ತಿ, 2013 ರ ಕನ್ನಡ ಪುಸ್ತಕ ಪ್ರಾಧಿಕಾರದ ಜಿ.ಪಿ. ರಾಜರತ್ನಂ ಸಾಹಿತ್ಯ ಪ್ರಶಸ್ತಿ, 2014 ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳೂ ಶೂದ್ರ ಶ್ರೀನಿವಾಸ್ ಸರ್ ಗೆ ದೊರೆತಿವೆ..!

1996-97 ರಲ್ಲಿ ಎರಡು ವರ್ಷ ಮಾನವ ಹಕ್ಕುಗಳ ಸಂಘಟಣೆಯಾದ ’ಸಿಟಿಝನ್ ಫಾರ್ ಡೆಮಾಕ್ರಸಿ’ ಸಂಸ್ಥೆಯ ಉಪಾಧ್ಯಕ್ಷರಾಗಿ, 1997-98 ರಲ್ಲಿ ಎರಡು ವರ್ಷ ಮಾನವ ಹಕ್ಕುಗಳ ಸಂಘಟನೆಯಾದ ’ಪಿ.ಯು.ಸಿ.ಯಲ್’ ನ ಕಾರ್ಯದರ್ಶಿಯಾಗಿ, ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ, 2004-05 ರಲ್ಲಿ ಎರಡು ವರ್ಷ ಕರ್ನಾಟಕ ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿಗೆ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ ಶೂದ್ರ ಶ್ರೀನಿವಾಸ್ ಸರ್. ಈವರೆಗೆ ಅವರು 25 ಕೃತಿಗಳನ್ನು ಪ್ರಕಟಿಸಿದವರು..!

# ಇದೇ ಶೂದ್ರ ಶ್ರೀನಿವಾಸ್ ಸರ್ ಅವರು ಪಿ.ಲಂಕೇಶ್ ಎಂಬ ಮಹಾ ವಿಕ್ಷಿಪ್ತ ಮನಸ್ಸಿನ ಲೇಖಕ ಹಾಗೂ ಅದ್ಬುತ ಬರಹಗಾರ ಮತ್ತು ‘ಲಂಕೇಶ್ ಪತ್ರಿಕೆ’ಯ ಸಂಪಾದಕರಾದ ಇವರ ಬಗೆಗೆ ಹೀಗೊಂದು ಲೇಖನವನ್ನು ಬರೆದಿರುವುದನ್ನು ಗಮನಿಸೋಣ..! —

 ಅದು ಹೀಗಿದೆ ನೋಡಿ —

ಮೋಹಕ ರೂಪಕಗಳ ತಾರೆ ಪಿ.ಲಂಕೇಶ್‌..! —

ಲಂಕೇಶರಿಗೆ ಶೂದ್ರ ಶ್ರೀನಿವಾಸ್‌ ಜೊತೆಗಿದ್ದದ್ದು ಒಂಥರದ ಲವ್‌ ಆ್ಯಂಡ್ ಹೇಟ್‌ ಸಂಬಂಧವಾಗಿತ್ತು ಶೂದ್ರ ಶ್ರೀನಿವಾಸ್ ರದು. ಲಂಕೇಶರ ಮಾತನ್ನು ಶಿರಸಾವಹಿಸಿದವರಂತೆ ಶೂದ್ರ ಶ್ರೀನಿವಾಸ್ ಕೂಡ ದೊಡ್ಡವರ ಕೆಲವು ಸಣ್ಣತನಗಳನ್ನು ದೋಷಗಳನ್ನು ನಾವು ಸಹಿಸಿಕೊಂಡೇ ಅವರೊಂದಿಗೆ ಇದ್ದವರು..!

ಲಂಕೇಶರ ಕುರಿತು ಇದುವರೆಗೆ ಆರೇಳು ಪುಸ್ತಕಗಳು ಬಂದಿರಬಹುದು. ಅವುಗಳಲ್ಲಿ ಲಂಕೇಶರ ಪ್ರತಿಭೆ ಮತ್ತು ವಿಕ್ಷಿಪ್ತತೆ ಎರಡೂ ದಾಖಲಾಗಿವೆ. ಈಗ ಶೂದ್ರ ಶ್ರೀನಿವಾಸ್ ಬರೆದಿರುವ ಲಂಕೇಶರ ಮೋಹಕ ರೂಪಕಗಳ ಕೃತಿ ಲಂಕೇಶರ ಕುರಿತು ಬಂದಿರುವ ಬಹುಮುಖ್ಯ ದಾಖಲೆ ಎನ್ನಬಹುದು..! ಎಂದಿನಂತೆ, ಶೂದ್ರ ಶ್ರೀನಿವಾಸ್ ಇದನ್ನು ತಮ್ಮ ಗೊಂದಲ ಮತ್ತು ಸ್ಪಷ್ಟತೆಯ ನಡುವೆಯೇ ಬರೆದಂತಿದೆ. ಲಂಕೇಶರು ಇದ್ದದ್ದು ಕೂಡ ಹಾಗೆಯೇ ಅಲ್ಲವೇ.!?

ಪಿ.ಲಂಕೇಶ್ ಒಬ್ಬ ಮಿತಭಾಷಿ ಮತ್ತು ಬೈಗಳಗಳ ಸರದಾರ —

ಲಂಕೇಶ್‌ ಅವರು ಎಂದಾಕ್ಷಣ, ಅವರ ಎರಡು ಭೌತಿಕ ಚಿತ್ರಗಳು ತಕ್ಷಣ ಮುಖಾಮುಖಿಯಾಗುತ್ತಿವೆ. ಸದಾ ಕೈಯಲ್ಲಿ ಸಿಗರೇಟು ಹಿಡಿದಿಡುತ್ತಿದ್ದ ಮತ್ತು ಪುಸ್ತಕದಲ್ಲಿ ತಲ್ಲೀನರಾಗುತ್ತಿದ್ದಂಥದ್ದು..!

ಅತ್ಯಂತ ಮಿತಭಾಷಿ ಲಂಕೇಶ್ ರು. ಅಗತ್ಯವಿದ್ದರೆ ಮಾತಾಡುತ್ತಿದ್ದರು. ಇಲ್ಲದಿದ್ದರೆ ಒಂದೂ ಮಾತಾಡದೇ ಇದ್ದ ದಿನಗಳನ್ನು ಕಂಡಿದ್ದೇನೆ. ಪ್ರತಿಕ್ಷಣವೂ ಅವರಿಗೆ ಅನ್ನಿಸುತ್ತಿತ್ತು; ನಾವು ಮಾತು ಕಲಿತು ಹೆಚ್ಚು ವಂಚಿಸುತ್ತಿದ್ದೇವೆ ಹಾಗೂ ವಂಚನೆಗೊಳಗಾಗುತ್ತಿದ್ದೇವೆ ಎಂದು.

ಇದನ್ನು ಬಹಳಷ್ಟು ಬಾರಿ ಎದುರಿಸಿದ್ದೇನೆ ನಾನು ಎಂದು ಶೂದ್ರ ಶ್ರೀನಿವಾಸ್ ಹೇಳುತ್ತಾರೆ.

ಆದ್ದರಿಂದಲೇ ಪಿ.ಲಂಕೇಶ್ ಅವರು ‘ಸಂತ ಸ್ವರೂಪಿ’ ಚಿಂತಕರಾಗಿದ್ದರು..!

ತರಗತಿಗೆ ಹೋಗಿ ವಿದ್ಯಾರ್ಥಿಗಳ ಮುಂದೆ ಒಂದಷ್ಟು ಮಾತು ಒದರಿ ಹೋಗುವ ಮನಸ್ಥಿತಿಯವರಾಗಿರಲಿಲ್ಲ ಅವರದು. ಇದನ್ನು ಅವರ ಮೊದಲ ದಿನದ ತರಗತಿಯಿಂದಲೇ ಗಮನಿಸಿದ್ದೇನೆ ಎನ್ನುತ್ತಾರೆ ಶೂದ್ರ ಶ್ರೀನಿವಾಸ್ ಸರ್..!

