ಕಾವ್ಯಯಾನ

ಗಜಲ್

ನಯನ . ಜಿ . ಎಸ್

ಭಾವನೆ ಹೃದಯದಲಿ ಹುಟ್ಟುವುದೇ ಹೊರತು ವ್ಯವಹಾರದಲ್ಲಲ್ಲ
ಬರಹ ಮನದ ತುಡಿತವ ಬಿಂಬಿಸುವುದೇ ಹೊರತು ತೋರ್ಪಡಿಸಲೆಂದಲ್ಲ !

ಮನವು ಭಾವಗಳ ಹೊರಹಾಕಿ ನಿಟ್ಟುಸಿರ ಬಿಡುವುದು
ಒಂದಿಷ್ಟು ನೆಮ್ಮದಿಗಾಗಿ ಹೋರಾಟವೇ ಹೊರತು ಗೆಲ್ಲಬೇಕೆಂದಲ್ಲ !

ಒಡಲ ನೋವುಗಳು ಒಳಗೊಳಗೇ ಬೆಂದು ಕಾಡುವುದು
ಒಂದಿಷ್ಟು ತೃಪ್ತಿಗಾಗಿ ಚಡಪಡಿಕೆಯೇ ಹೊರತು ಪರತೃಪ್ತಿಗೆಂದಲ್ಲ !

ಗರಿಕೆಯ ಕುಡಿಯಂತೆ ಆಶೆಗಳು ಬೆಳೆಯುವುದು ಉದ್ದುದ್ದ
ಆಶೆಗಳ ಹಂಗು ಬಾಳಿಗೆ ಸ್ಪೂರ್ತಿಯೇ ಹೊರತು ಮಹಾತ್ವಾಕಾಂಕ್ಷೆಯಿಂದಲ್ಲ !

‘ನಯನಾ’ ಳು ಹೀಗೊಮ್ಮೆ ಬಂದು ಹೋಗುವ ನೋವಿಗೂ ಚಡಪಡಿಸುತ್ತಾಳೆ
ನಗುವುದು ನೋವ ಹೊರಹಾಕಲೇ ಹೊರತು ಆತ್ಮತೃಪ್ತಿಯಿಂದಲ್ಲ !!

*************************

Leave a Reply

Back To Top