ಕಥಾಸಂಗಾತಿ
ಜಯಲಕ್ಷ್ಮಿ ಎಂ.ಬಿ.
ಅನುಬಂಧ
ಚಲಿಸುತ್ತಿರುವ ಬಸ್ಸಿನ ಕಿಟಕಿಯ ಬದಿಯಲ್ಲಿ ಕುಳಿತು ಅವಳು ಹೊರಗಿನ ದೃಶ್ಯವನ್ನು ಅನ್ಯಮನಸ್ಸಿನಿಂದ ನೋಡುತ್ತಿದ್ದಳು.ಬೇಡವೆಂದರೂ ಹಿಂದಿನರಾತ್ರಿ ಮನೆಯಲ್ಲಿ ನಡೆದ ಘಟನೆ ಅವಳನ್ನು ಬಹಳವಾಗಿ ಕಾಡುತ್ತಿತ್ತು. ಮರುದಿನ ಕೆಲಸದ ನಿಮಿತ್ತ ದೂರದೂರಿಗೆ ಸಂದರ್ಶನಕ್ಕೆ ಹೋಗಲೇಬೇಕಾಗಿತ್ತು. ಅದು ಅವಳ ಬಹುದಿನದ ಕನಸಾಗಿತ್ತು. ಖಾಲಿ ಇದ್ದ ಪಕ್ಕದ ಸೀಟಿನಲ್ಲಿ ಯಾರೋ ಕುಳಿತಂತಾಗಿ ತಿರುಗಿನೋಡಿದಾಗ ತನ್ನ ಕಣ್ಣುಗಳನ್ನೇ ನಂಬದಾದಳು. ಪ್ರೀತಿಸಿ ಮದುವೆಯಾಗಿದ್ದ ಅವನಿಗೂ ಅವಳನ್ನು ಒಂಟಿಯಾಗಿ ಬಿಟ್ಟಿರಲು ಇಷ್ಟವಿರಲಿಲ್ಲ.
**********************
ಪುರಸ್ಕಾರ
ಮನೆಯವರಿಗೆ ಬೇಡವಾಗಿ ರೈಲು ನಿಲ್ದಾಣದಲ್ಲಿ ಕುಳಿತು ಎತ್ತ ಹೋಗುವುದೆಂದು ತಿಳಿಯದೆ ಕೈಯಲ್ಲಿದ್ದ ಬಿಸ್ಕತ್ತಿನ ಚೂರನ್ನು ಬಾಯಿಗಿಡ ಬೇಕೆನ್ನುವಾಗ ಅಲ್ಲೇ ಕುಳಿತು ನೋಡುತ್ತಿದ್ದ ನಾಯಿಮರಿಗೆ ಒಂದು ಚೂರು ಹಾಕಿ ತಾನೂ ತಿಂದು ನೀರು ಕುಡಿಯಲು ಬಾಟಲಿ ಎತ್ತುವಾಗ ಕೈಯಿಂದ ಜಾರಿ ಉರುಳಿ ಹೋದ ನೀರಿನ ಬಾಟಲಿಯನ್ನು ಅದೇ ನಾಯಿಮರಿ ಕಚ್ಚಿಕೊಂಡು ಬಂದು ಕೊಡುವಾಗ ಯಾವ ಪುರಸ್ಕಾರವನ್ನೂ ಬಯಸದ ಈ ಪ್ರಾಣಿಗೆ ಇರುವ ಪ್ರೀತಿ ನನ್ನವರು ಎನಿಸಿಕೊಂಡವರಿಗೆ ಇಲ್ಲದಾಯಿತಲ್ಲ ಎಂದು ಅವಳು ನಿಟ್ಟುಸಿರು ಬಿಡುತ್ತಾಳೆ.
***************************************************************************