ಗಾಂಧೀಜಿ, ರಾಜಾಜಿ, ನೆಹರೂ, ಲೋಹಿಯಾ ಕುರಿತು ಎಂಥ ಅಪೂರ್ವ ಒಳನೋಟಗಳನ್ನು ಧಾರೆಯೆರೆದಿದ್ದರು. ಆ ಒಳನೋಟ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸೂಕ್ಷ್ಮ ಸಂವೇದನೆಗಳನ್ನು ವಿಸ್ತರಿಸುತ್ತಿದ್ದುವು. ಹಾಗೆ ನೋಡಿದರೆ, ಅವರ ಪರಿಚಯವಾದ ಮೊದಲನೆಯ ತರಗತಿಯಲ್ಲಿಯೇ ಅವರ ವ್ಯಕ್ತಿತ್ವ ಸ್ವಲ್ಪಮಟ್ಟಿಗೆ ಪರಿಚಯವಾಗಿತ್ತು. ನ್ನು ಅಂದರೆ ಶೂದ್ರ ಶ್ರೀನಿವಾಸ್ ರು ಅತ್ಯಂತ ಹುಂಬತನದಿಂದ ಬರೆದ ಕವಿತೆಯನ್ನು ಅವರಿಗೆ ತೋರಿಸಿದ್ದಕ್ಕೆ ತರಗತಿಯಲ್ಲಿ ಓದಿಸಿಯೇ ಬಿಟ್ಟರು ಪಿ.ಲಂಕೇಶ್. ತುಂಬ ಪ್ರಳಯಾಂತಕರೆಲ್ಲ ಇದ್ದ ವಿಜ್ಞಾನ ಮತ್ತು ಸಾಹಿತ್ಯದ ವಿದ್ಯಾರ್ಥಿಗಳ ಜಂಟಿ ತರಗತಿ ಅದು. ಆದರೆ ಕಾವ್ಯದ ರಚನೆ ಮತ್ತು ಕಾವ್ಯದ ಓದಿನ ಗಾಢವಾದ ಕಳಕಳಿಯನ್ನು ಹೊಂದಿದ್ದವರು ಪಿ.ಲಂಕೇಶ್ ಅವರು..!

 ಸಹಾಯ ಮಾಡಿದವರ ಮೇಲೆಯೇ ದ್ವೇಷ ಸಾಧಿಸಿದ ಪಿ.ಲಂಕೇಶ್ —

ಇದು ಬೇರೆ ಬೇರೆ ರೂಪದಲ್ಲಿ ವಿಸ್ತಾರಗೊಳ್ಳುತ್ತ ಹೋಗಿದ್ದನ್ನು, ಅವರ ಸಂಪರ್ಕದ ಮುವತ್ತೆರಡು ವರ್ಷಗಳ ಆತ್ಮೀಯ ದಿನಗಳಲ್ಲಿ ಅದನ್ನು ಗ್ರಹಿಸಲು ಸಾಧ್ಯವಾಗಿದೆ ಶೂದ್ರ ಅವರಿಗೆ. ಅದೇ ಸಮಯಕ್ಕೆ ಮೊದಲನೆಯ ತರಗತಿಯಲ್ಲಿ ಅವರ ಸಿಟ್ಟು ಮುಖಾಮುಖಿಯಾಗಿತ್ತು. ತರಗತಿಯಲ್ಲಿ ಜಿ.ಕೆ.ಚೆಸ್ಟರ್‌ಟನ್‌ನ ‘ಆಂಟ್ಸ್‌ ನೆಸ್ಟ್‌’ ಪ್ರಬಂಧವನ್ನು ಕುರಿತು ಪಾಠ ಮಾಡುವಾಗ, ವಿದ್ಯಾರ್ಥಿನಿಯೊಬ್ಬರು ಪಕ್ಕದಲ್ಲಿ ಕೂತಿದ್ದ ಹುಡುಗಿಯೊಬ್ಬಳ ಜೊತೆಗೆ ಏನೋ ಒಂದೆರಡು ಶಬ್ದ ಮಾತಾಡಿದ್ದಾಳೆ.

ಅದಕ್ಕೆ ಎಷ್ಟು ವೈಲ್ಡ್‌ ಆಗಿದ್ದರು ಪಿ.ಲಂಕೇಶ್ ಅವರು..!

ಆದರೆ ಅದೇ ಸಮಯಕ್ಕೆ ಆ ಹುಡುಗಿ ಅಳುತ್ತಿದ್ದರೆ ಪಿ.ಲಂಕೇಶ್‌ ಅವರು ಪೆಚ್ಚಾಗಿ ಸಮಾಧಾನ ಪಡಿಸಿದ್ದರು. ಅವರಿಗೆ ತಾವು ಮಾತಾಡುವಾಗ ಅಥವಾ ಏನಾದರೂ ಹೇಳುವಾಗ ಸ್ವಲ್ಪ ಗುಸುಗುಸು ಕಂಡರೂ ಸಹಿಸುತ್ತಿರಲಿಲ್ಲ. ಇದನ್ನು ಬಹಳಷ್ಟು ಸಭೆ ಸಮಾರಂಭಗಳಲ್ಲಿ ಕಂಡಿದ್ದೇನೆ ಎನ್ನುತ್ತಾರೆ ಶೂದ್ರ ಶ್ರೀನಿವಾಸ್. ಕೇಳಿಸಿಕೊಳ್ಳುವ ಪ್ರಕ್ರಿಯೆಗೆ ಹೆಚ್ಚು ಒಲವು ತೋರುತ್ತಿದ್ದರು. ಆದ್ದರಿಂದಲೇ ಅವರು ಬುದ್ಧ, ಬಸವಣ್ಣ ಮತ್ತು ಗಾಂಧೀಜಿಯವರನ್ನು ಹೆಚ್ಚು ಆಪ್ತರನ್ನಾಗಿ ಸ್ವೀಕರಿಸಿದ್ದುದು‌ ಪಿ.ಲಂಕೇಶ್ ಅವರು..!

ಪಿ.ಲಂಕೇಶ್ ಹುಚ್ಚು ಮತ್ತು ಶಿಸ್ತು —

ಹುಚ್ಚನಂತೆ ತೀವ್ರವಾಗಿ ಬದುಕುವುದನ್ನು ಯಾವಾಗಲೂ ಇಷ್ಟಪಡುತ್ತಿದ್ದರು ಅವರು. ಅದಕ್ಕೊಂದು ಸಣ್ಣ ಪ್ರಮಾಣದ ಶಿಸ್ತು ಬೇಕು ಎಂದು ತಿಳಿದಿದ್ದರು. ಹಾಗೆ ತಿಳಿದಿದ್ದರಿಂದಲೇ ಅವುಗಳ ಮಿತಿಯು ಯಾವ ಸ್ವರೂಪದ್ದೆಂದು; ಪ್ರತಿಭಾರಿಯೂ ಅವಲೋಕಿಸಿಕೊಳ್ಳುತ್ತಿದ್ದರು. ಹೀಗೆ ಅವಲೋಕಿಸಿಕೊಳ್ಳುತ್ತಲೇ ಅತ್ಯುತ್ತಮ ಕೃತಿಗಳಲ್ಲಿ ಬದುಕಿನ ಅರ್ಥಾತ್‌ ಆಯಾ ಕಾಲಘಟ್ಟದ ಏಳುಬೀಳುಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ದೃಷ್ಟಿಯಿಂದ ಬರವಣಿಗೆಯಲ್ಲಿ ಯಾವಾಗಲೂ ಅತೃಪ್ತಿಯನ್ನು ಕಾಣುತ್ತಿದ್ದರು ಪಿ.ಲಂಕೇಶ್ ಅವರು..!

 ಪತ್ರಕರ್ತ ಲಂಕೇಶ್ ಹೆಸರಿನ ಪಿ ಅಂದರೆ ಪಾಳೇಗಾರ —

ಏನೋ ಕೊರತೆ ಲೋಪವಿದೆಯೆಂದು ತಿಳಿಯಲು ಪ್ರಯತ್ನಿಸಿದವರು ಪಿ.ಲಂಕೇಶ್ ಅವರು. ಆದ್ದರಿಂದಲೇ ಒಮ್ಮೆಯೂ ತಮ್ಮ ಬರವಣಿಗೆ ಕುರಿತು ಮಾತಾಡಲು ಹೋದವರಲ್ಲ. ಹಾಗೆಯೇ ಬೇರೆಯವರು ಮಾತಾಡಲು ಹೋದರೆ; ಒಂದು ಅರ್ಥದಲ್ಲಿ ಕಿವುಡರಾಗಿ ಬಿಡುತ್ತಿದ್ದರು ಪಿ.ಲಂಕೇಶ್..!

ಇದು ಬಹುಪಾಲು ಲೇಖಕರಲ್ಲಿ ನಾನು ಕಂಡಿಲ್ಲ. ಆದರೆ ಬೇರೆಯವರ ಅತ್ಯುತ್ತಮ ಕೃತಿಗಳನ್ನು ಯಾರಾದರೂ ಓದಿ ಪ್ರಸ್ತಾಪಿಸಿದರೆ ಕೇಳಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ; ನನ್ನ ವೈಯಕ್ತಿಕ ಅರಿವಿನಮಟ್ಟಿಗೆ ವಾರಕ್ಕೊಂದು ಕೃತಿಯನ್ನು ಓದುವಂತೆ ಪ್ರೇರೇಪಿಸುತ್ತಿದ್ದರು ಪಿ.ಲಂಕೇಶ್ ಅವರು..!

ಪಿ.ಲಂಕೇಶ್ ಅವರ ಮನೆಯ ಒಂದು ಚಿತ್ರ..! —

ಮೇಸ್ಟ್ರು  ಮತ್ತು ಶೂದ್ರ ಶ್ರೀನಿವಾಸ್ ಅವರು ಹೀಗೆಯೇ ಸುತ್ತಾಡುತ್ತ ಕೋಶಿಶ್‌ ಹೋಟೆಲ್‌ ಬಳಿ ಬಂದರು. ಅದು ಎಷ್ಟೋ ವರ್ಷಗಳಿಂದ ಒಂದು ವಿಧದಲ್ಲಿ ಸಾಂಸ್ಕತಿಕ ರೆಸ್ಟೋರೆಂಟ್‌. ಮೇಸ್ಟ್ರು ಮತ್ತು ಶೂದ್ರ ಶ್ರೀನಿವಾಸ್ ಅವರು ಒಂದೊಂದು ಗ್ಲಾಸು ಬಿಯರ್‌ ಕುಡಿದು ಹೊರಗೆ ಬಂದಾಗ. ಭಾರತದ ಬಹುಮುಖ್ಯ ಮತ್ತು ಶೂದ್ರ ಶ್ರೀನಿವಾಸ್ ರಿಗೆ ಅತ್ಯಂತ ಪ್ರಿಯರಾದ ಇಬ್ಬರು ಕ್ರಿಕೆಟ್‌ ಆಟಗಾರರು ಅವರು ಕುಡಿದು ತಮ್ಮ ದೈಹಿಕ ಸ್ತಿಮಿತತೆಯನ್ನು ಕಳೆದುಕೊಂಡಿದ್ದರು. ಕಾಲಿಗೆ ಬಿದ್ದು ನಮಸ್ಕರಿಸಿದರು. ಆಗ ಕಿ.ರಂ.ನಾಗರಾಜ್ ಅವರು ನಿಮ್ಮ ಬಗ್ಗೆ ತುಂಬ ಹೇಳಿದ್ದರು ಎಂದು. ನಿಜವಾಗಿಯೂ ಅಂದು ರಾತ್ರಿ ಅವರಿಂದ ಬಿಡಿಸಿಕೊಂಡು ಹೊರಬರಲು ತುಂಬ ಕಷ್ಟವಾಗಿತ್ತು, ರಾತ್ರಿ ಒಂದೂವರೆಯಾಗಿತ್ತು. ಇಬ್ಬರೂ ಆಟೋದಲ್ಲಿ ಗಾಂಧಿ ಬಜಾರ್‌ನ ಅವರ ಮನೆಗೆ ಹೋದೆವು ಎನ್ನುತ್ತಾರೆ ಶೂದ್ರ ಶ್ರೀನಿವಾಸ್ ಅವರು.

ಮೇಸ್ಟ್ರ ಮನೆಗೆ ಹೋದಾಗ ಇಂದಿರಮ್ಮನವರು ಮುನಿಸಿನಿಂದಲೇ ಬಾಗಿಲು ತೆರೆದರು. ನಾವು ಮಲಗುವಾಗ ಪಿ.ಲಂಕೇಶ್‌ ಅವರಿಗೆ ಎಷ್ಟು ಹೇಳಿದರೂ ಕೇಳಲಿಲ್ಲ. ‘‘ನಾನು ಒಳಗೆ ಮಲಗಿ, ನಿನ್ನನ್ನು ಇಲ್ಲಿ ಮಲಗಿಸುವುದು ಒಳ್ಳೆಯದಲ್ಲ’’ ಎಂದರು ಪಿ.ಲಂಕೇಶ್ ಅವರು. ಅದಕ್ಕೆ ಒಂದು ಕ್ಷಣ ಶೂದ್ರ ಶ್ರೀನಿವಾಸ್ ಅವರು ಭಾವುಕರಾದರು. ಮನೆಯ ಪ್ರವೇಶ ದ್ವಾರದ ಸೋಫಾದ ಮೇಲೆಯೇ ಮಲಗಿದರು. ಶೂದ್ರ ಶ್ರೀನಿವಾಸ್ ಅವರು ಮತ್ತೊಂದು ಕಡೆ ಸೋಫಾದಲ್ಲಿ ಮಲಗಿದರು.

ಆಗ ಶೂದ್ರ ಶ್ರೀನಿವಾಸ್ ಅವರಿಗೆ ರಾತ್ರಿಯೆಲ್ಲ ನಿದ್ದೆ ಇಲ್ಲ. ಯಾಕೆಂದರೆ ಆ ಪ್ರಮಾಣದಲ್ಲಿ ಗೊರಕೆ ಪಿ.ಲಂಕೇಶ್ ಅವರನ್ನು ಆಕ್ರಮಿಸಿಕೊಂಡಿತ್ತು. ಒಂದೆರಡು ಬಾರಿ ಅವರ ಕಾಲು ಮುಟ್ಟಿದಾಗ ಗೊರಕೆ ನಿಲ್ಲುತ್ತಿತ್ತು. ಮತ್ತೆ ಯಥಾಸ್ಥಿತಿ. ಬೆಳಿಗ್ಗೆ ಎದ್ದಾಗ ಮೇಡಂ ಅವರು ಕಾಫಿ ತಂದುಕೊಟ್ಟರು..! ಮೇಸ್ಟ್ರು ಕೆಟ್ಟದಾಗಿದೆ ಎಂದರು. ಅದಕ್ಕೆ ಇಂದಿರಮ್ಮನವರು ವೈಲ್ಡ್‌ ಆಗಿ ‘‘ಬಿಸಾಕಿ ಹೊರಗೆ ಕುಡಿಯಲು ಹೋಗಿ’’ ಎಂದರು. ಆಗ ಶೂದ್ರ ಶ್ರೀನಿವಾಸ್ ಅವರು ತಲ್ಲಣಿಸಿ ಹೋದರು. ಮೇಸ್ಟ್ರು ಪೆಚ್ಚಾಗಿ ಕೂತಿದ್ದರು. ಅವರ ತಲೆ ನೇವರಿಸಿ ಸಮಾಧಾನಪಡಿಸಬೇಕು ಅನ್ನಿಸಿತು ಶೂದ್ರ ಶ್ರೀನಿವಾಸ್ ಅವರಿಗೆ. ಅದೇ ಸಮಯಕ್ಕೆ ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ಹೆಚ್ಚು ಮುತುವರ್ಜಿ ವಹಿಸದಿರುವುದೇ ಮುಖ್ಯ ಕಾರಣ ಎಂದು ಭಾವಿಸಿದರು ಶೂದ್ರ ಶ್ರೀನಿವಾಸ್ ಅವರು..!

ಪಿ.ಲಂಕೇಶ್ ಅವರ ರೇಸು ಕುದುರೆಯ ಕಥಾ ಪ್ರಸಂಗ..! —

ಇದೇ ವಿಧದ ಸಿಟ್ಟನ್ನು ಶೂದ್ರ ಶ್ರೀನಿವಾಸ್ ಅವರು ಇಂದಿರಮ್ಮನವರಿಂದ ಎದುರಿಸಿದ್ದು; ಲಂಕೇಶ್‌ ಅವರು ಚಲನಚಿತ್ರ ನಿರ್ದೇಶನದಲ್ಲಿ ತೊಡಗಿದ್ದಾಗ ಅವರ ‘ಎಲ್ಲಿಂದಲೋ ಬಂದವರು’ ಚಿತ್ರಕ್ಕೆ ವಿಜಯಭಾಸ್ಕರ್‌ ಅವರ ಸಂಗೀತ ನಿರ್ದೇಶನವಿತ್ತು. ಅವರು ಅಂದಿನ ಮದ್ರಾಸಿನಿಂದ ಬರುತ್ತಿದ್ದರು. ಅದಕ್ಕಾಗಿ ಅವರಿಗೆ ಸಂಜೆ ಆತಿಥ್ಯ ನೀಡಲು ಮನಸ್ಸು ಮಾಡಿದ್ದರು. ವಿಶ್ವವಿದ್ಯಾಲಯದ ನೂರು ರೂಪಾಯಿಗಳ ಚೆಕ್‌ ಪಿ.ಲಂಕೇಶ್ ಬಳಿ ಇತ್ತು. ಅದನ್ನು ನಗದುಗೊಳಿಸಲು ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದ ಬಳಿಯ ಕೆ.ಇ.ಬಿ. ಕಟ್ಟಡದ ಎಸ್‌.ಬಿ.ಎಂ. ಶಾಖೆಗೆ ಹೋದರು ಪಿ.ಲಂಕೇಶ್ ಮತ್ತು ಶೂದ್ರ ಶ್ರೀನಿವಾಸ್ ಅವರು.

ಅದನ್ನು ರೆಮಿಟ್‌ ಮಾಡಿದರು ಪಿ.ಲಂಕೇಶ್ ಅವರು. ಅದು ಅಕೌಂಟ್‌ಪೇಯಿ ಚೆಕ್‌ ಎಂಬುದನ್ನು ಮೇಸ್ಟ್ರು ನೋಡಿಕೊಂಡಿಲ್ಲ. ಕ್ಯಾಷ್‌ ಕೊಡುವರು ಎಂದು ಕಾಯುತ್ತ ಕೂತರು ಪಿ.ಲಂಕೇಶ್. ಕೊನೆಗೆ ಸಂಬಂಧಪಟ್ಟ ಬ್ಯಾಂಕಿನ ಕೌಂಟರ್‌ನ ನೌಕರ ‘‘ಸಾರ್‌, ಕ್ಯಾಷ್‌ ಸೋಮವಾರ ಆಗುತ್ತದೆ’’ ಎಂದಾಗ; ಮೇಷ್ಟ್ರು ನಿಜವಾಗಿಯೂ ಗಾಬರಿಗೊಂಡಿದ್ದರು. ‘‘ಶೂದ್ರ ನಾನು ಎಂಥ ಮೂರ್ಖ ಕಣೋ ಅಕೌಂಟ್‌ಪೇಯಿ ಎಂಬುದನ್ನು ನೋಡಿಕೊಂಡಿಲ್ಲ’’ ಎಂದು ಒಂದು ಕ್ಷಣ ಮೌನಿಯಾದರು ಪಿ.ಲಂಕೇಶ್ ಅವರು. ನಂತರ ‘‘ನೋಡೋ ಅರ್ಜೆಂಟಾಗಿ ಇಂದಿರಾ ಮಯೂರದಲ್ಲಿರ್ತಾಳೆ. ನೂರು ರೂಪಾಯಿ ತಗೊಂಡು ಬಾ. ಅವಳು ನಿನ್ನನ್ನು ಚೆನ್ನಾಗಿ ಬೈದೇ ಕೊಡುವುದು. ಹೋಗಿ ತಗೊಂಡು ಬಾ’’ ಎಂದರು ಪಿ.ಲಂಕೇಶ್.

ಶೂದ್ರ ಶ್ರೀನಿವಾಸ್ ಅವರು ಕಿಂಚಿತ್ತೂ ಬೇಸರಪಡದೆ ಹೋದರು. ಇಂದಿರಾ ಮೇಡಂ ಅವರು ಇದ್ದರು. ಮಯೂರದಲ್ಲಿ ಯಾರಾರ‍ಯರೋ ಹೆಂಗಸರು ಸೀರೆ ವ್ಯಾಪಾರಕ್ಕೆ ಬಂದಿದ್ದರು. ಶೂದ್ರ ಶ್ರೀನಿವಾಸ್ ಹೋಗಿ ನಿಂತರು. ‘‘ಏನು ಶೂದ್ರ?’’ ಎಂದರು ಇಂದ್ರಮ್ಮ ಅವರು. ‘‘ಮೇಡಂ, ಅರ್ಜೆಂಟಾಗಿ ನೂರು ರೂಪಾಯಿ ಬೇಕು. ಮೇಸ್ಟ್ರು ಹೇಳಿದ್ದಾರೆ’’ ಎಂದರು ಶೂದ್ರ ಶ್ರೀನಿವಾಸ್. ‘‘ಅವರಿಗೇನು ಹೇಳೋದಿಕ್ಕೆ. ನಿಮ್ಮನ್ನು ಅದಕ್ಕೆ ಕಳಿಸ್ತಾರಲ್ಲಾ ಅವರಿಗೆ ನಾಚಿಕೆಯಾಗಬೇಕು’’ ಎಂದು ಇಂದರಮ್ಮ ಕೊಟ್ಟರು. ಆಗ ಶೂದ್ರ ಶ್ರೀನಿವಾಸ್ ಖುಷಿಯಿಂದ ಸ್ವಲ್ಪ ಮೆಟ್ಟಿಲಿಳಿದು ರಸ್ತೆಗೆ ಬಂದರು. ಬಸವನಗುಡಿಯ ನ್ಯಾಷನಲ್‌ ಕಾಲೇಜಿನ ಅಧ್ಯಾಪಕ ಗೆಳೆಯರು ಸಿಕ್ಕಿದರು ಶೂದ್ರ ಶ್ರೀನಿವಾಸ್ ಅವರಿಗೆ. ಟೀಗೆ ಕರೆದರು ಹೋಗಲಿಲ್ಲ. ಶೂದ್ರ ಶ್ರೀನಿವಾಸ್ ಮನಸ್ಸೆಲ್ಲ ಮೈಸೂರು ಬ್ಯಾಂಕ್‌ ವೃತ್ತದ ಬಳಿ ಇತ್ತು. ಸಿಗರೇಟು ಸೇದುತ್ತ ನಿಂತಿದ್ದರು ಪಿ.ಲಂಕೇಶ್. ಆ ನೂರು ರೂಪಾಯಿ ಕೊಟ್ಟರು ಶೂದ್ರ ಶ್ರೀನಿವಾಸ್. ಆಗ ‘‘ಸಾರಿ’’ ಎಂದು ಶೂದ್ರ ಶ್ರೀನಿವಾಸ್ ಮುಖವನ್ನೇ ನೋಡಿದರು ಪಿ.ಲಂಕೇಶ್. ಆದರೆ ಆ ನೂರು ರೂಪಾಯಿಯನ್ನು ಶೂದ್ರ ಶ್ರೀನಿವಾಸ್ ಕೊಡಬಹುದಾಗಿತ್ತು. ಆದರೆ ಎಂದೂ ತೆಗೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ ಪಿ.ಲಂಕೇಶ್ ಅವರು. ಅವರೊಡನೆ ಎಷ್ಟೋ ಕಡೆ ಹೋಟೆಲ್‌, ಬಾರ್‌ಗಳಿಗೆ ಹೋಗಿದ್ದಾರೆ ಶೂದ್ರ ಶ್ರೀನಿವಾಸ್. ಯಾರಿಂದಲೂ ಬಿಲ್‌ ಕೊಡಿಸಿದ್ದು ಕಂಡಿಲ್ಲ‌ ಎನ್ನುತ್ತಾರೆ ಶೂದ್ರ ಶ್ರೀನಿವಾಸ್ ಅವರು.

ಸಿಗರೇಟು ಮತ್ತು ಪಿ.ಲಂಕೇಶ್‌ —

 ಹೀಗೂ ಇದ್ದ ಪಿ.ಲಂಕೇಶ್ ಕಾರು ಕೊಂಡಿದ್ದು ಯಾವಾಗ.!?

ಸಿಗರೇಟು ಅದು ಲಂಕೇಶ್‌ ಮತ್ತು ಅಡಿಗರಿಗೆ ಎಷ್ಟುಪ್ರಿಯವಾಗಿತ್ತೋ; ಆದರೆ ಬದುಕಿನ ಪ್ರೀತಿಯ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಯೋಚಿಸಿದಾಗ; ‘‘ಹೌದು ಮೊದಲೇ ಬಿಡಬೇಕಾಗಿತ್ತು’’ ಅವರ ಅಂತರಂಗದಲ್ಲಿ ಪ್ರತಿಧ್ವನಿಸತೊಡಗಿತ್ತು. ಪ್ರೊ.ಎಂ.ಡಿ.ಎನ್‌. ಅವರಿಗೂ ಹಾಗೆ ಅನ್ನಿಸಿರಲು ಸಾಧ್ಯ..! ಯಾಕೆಂದರೆ ಬದುಕಿನ ಪ್ರಶ್ನೆ ಮುಖಾಮುಖಿಯಾದಾಗ; ಹೀಗೆಯೇ ಅನ್ನಿಸುವುದು ಸ್ವಾಭಾವಿಕ. ಇಂಥದ್ದೊಂದು ನೇರವಾಗಿ ಕನ್ನಡ ಸಾಂಸ್ಕತಿಕ ಲೋಕದ ಇಬ್ಬರು ಮಹಾನುಭಾವರು ಎದುರಾದಾಗ; ಪ್ರಧಾನವಾಗಿ ಮಾತಿಗೆ ಪೀಠಿಕೆಯಾಗಿದ್ದೇ ಇದರಿಂದ.

ಪಿ.ಲಂಕೇಶ್‌ ಅವರು ಮತ್ತು ಗೋಪಾಲಕೃಷ್ಣ ಅಡಿಗರು ಸುಮಾರು ಇಪ್ಪತ್ತಾರು ವರ್ಷಕ್ಕೂ ಮೇಲ್ಪಟ್ಟು ಒಬ್ಬರನ್ನೊಬ್ಬರು ನೋಡೇ ಇರಲಿಲ್ಲ. ಆದರೆ ಸರ್ಕಲ್‌ ಲಂಚ್‌ ಹೋಂನಲ್ಲಿ ಸಾಹಿತ್ಯ ಮತ್ತು ಸಂಸ್ಕತಿಯ ಚರ್ಚೆ ಬಂದಾಗ, ಪಿ.ಲಂಕೇಶ್‌ ಅವರು ಮಾತಿನ ನಡುವೆ ಬಂದುಹೋಗುತ್ತಿದ್ದರು..!

ಪಿ.ಲಂಕೇಶ್‌ ಅವರಿಗೂ ಅಷ್ಟೇ ಹಿಂದಿನ ಅವರ ಪ್ರೀತಿ ಮತ್ತು ಮಮತೆ ತೀವ್ರವಾಗಿಯೇ ಇತ್ತು. ಅವರನ್ನು ಭೇಟಿಯಾಗಬೇಕು ಎಂದು ಚಡಪಡಿಸುತ್ತಲೇ ಇದ್ದರು. ಹಾಗೆಯೇ ‘ಅಕ್ಷರ ಹೊಸ ಕಾವ್ಯ’ ಅಮೂಲ್ಯ ಕಾವ್ಯ ಸಂಗ್ರಹವನ್ನು ಮರು ಮುದ್ರಿಸುವ ತವಕದಲ್ಲಿದ್ದರು. ಅದು ಹಿಂದೆ ಹೆಗ್ಗೋಡಿನ ಅಕ್ಷರ ಪ್ರಕಾಶನದಿಂದ ಪ್ರಕಟವಾಗಿತ್ತು. ಪತ್ರಿಕೆ ಪ್ರಕಾಶನದಿಂದ ಪ್ರಕಟಿಸಲು ಅವರು ಸಿದ್ಧವಾಗಿದ್ದರು. ಅದಕ್ಕೆ ಕೆ.ವಿ.ಸುಬ್ಬಣ್ಣನವರಿಂದ, ಕಿರಂ., ಡಿ.ಆರ್‌.ನಾಗರಾಜ್‌ ಮತ್ತು ಶೂದ್ರ ಶ್ರೀನಿವಾಸ್ ಮಾತಾಡಿ ಒಪ್ಪಿಗೆಯನ್ನು ಪಡೆದಿದ್ದರು. ಆದರೆ ಮರು ಮುದ್ರಿಸುವಾಗ ಕವಿಗಳ ಒಪ್ಪಿಗೆಗೆ ಸಂಬಂಧಿಸಿದಂತೆ; ಲಂಕೇಶ್‌ ಅವರು ಒಂದು ಮಾತು ಹೇಳಿದರು :

 ಅಕ್ಷರ ಪ್ರೇಮಿ ಪಿ.ಲಂಕೇಶ್ ಅಂಕಿ ಪ್ರೇಮಿಯಾಗಿದ್ದು..! —

‘‘ನನಗೆ ಯಾರೂ ಒಪ್ಪಿಗೆ ಕೊಡದಿದ್ದರೂ ಚಿಂತೆ ಇಲ್ಲ. ಆದರೆ ಅಡಿಗರು ಒಬ್ಬರು ಒಪ್ಪಿಗೆ ಕೊಟ್ಟರೆ ಸಾಕು’’ ಎಂದು ಸಾಕಷ್ಟುಬಾರಿ ಹೇಳಿದ್ದರು ಪಿ.ಲಂಕೇಶ್. ಒಮ್ಮೆ ಸರ್ಕಲ್‌ ಲಂಚ್‌ ಹೋಂನಲ್ಲಿ ಅಡಿಗರ ಜೊತೆ ಚರ್ಚಿಸುವಾಗ ಸುಮತೀಂದ್ರ ನಾಡಿಗರು ಮತ್ತು ಶಾಂತಿನಾಥ ದೇಸಾಯಿಯವರೂ ಇದ್ದರು. ಆಗ ಶೂದ್ರ ಶ್ರೀನಿವಾಸ್ ಅಡಿಗರ ಬಳಿ ‘‘ಸರ್‌, ಲಂಕೇಶ್‌ ಅವರು ಅಕ್ಷರ ಹೊಸ ಕಾವ್ಯವನ್ನು ಮರುಮುದ್ರಿಸಬೇಕೆಂದಿದ್ದಾರೆ. ಆದರೆ ಯಾರೂ ಒಪ್ಪಿಗೆ ಕೊಡದಿದ್ದರೂ ಚಿಂತೆ ಇಲ್ಲ. ಅಡಿಗರು ಒಬ್ಬರು ಒಪ್ಪಿಗೆ ಕೊಟ್ಟರೆ ಸಾಕು ಎಂದು ಹೇಳುತ್ತಿದ್ದಾರೆ’’ ಎಂದರು ಶೂದ್ರ ಶ್ರೀನಿವಾಸ್. ‘‘ಒಪ್ಪಿಗೆ ಕೊಟ್ಟಿದ್ದೀನಿ ಎಂದು ಹೇಳಯ್ಯ. ಅವನು ನೀಚ ಇರಬಹುದು. ಆದರೆ ಚೆನ್ನಾಗಿ ಬರೆಯುತ್ತಾನೆ ಕಾವ್ಯ ಮತ್ತು ಗದ್ಯವನ್ನು’’ ಎಂದು ಹೇಳಿದಾಗ; ಶೂದ್ರ ಶ್ರೀನಿವಾಸ್ ಅವರು ಉಲ್ಲಾಸಗೊಂಡಿದ್ದರು..!

ಬೀಚಿಯವರ ಜನಿವಾರ —

ಮುಖ್ಯ ಉಪನ್ಯಾಸಕರಾಗಿ ಬೀಚಿಯವರು ಇದ್ದರು. ಆ ದಿನಗಳಲ್ಲಿ ಬೀಚಿಯವರು ಹೆಚ್ಚು ವಿಚಾರವಾದಿಯಾಗಿ ಎದ್ದು ಕಾಣುತ್ತಿದ್ದ ಜನಪ್ರಿಯ ಲೇಖಕರಾಗಿದ್ದರು. ಅತ್ಯಂತ ಪ್ರಾಮಾಣಿಕ ಲೇಖಕ, ಮಡಿವಂತ ಬ್ರಾಹ್ಮಣರನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದರು. ಹಾಗೆಯೇ ಅನಕೃ., ತ.ರಾ.ಸು. ಮತ್ತು ಬೀಚಿಯವರು ಬಹಳಷ್ಟುಕಡೆ ಒಟ್ಟೊಟ್ಟಿಗೆ ಗುರ್ತಿಸಿಕೊಂಡಿದ್ದವರು. ಇರಲಿ, ಅಂದು ಗಾಂಧಿಭವನದಲ್ಲಿ ತುಂಬಾ ಗಂಭೀರವಾಗಿಯೇ ಮಾತಾಡಿದರು. ಹಾಗೆ ಮಾತಾಡುವಾಗ; ಅವರು ಶಿವಧಾರ ಮತ್ತು ಜನಿವಾರ ಕುರಿತು ಸ್ವಲ್ಪ ಒತ್ತು ಕೊಟ್ಟು ಮಾತಾಡಿದರು. ಆ ಸಂದರ್ಭದಲ್ಲಿ ಸಭಿಕರಲ್ಲಿ ಪ್ರೊ. ಎಂ.ಡಿ.ಎನ್‌. ಹಾಗೂ ಡಿ.ಆರ್‌.ನಾಗರಾಜ್‌ ಒಟ್ಟೊಟ್ಟಿಗೆ ಕೂತಿದ್ದರು. ಪ್ರೊಫೆಸರ್‌ ಅವರು ಡಿ.ಆರ್‌.ನಾಗರಾಜ್ ರನ್ನು ಪುಸಲಾಯಿಸಿದ್ದರು. ಅವನು ‘‘ಬೀಚಿಯವರೆ, ನೀವು ಜನಿವಾರ ಧರಿಸಿಲ್ಲವೇ? ನಿಮ್ಮ ಬಗ್ಗೆ ನನಗೆ ಗುಮಾನಿ ಇದೆ’’ ಎಂದ. ಅದಕ್ಕೆ ಅವರು ನಗುತ್ತ ‘‘ಬಾಪ್ಪ ನಾಗರಾಜ್‌, ನಿನಗೆ ನಂಬಿಕೆ ಇಲ್ಲದಿದ್ದರೆ; ದಯವಿಟ್ಟು ನನ್ನ ಮೈಮೇಲೆ ಚೆಕ್‌ ಮಾಡಬಹುದು’’ ಎಂದು ಆಹ್ವಾನಿಸಿದ್ದರು..!

 ಲೆಕ್ಕಾಚಾರದ ಕವಿಯಾಗಿದ್ದರು ಪಿ.ಲಂಕೇಶ್..! —

ಅದಕ್ಕೆ ಡಿ.ಆರ್‌.ನಾಗರಾಜ್ ಅತ್ಯಂತ ರೊಮ್ಯಾಂಟಿಕ್ಕಾಗಿ ಪ್ರೊಫೆಸರ್‌ ಅವರಿಂದ ಪ್ರೇರಣೆಗೊಂಡಿದ್ದರಿಂದ ವೇದಿಕೆಯ ಬಳಿ ಹೋಗಿ ಬೀಚಿಯವರ ಜುಬ್ಬಾದಲ್ಲಿ ಕೈಯಿಟ್ಟು ಹುಡುಕಿದ್ದರು. ಆಗ ಪ್ರೊ.ಹಮೀದ್‌ ಮತ್ತು ಲಂಕೇಶ್‌ ಅವರು ಒಂದು ವಿಧದ ಮುಜುಗರದಿಂದ ಒದ್ದಾಡುತ್ತಿದ್ದರು..!

ಇಡೀ ಸಭಾಂಗಣ ಒಂದು ವಿಧದಲ್ಲಿ ಸ್ತಬ್ಧಗೊಂಡಿತ್ತು. ಶೂದ್ರ ಶ್ರೀನಿವಾಸ್ ಅವರೂ ಮಾನಸಿಕವಾಗಿ ಒದ್ದಾಡುತ್ತಿದ್ದರು ಇಷ್ಟರಮಟ್ಟಿನ ಒರಟುತನ ಅಗತ್ಯವಿದೆಯಾ ಎಂದು..!

ಈ ರೀತಿಯಲ್ಲಿ ಅಲ್ಲಿ ಅಂದು ಬಹಳಷ್ಟುಮಂದಿಗೆ ಅನ್ನಿಸಿರಬಹುದು. ಆ ಸಭೆಯಲ್ಲಿ ಶೂದ್ರ ಶ್ರೀನಿವಾಸ್ ಅವರು ತುಂಬಾ ಗೌರವಿಸುತ್ತಿದ್ದ ಕೆ.ಎಸ್‌.ನಾರಾಯಣಸ್ವಾಮಿ, ಗರುಡ ಶರ್ಮ, ಹೆಚ್‌.ಎಸ್‌.ದೊರೆಸ್ವಾಮಿ ಮತ್ತು ಮಹಾದೇವಿಯಕ್ಕ (ರಾಮಕೃಷ್ಣ ಹೆಗಡೆಯವರ ಸೋದರಿ) ಅವರೂ ಇದ್ದರು..!

#ಹೀಗೂ ಇದ್ದರು ಪಿ.ಲಂಕೇಶ್ —

ಡಿ.ಆರ್‌. ನಾಗರಾಜ್‌ಗೆ ಜನಿವಾರ ಸಿಗಲಿಲ್ಲ. ಅವರು ನಾಚಿಕೆಯಿಂದ ಪ್ರೊಫೆಸರ್‌ ಅವರ ಬಳಿ ಹೋಗಿ ಕುಳಿತರು. ಆದರೆ ಮುಂದೆ ಲಂಕೇಶ್‌ ಅವರು ಅತ್ಯಂತ ವಿಷಾದದಿಂದಲೇ ತಮ್ಮ ಮಾತನ್ನು ಪ್ರಾರಂಭಿಸಿದರು. ‘‘ಜನಿವಾರ ಮತ್ತು ಶಿವದಾರ ಸಂಕೇತಗಳಿರಬಹುದು. ನಾನಾ ಕಾರಣಗಳಿಗಾಗಿ. ಒಂದು ಬಹುದೊಡ್ಡ ಸಮಾಜದಲ್ಲಿ ನಮ್ಮ ಮನಸ್ಸುಗಳ ಮೇಲೆ ಆಕ್ರಮಣಕಾರಿಯಾಗಿ ಪ್ರವೇಶ ಮಾಡಿರುತ್ತವೆ. ಆದರೆ ಅದನ್ನು ನಾವು ಗಂಭೀರವಾಗಿ ಅರಿಯದೆ, ವೈಯಕ್ತಿಕ ತೀರ್ಮಾನಗಳಿಗೆ ಬರಬಾರದು. ಹಾಗೆಯೇ ಬೀಚಿಯವರಂಥ ಹಿರಿಯ ಲೇಖಕರು ತಾವು ನಂಬಿದ ಧೋರಣೆಗಳಿಗೆ ಅನುಗುಣವಾಗಿ ಬದುಕುತ್ತಿರುವಂಥವರು..!

ಅವರ ಮಾತುಗಳಿಗೆ ಗೌರವ ಕೊಡದೆ; ಗುಮಾನಿಯಿಂದ ನೋಡುವುದು ಅಷ್ಟು ಸರಿಯೆನ್ನಿಸುವುದಿಲ್ಲ. ಹಾಗೆಯೇ ತಮ್ಮ ದೇಹದ ಮೇಲಿನ ಜನಿವಾರ ಇರುವುದನ್ನು ಬೇಕಾದರೆ ಬಂದು ನೋಡಿ ಎಂದು ಹೇಳಿದ ಮೇಲೆ; ಇಂಥ ಸಭೆಯಲ್ಲಿ ಅತ್ಯಂತ ಕ್ರೂಡಾಗಿ ಅವರ ದೇಹದ ಮೇಲೆ ಜನಿವಾರ ತಡಕಾಡಿದ್ದು ಸರಿಯಾದ ಕ್ರಮವಲ್ಲ..!

ಮತ್ತೊಂದು ಮುಖ್ಯ ವಿಷಯ; ನಾವು ಜಾತೀಯತೆಯಿಂದ ಮತ್ತು ಅದರ ಕೆಲವು ಅನಗತ್ಯ ನಂಬಿಕೆಗಳಿಂದ ಬಿಡುಗಡೆಯಾಗಬೇಕಾದದ್ದು; ಅಂತರಂಗದ ದೃಷ್ಟಿಯಿಂದ. ಸಾಮಾಜಿಕವಾಗಿ ಕೆಲವು ಕಲ್ಮಷಗಳಿಂದ ಬಿಡುಗಡೆಯಾಗುವುದರ ಬಗ್ಗೆ ನಿರಂತರ ಮಾನಸಿಕ ಹೋರಾಟವಿರಬೇಕಾಗುತ್ತದೆ..!

ಇಷ್ಟಾದರೂ ಯಾವಯಾವ ಕಾರಣಕ್ಕೋ ನಾವು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿರುತ್ತೇವೆ. ಈ ದೃಷ್ಟಿಯಿಂದ ಕುರುಡು ವಿಚಾರದೃಷ್ಟಿಯೂ ಅಪರಾಧವಾಗುತ್ತದೆ. ಇಂಥದ್ದಕ್ಕೆ ಸಂಬಂಧಿಸಿದಂತೆ ನಮ್ಮ ನಡುವೆ ಅತ್ಯುತ್ತಮ ಮಾದರಿಗಳಿವೆ.

ಆ ಮಾದರಿಗಳನ್ನು ಗ್ರಹಿಸದೆ ಒಂದು ದೊಡ್ಡ ಸಮಾಜದ ಸಾಂಸ್ಕತಿಕ ಸಂಗತಿಗಳ ಕುರಿತು ತೀರ್ಪುಗಾರರಾಗಿ ಹೋಗಬಾರದು’’ ಎಂದು ವಿಷಾದದಿಂದ ತಮ್ಮ ಮಾತು ಮುಗಿಸಿ ಕೂತರು ಪಿ.ಲಂಕೇಶ್..!

ಅತೀ ಓದು ಅಪಾಯಕಾರಿ

ಅವರ ಮಿತಭಾಷೆಯ ಗುಣಾತ್ಮಕತೆಯಿಂದಲೇ; ಬಹುದೊಡ್ಡ ಗದ್ಯ ಬರಹಗಾರರಾಗಿ ಮತ್ತೆ ಮತ್ತೆ ಅವಲೋಕಿಸಿಕೊಳ್ಳಲು ಸಾಧ್ಯವಾಗಿರುವುದು. ಇರಲಿ, ಗಾಂಧಿಭವನದ ಆ ಘಟನೆಯಿಂದ ಡಿ.ಆರ್‌.ನಾಗರಾಜ್‌ ಮುದುಡಿ ಹೋಗಿದ್ದರು, ಆಗಾಗ ಕೆಲವರ ನಡುವೆ ವ್ಯಂಗ್ಯಕ್ಕೆ ಮತ್ತು ಗೇಲಿಗೆ ತುತ್ತಾಗಿದ್ದುದು ಇದೆ. ಡಿ.ಆರ್‌.ನಾಗರಾಜ್ ಬಹುದೊಡ್ಡ ಪ್ರಮಾಣದಲ್ಲಿ ಬಹುಮುಖೀ ಓದಿಗೆ, ಅದರ ಮೂಲಕ ಬಹುರೂಪಿ ಚರ್ಚಾಪಟುವೂ ಆಗಿದ್ದರು. ಅವರ ವಾದ ಸರಣಿಗೆ ಮೋಹಿತರಾಗಿ ಲಂಕೇಶ್‌ ಅವರು ಕೇಳಿಸಿಕೊಂಡಿದ್ದಿದೆ. ಆದರೆ ಅದೇ ಸಮಯದಲ್ಲಿ ಅವರು ಕಿ.ರಂ.ನಾಗರಾಜ್‌ ಮತ್ತು ಡಿ.ಆರ್‌.ನಾಗರಾಜ್ ಕುರಿತು ಒಂದು ಮಾತು ಹೇಳಿದರು: ‘‘ನೀವು ಇಷ್ಟುದೊಡ್ಡ ಪ್ರಮಾಣದ ಓದು, ಮಾತು ಮತ್ತು ನೆನಪಿನ ದಟ್ಟತೆಯ ಕಾರಣಕ್ಕಾಗಿಯೇ ಸೃಜನಶೀಲ ಲೇಖಕರಾಗಿ ಎಮ್ಜಿಆರ್ ಆಗದಿರುವುದು’’ ಎಂದಿದ್ದರು.

ಈಗಲೂ ಅದನ್ನು ಅವಲೋಕಿಸಿಕೊಂಡಾಗ; ನನಗೆ ನಿಜ ಅನ್ನಿಸುತ್ತದೆ. ತಾತ್ವಿಕ ಸಿದ್ಧಾಂತಗಳ ಮತ್ತು ವಿಮರ್ಶೆಯ ವಿವಿಧ ಆಯಾಮಗಳ ಕುರಿತು ಹೆಚ್ಚು ಹೆಚ್ಚು ಓದಿದಂತೆಲ್ಲ; ಸೃಜನಶೀಲ ಚಿಂತನೆ ಮಂಕಾಗಿ ಬಿಡುತ್ತದೆ. ಆದ್ದರಿಂದಲೇ ಅವರು ಯಾವಾಗಲೂ ವಾಲ್ಮೀಕಿ ಮತ್ತು ವ್ಯಾಸನನ್ನು ಉದಾಹರಿಸುತ್ತಿದ್ದದು. ಅವರು ತಮ್ಮ ಗ್ರೇಟ್‌ ಕ್ಲಾಸಿಕ್ಸ್‌ನಲ್ಲಿ ಬುದ್ಧಿವಂತಿಕೆಯನ್ನು ಪ್ರದರ್ಶಿಸುವುದಿಲ್ಲ, ಜೀವನಾನುಭವವನ್ನು ಮುಂದಿಡುತ್ತಾರೆ.

ಹಾಗಾಗಿ ಇಂದಿಗೂ ಅವು ನಮ್ಮ ಚಿಂತನೆಗೆ ಹತ್ತಿರವಾಗಿರುವುದು ಎನ್ನುತ್ತಿದ್ದರು. ಅದರಲ್ಲೂ ಅವರು ವಾಲ್ಮೀಕಿಗಿಂತ ವ್ಯಾಸನನ್ನು ತಮ್ಮ ಮನಸ್ಸಿಗೆ ತುಂಬ ಹತ್ತಿರ ತೆಗೆದುಕೊಂಡವರು.

ಆ ಮಹಾನುಭಾವ ಎಲ್ಲಾ ಕಾಲಕ್ಕೂ ಬೇಕಾದ್ದನ್ನು ಚಿಂತಿಸಲು ಕೊಟ್ಟು ಹೋಗಿದ್ದಾನೆಂದು. ಈ ದೃಷ್ಟಿಯಿಂದ ಲಕ್ಷ್ಮೇಶ.ತೊಳ್ಪಾಡಿಯವರು ಬೆಂಗಳೂರಿಗೆ ಬಂದಾಗಲೆಲ್ಲ ಮೇಸ್ಟ್ರನ್ನು ಕಾಣಲು ಬರುತ್ತಿದ್ದರು. ಆಗ ಎಷ್ಟುಸಂಭ್ರಮದಿಂದ ವ್ಯಾಸಭಾರತ ಕುರಿತು ಮಾತಾಡಿಸುತ್ತಿದ್ದರು. ಅದರಲ್ಲೂ ಒಮ್ಮೆ ಉಡುಪಿಯ ಎಂ.ಜಿ.ಎಂ.ಕಾಲೇಜಿನಲ್ಲಿ ರಥಬೀದಿ ಗೆಳೆಯರ ಕಾರ್ಯಕ್ರಮದಲ್ಲಿ ತೊಳ್ಪಾಡಿಯವರ ‘ಮಹಾಭಾರತ’ ಕುರಿತ ಉಪನ್ಯಾಸವನ್ನು ಲಂಕೇಶ್‌ ಅವರು ಎಷ್ಟುರೋಮಾಂಚಿತರಾಗಿ ಸ್ವೀಕರಿಸಿದ್ದರು..!

ಬಾಲ್ಯವೇ ಶ್ರೀಮಂತ —

ಮೇಸ್ಟ್ರು ಯಾವಾಗಲೂ ಗಾಢವಾಗಿ ನಂಬಿದ್ದರು; ಪ್ರತಿಯೊಬ್ಬರ ಬದುಕಿನಲ್ಲಿ ಅವನ ಶ್ರೀಮಂತವಾದ ಬಾಲ್ಯವೇ ‘ನೆನಪೆಂಬ’ ಅಂತಃಶಕ್ತಿಯ ಮೂಲಕ ಶ್ರೀಮಂತವಾಗಿ ಉಳಿಯುವುದು ಎಂದು. ಆದ್ದರಿಂದಲೇ ಆ ನೆನಪಿಗೆ ಆಯಾಸಗೊಳಿಸಬಾರದೆಂದು; ಒಂದು ಅಮೂಲ್ಯ ಸಲಹೆ ನೀಡಿದರು; ಅದೇನೆಂದರೆ; ‘‘ಯಾವಾಗಲೂ ತಲೆದಿಂಬಿನ ಪಕ್ಕದಲ್ಲಿ ಒಂದು ನೋಟ್‌ಬುಕ್ಕನ್ನು ಮತ್ತು ಒಂದು ಪೆನ್ಸಿಲ್‌ ಅಥವಾ ಪೆನ್ನು ಇಟ್ಟುಕೊಂಡಿರು. ಏನೇ ನೆನಪಿಗೆ ಬಂದರೂ ಆ ಕಾಗದದ ಮೇಲೆ ಕಣ್ಣುಮುಚ್ಚಿಕೊಂಡೇ ಬರೆದಿಡು. ಬೆಳಿಗ್ಗೆ ಎದ್ದ ತಕ್ಷಣ ಅದನ್ನು ನೆನಪು ಮಾಡಿಕೊಳ್ಳಲು ಒದ್ದಾಡದೆ, ನೀನು ಗ್ರಹಿಸಬಹುದು’’ ಎಂದು ಹೇಳಿದ್ದನ್ನು ಕಳೆದ ಮುವತ್ತು ವರ್ಷಗಳಿಂದ ತಪ್ಪದೇ ಪಾಲಿಸುತ್ತಿರುವೆ. ಇದರೊಟ್ಟಿಗೆ; ಅವರ ಮತ್ತೊಂದು ಛೇಡಿಸುವಿಕೆ ನನಗೆ ತುಂಬ ಅನುಕೂಲವಾಯಿತು..!

ಶೂದ್ರ ಶ್ರೀನಿವಾಸ್ ಎಷ್ಟೋ ವರ್ಷ ಮೇಸ್ಟ್ರಂಥ ಶಿಸ್ತುಬದ್ಧ ವ್ಯಕ್ತಿಯ ಮುಂದೆ, ಕೆಲವು ಮುಖ್ಯ ಪಾಯಿಂಟ್ಸನ್ನ ಕೈಮೇಲೆ ಬರೆದುಕೊಳ್ಳುತ್ತಿದ್ದರು. ಅದಕ್ಕೆ ಅವರು ‘‘ಇವನೆಷ್ಟು ಅನಾಗರಿಕ ಎಂದರೆ, ಅಮೂಲ್ಯ ಸಂಗತಿಗಳನ್ನು ಕೈಮೇಲೆ ಬರೆದುಕೊಳ್ಳುವನು. ಮತ್ತೆ ಅದನ್ನು ಕುಂಡಿಗೊರಿಸಿ ಬಿಡುವನು.’’ ಹೀಗೆಯೇ ಹೇಳಿ ಅಥವಾ ಸಣ್ಣ ಪ್ರಮಾಣದಲ್ಲಿ ಅವಮಾನಕ್ಕೊಳಪಡಿಸಿ; ಕಡ್ಡಾಯವಾಗಿ ಜೇಬಿನಲ್ಲಿ ಒಂದು ಚಿಕ್ಕ ಬರವಣಿಗೆಯ ಪ್ಯಾಡ್‌ ಮತ್ತು ಜೇಬಿನಲ್ಲಿ ಪೆನ್ನು ಇರುವಂತೆ ನೋಡಿಕೊಂಡರು ಪಿ.ಲಂಕೇಶ್ ಅವರು ಎಂಬುದು ಶೂದ್ರ ಶ್ರೀನಿವಾಸ್ ಅವರ ಅಭಿಪ್ರಾಯವು..!


ಕೆ.ಶಿವು.ಲಕ್ಕಣ್ಣವರ

Leave a Reply

Back To Top